ಕಂತುಗಳನ್ನು ಸರಿಯಾಗಿ ಕಟ್ಟಲಿಲ್ಲವೆಂದು ಮನೆಯನ್ನು, ಕಾರನ್ನು ಮುಟ್ಟುಗೋಲು ಹಾಕಿಕೊಳ್ಳಲು ಬ್ಯಾಂಕಿನವರು ಬಂದಾಗ ಆಶ್ಚರ್ಯವೆಂಬಂತೆ ತಾನೇ ಮುಂದೆ ನಿಂತು ಅವನ್ನೆಲ್ಲಾ ಅವರಿಗೆ ಬಿಟ್ಟುಕೊಟ್ಟ. ಅಡ್ಡಬಂದ ಹೆಂಡತಿಗೆ, ‘ಇಲ್ಲಿಗೆ ಬರುವಾಗ ಏನನ್ನೂ ತಂದಿರಲಿಲ್ಲ, ಹೋಗುವಾಗಲೂ ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ.. ಏನನ್ನಾದರೂ ಗಳಿಸಿದ್ದರೆ ಅದು ಇಲ್ಲಿಯೇ, ಏನನ್ನಾದರೂ ಕಳೆದುಕೊಂಡರೂ ಅದು ಇಲ್ಲಿಯೇ..’ ಎಂದು ಭಗವದ್ಗೀತೆಯ ಉಪದೇಶ ಮಾಡಿದ. ಆದರೆ ಈಗಾಗಲೇ ಕಟ್ಟಿರುವ ಕಂತಿನ ವ್ಯತ್ಯಾಸದ ಮೊತ್ತವನ್ನಾದರೂ ಹಿಂದಿರುಗಿಸುವಂತೆ ಬ್ಯಾಂಕಿನವರೊಂದಿಗೆ ಆಕೆ ಜಗಳ ಮಾಡುತ್ತಿದ್ದಳು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕಂನಾಡಿಗಾ ನಾರಾಯಣ ಬರೆದ ಕತೆ “ಜೀ ಗಾಂಧಿ” ನಿಮ್ಮ ಓದಿಗೆ

ಅರುಣ್‌ಗಾಂಧಿ ಹೆಗಲಿನಿಂದ ಲ್ಯಾಪ್‌ಟಾಪಿನ ಚೀಲವನ್ನು ಕೆಳಗಿಳಿಸಿ ತಿರುಗುವ ಕುರ್ಚಿಯಲ್ಲಿ ಕೂರುತ್ತಿದ್ದಂತೆಯೇ ಬಿಳಿಯ ಸಮವಸ್ತ್ರ ಧರಿಸಿದ್ದ ಸೇವಕ ಬಂದು ಒಂದು ಕವರನ್ನು ಕೊಟ್ಟು ಸಹಿ ಮಾಡಿಸಿಕೊಂಡು ಹೋದ. ಪ್ರತಿದಿನ ಹೀಗೆ ಲೆಟರ್‌ಗಳು ಬರುತ್ತಿದ್ದುದು ಸಹಜವಾಗಿದ್ದರೂ, ಅಸಹಜವಾಗಿ ಕವರಿನ ಮೇಲೆ ತನ್ನ ಹೆಸರು ಇದ್ದುದನ್ನು ನೋಡಿ ಕುತೂಹಲದಿಂದ ಒಡೆದು ಓದಿದ.

ಇದೀಗ ತಾನೇ ಎ.ಸಿ.ಯಿದ್ದ ಹೋಂಡ ಸಿವಿಕ್ ಕಾರಿನಿಂದ ಇಳಿದು ಬಂದಿದ್ದರೂ ಮೈ ಬೆವರಲಾರಂಭಿಸಿತು. ಅದೇಕೋ ಕಣ್ಣಿಗೆ ಕತ್ತಲಾವರಿಸಿದಂತಾಯಿತು. ಮುಂದಿನದೆಲ್ಲಾ ಒಂದು ರೀತಿಯ ನಿರ್ವಾತದಂತೆ, ಖಾಲಿ ಖಾಲಿಯಂತೆ ಕಾಣಲಾರಂಭಿಸಿತು. ಇಂಥದೊಂದು ಸಾಧ್ಯತೆಯನ್ನು ನಿರೀಕ್ಷಿಸಿದ್ದನಾದರೂ ಅದು ಇಷ್ಟು ಬೇಗ ತನ್ನ ಬುಡಕ್ಕೇ ಬಂದು ಕೂರುತ್ತದೆಂದು ನಿರೀಕ್ಷಿಸಿರಲಿಲ್ಲ.

‘ಅಮೆರಿಕಾದ ರಿಸೆಷನ್‌ಗೂ ಕರ್ನಾಟಕದ ಕಂಪೆನಿಗೂ ಏನು ಸಂಬಂಧ.. ಇಂಡಿಯನ್ ಎಕಾನಮಿ ತುಂಬಾ ಸ್ಟೇಬಲ್ಲಾಗಿದೆ..’ ಎಂದು ನೆನ್ನೆ ತಾನೆ ಲಂಚ್‌ನಲ್ಲಿ ಗೆಳೆಯರೊಂದಿಗೆ ಹರಟುತ್ತಿದ್ದ. ಮೊನ್ನೆ ತಾನೆ ಐವತ್ತು ಜನರನ್ನು ಇಂಟರ್‌ವ್ಯೂ ಮಾಡಿ ಹತ್ತು ಜನರನ್ನು ಆಯ್ಕೆ ಮಾಡಿಕೊಂಡ ಕಮಿಟಿಗೆ ಆತನೇ ಎರಡನೇ ಅತಿ ದೊಡ್ಡ ಹುದ್ದೆಯಲ್ಲಿದ್ದ ವ್ಯಕ್ತಿಯಾಗಿದ್ದ. ಅವರೆಲ್ಲ ತಮಗೆ ಕೆಲಸ ಕೊಡುವಂತೆ ಶಿಫಾರಸ್ಸು ಮಾಡಲಿ ಎಂದು ಇವನನ್ನು ಎಷ್ಟೊಂದು ಇಂಪ್ರೆಸ್ ಮಾಡಲು ಪ್ರಯತ್ನಿಸುತ್ತಿದ್ದರು. ಅದರಲ್ಲಿ ಕೆಲವರು ಬಂದುಬಿಡಬಹುದೆಂಬುದನ್ನೇ ಮರೆತು, ‘ನಮ್ಮ ಮೇಲೇ ಬಾಸಿಜಂ ಮಾಡ್ತಿದ್ದ ಬಡ್ಡೀಮಗ, ಈಗ ಯಾರ ಮೇಲೆ ಮಾಡ್ತಾನೋ ಮಾಡಲಿ, ನೋಡೋಣ..’ ಎಂದು ಸಿಟ್ಟಿನಿಂದ ಆಗಾಗ್ಗೆ ಇವನತ್ತ ಒಂದು ಕೊಂಕುನೋಟ ಹರಿಸುತ್ತಿದ್ದರು.

ಅರುಣ್‌ಗಾಂಧಿಗೆ ಯಾಕೋ ಯಾರಾದರೂ ತನ್ನನ್ನು ಗಮನಿಸುತ್ತಿದ್ದಾರೇನೋ ಅನ್ನಿಸಲಾರಂಭಿಸಿತು. ಒಮ್ಮೆ ಹಾಗೇ ದೃಷ್ಟಿ ಹಾಯಿಸಿದ. ಯಾರೂ ತನ್ನತ್ತ ನೋಡುತ್ತಿಲ್ಲ, ಆದರೆ ಎಲ್ಲರೂ ತನ್ನತ್ತಲೇ ನೋಡುತ್ತಿದ್ದಾರೆ ಎನ್ನಿಸಿ, ಮುಳ್ಳಿನ ಕುರ್ಚಿಯ ಮೇಲೆ ಕೂತಂತಹ ಅನುಭವವಾಗಿ, ಯಾರಿಗೂ ಕಾಣದಂತೆ ಎದ್ದು ಓಡಿಹೋಗಿಬಿಡಬೇಕು ಎನ್ನಿಸಿತು.

ಆದಾಗ್ಯೂ ಎಂ.ಡಿ.ಯನ್ನು ಒಮ್ಮೆ ಮಾತಾಡಿಸಿದರೆ ಹೇಗೆ ಅನ್ನಿಸಿ ಆ ಕೋಣೆಗೆ ಹೋದ. ಆತ ತಲೆಯೆತ್ತಿ ತನಗೆ ಎಲ್ಲಾ ಗೊತ್ತಿದೆ, ನೀನು ಹೇಳಬೇಕಾದ್ದು ಏನೂ ಇಲ್ಲ ಎನ್ನುವಂತೆ ಒಂದೇ ಒಂದು ತಿಳಿನಗೆ ಬೀರಿದ. ಗಾಂಧಿಗೆ ಇವನೊಂದಿಗೆ ಮಾತನಾಡುವುದರಿಂದ ಏನೂ ಪ್ರಯೋಜನವಿಲ್ಲವೆನ್ನಿಸಿ ತಿರಸ್ಕಾರದಿಂದ ಎದ್ದುಬಂದ.

*****

ಸೂಟ್‌ಕೇಸಿನಂತ ಲ್ಯಾಪ್‌ಟಾಪ್ ಚೀಲವನ್ನು ಟೀಪಾಯಿಯ ಮೇಲೆ ಎಸೆದು ಸೋಫಾದ ಮೇಲೆ ಕುಸಿದು ಕುಂತ. ಎದುರಿನ ಗೋಡೆಯ ಮೇಲೆ ನೇತುಹಾಕಿದ್ದ ಬೊಚ್ಚುಬಾಯಲ್ಲಿ ನಗುವ ಗಾಂಧಿಯ ಚಿತ್ರ ಕಣ್ಣಿಗೆ ಬಿತ್ತು. ತನ್ನ ಮಾಜಿ ಎಂ.ಡಿ.ಯಂತೆ ಗಾಂಧಿಯೂ ತನ್ನನ್ನು ಕಂಡು ತಿರಸ್ಕಾರದ ನಗೆ ನಕ್ಕಂತೆ ಭಾಸವಾಗಿ ಅವಮಾನವೆನಿಸಿತು.

ಈ ಗಾಂಧಿಯಿಂದಲೇ ಅಲ್ಲವೇ ತಾನು ಎಷ್ಟೆಲ್ಲಾ ಅವಮಾನ ಅನುಭವಿಸುವಂತಾಗಿದ್ದು ಎಂದು ಆ ಫೋಟೋವನ್ನೇ ಹೊಡೆದುಹಾಕಿಬಿಡುವಷ್ಟು ಸಿಟ್ಟುಬಂತು. ತಾನು ಪ್ರೈಮರಿಯಿದ್ದಾಗಿನಿಂದ ಹಿಡಿದು ಬಿ.ಇ. ಮಾಡುವವರೆಗೆ ಎಲ್ಲಾ ಕಡೆ, ಅಂತ ಗಾಂಧಿ.. ಇಂತ ಗಾಂಧಿ.. ಎಂದು ಗೆಳೆಯರು ಅಪಹಾಸ್ಯ ಮಾಡುತ್ತಿದ್ದರು.

ಒಂದು ಸಲ, ಈ ಹೆಸರು ತನಗೆ ಹೇಗೆ ಅಂಟುಕೊಂಡಿತು ಎಂಬ ಬಗ್ಗೆ ಸಂಶೋಧನೆ ಮಾಡಬೇಕೆಂಬ ಉಮೇದು ಬಂದಿತ್ತು. ಕೊರಳಪಟ್ಟಿ ಹಿಡಿದು ಕೇಳೋಣವೆಂದರೆ ಅಪ್ಪ ಸತ್ತು ಇಪ್ಪತ್ತು ವರ್ಷವಾಯಿತಂತೆ. ಅಮ್ಮ ಹೇಳಿದ್ದೇನೆಂದರೆ, ಏಳನೇ ಮಗನಾಗಿ ಗಾಂಧಿ ಹುಟ್ಟಿದ್ದರಿಂದ ಇವತ್ತು ಹೆಸರಿಡೋಣ, ನಾಳೆ ಹೆಸರಿಡೋಣ ಎಂದು ಹಂಗೇ ದಿನಗಳು ಜಾರಿಹೋಗಿ, ಮನೆಯಲ್ಲಿ ಪ್ರೀತಿಯಿಂದ ಕರೆಯುತ್ತಿದ್ದ ಪಾಪಚ್ಚಿ ಎಂಬ ಹೆಸರೇ ಉಳಿದುಬಿಟ್ಟಿತ್ತಂತೆ.

ಮನೆಮನೆಗೆ ಬಂದು ಶಾಲೆಗೆ ಸೇರಿಸಿಕೊಳ್ಳುವ ಅಭಿಯಾನದಲ್ಲಿ, ಆಟ ಆಡುತ್ತಿದ್ದ ಈತನನ್ನು ಹಿಡಿದ ಮೇಸ್ಟರು ಆರು ವರ್ಷ ಆಗಿದೆಯೇ ಎಂದು ಪರೀಕ್ಷಿಸಲು ಬಲಗೈಯ್ಯಿಂದ ಎಡಕಿವಿಯನ್ನು ಮುಟ್ಟಿಸಿ ನೋಡಿ, ಬರೆದುಕೊಳ್ಳಲು ಹೆಸರೇನೆಂದು ಕೇಳಿದಾಗಲೇ, ತನಗೆ ಹೆಸರೇ ಇಟ್ಟಿರದಿದ್ದುದರ ಅರಿವಾಗಿದ್ದಂತೆ. ಡೇಟ್ ಆಫ್ ಬರ್ತ್ ಕಾಲಂ ಬರೆದುಕೊಳ್ಳುವಾಗ ಹೆಸರೇ ಗೊತ್ತಿಲ್ಲ ಅಂದ ಮೇಲೆ ಡೇಟ್ ಇನ್ನೇನು ಗೊತ್ತಿರುತ್ತೆ ಅಂತ ಪಕ್ಕದವನೊಂದಿಗೆ ಮೇಸ್ಟರು ತಮಾಷೆ ಮಾಡುತ್ತಿದ್ದಾಗ, ‘ನನಗೆ ಗೊತ್ತು..’ ಅಂತ, ಆತನ ಅಣ್ಣ ಓಡಿಹೋಗಿ ತನ್ನ ಎಕ್ಸೈಜ್ ಪುಸ್ತಕದಲ್ಲಿ ತಮ್ಮ ಹುಟ್ಟಿದ್ದ ದಿನಾಂಕ ಬರೆದು ಇಟ್ಟಿದ್ದನ್ನು ಹುಡುಕಿ ತಂದುಕೊಟ್ಟನಂತೆ. ಈತನ ಬರ್ತ್ಡೇ ಅಕ್ಟೋಬರ್ ಎರಡು ಎಂದಿರುವುದನ್ನು ಆಶ್ಚರ್ಯದಿಂದ ನೋಡಿದ ಹಳೇಕಾಲದ ಆ ಮೇಸ್ಟರು, ‘ಈ ಪ್ರಜಾಪ್ರಭುತ್ವದಲ್ಲಿ ಯರ‍್ಯಾರು ಏನೇನು ಆಗ್ತಾರೋ ಯಾರಿಗೆ ಗೊತ್ತು..’ ಎಂದು ಗೊಣಗಿಕೊಂಡು, ಈ ಹುಡುಗನೂ ಮುಂದೆ ದೊಡ್ಡವ್ಯಕ್ತಿಯೇ ಆಗಿಬಿಡಲಿ ಎನ್ನುವಂತೆ ‘ಗಾಂಧಿ’ ಎಂದು ನಾಮಕರಣ ಮಾಡಿಬಿಟ್ಟರಂತೆ.

ಮುಂದೆ ದೊಡ್ಡವನಾಗಿ ಕಾಲೇಜು ಓದುವಾಗ ಒಮ್ಮೆ ಗಾಂಧಿ ಎಂಬ ಈ ಹೆಸರಿನಿಂದ ಬಹಳ ಮುಜುಗರವಾಗಿ ಹೆಸರನ್ನು ಬದಲಾಯಿಸಿಕೊಂಡು ಬಿಡೋಣವೆಂದು ನಿರ್ಧರಿಸಿ ನೋಟರಿ ಬಳಿಗೆ ಹೋಗಿದ್ದನಂತೆ. ‘ಗಾಂಧಿ ಎಂದಿರುವ ನನ್ನ ಹೆಸರನ್ನು ಅರುಣ್ ಎಂದು ಬದಲಾಯಿಸಿಕೊಂಡಿರುತ್ತೇನೆ’ ಎಂದು ಬಾಂಡ್‌ಪೇಪರ್‌ನಲ್ಲಿ ಅಫಿಡೆವಿಟ್ ಬರೆದುಕೊಂಡು ನೋಟರಿಯ ಮುಂದೆ ಇಟ್ಟಾಗ ಅವರು ಇವನ ಮುಖವನ್ನೊಮ್ಮೆ ನೋಡಿ ಆ ಹೆಸರಿಗಿರುವ ಗೌರವಗಳನ್ನೆಲ್ಲ ಪಟ್ಟಿಮಾಡಿ ಉಪದೇಶಿಸಿ, ‘ಅರುಣ್‌ಗಾಂಧಿ’ ಎಂದು ಬೇಕಾದರೆ ಬದಲಾಯಿಸಿಕೋ ಎಂದು ಸಲಹೆ ನೀಡಿದರಂತೆ. ಅಂದಿನಿಂದಲೇ ಈ ಗಾಂಧಿ ಅರುಣ್‌ಗಾಂಧಿ ಆದದ್ದಂತೆ.

ನೆಲದಲ್ಲಿ ಓಡಾಡಲೇ ವಾಹನವಿಲ್ಲದೇ ಬೆಳೆದ ಅರುಣ್‌ಗಾಂಧಿ ಆಗಸದಲ್ಲಿ ತೇಲುವ ಆ ವಿಮಾನದಲ್ಲಿ ಎಂದಾದರೊಂದು ದಿನ ವಿದೇಶಕ್ಕೆ ಹಾರಬಹುದೆಂಬುದರ ಕಲ್ಪನೆಯನ್ನೇ ಮಾಡಿರಲಿಲ್ಲ. ಆದರೆ ಕೊನೆಯ ವರ್ಷದಲ್ಲಿ ಓದುವಾಗಲೇ ಜ್ಞಾನದ ಬಲದಿಂದ ಕ್ಯಾಂಪಸ್ ಸೆಲೆಕ್ಷನ್ ಮಾಡಿಕೊಂಡ ಕಂಪೆನಿಯೊಂದು ನಿನ್ನ ಬಳಿ ಕಾರಿದೆಯಾ? ಬೈಕಿದೆಯಾ? ಎಂದು ಕೇಳಿರಲಿಲ್ಲ. ವಿಮಾನದಲ್ಲಿ ಹಾರಿಸಿ ವಿದೇಶಕ್ಕೆ ಕಳುಹಿಸಿತ್ತು.

ಇಲ್ಲಿ ಗಾಂಧಿ ಎಂಬ ಈ ಹೆಸರಿನಿಂದ ಎಷ್ಟೇ ಅವಮಾನ ಆಗಿದ್ದರೂ, ಅಲ್ಲೆಲ್ಲಾ ಎಷ್ಟೊಂದು ಗೌರವ ಸಿಗುತ್ತಿತ್ತೆಂದರೆ ಅದನ್ನು ವರ್ಣಿಸಲೇ ಸಾಧ್ಯವಿಲ್ಲ. ಆ ಗಾಂಧಿಯ ವಂಶದ ಕುಡಿಯೇ ಇರಬಹುದೆಂದುಕೊಂಡು ಅನೇಕರು ಅಭಿಮಾನ ತೋರುತ್ತಿದ್ದರು. ಇನ್ನು ಕೆಲವರು ಇಂದಿರಾಗಾಂಧಿಯ ಫ್ಯಾಮಿಲಿಯವರಿರಬೇಕು ಎಂದು ಗೌರವ ತೋರುತ್ತಿದ್ದರು. ಒಟ್ಟಿನಲ್ಲಿ ಬಹುಪಾಲು ಕೆಲಸಗಳು ಸುಲಲಿತವಾಗಿ ಆಗಿಬಿಡುತ್ತಿದ್ದವು.

ಗಾಂಧಿಯ ಫೋಟೋವನ್ನು ಮತ್ತೊಮ್ಮೆ ಹಾಗೆಯೇ ದಿಟ್ಟಿಸಿನೋಡಿದ.. ಏಕತಾನತೆಯಿಂದ ನೋಡಿದ.. ಫೋಟೋದ ಆ ನಗುವಿನಲ್ಲಿ ಏನೋ ಒಂದು ರೀತಿಯ ಆತ್ಮೀಯತೆ ಇತ್ತು, ಪ್ರೀತಿ ಇತ್ತು, ಶಾಂತಿ ಇತ್ತು.. ಬುದ್ಧನ ಮಂದಹಾಸದಲ್ಲಿ, ಬಾಹುಬಲಿಯ ಸ್ಥಿತಪ್ರಜ್ಞತೆಯಲ್ಲಿ, ಬಸವಣ್ಣನ ಅಂತರ್ಮುಖತೆಯಲ್ಲಿ ಏನೆಲ್ಲಾ ಇರಬಹುದೋ ಅಂಥದೆಲ್ಲಾ ಗಾಂಧಿಯ ಆ ನಗುವಿನಲ್ಲೂ ಕಾಣಲಾರಂಭಿಸಿತು..

ಯಾಕೋ ಗಾಂಧಿ ಎಂದಿಗಿಂತಲೂ ಇಂದು ಹೆಚ್ಚು ಆಕರ್ಷಿತನಾಗಿ ಕಂಡ. ಯಾವತ್ತೂ ಗಾಂಧಿಯನ್ನು ನೋಡಿರಲಿಲ್ಲವೇನೋ ಎನ್ನುವಂತೆ ಮತ್ತೆ ಮತ್ತೆ ನೋಡಲಾರಂಭಿಸಿದ. ನೋಡಿದಷ್ಟೂ ಇನ್ನೂ ಇನ್ನೂ ನೋಡಬೇಕೆನಿಸುವಂತೆ, ಆತನ ನಗುವಿನ ಆಳದಲ್ಲಿ ಇನ್ನೂ ಏನೇನೋ ಇರಬಹುದೆನ್ನಿಸುವಂತೆ ಭಾಸವಾಗಲಾರಂಭಿಸಿತು.. ಗಾಂಧಿಯ ಆ ಚಿತ್ರದಲ್ಲಿ ತನ್ನನ್ನೇ ತಾನು ಕಾಣಲಾರಂಭಿಸಿದ.. ತಾನು ಕೆಲಸ ಕಳೆದುಕೊಂಡಿರುವ ಈ ಸಂದರ್ಭದಲ್ಲಂತೂ ಆ ಗಾಂಧಿ ಯಾಕೋ ಇನ್ನೂ ಹೆಚ್ಚು ಹೆಚ್ಚು ಆತ್ಮೀಯವೆನ್ನಿಸಲಾರಂಭಿಸಿದ..


‘ಗಾಂಧಿ ಎಂದಿರುವ ನನ್ನ ಹೆಸರನ್ನು ಅರುಣ್ ಎಂದು ಬದಲಾಯಿಸಿಕೊಂಡಿರುತ್ತೇನೆ’ ಎಂದು ಬಾಂಡ್‌ಪೇಪರ್‌ನಲ್ಲಿ ಅಫಿಡೆವಿಟ್ ಬರೆದುಕೊಂಡು ನೋಟರಿಯ ಮುಂದೆ ಇಟ್ಟಾಗ ಅವರು ಇವನ ಮುಖವನ್ನೊಮ್ಮೆ ನೋಡಿ ಆ ಹೆಸರಿಗಿರುವ ಗೌರವಗಳನ್ನೆಲ್ಲ ಪಟ್ಟಿಮಾಡಿ ಉಪದೇಶಿಸಿ, ‘ಅರುಣ್‌ಗಾಂಧಿ’ ಎಂದು ಬೇಕಾದರೆ ಬದಲಾಯಿಸಿಕೋ ಎಂದು ಸಲಹೆ ನೀಡಿದರಂತೆ. ಅಂದಿನಿಂದಲೇ ಈ ಗಾಂಧಿ ಅರುಣ್‌ಗಾಂಧಿ ಆದದ್ದಂತೆ.

ಹೊರಗೆ ಬಂದರೆ ಅವಮಾನವೆಂದು ವಾರಗಟ್ಟಲೆ ಮನೆಯಲ್ಲಿ ಕುಂತ ಗಾಂಧಿ ಇಂಟರ್‌ನೆಟ್‌ನ್ನೆಲ್ಲಾ ಶೋಧಿಸಿ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ತನ್ನ ರೆಜ್ಯೂಮ್ ಜತೆ ಅರ್ಜಿಹಾಕಿದ. ವಿದೇಶಗಳಲ್ಲಿರುವ ಅವಕಾಶಗಳನ್ನೆಲ್ಲಾ ತಡಕಾಡಿದ. ಆದರೆ ಎಲ್ಲೆಲ್ಲೂ ಕೆಲಸ ಸಿಗದೇ ಪರದಾಡಿದ. ಮನೆಯಿಂದ ಹೊರಗೆ ಬಂದು ಪರಿಚಯವಿರುವ ಕಡೆಗಳಲ್ಲೆಲ್ಲಾ ಅಲೆದು ಕೆಲಸ ಹುಡುಕೋಣವೆಂದರೆ, ಹಿಂದೆ ತಾನಿದ್ದ ಕಂಪೆನಿಯ ಓನರ್ ತಾನೇ ಎನ್ನುವಂತೆ ಆ ಕಂಪೆನಿಗಳಿಗೆಲ್ಲ ಸ್ಪರ್ಧೆಯೊಡ್ಡಿದ್ದ. ಈಗ ಕೆಲಸ ಕೇಳಲು ಹೋದರೆ ಬಿಡುತ್ತಾರಾ.. ಅವಮಾನ ಮಾಡುತ್ತಾರೆ.. ಒಂದು ವೇಳೆ ಅವಮಾನ ಮಾಡುವುದಿಲ್ಲವೆಂದುಕೊಂಡರೂ, ನಾಳೆ ಆ ಕಂಪೆನಿಯೂ ಮುಚ್ಚಲಾರದೆಂಬ ಖಾತ್ರಿಯೇನು?

ಈ ತಿಂಗಳು ಮನೆಯ ಕಂತನ್ನು ಕಟ್ಟಲಿಲ್ಲವೆಂದು ಹೆಂಡತಿ ನೆನಪು ಮಾಡಿದಳು. ಬಂದ ಸಂಬಳದ ಕೊನೆಯ ಕಂತನ್ನು ಸಾಲಕ್ಕೆ ಕಟ್ಟಿಬಿಟ್ಟರೆ ಮುಂದೆ ಕೆಲಸ ಸಿಗುವವರೆಗೆ ಹೊಟ್ಟೆಗೇನು ತಿನ್ನುವುದು? ಹೆಂಡತಿಯನ್ನು ಹೇಗೆ ಸಾಕುವುದು? ಹೋದವರ್ಷ ತಾನೇ ಅದ್ಧೂರಿಯಾಗಿ ಮದುವೆಯಾಗಿದ್ದ. ವಿದೇಶೀ ಕಂಪೆನಿಯಲ್ಲಿ ಕೆಲಸ, ಒಂದೂವರೆ ಕರೆಂಟ್‌ಬಿಲ್ ಕಟ್ಟಿಲ್ಲವೆಂದು ಫ್ಯೂಜ್ ಕಿತ್ತುಕೊಂಡು ಹೋಗಿರುವುದಾಗಿ ಹೆಂಡತಿ ಹೇಳಿದಾಗ, ‘ಈ ನನ್ಮಕ್ಕಳದು ಬಹಳ ರೂಲ್ಸು. ಬಂದು ಕಟ್ಟಕ್ಕೆ ಪುರುಸೊತ್ತಾಗಿಲ್ಲ, ಕಟ್ಟುಸ್ತೀನಿ ಅಂತ ಹೇಳಕ್ಕಾಗಲಿಲ್ಲವಾ..’ ಎಂದು ಹೆಂಡತಿಗೆ ರೇಗಿದ. ಆದರೆ ಆಕೆ ‘ನಿಮಗೇ ಬಿಲ್ ಕಟ್ಟೋಕ್ಕೆ ಯೋಗ್ಯತೆಯಿಲ್ಲ.. ಅವರ ಬಗ್ಗೆ ಮಾತಾಡ್ತೀರಾ..’ ಎಂದು ರಪ್ಪನೆ ಮುಖಕ್ಕೆ ಹೊಡೆದಂತೆ ಮಾತಾಡಿಬಿಟ್ಟಳು. ಇತ್ತೀಚೆಗೆ ಕೆಲಸವಿಲ್ಲದ ತನ್ನನ್ನು ತನ್ನ ಹೆಂಡತಿಯೂ ನಿಕೃಷ್ಟವಾಗಿ ಕಾಣಲಾರಂಭಿಸಿದ್ದಾಳೆ ಅನ್ನಿಸಲಾರಂಭಿಸಿತು.

ಗಾಂಧಿಫೋಟೋ ಯಾಕೋ ಮತ್ತೆ ತನ್ನನ್ನೇ ನೋಡಿ ನಕ್ಕಂತಾಯಿತು. ಎತ್ತ ಹೋದರೆ ಅತ್ತ ತಿರುಗಿ ನೋಡುತ್ತಿರುವಂತೆನಿಸಿತು. ಸಿಟ್ಟಿನಿಂದ ದಿಟ್ಟಿಸಿ ನೋಡಿದ. ಗಾಂಧಿ ಏನಾದರೂ ತನ್ನ ಅಪ್ಪನೋ ತಾತನೋ ಆಗಿದ್ದರೆ ಕೊರಳಪಟ್ಟಿ ಹಿಡಿದು ಕೇಳಬಹುದಿತ್ತು ಅನಿಸಿತು. ಲಂಚ್ ವೇಳೆ ಬಿಚ್ಚಿಕೊಂಡ ಟಿಫನ್‌ಬಾಕ್ಸ್‌ಗಳ ಮುಂದೆ ಗೆಳೆಯರು ಮಾತಾಡುವಾಗ ಈ ಗಾಂಧಿಯಿಂದಲೇ ನಮ್ಮ ದೇಶ ಹಾಳಾಗಿದ್ದು ಎಂದು ವಿತಂಡವಾದ ಮಾಡುತ್ತಿದ್ದುದು ನೆನಪಾಯಿತು. ನಿಜವಾಗಿಯೂ ಗಾಂಧಿಯಿಂದ ನಮ್ಮ ದೇಶಕ್ಕೆ ಎಷ್ಟು ಲಾಭವಾಯಿತು, ಎಷ್ಟು ನಷ್ಟವಾಯಿತು ಎಂದು ಒಂದು ಸಮೀಕ್ಷೆಯನ್ನೇ ಮಾಡಿಬಿಡಬೇಕೆಂಬ ಮನಸ್ಸಾಯಿತು.

*****

ಪ್ರತಿದಿನ ತಪ್ಪದೇ ಗಾಂಧಿಭವನಕ್ಕೆ ಬರಲಾರಂಭಿಸಿದ ಅರುಣ್‌ಗಾಂಧಿ, ಗಾಂಧಿಸಾಹಿತ್ಯವನ್ನೆಲ್ಲಾ ತಿಂದುಬಿಡುವಂತೆ ಓದಲಾರಂಭಿಸಿದ. ತನ್ನ ಕ್ಷೇತ್ರಕ್ಕೆ ಸಂಬಂಧಿಸಿದ್ದು ಎಂಬ ಕಾರಣಕ್ಕೋ ಏನೋ ಗಾಂಧಿಯ ಆರ್ಥಿಕ ಚಿಂತನೆಗಳ ಬಗ್ಗೆ ಆಸಕ್ತನಾದ. ಗಾಂಧಿಯ ಬಗ್ಗೆ ಇನ್ನೂ ಏನೇನೋ ಓದಿದ. ಒಬ್ಬ ಆಧುನಿಕ ಮನೋಧರ್ಮದ ತನ್ನಂತಹವನನ್ನು ಸೆಳೆಯಲು ಆ ಗಾಂಧಿಗೆ ಸಾಧ್ಯವೇ ಇಲ್ಲ ಎಂದುಕೊಂಡಿದ್ದ ಅರುಣ್‌ಗಾಂಧಿಯಂತಹ ಅರುಣ್‌ಗಾಂಧಿಯೇ ಜೀ.. ಎಂದು ಮಾರುಹೋಗಿಬಿಟ್ಟ.

ಕಂತುಗಳನ್ನು ಸರಿಯಾಗಿ ಕಟ್ಟಲಿಲ್ಲವೆಂದು ಮನೆಯನ್ನು, ಕಾರನ್ನು ಮುಟ್ಟುಗೋಲು ಹಾಕಿಕೊಳ್ಳಲು ಬ್ಯಾಂಕಿನವರು ಬಂದಾಗ ಆಶ್ಚರ್ಯವೆಂಬಂತೆ ತಾನೇ ಮುಂದೆ ನಿಂತು ಅವನ್ನೆಲ್ಲಾ ಅವರಿಗೆ ಬಿಟ್ಟುಕೊಟ್ಟ. ಅಡ್ಡಬಂದ ಹೆಂಡತಿಗೆ, ‘ಇಲ್ಲಿಗೆ ಬರುವಾಗ ಏನನ್ನೂ ತಂದಿರಲಿಲ್ಲ, ಹೋಗುವಾಗಲೂ ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ.. ಏನನ್ನಾದರೂ ಗಳಿಸಿದ್ದರೆ ಅದು ಇಲ್ಲಿಯೇ, ಏನನ್ನಾದರೂ ಕಳೆದುಕೊಂಡರೂ ಅದು ಇಲ್ಲಿಯೇ..’ ಎಂದು ಭಗವದ್ಗೀತೆಯ ಉಪದೇಶ ಮಾಡಿದ. ಆದರೆ ಈಗಾಗಲೇ ಕಟ್ಟಿರುವ ಕಂತಿನ ವ್ಯತ್ಯಾಸದ ಮೊತ್ತವನ್ನಾದರೂ ಹಿಂದಿರುಗಿಸುವಂತೆ ಬ್ಯಾಂಕಿನವರೊಂದಿಗೆ ಆಕೆ ಜಗಳ ಮಾಡುತ್ತಿದ್ದಳು.

*****

ಗಾಂಧಿಜಯಂತಿಯ ದಿನ ಗಾಂಧೀಭವನದ ಸಭಾಭವನದಲ್ಲಿ ಖಾದಿ ಅಂಗಿ ತೊಟ್ಟು ಬಂದ ಯುವಕನನ್ನು ಕಂಡು ಎಲ್ಲರೂ ಆಶ್ಚರ್ಯಚಕಿತರಾದರು. ಅಲ್ಲೆಲ್ಲಾ ಗಾಂಧಿಯ ಒಡನಾಟದಲ್ಲಿದ್ದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಿದ್ದರು. ಅವರೆಲ್ಲರ ವಯಸ್ಸು ಕನಿಷ್ಟ ಎಪ್ಪತೈದನ್ನು ಮೀರಿತ್ತು. ಆದರೆ ಗಾಂಧಿ ಸತ್ತು ಮುವತ್ತು ವರ್ಷ ಆದಮೇಲೆ ಹುಟ್ಟಿರಬಹುದಾದ ಏಕೈಕ ಯುವಕ ಇವತ್ತು ತಮ್ಮ ಕಾರ್ಯಕ್ರಮಕ್ಕೆ ಬಂದಿದ್ದು ತುಂಬಾ ಖುಷಿಯಾಗಿದೆ ಎನ್ನುತ್ತಾ, ಎಲ್ಲರೂ ತಮ್ಮ ಹಳೆಯಕಾಲದ ನೆನಪಿನ ಬುತ್ತಿಯನ್ನು ಬಿಚ್ಚಿ, ಬೇಡಬೇಡವೆಂದರೂ ಒತ್ತಾಯಪೂರ್ವಕವಾಗಿ ತುರುಕುತ್ತಾ ಬೋರು ಹೊಡೆಸುತ್ತಿದ್ದರು.

ರೋಸಿಹೋದ ಅರುಣ್‌ಗಾಂಧಿ ಎದ್ದುನಿಂತ. ನಿಜವಾಗಲೂ ಗಾಂಧಿಯನ್ನು ಕೊಂದದ್ದು ನೀವೇ ಎಂದು ನೇರ ಆರೋಪ ಮಾಡಿದ. ಗಾಬರಿಗೊಂಡ ಅವರೆಲ್ಲ ಈತ ಯಾವುದಾದರೂ ಸಂಘದ್ದೋ ಪರಿವಾರದ್ದೋ ಕಟ್ಟಾ ಬೆಂಬಲಿಗನೇ ಇರಬೇಕೆಂದು ಒಂದು ಕ್ಷಣ ಹೌಹಾರಿದರು. ಸೀದಾ ಪೋಡಿಯಂ ಮುಂದೆ ಬಂದು ಮೈಕು ಹಿಡಿದ.

‘ಗಾಂಧಿ ನೀವು ತಿಳಿದಂತೆ ಹುಟ್ಟುತ್ತಲೇ ಬಹಳ ದೊಡ್ಡ ವ್ಯಕ್ತಿಯೇನಾಗಿರಲಿಲ್ಲ.. ಆದರೆ ಸಂದರ್ಭ ಅವರನ್ನು ದೊಡ್ಡವರನ್ನಾಗಿ ಮಾಡಿತು. ಅವತ್ತು ಭಾರತಕ್ಕೆ ಸ್ವಾತಂತ್ರ್ಯದ ದರ್ದು ಇರದಿದ್ದರೆ ಗಾಂಧಿ ಕೇವಲ ಒಬ್ಬ ಒಳ್ಳೆಯ ಲಾಯರ್ ಆಗಿದ್ದುಕೊಂಡು ಸತ್ತುಹೋಗಿರುತ್ತಿದ್ದರು. ಅಷ್ಟೇ.. ನಿಮಗೆ ಯಾರಿಗೂ ಗಾಂಧಿ ಅರ್ಥವೇ ಆಗಿಲ್ಲ. ನೀವು ಯಾರೂ ಗಾಂಧಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿಯೂ ಇಲ್ಲ..’ ಎಂದು ಮಾತು ಆರಂಭಿಸಿದವನು ತನಗೇ ಅರಿವಿಲ್ಲದೇ ಮೈಮರೆತು ಮಾತನಾಡಿಬಿಟ್ಟ. ‘ಗಾಂಧಿ ಇಡೀ ರಾಷ್ಟ್ರವನ್ನು, ರಾಷ್ಟ್ರದ ಭವಿಷ್ಯವನ್ನು ಕಣ್ಣಮುಂದೆ ಇಟ್ಟುಕೊಂಡಿದ್ದರು. ಹಾಗೆ ಸಮಗ್ರವಾಗಿ ನೋಡಿದಾಗ ಮಾತ್ರ ಒಂದು ಸ್ಪಷ್ಟ ಚಿತ್ರಣ ಸಿಗಲು ಸಾಧ್ಯ. ಇನ್ನೂರೈವತ್ತು ವರ್ಷಗಳ ಹಿಂದೆಯೇ ಹುಟ್ಟಿದ ಅಮೆರಿಕಾದಂತಹ ರಾಷ್ಟ್ರವೊಂದು ಒಂದೇ ಒಂದು ಆರ್ಥಿಕ ಹಿಂಜರಿತವನ್ನು ತಡೆದುಕೊಳ್ಳಲು ಸಾಧ್ಯವಾಗದೇ ಪರದಾಡುತ್ತಿರುವಾಗ, ಭಾರತಕ್ಕೆ ಅದರ ಬಿಸಿಯೇ ತಟ್ಟಿಲ್ಲವೆಂದರೆ ಅದು ಗಾಂಧೀಜಿಯವರ ದೂರದೃಷ್ಟಿಯಿಂದ ಮಾತ್ರ ಸಾಧ್ಯವಾದದ್ದು.. ಈವತ್ತು ನಾವು ನಮ್ಮ ಮೇಲೆ ಅವಲಂಬಿತರಾಗಿದ್ದೇವೆ, ಆದರೆ ಇತರರು ಇನ್ನಿತರರ ಮೇಲೆ ಅವಲಂಬಿತರಾಗಿದ್ದಾರೆ. ಅಷ್ಟೇ..

‘ಇದುವರೆಗೆ ನಾನೂ ಇನ್ನೊಬ್ಬರ ಮೇಲೆ ಅವಲಂಬಿತನಾಗಿ ಫ್ಲಾಟು, ಕಾರು ಎಲ್ಲವನ್ನೂ ಮಾಡಿಕೊಂಡಿದ್ದು ನಿಜ. ಆದರೆ ನಾನು ನಂಬಿದ್ದ ಒಂದು ಸಣ್ಣ ಕೆಲಸ ಕೈತಪ್ಪುತ್ತಿದ್ದಂತೆಯೇ ನನ್ನದಾಗಿದ್ದ ಎಲ್ಲವೂ ನನ್ನದಾಗಲಿಲ್ಲ. ನಾನು ಸಾಲವನ್ನು ತೀರಿಸಲಾಗದಿದ್ದರಿಂದ, ಬ್ಯಾಂಕಿನ ಹೆಸರಿನಲ್ಲಿದ್ದ ಎಲ್ಲವೂ ಅವರ ಪಾಲಾಯಿತು. ನಾನು ಎಂಬುವ ನಾನು ನನ್ನ ಮೇಲೆ ಅವಲಂಬಿತನಾಗಿದ್ದರೆ ಹೀಗಾಗುತ್ತಿತ್ತೆ? ಇದು ಒಂದು ಸಣ್ಣ ಉದಾಹರಣೆಯಷ್ಟೇ..

‘ಹೀಗಾಗಿ ಗಾಂಧಿ ನನಗೆ ಕೇವಲ ಒಬ್ಬ ಸ್ವಾತಂತ್ರ್ಯ ಹೋರಾಟಗಾರನಾಗಿ, ಒಬ್ಬ ರಾಜಕಾರಿಣಿಯಾಗಿ ಮಾತ್ರ ಕಾಣುತ್ತಿಲ್ಲ.. ಬದಲಾಗಿ ಒಬ್ಬ ಅರ್ಥಶಾಸ್ತ್ರಜ್ಞನಂತೆ ಕಾಣುತ್ತಿದ್ದಾನೆ.. ಒಬ್ಬ ಸಮಾಜಶಾಸ್ತ್ರಜ್ಞನಂತೆ ಕಾಣುತ್ತಿದ್ದಾನೆ.. ಹೀಗೇ.. ಏನೆಲ್ಲ ಆಗಿ ಕಾಣುತ್ತಿದ್ದಾನೆ..

‘ಒಂದೇ ಗೆರೆಯಲ್ಲಿ ಗಾಂಧಿಯನ್ನು ಬರೆಯಿರಿ ಎಂದರೆ ಕಲಾವಿದರು ಒಂದು ಕ್ವೆಶ್ಚನ್‌ಮಾರ್ಕ್ ಬರೆದುಬಿಡುತ್ತಾರೆ.. ನಿಜವಾಗಿಯೂ ಗಾಂಧಿ ಒಂದು ಪ್ರಶ್ನಾರ್ಥಕ ಚಿಹ್ನೆಯೇ! ಆದರೆ ಬರೀ ಪ್ರಶ್ನೆಯಾಗಿ ಮಾತ್ರ ಉಳಿದುಬಿಡುವುದಿಲ್ಲ.. ಬದಲಾಗಿ ಎಲ್ಲರಿಗೂ, ಎಲ್ಲದಕ್ಕೂ ಉತ್ತರವಾಗಿಯೂ ಕಾಣಲಾರಂಭಿಸುತ್ತಾನೆ.. ಕಾಡಲಾರಂಭಿಸುತ್ತಾನೆ.. ಅದೇ ಆತನ ಶಕ್ತಿ…’ ಎಂದು ಭಾಷಣ ಮಾಡಿ ಕುಳಿತ.

ಗಾಂಧಿಯನ್ನು ಮುಂದುವರೆಸಿಕೊಂಡು ಹೋಗಲು ಪರ್ಯಾಯ ಸಿಕ್ಕಂತಹ ಧನ್ಯತಾಭಾವ ವಯೋವೃದ್ಧರ ಮುಖದಲ್ಲೆಲ್ಲ ಕುಣಿಯಲಾರಂಭಿಸಿತು!

ಕಂನಾಡಿಗಾ ನಾರಾಯಣ

ಕಥೆಯೊಂದು ಬಂದು ಕನಸಿನಲ್ಲಿ ಕಾಡಿದರೆ..?!
‘ನಿಮಗೆ ನಿಮ್ಮ ಯಾವ ಕಥೆ ಇಷ್ಟ, ಮತ್ತು ಯಾಕೆ ಇಷ್ಟ?’ ಎಂದು ಕೇಳಿದರೆ, ‘ನಿಮ್ಮ ಮಕ್ಕಳಲ್ಲಿ ಯಾರು ಇಷ್ಟ, ಮತ್ತು ಏಕೆ?’ ಎಂದು ಕೇಳಿದರೆ ಹೇಗೆ ಉತ್ತರಿಸಲಾಗದೇ ತೊಳಲಾಡುತ್ತೇವೆಯೋ ಹಾಗೆಯೇ ತೊಳಲಾಡುವಂತಾಗುತ್ತದೆ. ನಾನು ಈವರೆಗೂ ಬರೆದಿರುವೆನೆಂದುಕೊಂಡಿರುವ (ನಾನು ಬರೆದಿರುವೆ ಎನ್ನುವುದಕ್ಕಿಂತ ಅವೇ ಬರೆಸಿಕೊಂಡಿವೆ ಎಂಬುದು ನನ್ನ ವಾದ) ಸುಮಾರು ಎಪ್ಪತ್ತಕ್ಕೂ ಹೆಚ್ಚು ಕಥೆಗಳಲ್ಲಿ (ನಾನು, ಬರೆದಿರುವ ಕಥೆಗಳ ಮತ್ತು ಪ್ರಕಟವಾಗಿರುವ ಪುಸ್ತಕಗಳ ಸಂಖ್ಯೆಯನ್ನು ಎಣಿಸುವುದಿಲ್ಲವಾದ್ದರಿಂದ ನಿಖರವಾಗಿ ಹೇಳಲು ವಿಫಲನಾಗುತ್ತೇನೆ) ಬಹುಪಾಲು ಎರಡು ಡಜನ್‌ಗಿಂತಲೂ ಹೆಚ್ಚು ಕಥೆಗಳು ನನಗೆ ಇಷ್ಟ. ಸಮಕಾಲೀನ ಕಥೆಗಾರ, ಗೆಳೆಯ ಮಂಜುನಾಥ ಲತಾ, ‘ನನ್ನಿಷ್ಟದ ನನ್ನ ಕಥೆಗಳು’ ಎಂಬ ನನ್ನದೊಂದು ಆಯ್ದ ಕಥೆಗಳ ಸಂಕಲನ ತರುವೆನೆಂದಾಗ ಹೀಗೆಯೇ ತೊಳಲಾಡಿ, ಆಯ್ಕೆಯನ್ನು ಒಂದು ಡಜನ್‌ಗೆ ಇಳಿಸಿ ಕೊಟ್ಟಿದ್ದೆ. ಕನಸಿನಲ್ಲಿ ದುರ್ಗಿ ಪ್ರತ್ಯಕ್ಷವಾಗಿ ನಿನ್ನ ಮಕ್ಕಳಲ್ಲಿ ಯಾರಾದರೂ ಒಬ್ಬರನ್ನು ಬಲಿ ಕೊಡು ಎಂದರೆ ಹೇಗಾಗುವುದೋ, ಅಂಥದೇ ಸ್ಥಿತಿ ಈ ಪ್ರಶ್ನೆ ಎದುರಾದಾಗ ಮೂಡುತ್ತದೆ. ಮಕ್ಕಳ ಮಧ್ಯೆ ತಾರತಮ್ಯ ಮಾಡುತ್ತಿರುವೆನಿಸಿ ಮುಜುಗರವೆನಿಸುತ್ತಿದೆ. ‘ನೀನೇ ಹುಟ್ಟಿಸಿದ ಕಥೆ ನಾನು, ಯಾಕೆ ಇಷ್ಟವಿಲ್ಲ ಹೇಳು?’ ಎಂದು ಕನಸಿನೊಳಗೆ ಬಂದು ಕಾಡಿದರೆ ಏನೆಂದು ಹೇಳುವುದು ಎಂಬುದಕ್ಕೆ ಉತ್ತರಿಸಲಾಗದೇ ತೊಳಲಾಡುತ್ತೇನೆ. ಆದಾಗ್ಯೂ ಒಂದೇ ಕಥೆಯನ್ನು ಆಯ್ಕೆ ಮಾಡಿಕೊಡಬೇಕಾದುದರಿಂದ, ಇದ್ದುದರಲ್ಲಿ ಒಂದು ಕಥೆ ಎಂದಷ್ಟೇ ಈ ಕಥೆಯನ್ನು ಇಲ್ಲಿ ಆರಿಸಿಕೊಟ್ಟಿದ್ದೇನೆ ಅಷ್ಟೇ. ಇದಕ್ಕಿಂತಲೂ ನನ್ನನ್ನು ಕಾಡಿದ, ನಾನು ಆಯಾ ಕಾಲಕ್ಕೆ ಪ್ರೀತಿಸಿದ ಅನೇಕ ಕಥೆಗಳು ಇವೆಯಾದರೂ, ಪ್ರಸಕ್ತ ಸಂದರ್ಭದಲ್ಲಿ ‘ಜೀ ಗಾಂಧಿ’ ಕಥೆ ಹೆಚ್ಚು ಪ್ರಸ್ತುತ ಎಂಬ ಕಾರಣಕ್ಕೆ ಈ ಕಥೆಯನ್ನು ಆರಿಸಿಕೊಂಡಿದ್ದೇನೆ, ಎಂಬ ಸಮಜಾಯಿಷಿ ನೀಡಿ ಉಳಿದ ಕಥೆಗಳನ್ನು ಸಮಾಧಾನಿಸುತ್ತಿದ್ದೇನೆ.
ಮಲೆನಾಡಿನ ಮಡಿಲಿನಿಂದ ಬೆಳೆದು ಬಂದ ನನಗೆ ಸಹಜವಾಗಿ ಪ್ರಾಣಿಗಳ ಬಗ್ಗೆ ಕಥೆ ಬರೆಯುವುದೆಂದರೆ ಅತೀವ ಆಸಕ್ತಿ. ನನ್ನ ಬಹುಮುಖ್ಯ ಕಥೆಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ಕಥೆಗಳು ಪ್ರಾಣಿಜನ್ಯ ಕಥೆಗಳೇ. ಅವುಗಳಲ್ಲಿ ನಾಯಿ, ಹಂದಿ, ಹಾವು, ಆನೆ, ನವಿಲು, ಹುಲಿ, ಎಮ್ಮೆ, ಹಸು, ಹೋರಿ ಹೀಗೆ ಹತ್ತಾರು ಪ್ರಾಣಿಗಳು ಕಥೆಯ ಕೇಂದ್ರದಲ್ಲಿ ಬಂದು ನಿಲ್ಲುತ್ತವೆ. ಈ ಭೂಮಿ ಮೂಲತಃ ಪ್ರಾಣಿಪಕ್ಷಿಗಳದ್ದು, ಮನುಷ್ಯ ಅದನ್ನು ಅಕ್ರಮವಾಗಿ ಆಕ್ರಮಿಸಿದ್ದಾನೆ ಎಂಬ ಭಾವನೆ ನನ್ನದು. ಉಳಿದಂತೆ ನಾಲ್ಕೈದು ಕಥೆಗಳಲ್ಲಿ ವ್ಯಕ್ತಿ ಅಥವ ವಸ್ತುಗಳು ಪ್ರತಿಮೆಗಳಾಗಿ ನಿಂತಿವೆ. ಉದಾ: ಗಾಂಧಿ, ಕೊಡೆ, ಪ್ರತಿಮೆ ಇತ್ಯಾದಿ. ಹೀಗೆ ಯಾವುದಾದರೂ ಒಂದು ಮೂಲವನ್ನು ಇಟ್ಟುಕೊಳ್ಳದೇ ನನಗೆ ಕಥೆ ಬರೆಯಲು ಬಾರದು ಎಂಬುದು ಬಹುಶಃ ನನ್ನ ದೌರ್ಬಲ್ಯವೆಂದು ಕಾಣುತ್ತದೆ.
‘ಜೀ ಗಾಂಧಿ’ ಕಥೆ ಗಾಂಧಿ ಭವನದಲ್ಲಿ ಅಡ್ಡಾಡುವಾಗ ಆಕಸ್ಮಿಕವಾಗಿ ಹುಟ್ಟಿಕೊಂಡಿದ್ದು. ಗಾಂಧೀಜಿಯ ನೂರಾರು ಪುಸ್ತಕಗಳನ್ನು ನೋಡುತ್ತ, ಅವರ ವಿಚಾರಧಾರೆಗೆ ಮನಸೋತು, ಶರಣಾಗಿ ‘ಜೀ (ಹುಜೂರ್) ಗಾಂಧಿ’ ಎಂಬ ಭಾವದಲ್ಲಿ ಸ್ಫುರಿಸಿದ್ದು. ಈ ಕಥೆ ಬರೆದ ಸಂದರ್ಭದಲ್ಲಿ ವಿಶ್ವದೆಲ್ಲೆಡೆ ‘ರಿಸೆಷನ್’ಗೆ ಬಲಿಯಾಗಿ ಸಾವಿರಾರು ಜನ ಕೆಲಸ ಕಳೆದುಕೊಂಡು, ನಿರುದ್ಯೋಗಿಗಳಾಗಿ ನೆಲಮೂಲವನ್ನು ಅರಸಿಬಂದಿದ್ದರು. ಆಗ, ಗಾಂಧೀಜಿಯ ಅರ್ಥಶಾಸ್ತ್ರವನ್ನು ಅನುಸರಿಸಿದ್ದರೆ ನಾವು ಇಂಥ ಸ್ಥಿತಿಯನ್ನು ಎದುರಿಸಬೇಕಾಗುತ್ತಿರಲಿಲ್ಲ ಎನ್ನಿಸಿದ್ದು ನಿಜ. ಗಾಂಧಿಯ ಬಗ್ಗೆ ಎಷ್ಟೇ ಟೀಕೆ ಟಿಪ್ಪಣಿಗಳಿದ್ದರೂ, ಅವರು ಎಲ್ಲಾ ಕಾಲಕ್ಕೂ ಪ್ರಸ್ತುತವಾಗಬಲ್ಲರು ಎಂಬುದೂ ಅಷ್ಟೇ ಸತ್ಯ. ಆ ಕಾರಣಕ್ಕಾಗಿ ಇಲ್ಲಿಗೆ ‘ಜೀ ಗಾಂಧಿ’ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದೇನೆ.