”ಇಂಗ್ಲೀಷರು ಹೊಗೆಸೊಪ್ಪು ಮತ್ತು ಉಪ್ಪಿಗೆ ತೆರಿಗೆ ಹಾಕಿದ್ದೊ. ಕಂದಾಯ ಹಣ ರೂಪಲೇ ಕೊಡೊಕುಂತೇಳಿ ಸಾಸ್ನ ಮಾಡಿದ್ದೊ. ಅದ್ ಇಲ್ಲಿನ ಬೇಸಾಯಗಾರ್ರ ಕೆರಳಿಸೀತ್. ಕೆದುಂಬಾಡಿ ರಾಮ ಗೌಡ್ರ್ ಆಗ ಅಮರ ಸುಳ್ಯ ಸೀಮೇಲಿ ತುಂಬ ಹೆಸರು ಗಳಿಸಿದ್ದೊ. ಕೂಸಪ್ಪ ಗೌಡ್ರಿಗೂ ಜನ ಬೆಂಬಲ ಇತ್ತ್. ಇವೆಲ್ಲಾ ಸೇರಿ ಸೋಮವಾರಪೇಟೆ ಕಡೆಯ ಒಬ್ಬ ಲಿಂಗಾಯ್ತನ್ನ ಕರ್ಕೊಂಡು ಬಂದೊ. ಅವಂಗೆ ಕಲ್ಯಾಣಪ್ಪಂತ ಹೆಸ್ರು ಕೊಟ್ಟು, ರಾಜ್ರ ನೆಂಟಂತೇಳಿ ಸುದ್ದಿ ಹಬ್ಸಿ ಸೇನಾಪತಿ ಮಾಡಿ ಸೇನೆ ಕಟ್ಟಿದೊ”
ಡಾ. ಬಿ. ಜನಾರ್ದನ ಭಟ್ ಸಾದರಪಡಿಸುತ್ತಿರುವ ‘ಓಬೀರಾಯನ ಕಾಲದ ಕತೆಗಳು’ ಸರಣಿಯ ಹದಿನೇಳನೆಯ ಕಥಾನಕದಲ್ಲಿ ಅರೆ ಭಾಷೆಯ ಒಂದು ಕಥೆ.

 

ನಾ ಈಗ ಒಂದೇ ಕತೆ ಹೇಳೀಕೆ ಹೊರಟೊಳೆ. ಕತೆ ಅಂದ್ರೆ ನಾ ಕಟ್ಟಿದ್ದಲ್ಲ. ಕೇಳಿದ್ದ್. ಈ ಕತೆಯ ನಾಯಕ ಈಗ ಬದ್ಕಿತ್ಲೆ. ಕತೆ ಹೇಳ್ದವೂ ಬದ್ಕಿತ್ಲೆ. ಆದ್ರೆ ಕತೆಯಾಗಿ ಇಬ್ರೂ ಬದುಕ್ಯೊಳೋ. ನಮ್ಮದ್ ಮಲೆನಾಡ್. ಕೊಡಗಿಗೆ ಅಂಟಿಕೊಂಡೇ ಇರುವ ಊರ್. ಇಲ್ಲಿ ಒಂದ್ ಗುಡಿ ಉಟ್ಟು. ಅದ್ ಬೈನಾಟಿ ಭೂತದ್ದ್. ವರ್ಷಕ್ಕೊಮ್ಮೆ ಬೈನಾಟಿ ಭೂತದ ಜಾತ್ರೆ ಆದೆ. ಬೈನಾಟಿ ಭೂತ ಅಂದ್ರೆ ಅರ್ಜುನ್ನ ಪರೀಕ್ಷೆ ಮಾಡಿಕೆ ಹೊರಟ ಈಸರ ದೇವ್ರ್, ಬೈನಾಟಿ ಜಾತ್ರೆಯಂದ್ ಊರವೆಲ್ಲಾ ಸೇರಿ ಕೂಡು ಬೇಟೆ ಆಡುವೆ. ಈಗ ಕಾಡ್ ಇಲ್ಲೆ, ಮೃಗನೂ ಇಲ್ಲೆ. ಆದ್ರೂ ನಾವೆಲ್ಲಾ ಬೆಡಿ ಹಿಡ್ದ್ ಗುಡ್ಡ ಸುತ್ತಿ ಕಾಲಿ ಕೈಲಿ ಬಂದವೆ. ಸಂಪ್ರದಾಯ ಬುಡಿಕೆ ಬೊತ್ತಲೆ? ಅಂತಾ ಒಂದ್ ದಿನ ಅಪ್ಪಯ್ಯ ಗೌಡ್ರ್ ಬೂತಕಲ್ ಗುಡ್ಡೆ ಮೇಲೆ ಹೇಳ್ದ ಕತೆ. “ಈ ಗುಡ್ಡೇಲಿ ನಾ ನೂರಾದರೂ ಹುಲಿಗಳ ಕೊಂದಿರುವೆ. ಉಳ್ದ ಚಿಲ್ರೆ ಪಲ್ರೆ ಬುಡಿ. ಆದ್ರೆ ಕೂಸಪ್ಪ ಗೌಡ್ರ ಹಾಂಗೆ ನಮ್ಮಿಂದ ಯಾರಿಂದ್ಲೂ ಮಾಡಿಕ್ಕೆ ಆತ್ಲೆ ಬುಡಿ.”

“ಯಾವ ಕೂಸಪ್ಪ ಗೌಡ್ರ್?”

ಅಪ್ಪಯ್ಯ ಗೌಡ್ರ್ ನಮ್ಮ ಪ್ರಶ್ನೆಗೆ ನೆಗಾಡ್ದೊ. ಹಕ್ಕಲೆ ಇದ್ದ ದೊಡ್ಡ ಬಂಡೆಗಲ್ನ ಮೇಲೆ ಕುದ್ದೋ. ನಾವು ಕೂಡಾ ಸುತ್ತಮುತ್ತ ಕುದ್ದೊ. ತಮ್ಮ ಸಡನ್ನ್ಡೆತ್ತ್ ಬೆಡೀನ ಬಂಡೆ ಮೇಲೆ ಇಸಿ ಗೌಡ್ರ್ ಚೋಯಂಬುನ ಹಕ್ಕಲೆ ಒಂದ್ ಬೀಡಿ ಕೇಳ್ದೊ. ಬೀಡಿ ಎಳ್ಕಂಡ್ ಅದ್ರ ಹೊಗೇನೇ ನೋಡ್ತಾ ಹಳೇದ್ರ ನೆಂಪು ಮಾಡೀಕ್ಕೆ ಸುರುಮಾಡ್ದೊ.

“ಆಗ ಈ ಸೀಮೆಗೆ ಅಮರ ಸುಳ್ಯಾಂತ ಹೆಸ್ರ್. ಕೊಡಗಿನ ಚಿಕ್ಕವೀರ ರಾಜೇಂದ್ರ ದೊರೆಗಳ ಆಡಳ್ತಕ್ಕೆ ಇದ್ ಒಳಪಟ್ಟಿತ್ತ್. ಅವು ಲಿಂಗಾಯತ್ರ್. ಈ ಸೀಮೇಲಿ ಲಿಂಗಾಯಿತ್ರೆ ಇತ್ಲೆ. ಆದ್ರೂ ಜನ ಅವ್ರ ಪ್ರೀತಿಸ್ತಿದ್ದೊ.”
ನಮ್ಮ ಕೋಲ್ಚಾರ್ ಕೂಸಪ್ಪ ರಾಜರ ಸೈನ್ಯಲಿ ಇತ್ತ್. ಬರ್ಜರಿ ಆಳಂಗದ ಸೀಪಾಯಿ. ಆರೂವರೆ ಅಡಿಯಸ್ಟ್ ಎತ್ತ್ರ ಇತ್ತ್. ಅಗಲ ಮುಖ, ದೊಡ್ಡ ಮೂಗು, ಬರ್ಜರಿ ಹುರಿ ಮೀಸೆ, ಮತ್ತೆ ಹೆದ್ರಿಕೆ ಹುಟ್ಟುಸ್ವ ಕೆಂಪು ಕಣ್ಣುಗ! ಅವ್ರ ಬಲವಾದ ತೋಳುಗ, ದೃಢವಾದ ಕಾಲ್ಗ, ಮಾಸಲವಾದ ಗಟ್ಟಿ ಸರೀರ ಅವ್ರ ನಾಯಕನಾಗಿ ಮಾಡಿತ್ತ್. ಅವ್ರ ಸೇನಾ ನಾಯಕ ಕುಳ್ಳ ಕುಂಡೋಚ್ಚ. ಕೂಸಪ್ಪ ಗೌಡ್ರೀಗೆ ಏನಾದ್ರೂ ಹೇಳೋಕೂಂತಾದ್ರೆ ಅವ್ನಿಗೆ ತುಂಬಾ ಕಸಿವಿಸಿ ಆತಿತ್ತ್. ಈ ಕೂಸಪ್ಪ ಎಂತಾ ವ್ಯಕ್ತಿಯೆಂದ್ರೆ, ಮೊದುವೆಗೆ ಹೋದ್ರೆ ಪಂತ ಹಾಕಿ ನಾಲ್ಕ್ ಕವಂಗ ಪಾಯ್ಸ ಕುಡೀತೀತ್ಗಡ. ಹಲ್ಲಿಂದ ಅಕ್ಕಿ ಮುಡೀ ಎತ್ತೀತ್ ಗಡ!

ಒಂದ್ ಸರ್ತಿ ರಜಾ ತಗಂಡ್ ಊರಿಗೆ ಬಂದ ಕೂಸಪ್ಪ ಗೌಡ್ರೀಗೆ ಬೇಟೆ ಆಡ್ವ ಮನಸ್ಸಾತ್. ಬಾಳ್ ಕತ್ತಿ ಸೊಂಟಕ್ಕೆ ಸಿಗ್ಸಿ, ಕೇಪಿನ ಬೆಡಿಗೆ ಮೊದ್ದ್ ಜಡ್ದ್ ಅವು ಬಂದದ್ದ್ ಇದೇ ಭೂತಕಲ್ ಗುಡ್ಡೆಗೆ. ಹೆದ್ರಿಕೆ ಅಂತ ಹೇಳ್ರೆ ಏನ್ತ ಗೊತ್ತೆ ಇರ್ದ ಅವು ಒಬ್ಬುರೇ ಬೇಟೆಗೆ ಬಂದಿದ್ದೊ ಗಡ.

ಆಗ ಈ ಗುಡ್ಡೆ ಹೀಂಗೆ ಇತ್ಲೆ. ಗಿಡ ಮೊರಂದ ತುಂಬಿ ಎಲ್ಲೆಲ್ಲೂ ಹಸ್ರ್. ಒಳಗಡೆ ಸಂಕಪಾಲ, ಕಾಟಿ, ಹಂದಿ, ಹುಲಿಗೊ ತುಂಬಿಕೊಂಡಿತ್ತ್ ಗಡ. ಆದ್ರೆ ಕೂಸಪ್ಪ ಗೌಡ್ರ್ ಸ್ವಲ್ಪಾನೂ ಹೆದ್ರಿಕೆ ಇಲ್ಲದೆ ಬರುತ್ತಿದ್ದೊ ಗಡ. ಮರದ ಮೇಲಿದ್ದ ಒಂದು ಮುಚ್ಚ ಇವ್ರ ನೋಡಿ ‘ಕೀಚ್ ಕೀಚ್’ ಅಂತೇಳಿ ಮತ್ತೊಂದ್ ಮರಕ್ಕೆ ಹಾರಿತ್ಗಡ. ಮುಚ್ಚನ ಮಾಸ ಬಾರಿ ರುಚಿ. ಕೂಸಪ್ಪ ಗೌಡ್ರ್ ಬೆಡಿ ಎತ್ತಿದೊ. “ಬೇಡ. ಇದ್ಕಿಂತ ಒಳ್ಳೇದ್ ಸಿಕ್ಕುದು. ಹಾಳಾದ್ದ್ ಮತ್ತೆ ಯಾರ್ ಮೊದ್ದು ಜಡಿಯುದು” ಎಂದು ಕೆಳಗಿಳಿಸಿದೊ. ಮುಚ್ಚ ಮತ್ತೊಂದು ಮರಕ್ಕೆ ಹಾರಿ ಕಾಣೆಯಾತ್.

ಆಗ ಆ ಮರದ ಬುಡದತ್ತ ಅವ್ರ ದೃಷ್ಟಿ ಹೋತ್. ಒಂದು ಕ್ಷಣ ಅವು ಮರಗಟ್ಟಿ ಹೋದೊ. ಅಲ್ಲಿ ಎರಡ್ ಹಡೀ ಗಾತ್ರದ ಕಾಟಿಗೊ ಇವ್ರುನನೇ ನೋಡ್ತಿತ್! ಯಾದಕ್ಕೆ ಗುಂಡು ಹೊಡಿಯೋದು? ಈ ಗುಡ್ಡೆಲಿ ಕಾಟಿಗಿಂತ ಜೋರಾಗಿ ಓಡಿಕೆ ಸಾಧ್ಯ ಇಲ್ಲೆ. ಮಳೆಗಾಲ ಆದ್ರಿಂದ ಮರ ಹತ್ತಿ ಬೊದ್ಕೊಕೂ ಸಾಧ್ಯ ಇಲ್ಲೆ.

ಅವು ಆಲೋಚ್ನೆ ಮಾಡಿಕೊಂಡು ಇದ್ದಾಂಗೆ ಸಣ್ಣ ಕಾಟಿ ಹಾಯಿಕೆ ಬಾತ್. ಕೂಸಪ್ಪ ಗೌಡ್ರ್ ನೋಟ ನೋಡಿ ಕುದ್ರೆ ಅದುಮಿದೊ. ಕಾಟಿ ಬೀತ್, ನೋಡಿ ಓ ಅಲ್ಲಿ ದೊಡ್ಡ ಗುಂಡಿ ಕಂಡದೆಯಲ್ಲಾ…. ಅದಕ್ಕೆ ಕಾಟಿ ಹೊರಳ್ತಾ ಹೋಗಿ ಬೀತ್.

ಈಗ ದೊಡ್ಡ ಕಾಟಿ ಕೊಂಬು ಚಾಚಿ ಮುಂದೆ ಬಾತ್. ಮೊದ್ದ್ ಜಡೀಕೆ ಸಮಯ ಇಲ್ಲೆ. ಸಿಟ್ಟಿಂದ ಸುಳುಂಪುತ್ತಾ ಬಾವ ಕಾಟಿನ ನೋಡಿ ಗೌಡ್ರಿಗೆ ಎಲ್ಲಾ ದೇವ್ರ, ಬೂತೊಗಳ ನೆಂಪಾಗಿರ್ದ್. ಮೈಸಾಸುರ್ನ ಅವ್ತಾರದಂಗೆ ಕಾಣ್ವ ಕಾಟಿ ಅವ್ರ ಕುತ್ತೋಕ್ ಅಂತೇಳುವಷ್ಟರಲ್ಲಿ ಅವುಕೆ ಸೈನ್ಯಲಿ ದಿನಾ ಮಾಡುವ ಕವಾಯಿತು ನೆಂಪಾಗಿ ಅವು ಕಾಲ್ ಅಗ್ಲಿಸಿ ಮೇಲೆ ಹಾರ್ದೊ, ಕಾಟಿ ತಲೆ ಬೊಗ್ಸಿದ್ರಿಂದ ಅವು ಸರ್ತಾಗಿ ಬೆನ್ನ್ ಮೇಲಕ್ಕೆ ಕುಳಿತಿದ್ದೊ. ಕಾಟಿ ಗಾಬ್ರೀಲಿ ಅತ್ತಿತ್ತ ಓಡೀಕೆ ಸುರು ಮಾಡ್ತ್.

ಹೆಂಗೋ ಸರಿ ಮಾಡಿಕೊಂಡ ಅವು ತಿರ್ಗಿ ಕಾಟಿನ ಬೆನ್ನ ಮೇಲೆ ಸರಿಯಾಗಿ ಕುದ್ದೊ. ಕಾಟಿನ ದೊಡ್ಡ ಕೊಂಬುಗ ಅವ್ರ ಕೈಗೆ ಸರ್ಯಾಗಿ ಸಿಗ್ತಿತ್. ಕೊಂಬ್ ಹಿಡ್ಕಂಡ್ ಜೋರಾಗಿ ಅಲ್ಗಾಡ್ಸಿಕೆ ಅವು ಸುರು ಮಾಡ್ದೊ. ಕಾಟಿ ತಲೆನ ಅತ್ತಿತ್ತ ಆಡ್ಸಿಕೆ ಸುರು ಮಾಡ್ತ್. ಅವು ಹಿಡ್ದ ಪಟ್ಟ್ ಬುಟ್ಟತ್ತಿಲ್ಲೆ. ಬಲವಾಗಿ ಹಿಡ್ದ್ ಕುತ್ತಿಗೇನ ಎಡಕ್ಕೆ ತಿರ್ಗಿಸ್ದೊ. ಲಟಕ್ಕ್ ಸಬುದ ದೊಟ್ಟಿಗೆ ಕುತ್ತಿಗೆ ಮುರೀತ್. ಅವು ಕೆಳಕ್ಕೆ ಬಿದ್ರೂ ಕೊಂಬುನ ಬುಟ್ಟತ್ಲೆ. ಕಾಟಿ ಅಡ್ಡ ಬಿದ್ದು ಹೊರಳ್ಲಿಕ್ಕೆ ಸುರು ಮಾಡ್ತ್. ಆಗ ಅವು ಕೊಂಬುನ ಬುಟ್ಟೊ. ಅವುಕೆ ಬಾಳ್ ಕತ್ತಿ ನೆಂಪಾತ್. ಅದ್ ಉರ್ಡಾಟ ಮಾಡಕನ ಸ್ವಲ್ಪ ದೂರಲೇ ಬಿದ್ದೀತ್. ಅವು ಓಡಿ ಹೋಗಿ ಕತ್ತೀನ ತಂದೊ. ಎರಡ್ ಕಡಿಯಾಟಲಿ ತಲೆ ಬೇರೆ ಆತ್. ಕಾಟೀನ ಸರೀರ ಹೊರ್ಳಿ ಹೊರ್ಳಿ ಅಲ್ಲೇ ಆ ಹೊಂಡಕ್ಕೆ ಬೀತ್.”

*******************

ಅಪ್ಪಯ್ಯ ಗೌಡ್ರ್ ಚೋಯಂಬುನ ಹಕ್ಕಲೆ ಇನ್ನೊಂದ್ ಬೀಡಿ ಕೇಳ್ದೊ. ನಾವು ಆಸ್ಚರ್ಯಪಟ್ಟ್ ಕೂತಿದ್ದೊ. ಬೀಡಿ ಎಳ್ಕೊಂಡ್ ಇದ್ದಂಗೆ ಅಪ್ಪಯ್ಯ ಗೌಡ್ರ್ “ಆತಲ್ಲಾ ಇನ್ನ್ ಎದ್ರಿ. ಅಂದಿನೋ ಮೊಲನೋ ಸಿಕ್ಕಿದೆನೋ ನೋಡಮಾ” ಎಂತೇಳಿ ಎದ್ರಿಕೆ ನೋಡ್ದೊ. ನಾವು ಬುಡೋಕಲೆ? “ಕುದ್ರಿ ಕುದ್ರಿ. ಕೂಸಪ್ಪ ಗೌಡ್ರ ಕತೆ ಹೇಳಿ” ಎಂದ್ ನಾವ್ ಅವುರ ಕುದ್ರಿಸಿದೋ. ಅಪ್ಪಯ್ಯ ಗೌಡ್ರ್ “ಬೇಡ ಬುಡಿ. ಅದ್ ದೊಡ್ಡ ರಾಮಾಯಣನೇ ಆದೆ” ಎಂದೋ. ನಾವ್ ಕೇಳೊಕಲೆ? “ಆತ್ ಇಲ್ಲಿ ಮುರ್ಗಗೊ ಇಲ್ಲೆ. ಇಂದ್ `ನಾವ್ ಬೇಟೆ ಆಡ್ದಂಗೆ” ಎಂದ್ ಅವು ಕುದ್ರಿದೊ. ಬೀಡಿ ಎಳಿತಾ ಮೊತ್ತೆ ನೆಂಪು ಮಾಡೀಕೆ ಸುರು ಮಾಡ್ದೊ.

ಗಿಡ ಮೊರಂದ ತುಂಬಿ ಎಲ್ಲೆಲ್ಲೂ ಹಸ್ರ್. ಒಳಗಡೆ ಸಂಕಪಾಲ, ಕಾಟಿ, ಹಂದಿ, ಹುಲಿಗೊ ತುಂಬಿಕೊಂಡಿತ್ತ್ ಗಡ. ಆದ್ರೆ ಕೂಸಪ್ಪ ಗೌಡ್ರ್ ಸ್ವಲ್ಪಾನೂ ಹೆದ್ರಿಕೆ ಇಲ್ಲದೆ ಬರುತ್ತಿದ್ದೊ ಗಡ. ಮರದ ಮೇಲಿದ್ದ ಒಂದು ಮುಚ್ಚ ಇವ್ರ ನೋಡಿ ‘ಕೀಚ್ ಕೀಚ್’ ಅಂತೇಳಿ ಮತ್ತೊಂದ್ ಮರಕ್ಕೆ ಹಾರಿತ್ಗಡ. ಮುಚ್ಚನ ಮಾಸ ಬಾರಿ ರುಚಿ. ಕೂಸಪ್ಪ ಗೌಡ್ರ್ ಬೆಡಿ ಎತ್ತಿದೊ.

ಆಗ ಇಂಗ್ಲೀಸರ ಆರ್ವಾಡ ಜೋರಿದ್ದ ಕಾಲ. ಮೈಸೂರ್ನ ಸ್ವಾಧೀನ ಮಾಡ್ಕೊಂಡ ಮೇಲೆ ಅವ್ರ ಕಣ್ಣ್ ಕೊಡಗಿನ ಮೇಲೆ ಬೀತ್. ಅವ್ರ ಯಜಮಾನಿಕೆ ಒಪ್ಪಿಕೊಣೊಕು ಅಂತೇಳಿ ರಾಜಂಗೆ ಕರೆ ಬಾತ್. ರಾಜನ ಸೇನಾಪತಿಗೊ ಯುದ್ಧ ಮಾಡೋಮಾ ಅಂತ ಹೇಳ್ದೊ ಗಡ. ಸೇನೆಲಿ ಬರಿಕೈಲಿ ಹುಲಿಕೊಂದ ನಂಜಯ್ಯ ಎಂಬ ಸುಬೇದಾರ ಇತ್ತ್. ನಮ್ಮಲ್ಲಿ ಕೋಟಿ ಚೆನ್ನಯ್ಯರ್ ಒಳೊಲ್ಲ. ಹಾಂಗೆ ಸೇನೆಲಿ ಕರ್ತು ಮತ್ತು ಚೆಟ್ಟಿ ಅಂತ್ ಇಬ್ರ್ ಮಲೆಕುಡೀರು ಇದ್ದೊಗಡ. ಬಾಳ ಧೈರ್ಯವಂತೊಗಡ. ಕೂಸಪ್ಪ ಗೌಡ್ರ್ ಕೇಳ್ದೇ ಬೇಡ. ಇವು ಎಲ್ಲಾ ಯುದ್ಧಕ್ಕೆ ತಯಾರಾಕನ ದಿವಾನ ಬೋಪು ಅಡ್ಡಿ ಮಾಡ್ದೊಗಡ. ರಾಜಿ ಮಾಡ್ದೇ ಒಳ್ಳೇದ್ ಅಂತ ರಾಜನ್ನ ಒಪ್ಪಿಸಿದೊಗಡ. ಯುದ್ಧನೇ ಇಲ್ಲ್ದೆ ಕೊಡಗು ಇಂಗ್ಲೀಷರ ಕೈಗೆ ಹೋತ್. ಅವು ರಾಜನ ಬಲಾತ್ಕಾರಲಿ ಕಾಸಿಗೆ ಓಡ್ಸಿದೊ ಗಡ.

ಆಗ ರಾಜನಿಸ್ಟ್ರು ಅಮರ ಸುಳ್ಯಕ್ಕೆ ಬಂದೊ. ಅವುಕ್ಕೆ ಆಸ್ರಯ ಸಿಕ್ಕಿದ್ದ್ ಕೆದುಂಬಾಡಿ ರಾಮಗೌಡ್ರಲ್ಲಿ. ಇಂಗ್ಲೀಷರು ಹೊಗೆಸೊಪ್ಪು ಮತ್ತು ಉಪ್ಪಿಗೆ ತೆರಿಗೆ ಹಾಕಿದ್ದೊ. ಕಂದಾಯ ಹಣ ರೂಪಲೇ ಕೊಡೊಕುಂತೇಳಿ ಸಾಸ್ನ ಮಾಡಿದ್ದೊ. ಅದ್ ಇಲ್ಲಿನ ಬೇಸಾಯಗಾರ್ರ ಕೆರಳಿಸೀತ್. ಕೆದುಂಬಾಡಿ ರಾಮ ಗೌಡ್ರ್ ಆಗ ಅಮರ ಸುಳ್ಯ ಸೀಮೇಲಿ ತುಂಬ ಹೆಸರು ಗಳಿಸಿದ್ದೊ. ಕೂಸಪ್ಪ ಗೌಡ್ರಿಗೂ ಜನ ಬೆಂಬಲ ಇತ್ತ್. ಇವೆಲ್ಲಾ ಸೇರಿ ಸೋಮವಾರಪೇಟೆ ಕಡೆಯ ಒಬ್ಬ ಲಿಂಗಾಯ್ತನ್ನ ಕರ್ಕೊಂಡು ಬಂದೊ. ಅವಂಗೆ ಕಲ್ಯಾಣಪ್ಪಂತ ಹೆಸ್ರು ಕೊಟ್ಟು, ರಾಜ್ರ ನೆಂಟಂತೇಳಿ ಸುದ್ದಿ ಹಬ್ಸಿ ಸೇನಾಪತಿ ಮಾಡಿ ಸೇನೆ ಕಟ್ಟಿದೊ. ಇಂಗ್ಲೀಸ್ರ ಕಂದಾಯ ತೆಗೆದು ಹಾಕಿ ಮೂರು ವರ್ಸ ಕಂದಾಯ ಮಾಪಿ ಅಂತೇಳಿ ಇಸ್ತಿಯಾರು ಹೊರಡಿಸಿದೊ.

ಕೇಳ್ದೇನ್? ಅಮರ ಸುಳ್ಯದ ಬೇಸಯಗಾರ್ರೆಲ್ಲಾ ಜಾತಿ ಮರ್ತು ಒಂದಾದೊ. ರಾಜ್ರ ಸೈನ್ಯದ ಸೈನಿಕರ್ ಈ ಸುದ್ದಿನ ಕೇಳಿ ತುಂಬ ಮಂದಿ ಒಂದಾಗಿ ಅಮರ ಸುಳ್ಯಕ್ಕೆ ಬಂದೊ. ಜನವೋ ಜನ. ಸಿಕ್ಕಿದ್ದೇ ಆಯುಧ. ಬೆಳ್ಳಾರೆ, ಪಂಜ, ಪುತ್ತೂರು, ವಿಟ್ಲ, ಪಾಣೆಮಂಗಳೂರು ಆಗಿ ದೊಡ್ಡ ಪಡೆ ಮಂಗಳೂರಿಗೆ ಹೋತ್. ಅಲ್ಲಲ್ಲಿ ತುಂಡರಸ್ರ್ ಸೈನ್ಯನ ಸೇರಿಕೊಂಡೊ. ಈ ದೊಡ್ಡ ಸೈನ್ಯದ ಎದ್ರ್ ನಿಲ್ಲೀಕೆ ಆಗ್ದೆ ಇಂಗ್ಲೀಸ್ರ್ ಕಣ್ಣಾನೂರ್ಗೆ ಓಡ್ದೊ.

“ಕಲ್ಯಾಣಪ್ಪ ರಾಜ್ಯಪಾಲ ಆತ್. ಹದಿಮೂರ್ ದಿನ ರಾಜ್ರ ಹೆಸ್ರೀಲಿ ಆಡಳ್ತೆ ನಡೆಸ್ತ್. ಹದಿಮೂರ್ನೆ ರಾತ್ರೆ ಕಲ್ಯಾಣಪ್ಪನ ಪಡೆ ನಿದ್ರೆ ಮಾಡಿಕೊಂಡಿರಕನ ಇಂಗ್ಲೀಸ್ರ ದೊಡ್ಡ ಪಡೆ ಬೆಡಿ, ಫಿರಂಗಿ ಒಟ್ಟಿಗೆ ಧಾಳಿ ಮಾಡ್ತ್. ಕಲ್ಯಾಣಪ್ಪ ಮತ್ತು ಅವುನ ಬಂಟ್ರ್ಗಳ ಇಂಗ್ಲೀಸ್ರು ಗಲ್ಲಿಗೇರಿಸಿದೊ”.

****************

ಅಪ್ಪಯ್ಯ ಗೌಡ್ರ್ ಕತೆ ನಿಲ್ಸಿದೊ. ನಾವು ಕಲ್ಲಿನಂತೆ ಕುದ್ದಿದೊ. ಬಾಡು ನಾಯ್ಕ ಲೊಚಗುಟ್ಟಿತ್. “ಅಯ್ಯೋ ಪಾಪ. ಕೂಸಪ್ಪ ಗೌಡ್ರ್ ಹಂಗಾರೆ ಮಂಗ್ಳೂರ್ಲೇ ಸತ್ತ್ ಹೋತ್” ಎಂದ ಬೇಜಾರಿಲಿ ಹೇಳ್ತ್.

“ಇಲ್ಲೆ ಇಲ್ಲೆ” ಅಪ್ಪಯ್ಯ ಗೌಡ್ರ್ ಹೇಳ್ದೊ. “ಕಲ್ಯಾಣಪ್ಪ ಮಂಗ್ಳೂರ್ನ ವಸ ಮಾಡಿದ್ದ್ ಗೊತ್ತಾಕನ ಮಡ್ಕೇರಿಲಿ ಇಂಗ್ಲೀಸರ ಸೈನ್ಯಾಧಿಕಾರಿ ಲೀಹಾರ್ಡಿ ಅಮರ ಸುಳ್ಯಕ್ಕೆ ಸೇನೆಯೊಟ್ಟಿಗೆ ಬಾತ್. ಇದ್ ಗೊತ್ತಾಗಿ ಕಲ್ಯಾಣಪ್ಪ ಕುಡಿಯ ಸೋದರ್ರು ಕೂಸಪ್ಪ ಗೌಡ್ರೊಟ್ಟಿಗೆ ಅಮರ ಸುಳ್ಯಕ್ಕೆ ಸೇನೆನ ಕಳಿಸಿಕೊಟ್ಟತ್ತ್. ಕುಡಿಯ ಸೋದರ್ರು ಲೀಹಾರ್ಡಿಗೆ ಸಿಕ್ಕಿ ಬಿದ್ದೊ. ಕೂಸಪ್ಪ ಗೌಡ್ರು ತಪ್ಪಿಸಿಕೊಂಡು ಓಡ್ದೊ”.

“ಓ ಅಸ್ಟೇನಾ ಮತ್ತೆ ಎಂಥದ್ ಅವರ ಧೈರ್ಯ?” ಚೊಯಂಬ್ ಕೇಳಕನ ಅಪ್ಪಯ್ಯ ಗೌಡ್ರಿಗೆ ನಗೆ ಬಾತ್.

“ಅಂದ್ ನೀ ಮಾಡ್ದ್ ಎಂತದ್ದ್? ಹುಲಿನ ಕಂಡಾಕನ ಹೆದ್ರಿ ಓಡಿ ಮರ ಹತ್ತಿತ್ಲೆನಾ? ಹುಲಿನ ಕೊಂದ ಮೇಲೆ ನಾನೆ ಅಲ್ಲೆನ ನಿನ್ನ ಮರಂದ ಇಳ್ಸಿದ್? ಮತ್ತೆ ಹುಲಿ ಜೊರ ಬಂದ್ ನೀ ಒಂದ್ ತಿಂಗೊ ಮಲಗಿತ್ಲೆನಾ? ಬಾರಿ ಧೈರ್ಯವಂತ ನೀ”. ನಾವ್ ಎಲ್ಲಾ ನೆಗಾಡ್ದೊ. ಚೋಯಂಬು ಕೂಡಾ ನೆಗಾಡಿತ್.

ಅಪ್ಪಯ್ಯ ಗೌಡ್ರ್ ಇನ್ನೊಂದ್ ಬೀಡಿ ತಗೊಂಡೊ. ಹೊಗೆ ಬುಡ್ತಾ ಮತ್ತೆ ಕತೆ ಮುಂದುವರ್ಸಿದೊ. “ಕೂಸಪ್ಪ ಗೌಡ್ರ್ ಓಡಿದ್ದ್ ಇಂಗ್ಲೀಸ್ರಿಗೆ ಹೆದ್ರಿ ಅಲ್ಲ. ಜನ್ರ ವಾಪಸ್ ಒಟ್ಟು ಮಾಡಿ ಇಂಗ್ಲೀಸ್ರ ಓಡ್ಸಿಕೆ. ಈ ಪೆರಮುಂಡ, ಕರಿಕ್ಕೆ, ಕೋಲ್ಚಾರು, ಆಲೆಟ್ಟಿ, ಅಜ್ಜಾವರ, ಉಳುವಾರು, ಪೆರಾಜೆ, ನಿಡ್ಯಮಲೆ, ಅರಂತೊಡು, ಕಾಂತಮಂಗ್ಲ, ಮಂಡೆಕೋಲ್, ಸುಳ್ಯ, ತೊಡಿಕ್ಕಾನ ಸುತ್ತಿ ಬೇಸಾಯಗಾರ್ರ ಒಟ್ಟ್ ಸೇರ್ಸಿಕೆ ಸುರು ಮಾಡ್ದೊ. ಕಲ್ಯಾಣಪ್ಪನ ಗಲ್ಲಿಗೇರಿಸಿದ್ದಕ್ಕೆ ಕಂದಾಯ ಕಟ್ಬೇಡಿ ಎಂದು ಎಲ್ಲವುಕ್ಕೆ ಹೇಳ್ದೊ. ಅಮರ ಸುಳ್ಯ ಮಾಗಣೆಂದ ಒಂದು ಕಾಸೂ ಕಂದಾಯ ಸಿಕ್ದೇ ಹೋಕನ ಲೀಹಾರ್ಡಿ ಗೂಢಚಾರ್ರ ಅಟ್ಟಿತ್. ಕೂಸಪ್ಪ ಗೌಡ್ರ ಕಾರ್ಬಾರ್ ತಿಳ್ದ್ ಸಿಟ್ಟ್ ಬಾತ್. ಗೌಡ್ರ ತಲೆಗೆ ಐದ್ಸಾವಿರ ರೂಪಾಯಿ ಬಹುಮಾನ ಘೋಷಣೆ ಮಾಡ್ತ್. ಲೀಹಾರ್ಡಿನ ಪರ್ಮಾನು ಹೊರಟ ಮೇಲೆ ಕೂಸಪ್ಪ ಗೌಡ್ರ್ ಅಡಗಿಕೊಂಡ್ ತಿರ್ಗಾಡಿಕೆ ಸುರು ಮಾಡ್ದೊ. ಸಾವಿನ ಬಯಂದ ಅಲ್ಲ. ಸಿಕ್ಕಿ ಬಿದ್ರೆ ಇಂಗ್ಲೀಸ್ರ ವಿರುದ್ಧ ಹೋರಾಡೊವು ಇಲ್ಲೇಂತ ಆದೆ ಎಂದ್ ಅವುಕೆ ಗೊತ್ತಿತ್ತ್”.

ಸ್ವಲ್ಪ ಹೊತ್ತ್ ಅಪ್ಪಯ್ಯ ಗೌಡ್ರ್ ನಿಲ್ಸಿದೊ. ನವುಗೆ ತುಂಬಾ ಕುತೂಹಲ ಆಗಿತ್ತ್. ತಡೀಕೆ ಆಗ್ದೆ ಕೇಳ್ದೊ.

“ಮುಂದೇನಾತ್?”

ಅಪ್ಪಯ್ಯ ಗೌಡ್ರ್ ನಿಟ್ಟುಸಿರ್ ಬುಟ್ಟೊ. “ಆದ್ ಏನ್? ದುಡ್ಡಿನ ಆಸೆ ಯಾರಿಗೆ ಇರ್ದುಲೆ ಹೇಳಿ? ಕೂಸಪ್ಪ ಗೌಡ್ರು ಅಡಂಗುವ ಜಾಗೆನ ಯಾರೋ ಒಬ್ಬ ಲೀಹಾಡಿಯ ಸೈನಿಕರಿಗೆ ತೋರ್ಸಿತ್.”

“ಅದ್ ಇದೇ ಕೋಲ್ಚಾರಿನ ಒಬ್ಬ ಮಧ್ಯಮ ವರ್ಗದ ಬೇಸಾಯಗಾರ್ನ ಮನೆಲಿ. ಮಳೆಗಾಲದ ಕರ್ಚಿಗೇಂತೇಳಿ ಅಟ್ಟದ ಮೇಲೆ ಅವ ಮುಡೀನ ಸರ್ಯಾಗಿ ಜೋಡ್ಸಿ ಇಟ್ಟಿತ್. ಸೈನಿಕ್ರ ನೋಡ್ದ ಕೂಸಪ್ಪ ಗೌಡ್ರು ಅಟ್ಟಹತ್ತಿ ಮುಡಿಗಳ ಹಿಂದೆ ಅಡಗಿ ಕುದ್ದತ್. ಸೈನಿಕರು ಎಂಟು ಜನ ಇದ್ದೊ. ಆದ್ರೂ ಅಟ್ಟಕ್ಕೆ ಹತ್ತಿಕೆ ಸುರುವಿಗೆ ಅವಿಕೆ ಧೈರ್ಯ ಬಾತ್ಲೆ. ಕಡೇಗೆ ಹಣದ ಆಸೆ ಗೆದ್ದತ್ತ್. ಇಬ್ರು ಧೈರ್ಯ ಮಾಡಿ ಮೊದ್ಲು ಅಟ್ಟ ಹತ್ತಿದೊ. ಉಳ್ದವು ಹಿಂದಿಂದ ಹತ್ತಿದೊ. ಕತ್ತಿ ಹಿಡ್ಕೊಂಡ್ ನಿಧಾನವಾಗಿ ಮುಂದೆ ಹೋದೊ.

ಅಪ್ಪಯ್ಯ ಗೌಡ್ರ್ ಇನ್ನೊಂದ್ ಬೀಡಿ ತಗೊಂಡೊ. ಹೊಗೆ ಬುಡ್ತಾ ಮತ್ತೆ ಕತೆ ಮುಂದುವರ್ಸಿದೊ. “ಕೂಸಪ್ಪ ಗೌಡ್ರ್ ಓಡಿದ್ದ್ ಇಂಗ್ಲೀಸ್ರಿಗೆ ಹೆದ್ರಿ ಅಲ್ಲ. ಜನ್ರ ವಾಪಸ್ ಒಟ್ಟು ಮಾಡಿ ಇಂಗ್ಲೀಸ್ರ ಓಡ್ಸಿಕೆ. ಈ ಪೆರಮುಂಡ, ಕರಿಕ್ಕೆ, ಕೋಲ್ಚಾರು, ಆಲೆಟ್ಟಿ, ಅಜ್ಜಾವರ, ಉಳುವಾರು, ಪೆರಾಜೆ, ನಿಡ್ಯಮಲೆ, ಅರಂತೊಡು, ಕಾಂತಮಂಗ್ಲ, ಮಂಡೆಕೋಲ್, ಸುಳ್ಯ, ತೊಡಿಕ್ಕಾನ ಸುತ್ತಿ ಬೇಸಾಯಗಾರ್ರ ಒಟ್ಟ್ ಸೇರ್ಸಿಕೆ ಸುರು ಮಾಡ್ದೊ.

ಕೂಸಪ್ಪ ಗೌಡ್ರ್ ಆಗ್ಲೂ ಹೆದರ್ತ್ಲೆ. ತನ್ನಕಲೆ ಇದ್ದ ಅಕ್ಕಿ ಮುಡಿನ ಎತ್ತಿ ಒಬ್ಬ ಸೈನಿಕನ ಮೇಲೆ ಬಿಸಾಡ್ದೊ. ಅಂವ ನೋವಿಲಿ ಅಯ್ಯಯ್ಯೋ ಎಂತೇಳಿ ಬೊಬ್ಬೆ ಹಾಕಿತ್. ಕೂಸಪ್ಪ ಗೌಡ್ರ್ ಇನ್ನೊಂದ್ ಅಕ್ಕಿ ಮುಡಿ ತೆಗ್ದ್ ಬಿಸಾಡ್ದೊ. ತಪ್ಪಿಸಿಕೊಂಡ್ ಸೈನಿಕ್ರು ಅವುರ ಸುತ್ತು ಹಾಕ್ದೊ. ಸಿಟ್ಟಿಲಿ ಕೂಸಪ್ಪ ಗೌಡ್ರ್ ಒಂದೆ ಸಮನೆ ಅಕ್ಕಿ ಮುಡೀನ ಎತ್ತಿ ಬಿಸಾಡಿಕೆ ಸುರು ಮಾಡ್ದೊ. ಆಗ ಒಬ್ಬ ಸೈನಿಕ ಅವ್ರ ಎಡ ಬಾಗಲಿ ಕತ್ತೀನ ಸರ್ಯಾಗಿ ಬೀಸಿತ್. ಅವ್ರ ಎಡಕೈ ತುಂಡಾಗಿ ಕೆಳಕ್ಕೆ ಬೀತ್. ಆಗ ಬಲಬಾಗಲಿ ಸೈನಿಕ ಕೊರ್ಳಿಗೆ ಸರ್ಯಾಗಿ ಕತ್ತಿ ಬೀಸಿತ್. ಛಿಲ್ಲೆಂತ ರಕ್ತ ಚಿಮ್ಮಿ ಅವ್ರ ರುಂಡ ಮುಂಡಂದ ಬೇರ್ಪಟ್ಟ್ ಕೆಳಕ್ಕೆ ಬೀತ್. ಸೈನಿಕ್ರ ಮುಖಕ್ಕೆ ರಕ್ತದ ಓಕುಳಿ ಆತ್.
ತಲೆಕಡ್ದ ಸೈನಿಕ ಬಿದ್ದ ರುಂಡನ ಎತ್ತಿಕೊಂಡ್ ಅಟ್ಟಾಸ ಹಾಕ್ತ್.”

********************

ಅಪ್ಪಯ್ಯ ಗೌಡ್ರ ಮುಖಲಿ ನೋವು ಹೆಪ್ಪುಗಟ್ಟಿತ್ತ್. ನಾವ್ ಏನ್ ಮಾಡಿಕಾಗದೆ ತುಂಬಾ ಬೇಜಾರಿಲಿ ಇದ್ದೊ. ಸೊಲ್ಪ ಹೊತ್ತಾದ ಮೇಲೆ ಚೋಯಂಬು ಮಾತಾಡಿತ್. “ಅಂತೂ ಎಂಟ್ ಜನ ಸೇರಿ ಆಯ್ದ ಇಲ್ಲದ ಒಬ್ಬನ ಕೊಂದುಬುಟ್ಟೊ! ಅವುಕೆ ಬಹುಮಾನ ಸಿಕ್ಕಿರೊಕ್ಕಲ್ಲಾ? ಅವ್ರ ಕುಟುಂಬದವಿಕೆ ಭೂಮಿ ಕೊಟ್ಟಿರುವೊ.”

“ಅದೋ” ಅಪ್ಪಯ್ಯ ಗೌಡ್ರ್ ಕತೆ ಮತ್ತೆ ಮುಂದುವರ್ಸಿದೊ. “ಆ ಕತೆ ಬಾಳ ಲಾಯಿಕುಟ್ಟು. ಈ ಸೈನಿಕ್ರು ಕೂಸಪ್ಪ ಗೌಡ್ರ ರುಂಡ ತಕಂಡ್ ಲೀ ಹಾರ್ಡಿನ ನೋಡೀಕೆ ಹೋದೊ. ಕೂಸಪ್ಪ ಗೌಡ್ರ ತಲೆ ಹಾರ್ಸಿದೋನೇ ಅದ್ರ ಹಿಡ್ಕೊಂಡಿತ್ತ್. ಲೀಹಾರ್ಡಿಗೆ ವಿಸ್ಯ ಗೊತ್ತಾಗಿ ಕ್ಯಾಪ್ಟನ್ ಡ್ರೆಸ್ಸಲ್ಲೇ ಹೊರಗೆ ಬಾತ್.

ಸೈನಿಕ್ರು ಲೀ ಹಾರ್ಡಿನ ಕಂಡ್ ಮಿಲಿಟ್ರಿ ಗತ್ತಿಲಿ ಸೆಲ್ಯೂಟ್ ಹೊಡ್ದೊ. ರುಂಡ ಹಿಡ್ದವ ಅದ್ರ ಲೀ ಹಾರ್ಡಿನ ಮುಂದೆ ಇಸಿತ್. ಅದ್ರ ನೋಡ್ದ ಲೀ ಹಾರ್ಡಿನ ಹುಬ್ಬುಗೊ ಮೇಲೆ ಹೋತ್. “ದೇವ್ರೇ ….. ಇದು ಎಂತಾ ಭವ್ಯತೆ” ಎಂದ್ ಅವ ಉದ್ಗರಿಸಿತ್.

ಮಾಮೂಲು ಸ್ಥಿತಿಗೆ ಬಂದ ಲೀ ಹಾರ್ಡಿ ಮತ್ತೆ ಕೇಳ್ತ್, “ಇವನ್ನ್ ಕೊಂದದ್ದ್ ಯಾರ್?”

ಕೊಂದ ಸೈನಿಕ ಒಂದು ಹೆಜ್ಜೆ ಎದ್ರ್ ಬಂದ್ ಎದೆ ಮುಂದೆ ಮಾಡಿ ಹೇಳ್ತ್, “ನಾನ್.” ಉಳಿದೋವ್ಕೆಲ್ಲಾ ಬಹುಮಾನಲಿ ಪಾಲ್ ತಪ್ಪಿ ಹೋಕೆ ಬತ್ತ್ತೇಳಿ ಗಾಬ್ರಿಂದ, “ನಾವ್ ಎಲ್ಲಾ ಇದ್ರಿಂದ ಇವ್ನ ಕೊಲ್ಲಿಕೆ ಸಾಧ್ಯ ಆದ್ದ್” ಎಂತ ಹೇಳ್ದೊ.

ಲೀ ಹಾರ್ಡಿಗೆ ನೆಗೆ ಬಾತ್. “ಆತ್…. ಆತ್ …… ಬಹುಮಾನ ಎಲ್ರಿಗೂ ಕೊಡೊಮಾ. ಮೊದ್ಲು ಇವಂಗೆ. ಮತ್ತೆ ನಿವುಗೆಲ್ಲಾ. ನೀ ಬಾ, ಹಕ್ಕಲೆ ಬಾ.”
ಕೂಸಪ್ಪ ಗೌಡ್ರ ಕೊಂದವ ಉಳ್ದವ್ರೆಲ್ಲಾ ನೋಡಿ ಕುಸಿಲಿ ನಗೆಯಾಡಿ ಲೀಹಾರ್ಡಿ ಹಕ್ಕಲೆ ಬಂದ್ ನಿಂತತ್. ಈ ಮಾತ್ ಕತೆನೆಲ್ಲಾ ಕೇಳಿ ಅಲ್ಲೇ ಒಂದ್ ಕೋಣೇಲಿ ಬರ್ಕೊಂಡು ಕುದ್ದಿದ್ದ ಬೋಪು ದಿವಾನ ಹೊರಗೆ ಬಂದ್ ನೋಡ್ತ್.

ಲೀ ಹಾರ್ಡಿ ಹಕ್ಕಲೆ ಬಂದ್ ನಿಂತ ಸೈನಿಕನ ಒಂದ್ ಸರ್ತಿ ಸರ್ಯಾಗಿ ನೋಡ್ತ್. ಮಿಂಚಿನಾಂಗೆ ಅವನ ಒರೆಲಿದ್ದ ಕತ್ತಿನ ತೆಗ್ದ್ ಅವನ ತಲೆನ ಕಚ್ಕಂತೇಳಿ ಕತ್ತರಿಸಿತ್. ಇದ್ರ ನೋಡಿ ಹೆದ್ರಿಹೋದ ಬೋಪು ‘ಇಗ್ಗುತಪ್ಪಾ’ ಎಂತೇಳಿ ಬೊಬ್ಬೆ ಹಾಕಿತ್. ಹೆದ್ರಿಹೋದ ಸೈನಿಕರ್ ಜೀವ ಉಳಿಸಿಕೊಂಬಿಕೆ ಬೇಕಾಗಿ ಮರ್ಲರಂಗೆ ಓಡ್ದೊ.

ಲೀಹಾರ್ಡಿ ಕೂಸಪ್ಪ ಗೌಡ್ರ ತಲೆನ ಕೈಲಿ ಹಿಡ್ಕೊಂಡ್ತ್. ಹೆಣವಾಗಿ ಬಿದ್ದ ಸೈನಿಕನ ಕುತ್ತಿಗೆಂದ ಉಕ್ಕಿ ಹರಿಯುತ್ತಿದ್ದ ರಕ್ತಲಿ ತನ್ನ ಬಲಗೈ ತೋರುಬೆರಳ್ನ ಮುಳ್ಗಿಸಿತ್. ಆ ರಕ್ತಲಿ ಗೌಡ್ರ ಹಣೆಗೆ ಬೊಟ್ಟು ಇಸುತ್ತಾ ನಡ್ಗಿಕೊಂಡ್ ಹೇಳ್ತ್. “ಓ ವೀರಯೋಧ! ನನ್ನ ಕ್ಷಮಿಸ್. ಇದ್ಕಿಂತ ಹೆಚ್ಚಿಗೆ ನಿಂಗೆ ನಾ ಏನೂ ಕೊಡೀಕೆ ಆದುಲೆ.”

“ಬೋಪು ದಿವಾನ ಹೆದ್ರ್ಕಂಡ್ ನಡ್ಗುತ್ತಾ ಇದರ ನೋಡ್ತಿತ್ತ್”.


ಕತೆ ಮುಗೀಕನ ಎಲ್ರ ಕಣ್ಣಿಲಿ ನೀರ್ ತುಂಬಿತ್ತ್. ಅಪ್ಪಯ್ಯ ಗೌಡ್ರ್ ಎದ್ದೊ. “ನಿವುಗೆ ಅಂದಿಗೈಪು ಅಪ್ಪದಿಟ್ಟು ತಿಂಬ ಯೋಗ ಇಲ್ಲೆ, ನಡಿನಿ” ಎಂತ ಹೇಳ್ದೊ.
ಅಂದಿ ಕಾಂಬುಕೆ ಸಿಕ್ಕರೂ ಅವಿಕೆ ಅಂದ್ ಅದ್ರ ಕೊಲ್ಲಿಕೆ ಮನಸ್ಸ್ ಬಾತಿತ್ತೊ ಇಲ್ಲೆನೋ!
(1996)

ಟಿಪ್ಪಣಿ:

‘ಬೇಟೆ’ ಕತೆ ಸುಳ್ಯ ಪರಿಸರದ ಅರೆಗನ್ನಡದಲ್ಲಿ ಬರೆಯಲ್ಪಟ್ಟ ಕತೆ. ಇದು ಕನ್ನಡದ ಗ್ರಾಮ್ಯ ನುಡಿಗಳಲ್ಲಿ ಒಂದು. ಇಲ್ಲಿನ ಗೌಡ ಜನಾಂಗದವರು ಇದನ್ನು ಮಾತಾಡುತ್ತಾರೆ. ಕಲ್ಯಾಣಸ್ವಾಮಿಯ ಹೋರಾಟವನ್ನು ಸಂಘಟಿಸಿ ಬ್ರಿಟಿಷ್ ಆಳ್ವಿಕೆಯನ್ನು ಕಿತ್ತೊಗೆಯಲು ಪ್ರಯತ್ನಿಸಿದ ವೀರರಲ್ಲಿ ಇವರೇ ಅಗ್ರಗಣ್ಯರು. ಈ ಹೋರಾಟದ ಕಾರಣ ಈ ಜನಾಂಗದವರು ಮುಂದೆ ಬ್ರಿಟಿಷರ ಆಗ್ರಹಕ್ಕೆ ತುತ್ತಾದುದು ಬೇರೆಯೇ ಕತೆ. ಈ ಕತೆ ಗೌಡ ಸಮುದಾಯ ಕ್ರಾಂತಿಕಾರಿಯೊಬ್ಬನ ಕತೆ, ಮತ್ತು ಅದನ್ನು ನಿರೂಪಿಉವವರೂ ಅದೇ ಸಮುದಾಯದವರಾದ ಕಾರಣ ಲೇಖಕರು ಈ ಭಾಷೆಯನ್ನು ಬಳಸಿದ್ದಾರೆ.
ಕಲ್ಯಾಣಸ್ವಾಮಿಯ ಕ್ರಾಂತಿಗೂ ಕೊಡಗಿಗೂ ಸಂಬಂಧವಿದೆ. ಈ ಬಗ್ಗೆ ಹಿಂದಿನ ಟಿಪ್ಪಣಿಗಳಲ್ಲಿ ವಿವರಗಳಿವೆ. ಶಿಶಿಲರ ‘ಬೇಟೆ’ ಕತೆಯು ಈ ಕ್ರಾಂತಿಯಲ್ಲಿ ಭಾಗವಹಿಸಿದ್ದ ಕೂಸಪ್ಪ ಗೌಡರ ದುರಂತ ಕತೆಯಾದರೂ ಅವರ ಶೌರ್ಯ ಧ್ವನಿಪೂರ್ಣವಾಗಿ ಸೂಚ್ಯವಾಗಿರುವುದರಿಂದ ಈಗಲೂ ಓದುಗರ ಮೈನವಿರೇಳಿಸುತ್ತದೆ.
‘ಬೇಟೆ’ ಕತೆ ಇನ್ನೊಂದು ವಿದ್ಯಮಾನವನ್ನು ನಮ್ಮ ಗಮನಕ್ಕೆ ತರುತ್ತದೆ. ಕಲ್ಯಾಣಪ್ಪನ ಹೋರಾಟದಲ್ಲಿ ಪ್ರಾಮಾಣಿಕವಾಗಿ ತೊಡಗಿಕೊಂಡ ಜನಸಮುದಾಯವೂ ಇದೆಯಲ್ಲ; ಅವರ ನಡುವೆ ಇನ್ನೊಂದು ಬಗೆಯ ಐತಿಹ್ಯಗಳು ಹುಟ್ಟಿಕೊಳ್ಳುವುದನ್ನು ಈ ಕತೆಯಲ್ಲಿ ಕಾಣಬಹುದು. ಕೂಸಪ್ಪ ಗೌಡ ಎನ್ನುವ ವೀರಯೋಧನ ತಲೆಕಡಿದ ತನ್ನದೇ ಸೈನಿಕನ ತಲೆಯನ್ನು ಬ್ರಿಟಿಷ್ ಸೇನಾಧಿಕಾರಿ ಲೀ ಹಾರ್ಡಿ ಕತ್ತರಿಸಿ ಕೂಸಪ್ಪ ಗೌಡರಿಗೆ ಅಂತಿಮ ನಮನ ಸಲ್ಲಿಸಿದ ಎಂಬ ಐತಿಹ್ಯ ಅದು.
ಯಾವುದೇ ಹೋರಾಟವನ್ನು ವಿಶಾಲ ವ್ಯಾಪ್ತಿಯಲ್ಲಿ ಹಮ್ಮಿಕೊಂಡಾಗ ಅದರ ಆಶಯವನ್ನು ವಿಕೃತಗೊಳಿಸಿ ತಮ್ಮ ಬೇಳೆಬೇಯಿಸಿಕೊಳ್ಳುವ ವಿಕೃತ ಮನುಷ್ಯರು ಎಲ್ಲಾ ಕಾಲದಲ್ಲೂ ಇರುತ್ತಾರೆ. ಸರಿಯಾದ ಸಂವಹನ ವ್ಯವಸ್ಥೆ ಇಲ್ಲದ ಕಾಲದಲ್ಲಿ ಊಹಾಪೋಹಗಳೇ ಹಬ್ಬುತ್ತಿದ್ದ ಕಾಲದಲ್ಲಿ ಕಲ್ಯಾಣಪ್ಪನ ಹೋರಾಟವನ್ನು ವಿಕೃತ ಮನಸ್ಕರು ದಾರಿತಪ್ಪಿಸಿ ಜನಸಮುದಾಯದ ಮನಸ್ಸನ್ನು ಕಲ್ಯಾಣಪ್ಪನ ವಿರುದ್ಧವಾಗಿ ತಿರುಗಿಸಿದ್ದಂತೂ ಸ್ಪಷ್ಟ. ಜತೆಗೆ ಜನರನ್ನು ಕಲ್ಯಾಣಪ್ಪನ ಹೆಸರಿನಲ್ಲಿ ದೋಚುತ್ತಿದ್ದ ನೂರಾರು ಪುಂಡರೂ ಆಗ ಊರೂರಲ್ಲಿ ಹುಟ್ಟಿಕೊಂಡದ್ದೂ ಸತ್ಯ. ಈ ಭಯದ ವಾತಾವರಣವನ್ನು ಈ ಜಿಲ್ಲೆ ಮುಂದೆ ಒಂದು ಶತಮಾನದವರೆಗೂ ನೆನಪಿನಲ್ಲಿಟ್ಟುಕೊಂಡಿತ್ತು. ಮತ್ತು ಅದಕ್ಕೆ ನಮ್ಮ ಗದ್ಯ ಸಾಹಿತ್ಯದಲ್ಲಿ ಸಾಕಷ್ಟು ಆಧಾರಗಳು ಸಿಗುತ್ತವೆ.