ಸಹಸ್ರ ಕೋಟಿ ವರ್ಷಗಳಿಂದ ಈ ಕಡಲಿನ ನೀಲ ವರ್ಣ ಹೀಗೇ ಇದೆ. ಅದರೊಳಗಿರುವ ಮಾಯಕದಂತಹ ಬಣ್ಣದ ಮೀನುಗಳೂ ಹುಟ್ಟಿ ಅಳಿದು ಮತ್ತೆ ಹುಟ್ಟಿ ಬೆಳೆದು ಮನುಷ್ಯರಿಗೆ ಆಹಾರವಾಗಿ ಕೋಟಿ ವರ್ಷಗಳಿಂದ ಉಳಿದುಕೊಂಡಿವೆ. ಕಡಲೊಳಗಿರುವ ಪರ್ವತ ಪ್ರದೇಶಗಳು, ಜ್ವಾಲಾಮುಖಿಗಳು, ಹುಲ್ಲುಗಾವಲುಗಳು, ಉದ್ಯಾನವನಗಳೂ ಹಾಗೇ ಇವೆ. ಈ ನಡುನಡುವೆ ನಮ್ಮ ಪುಟ್ಟ ಪ್ರೇಮಗಳು, ರತಿ ಸುಖಗಳು, ಸಂತರು, ಅವರ ಪವಾಡಗಳು, ಭಕ್ತರ ಆರ್ತಕೂಗುಗಳು, ಕಳಕೊಂಡ ಪಿಂಗಾಣಿಯ ಬಟ್ಟಲುಗಳು- ಎಲ್ಲವನ್ನೂ ಕಣ್ಣಾರೆ ಕಾಣಬೇಕೆಂದು ಹೊರಟಿರುವ ನಾನು. ಯಾಕೋ ಪ್ರಾರ್ಥನೆಗೆ ಕೈಕಟ್ಟಿ ನಿಂತಾಗ ಅವಳಿಗಾಗಿ ನಾನು ಸುರಿಸುತ್ತಿರುವ ಕಣ್ಣೀರು ಸಾಲದು ಅನಿಸುತ್ತಿತ್ತು.
ಅಬ್ದುಲ್ ರಶೀದ್ ಬರೆದ ಲಕ್ಷದ್ವೀಪ ಡೈರಿಯ ನಾಲ್ಕನೇ ಕಂತು.

 

‘ಮಹತ್ತಾದ ಮಹಾಯಾತ್ರೆಯೊಂದು ಸಂಭವಿಸಬೇಕಾದರೆ ಪ್ರತಿಸಲವೂ ನಿನ್ನ ಪೃಷ್ಟಭಾಗಕ್ಕೆ ಕಟ್ಟಿರುವೆಯೊಂದು ಸಣ್ಣಗೆ ಕಡಿಯಬೇಕಾಗುತ್ತದೆ’ ಎಂದು ಮಹಾನುಭಾವರು ಖುರಾನನ್ನು ತಪ್ಪುತಪ್ಪಾಗಿ ಓದುತ್ತಿದ್ದ ನನ್ನ ಹಿಂಭಾಗಕ್ಕೆ ಸಣ್ಣಗೆ ಜಿಗುಟುತ್ತಿದ್ದರು. ನಾನು ಆಗಿದ್ದ ನೋವಿಗಿಂತ ಹೆಚ್ಚಾಗಿ ಕಿರುಚಿ ಆಮೇಲೆ ಸ್ವಲ್ಪಹೊತ್ತು ಸರಿಯಾಗಿಯೇ ಓದುತ್ತಿದ್ದೆ. ಆಮೇಲೆ ಸ್ವಲ್ಪ ಹೊತ್ತಿನ ನಂತರ ಅವರು ಮತ್ತೆ ಜಿಗುಟಬೇಕಾಗಿತ್ತು. ಹೀಗೆ ಅವರು ಸುಮಾರು ಸಾವಿರ ಸಲ ಜಿಗುಟಿದ ಮೇಲೆ ನಾನು ಖುರಾನಿನ ಮೊದಲ ಹತ್ತು ಅಧ್ಯಾಯಗಳನ್ನು ಸರಿಯಾಗಿ ಓದಿಬಿಟ್ಟಿದ್ದೆ. ‘ನೀನು ತಪ್ಪಿಲ್ಲದೆ ಸರಿಯಾಗಿ ಓದಿ ಮುಗಿಸಿರುವುದು ನಿನ್ನ ಮೆದುಳಿನ ಶಕ್ತಿಯಿಂದಲ್ಲ ಹುಡುಗಾ, ಇದು ನನ್ನ ಬೆರಳುಗಳ ಮಾಂತ್ರಿಕ ಶಕ್ತಿಯಿಂದ’ ಎಂದು ಅವರು ನಕ್ಕಿದ್ದರು.

ನಾನು ಹನ್ನೊಂದನೇ ಅಧ್ಯಾಯಕ್ಕೆ ತೆರಳುವ ಹೊತ್ತಲ್ಲಿ ಅವರಿಗೆ ಅರಳು ಮರಳು ಶುರುವಾಗಿತ್ತು. ಆ ಹೊತ್ತಿಗಾಗಲೇ ಅವರು ಅವರ ಪಿಂಗಾಣಿಯ ತಟ್ಟೆಯನ್ನು ಎಲ್ಲೋ ಕಳೆದುಕೊಂಡಿದ್ದರು. ಆದರೆ ಅದನ್ನು ಯಾರಿಗೂ ಹೇಳಿಕೊಂಡಿರಲಿಲ್ಲ. ‘ಕಳೆದು ಹೋದ ವಸ್ತುಗಳ ಕುರಿತು ಅದು ತಾನಾಗಿಯೇ ಮರಳಿ ಬರುವವರೆಗೆ ಯಾರಲ್ಲೂ ಹೇಳಿಕೊಳ್ಳಬಾರದು. ಹೇಳಿಕೊಂಡರೆ ಅದು ಮರಳಿ ಬಂದಾಗ ಅದರ ಶಕ್ತಿ ಅದರಲ್ಲಿ ಉಳಿದುಕೊಂಡಿರುವುದಿಲ್ಲ. ಹೇಳಿಕೊಂಡವರ ಪಾಲಾಗಿರುತ್ತದೆ’ ಎಂದು ಅವರು ಹೇಳುತ್ತಿದ್ದರು. ಹಾಗಾಗಿ ನಷ್ಟವಾಗಿ ಹೋದ ಪಿಂಗಾಣಿಯ ಸಂಗತಿಯನ್ನು ಅವರು ಯಾರಲ್ಲಿಯೂ ಹೇಳಿಕೊಳ್ಳದೆ ಒಳಗಡೆಯೇ ಇಟ್ಟುಕೊಂಡು ಕೊರಗುತ್ತಿದ್ದರು. ಇದರ ಪರಿಣಾಮವಾಗಿಯೋ ಏನೋ ಅವರಿಗೆ ಅರಳುಮರಳೂ, ಅಕಾಲ ಮೂತ್ರಶಂಕೆಯ ಭಾದೆಯೂ ಶುರುವಾಗಿತ್ತು. ಹೀಗಾಗಿ ಅವರು ಆಗಾಗ ಮೂತ್ರಕ್ಕೆ ಎದ್ದು ಹೋಗುವುದೂ, ವಳು ಶುದ್ಧಮಾಡಿಕೊಂಡು ಪುನಃ ಓದಿಸಲು ಕೂರುವುದೂ, ಪುನಃ ಎದ್ದು ಹೋಗುವುದೂ ಶುರುವಾಗಿ ಅವರ ಕುರಿತು ಅವರಿಗೇ ರೇಜಿಗೆ ಆರಂಭವಾಗಿ ಆಮೇಲೆ ಅವರು ನಮಗೆಲ್ಲ ಚಿವುಟುವುದನ್ನು ಬಿಟ್ಟು ಅನ್ಯಮನಸ್ಕರಾಗಿದ್ದರು.

ಈಗ ನೋಡಿದರೆ ಅಂತಹದೊಂದು ಕಠಿಣವಾದ ಕಟ್ಟಿರುವೆಯಿಂದ ಕಚ್ಚಿಸಿಕೊಂಡು ನಾನೂ ಅವರಂತೆಯೇ ಎಲ್ಲಿಗೋ ಹೊರಟವನು ಈಗ ಅವರ ಮೂಲಸ್ಥಾನಕ್ಕೇ ಬಂದು ತಲುಪಿದ್ದೆ. ಕವರತ್ತಿಯೆಂಬ ಈ ದ್ವೀಪದ ಹೃದಯಭಾಗದಲ್ಲಿರುವ ಮೂರು ಶತಮಾನಕ್ಕಿಂತಲೂ ಹಳೆಯ ಹುಜರಾ ಮಸೀದಿಯ ಪ್ರಾಂಗಣದ ಮರಳು ನೆಲದಲ್ಲಿ ಮಂಡಿಯೂರಿ ಕುಳಿತು, ಮುನ್ನೂರೈವತ್ತು ವರ್ಷಗಳ ಹಿಂದೆ ಹಾಯಿ ಹಡಗನ್ನೇರಿ ಇಲ್ಲಿ ತಲುಪಿದ ಕನ್ನಡ ನಾಡಿನ ಸಂತನೋರ್ವನ ಮುಚ್ಚಿದ ಬಾಗಿಲಿನ ಸಮಾಧಿಯ ಮುಂದಿರುವ ಮಸೀದಿಯೊಳಗಿಂದ ಅರಬಿ ಮಲಯಾಳದಲ್ಲಿ ಕೇಳಿ ಬರುತ್ತಿರುವ ಅವರ ಕುರಿತ ಕೀರ್ತನೆಯನ್ನು ಕೇಳಿಸಿಕೊಳ್ಳುತ್ತಿದ್ದೆ. ವ್ರತ, ನೇಮ, ನಿಷ್ಟೆಯಿಲ್ಲದವರು ಪ್ರವೇಶಿಸಬಾರದ ಕಟ್ಟು ನಿಟ್ಟಿನ ಮಸೀದಿಯದು. ಮನಸಿನೊಳಗೆ ಸಂದೇಹವೂ, ಮೈಯಲ್ಲಿ ಕಲ್ಮಶವೂ, ಮಿದುಳಲ್ಲಿ ವ್ಯಸನಗಳೂ ಇರುವ ಯಾರೊಬ್ಬರೂ ಒಳ ಹೋಗಬಾರದ ಗರ್ಭಗುಡಿಯಂತಹ ಜಾಗ. ತೆಂಗಿನೆಣ್ಣೆಯ ಸೊಡರೊಂದು ಅಲ್ಲಿ ಸಣ್ಣಗೆ ಉರಿಯುತ್ತಿತ್ತು. ಹಾಡ ನಡುನಡುವೆ ಲೋಬಾನದ ಪಾತ್ರೆಗೆ ಸಾಂಬ್ರಾಣಿಯನ್ನು ಎರಚುತ್ತಿದ್ದರು. ಅಲ್ಲೊಂದು ಹೊಗೆಯ ಪರಿಮಳದ ಲೋಕದ ನಡುವೆ ಬೆಳ್ಳಗಿನ ತುಂಡು ವಸ್ತ್ರವನ್ನ ಉಟ್ಟ ಕಟ್ಟುಮಸ್ತಾದ ಗಂಡಸರು ಪರವಶರಾಗಿ ಭಕ್ತಿಯ ಮತ್ತಿನಲ್ಲಿ ತಲೆದೂಗುತ್ತ, ಕುಳಿತು, ಎದ್ದು, ನಿಂತು ಕೈಯಲ್ಲಿನ ದುಡಿಯನ್ನು ಮಾಂತ್ರಿಕರಂತೆ ತಿರುಗಿಸಿ ಬಡಿಯುತ್ತ ಹಾಡುತ್ತಿದ್ದರು. ನಾನಾದರೋ ನಡುನಡುವೆ ಅನ್ಯಮನಸ್ಕನಾಗುತ್ತಾ ಕಳೆದ ನನ್ನ ಹಳೆಯ ಪ್ರೇಮಗಳ ಕುರಿತು, ಮುಗಿದ ಸುಂದರ ಕಾಲಗಳ ಕುರಿತು ಆಗಾಗ ಮಿದುಳೊಳಗೆ ಕಟ್ಟಿರುವೆಗಳನ್ನು ಬಿಟ್ಟುಕೊಂಡು ಎಲ್ಲೋ ಹೊರಟು ಹೋಗಿ ಅಲ್ಲಿಗೇ ತಿರುಗಿ ಬರುತ್ತಿದ್ದೆ.

ಯಾವುದೋ ಕಾಲದಲ್ಲಿ ಇಲ್ಲಿಂದ ಹಾಯಿದೋಣಿ ಹತ್ತಿ, ಕೇರಳದ ಕರೆ ತಲುಪಿ ಅಲ್ಲಿಂದ ಮಲಬಾರಿಗೂ, ಅಲ್ಲಿಂದ ಕೊಡಗಿನ ಕಾಡಿಗೂ ಹೊಕ್ಕ ಮಹಾನುಭಾವರೂ, ಅವರ ಪೂರ್ವಜರೂ ನನ್ನ ಹಾಗೆಯೇ ಪೃಷ್ಟದ ಭಾಗಕ್ಕೆ ಕಟ್ಟಿರುವೆಯಿಂದ ಸಣ್ಣದಾಗಿ ಕಚ್ಚಿಸಿಕೊಂಡಿರಬಹುದು, ಅಲ್ಲಿಂದ ಅವರ ಮಹಾಯಾತ್ರೆಯೂ ತೊಡಗಿರಬಹುದು ಅನಿಸುತ್ತಿತ್ತು.

ಕೀರ್ತನೆ ಮುಗಿಸಿದ ಹಾಡುಗಾರರು ಮಸೀದಿಯ ಮೂಲೆಯ ಅತ್ತರಿನ ಬೋಗುಣಿಯೊಳಕ್ಕೆ ತಮ್ಮ ಬಲ ಹಸ್ತವನ್ನು ತಾಗಿಸಿ, ಎರಡೂ ಹಸ್ತಗಳಿಂದ ತಮ್ಮ ದೇಹಕ್ಕೆ ಪೂಸಿ ಸಂತನ ಸಮಾಧಿಗೆ ನಮಸ್ಕರಿಸಿ ಹೊರಬರುತ್ತಿದ್ದರು. ಒಂದು ಕಾಲದಲ್ಲಿ ಕಡಲ ನೀರನ್ನು ತಮ್ಮ ಬಲಿಷ್ಟ ತೋಳುಗಳಿಂದ ಹುಟ್ಟು ಹಿಡಿದು ಸೀಳುತ್ತಾ ಮೀನು ಹಿಡಿಯುವ ಓಡಗಳನ್ನು ನಡೆಸುತ್ತಿದ್ದವರ ಮಕ್ಕಳು ಇವರು. ಇವರ ತೋಳುಗಳೂ ಹಾಗೇ ಬಲಿಷ್ಟವಾಗಿತ್ತು. ಕಣ್ಣುಗಳಲ್ಲಿ ಒಂದು ತರಹದ ಅವ್ಯಕ್ತ ರೋಷವನ್ನೂ ಆತಂಕವನ್ನೂ ತುಂಬಿಕೊಂಡಿರುವ ಅಪರಿಚಿತ ಗಂಡಸರು. ಈಗ ಪ್ರತಿ ಸೋಮವಾರ, ಗುರುವಾರಗಳಂದು ಹಾಡಿನ ಸದ್ದಿನ ಹೊತ್ತಿಗೆ ಸೈಕಲ್ಲು ಇಳಿದು ಹಾಜರಾಗುತ್ತಿದ್ದ ನನ್ನ ಕಡೆಗೆ ಒಂದು ಸಲಾಂ ಎಸೆಯುತ್ತಿದ್ದರು. ನಾನೂ ಸಣ್ಣಗೆ ಮರು ಸಲಾಂ ಹೇಳಿ ಮುಗುಳ್ನಗುತ್ತಿದ್ದೆ.

ಬಾಲ್ಯದಿಂದಲೇ ಯಾವುದೋ ಕಾರಣಕ್ಕೆ ಅವಿಶ್ವಾಸಿಯಾಗಿ ನಮಾಜನ್ನೂ ಬಿಟ್ಟು, ಸಲಾಮನ್ನೂ ಬಿಟ್ಟು ಗಂಡುಗೂಳಿಯಂತೆ ನಡೆಯುತ್ತಿದ್ದವನು ಈ ದ್ವೀಪಹೊಕ್ಕ ಬಳಿಕ ದ್ವೀಪವಾಸಿಯಾಗಿ ಅವರಂತೆಯೇ ನಡೆಯುವುದನ್ನೂ, ಕೂರುವುದನ್ನೂ ನಮಸ್ಕರಿಸುವುದನ್ನೂ, ಪ್ರಾರ್ಥಿಸುವುದನ್ನೂ ರೂಡಿಸಿಕೊಂಡು ಒಂದು ಅವ್ಯಕ್ತ ತುಂಟತನವನ್ನೂ, ಸಂತಸವನ್ನೂ ಅನುಭವಿಸುತ್ತಿದ್ದೆ.

ಹಾಡ ನಡುನಡುವೆ ಲೋಬಾನದ ಪಾತ್ರೆಗೆ ಸಾಂಬ್ರಾಣಿಯನ್ನು ಎರಚುತ್ತಿದ್ದರು. ಅಲ್ಲೊಂದು ಹೊಗೆಯ ಪರಿಮಳದ ಲೋಕದ ನಡುವೆ ಬೆಳ್ಳಗಿನ ತುಂಡು ವಸ್ತ್ರವನ್ನ ಉಟ್ಟ ಕಟ್ಟುಮಸ್ತಾದ ಗಂಡಸರು ಪರವಶರಾಗಿ ಭಕ್ತಿಯ ಮತ್ತಿನಲ್ಲಿ ತಲೆದೂಗುತ್ತ, ಕುಳಿತು, ಎದ್ದು, ನಿಂತು ಕೈಯಲ್ಲಿನ ದುಡಿಯನ್ನು ಮಾಂತ್ರಿಕರಂತೆ ತಿರುಗಿಸಿ ಬಡಿಯುತ್ತ ಹಾಡುತ್ತಿದ್ದರು.

ಬಾಲ್ಯಕಾಲದಲ್ಲಿ ಕಂಠಪಾಠ ಮಾಡಿದ್ದ ಖುರಾನಿನ ಸ್ತೋತ್ರಗಳೂ, ಸಲಾತಿನ ಸಾಲುಗಳೂ, ರಾತೀಬಿನ ಹಾಡುಗಳೂ ಅದು ಯಾವುದೋ ಮಾಯಕದಂತೆ ನನ್ನ ಗಂಟಲಿನಿಂದಲೂ ಬರುತ್ತಿತ್ತು. ಮಹಾನುಭಾವರಂತೆ ನನಗೂ ಅಕಾಲ ಅರಳು ಮರುಳು ಸಂಭವಿಸಿರಬಹುದೇ ಎಂಬ ಸಂದೇಹವೂ ಪ್ರಾರ್ಥಿಸುವಾಗ ಮನಸಿನೊಳಗೆ ಸಣ್ಣ ಝರಿಯಂತೆ ಹರಿದು ಹೋಗುತ್ತಿತ್ತು. ಪಿಂಗಾಣಿ ಬಟ್ಟಲನ್ನು ಕಳೆದುಕೊಂಡು ಅರಳು ಮರಳಾದ ಮಹಾನುಭಾವರು. ಪ್ರಾಣಸಖಿಯಂತಹ ಸಣ್ಣ ಪ್ರಾಯದ ಆತ್ಮಗುರುವನ್ನು ಕಳೆದುಕೊಂಡು ಪ್ರಾರ್ಥನೆಯ ನಡುನಡುವೆ ಅನ್ಯಮನಸ್ಕನಾಗಿ ಕಣ್ಣೀರು ತುಂಬಿಕೊಳ್ಳುವ ನಾನು. ಸುತ್ತಲೂ ದೇವರ ಕರುಣೆಯಂತೆ ವ್ಯಾಪಿಸಿರುವ ಅಗಾಧ ನೀಲ ಕಡಲು. ಸಹಸ್ರ ಕೋಟಿ ವರ್ಷಗಳಿಂದ ಈ ಕಡಲಿನ ನೀಲ ವರ್ಣ ಹೀಗೇ ಇದೆ. ಅದರೊಳಗಿರುವ ಮಾಯಕದಂತಹ ಬಣ್ಣದ ಮೀನುಗಳೂ ಹುಟ್ಟಿ ಅಳಿದು ಮತ್ತೆ ಹುಟ್ಟಿ ಬೆಳೆದು ಮನುಷ್ಯರಿಗೆ ಆಹಾರವಾಗಿ ಕೋಟಿ ವರ್ಷಗಳಿಂದ ಉಳಿದುಕೊಂಡಿವೆ.

ಕಡಲೊಳಗಿರುವ ಪರ್ವತ ಪ್ರದೇಶಗಳು, ಜ್ವಾಲಾಮುಖಿಗಳು, ಹುಲ್ಲುಗಾವಲುಗಳು,ಉದ್ಯಾನವನಗಳೂ ಹಾಗೇ ಇವೆ. ಈ ನಡುನಡುವೆ ನಮ್ಮ ಪುಟ್ಟ ಪ್ರೇಮಗಳು, ರತಿ ಸುಖಗಳು, ಸಂತರು, ಅವರ ಪವಾಡಗಳು, ಭಕ್ತರ ಆರ್ತಕೂಗುಗಳು, ಕಳಕೊಂಡ ಪಿಂಗಾಣಿಯ ಬಟ್ಟಲುಗಳು- ಎಲ್ಲವನ್ನೂ ಕಣ್ಣಾರೆ ಕಾಣಬೇಕೆಂದು ಹೊರಟಿರುವ ನಾನು. ಯಾಕೋ ಪ್ರಾರ್ಥನೆಗೆ ಕೈಕಟ್ಟಿ ನಿಂತಾಗ ಅವಳಿಗಾಗಿ ನಾನು ಸುರಿಸುತ್ತಿರುವ ಕಣ್ಣೀರು ಸಾಲದು ಅನಿಸುತ್ತಿತ್ತು. ಅದೂ ಕೂಡಾ ಹೋಗಿ ಬರುವ ಭಕ್ತಿಯಂತೆ ಶುಷ್ಕ ಅನಿಸುತ್ತಿತ್ತು. ಎಲ್ಲ ಪ್ರೇಮಗಳೂ ಶುಷ್ಕ, ಎಲ್ಲ ಭಾವನೆಗಳೂ, ಭಕ್ತಿಯೂ ಶುಷ್ಕ. ಆ ಹೊತ್ತಲ್ಲಿ ತುಂಬಿ ಬರುವ ಗದ್ಗದ ಕಂಠ, ಉಬ್ಬುವ ಕೊರಳ ಸೆರೆಗಳು, ಮತ್ತನಾಗುವ ಕಣ್ಣಾಲಿಗಳು ನಿಜ ಅನಿಸಿ ಪ್ರಾರ್ಥನೆಗೆ ಮಂಡಿಯೂರುತ್ತಿದ್ದೆ. ಮತ್ತೆ ಬಾಲ್ಯಕ್ಕೆ ಮಂಡಿಯೂರಿದಂತೆ ಅನಿಸುತ್ತಿತ್ತು.

ಯಾಕೋ ಭಾವುಕನಾಗಿ ಬಿಟ್ಟೆ. ನಿನ್ನ ಬರಹದಲ್ಲಿ ಯಾಕೋ ಭಾವುಕತೆ ಕಡಿಮೆಯಾಗುತ್ತಿದೆ ಅಂತ ಯಾರೋ ಹೇಳಿದರು. ಅದಕ್ಕಾಗಿ ಆದೆ ಅಂದುಕೊಳ್ಳಿ ಪರವಾಗಿಲ್ಲ. ಅದಾಗಿ ಇನ್ನೊಂದು ಇರುಳು ಅಮವಾಸ್ಯೆಯ ಹಿಂದೋ ಮುಂದೋ ಇರಬೇಕು. ನಾನು ಹುಜರಾ ಮಸೀದಿಯ ಬಳಿ ತಲುಪುವಾಗ ಯಾಕೋ ತಡವಾಗಿಬಿಟ್ಟಿತ್ತು. ದಿಕಿರಿನ ಹಾಡುಗಾರರು ಮಸೀದಿಯ ಮೆಟ್ಟಲು ಇಳಿದು ಕೊಳದ ಬಳಿ ತಲುಪಿ ಮುಂದಕ್ಕೆ ಕತ್ತಲಲ್ಲಿ ಮಾಯವಾಗುತ್ತಿದ್ದರು. ಮಸೀದಿಯ ಮುಖ್ಯಸ್ಥರು ಗೇಟಿನ ಚಿಲಕ ಹಾಕುತ್ತಿದ್ದರು. ತಡವಾಗಿ ತಲುಪಿದ ನನ್ನ ಕುರಿತು ಅವರಿಗೆ ಕೋಪವಾದಂತೆ ಅನಿಸಿತು. ‘ಕ್ಷಮಿಸಿ ಏನೋ ಊರ ಕಡೆ ತಲೆಬಿಸಿ. ಫೋನಿನಲ್ಲಿ ಮಾತನಾಡುತ್ತಾ ತಡವಾಯಿತು’ ಎಂದು ಮಾಫಿ ಕೇಳಿದೆ. ‘ಇದು ಮಾಫಿಯ ಪ್ರಶ್ನೆ ಅಲ್ಲ’ ಎಂದು ಅವರು ಅಂದರು. ‘ಸೋಮವಾರ ಅಸ್ತಮಿಸಿದ ಮಂಗಳವಾರದ ಇರುಳು ಮತ್ತು ಗುರುವಾರ ಅಸ್ತಮಿಸಿದ ಶುಕ್ರವಾರ ಇರುಳು ದಿನದ ಕೊನೆಯ ನಮಾಜಿನ ನಂತರ ನಡೆಯುವ ಈ ಮೌಲೂದ್ ಸಂಕೀರ್ತನದ ನಂತರ ಅದರೊಳಗೆ ನರ ಮನುಷ್ಯರಾರಿಗೂ ಪ್ರವೇಶವಿಲ್ಲ. ಆನಂತರ ಅಲ್ಲಿ ನಡೆಯುವುದು ಮುನ್ನೂರು ವರ್ಷಗಳ ಹಿಂದೆ ತೀರಿಹೋದ ಸಂತ ಮಹಾತ್ಮ ಮತ್ತು ಆ ನಂತರ ತೀರಿಹೋದ ಆತನ ಶಿಷ್ಯ ಮುರೀದರ ಜೊತೆ ಜಿನ್ ಗಳು ಎಂಬ ಯಕ್ಷ ಗಂಧರ್ವರು ನಡೆಸುವ ಉಭಯ ಕುಶಲೋಪರಿ ಗೋಷ್ಠಿ. ಅಲ್ಲಿ ಬದುಕಿರುವ ಮರ್ತ್ಯರಾರಿಗೂ ಪ್ರವೇಶವಿಲ್ಲ’ ಎಂದು ಕಥೆ ಹೇಳಿದರು.

ಆದರೆ ಕೆಲವು ವರ್ಷಗಳ ಹಿಂದೆ ಇದಾವುದರ ಅರಿವೂ ಇಲ್ಲದ ಮಸೀದಿಯ ಕಾವಲುಗಾರನೋರ್ವ ಒಳಗೇ ನಿದ್ದೆ ಹೋಗಿದ್ದ. ಆತ ಏನೋ ಸದ್ದಿಗೆ ನಡುರಾತ್ರಿ ಕಣ್ತೆರೆದು ನೋಡಿದರೆ ಸಂತರು ಮಣ್ಣಲ್ಲಿ ಮಣ್ಣಾಗಿ ಮಲಗಿರುವ ಗೋರಿಯ ಎದುರಿನ ಮಸೀದಿಯ ಹಜಾರದಲ್ಲಿ ದಿವ್ಯವಾದ ಗೋಷ್ಟಿಯೊಂದು ನಡೆಯುತ್ತಿದೆ. ತೀರಿ ಹೋದ ಸಂತನೂ ಕಾಲವಾಗಿ ಹೋದ ಆನಂತರದ ಅವರ ಶಿಷ್ಯ ಮುರೀದರೂ, ಆಕಾಶದಿಂದ ಇಳಿದು ಬಂದ ಯಕ್ಷ ಜಿನ್ ಗಂಧರ್ವರೂ ಆರಾಮ ಕುರ್ಚಿಗಳಲ್ಲಿ ಕಾಲು ಚಾಚಿ ಕುಳಿತು ದಿವ್ಯ ಸತ್ಸಂಗ ನಡೆಸುತ್ತಿದ್ದಾರೆ. ಕಾವಲುಗಾರನ ಬಾಯಿ ಕಟ್ಟಿಹೋಯಿತು. ತಾನು ವರ್ಷಗಳಿಂದ ಸೇವನೆ ನಡೆಸುತ್ತಿರುವ ಮುನ್ನೂರು ವರ್ಷಗಳ ಹಿಂದೆ ತೀರಿ ಹೋದ ಸೂಫಿ ಆತ್ಮಗುರು ಮಂದಹಾಸದಲ್ಲಿ ನೋಡುತ್ತಿದ್ದಾರೆ. ಅವರ ಶಿಷ್ಯಗಣಗಳೂ, ಯಕ್ಷ ಗಂಧರ್ವರೂ ಒಮ್ಮೊಮ್ಮೆ ಕಣ್ಮುಚ್ಚಿ, ಒಮ್ಮೊಮ್ಮೆ ಮುಗುಳ್ನಕ್ಕು ಕುಶಲ ಸಾಂಪ್ರತ ಮಾತನಾಡುತಿದ್ದಾರೆ. ಪಾಮರನಾದ ಕಾವಲುಗಾರನ ಮುಖದಲ್ಲೂ ಮಂದಹಾಸ ಮೂಡಿತು. ಆತ ಆ ಆನಂದದಲ್ಲೇ ಅರಿಯದೆ ಓಡಿ ಹೋಗಿ ಸಂತ ಗುರುಗಳ ಕಾಲಿಗೆ ಬಿದ್ದು ಅವರ ಪಾದಗಳನ್ನು ಚುಂಬಿಸಿದ.

ಆಗ ಅಲ್ಲೊಂದು ಕೋಲಾಹಲ ಸೃಷ್ಟಿಯಾಯಿತು. ತೀರಿ ಹೋದ ಶಿಷ್ಯ ಮುರೀದರು ಹುಬ್ಬುಗಂಟಿಕ್ಕಿದರು. ಕೋಪಗೊಂಡ ಜಿನ್ ಗಂಧರ್ವರು ವಿಚಲಿತರಾದರು. ಆದರೆ ಸಂತರು ತನ್ನ ಸಮಾಧಿಯನ್ನು ಕಾಯುತ್ತಿರುವ ಕಾವಲುಗಾರನನ್ನು ಆಲಂಗಿಸಿ ಆತನ ಹಣೆಗೆ ಚುಂಬಿಸಿ ಆಶೀರ್ವದಿಸಿದರು. ಕಾವಲುಗಾರನ ಆನಂದಕ್ಕೆ ಎಲ್ಲೆ ಇಲ್ಲವಾಗಿ ಆತ ಹುಚ್ಚನಂತಾದ. ಆದರೆ ಸಂತರು ಆತನನ್ನು ಎಚ್ಚರಿಸಿದರು. ‘ಈ ಸದನದಲ್ಲಿ ಬದುಕಿರುವ ಮನುಷ್ಯರಿಗೆ ಪ್ರವೇಶವಿಲ್ಲ. ಆದರೆ ನೀನು ನೋಡಿಬಿಟ್ಟಿದ್ದೀಯಾ. ಇದು ನಿನ್ನ ದುರಾದೃಷ್ಟವೂ ಹೌದು, ಅದೃಷ್ಟವೂ ಹೌದು. ಇದು ಅದೃಷ್ಟವಾಗಿ ಉಳಿಯಬೇಕಾದರೆ ಈ ಸಂತೋಷವನ್ನು ನಿನ್ನಲ್ಲೇ ಇರಿಸಿಕೊಳ್ಳಬೇಕು. ಯಾರಿಗೂ ಅರುಹಬಾರದು’ ಎಂದು ಅವನನ್ನು ಬೀಳ್ಕೊಟ್ಟರು.

ಕಾವಲುಗಾರನಿಗೆ ಆ ಸಂತೋಷವನ್ನು ಹೇಳಿಕೊಳ್ಳಲೂ ಆಗದೆ ಉಳಿಸಿಕೊಳ್ಳಲೂ ಆಗದೆ ಆ ಮಂದಹಾಸವನ್ನು ಮುಖದಲ್ಲೇ ಇಟ್ಟುಕೊಂಡು ಬೆಳಗಿನ ಜಾವ ತಡವಾಗಿ ಹಸನ್ಮುಖಿಯಾಗಿ ಮನೆಗೆ ಮರಳಿದ. ತಡವಾಗಿ ಬಂದ ಪತಿಯ ಮುಖದಲ್ಲಿರುವ ಅಸಹಜ ಮಂದಹಾಸವನ್ನು ಕಂಡ ಪತ್ನಿಗೆ ಸಹಜವಾಗಿಯೇ ಅನುಮಾನಗಳು ಬಂದವು. ಪತಿಯನ್ನು ಬೇಡಿದಳು, ಕಾಡಿದಳು, ಬಗೆಬಗೆಯಾಗಿ ಅವನನ್ನು ಚಿತ್ರಹಿಂಸಿಸಿದಳು. ಬೇರೆ ದಾರಿಯಿಲ್ಲದೆ ಆತ ಸತ್ಯವನ್ನು ಅರುಹಬೇಕಾಯಿತು. ಆ ಸತ್ಯ ಅರಿತ ಪತ್ನಿಯು ತನ್ನ ನೆರೆಮನೆಯ ಪತ್ನಿಯರಿಗೆ ಈ ಸುದ್ದಿಯನ್ನು ಅರುಹಿದಳು. ಅವರೆಲ್ಲರೂ ಆನಂದ ತುಂದಿಲರಾಗಿ ಗುಂಪಾಗಿ ಸಂತನನ್ನು ಕಾಣಲು ಹೋದರೆ ಅಲ್ಲಿ ಬೆಳಕಾಗಿ ಎಲ್ಲರೂ ಹೊರಟುಹೋಗಿದ್ದರು. ಪತ್ನಿ ನಿರಾಶಿತಳಾಗಿ ಮನೆಗೆ ಬಂದು ನೋಡಿದರೆ ಬೇರೆ ಗತಿಯಿಲ್ಲದೆ ಆಕೆಗೆ ಸತ್ಯವನ್ನು ಅರುಹಬೇಕಾಗಿ ಬಂದ ಪತಿಯು ಮಲಗಿದಲ್ಲೇ ಹತನಾಗಿ ಹೋಗಿದ್ದ.

ಈ ಕಥೆಯನ್ನು ಹೇಳಿದ ಮಸೀದಿಯ ಮುಖ್ಯಸ್ಥರು ನನ್ನ ಮುಖವನ್ನು ಗಮನಿಸಿದರು. ನಾನೇನೂ ವಿಚಲಿತನಾಗಿಲ್ಲ ಎಂದು ಅರಿವಾದ ಅವರ ಮುಖದ ಸಣ್ಣಗಿನದೊಂದು ನಗು ಆ ಕತ್ತಲಿನಲ್ಲೂ ಗೋಚರಿಸಿತು. ‘ನೋಡು ನೀನು ಈ ಮಸೀದಿಯ ಪಿಂಗಾಣಿ ಬಟ್ಟಲನ್ನು ಹುಡುಕುವುದನ್ನು ನಿಲ್ಲಿಸು. ಏಕೆಂದರೆ ಅದು ಇರುವುದು ನಿಜ. ಆದರೆ ಅದು ಇರುವ ಜಾಗ ಇದಲ್ಲ’ ಎಂದು ಮೌನವಾದರು.

(ಮುಂದಿನ ವಾರ : ಹಡಗಲ್ಲಿ ಕಂಡ ಹಳೆಯ ರೂಪದರ್ಶಿಯ ಕಥೆ )

(ಉದಯವಾಣಿ ಸಾಪ್ತಾಹಿಕದಲ್ಲಿ ಪ್ರಕಟವಾಗುತ್ತಿದ್ದ ಅಂಕಣದ ಪರಿಷ್ಕೃತ ರೂಪ)