ನನ್ನ ಮದುವೆಯಾಗಿ ಕೆಲವು ವರ್ಷಗಳ ನಂತರ ದೊಡ್ಡ ಜಮೀನ್ದಾರನೊಂದಿಗೆ ಅವಳ ಮದುವೆಯಾಯ್ತು. ಅವಳ ಗಂಡನಿಗೆ ಅವಳು ಹೊರಗೆ ಹೋಗಿ ಹಾಡುವುದು ಇಷ್ಟವಿರಲಿಲ್ಲ. `ನೀನು ನಮ್ಮ ಮಕ್ಕಳಿಗೆ ಹಾಡು ಕಲಿಸಿದರೆ ಬೇಕಾದಷ್ಟಾಯಿತು. ಸಾರ್ವಜನಿಕ ಪ್ರದರ್ಶನ ಬೇಡ. ಹೊರಗೆ ಹೋದರೆ ತೋಟದ ಉಸ್ತುವಾರಿ, ಮನೆ ವಾರ್ತೆ ನೋಡಿಕೊಳ್ಳುವವರು ಯಾರು? ಊರ ಜನರಿಗೆ ಸಂಗೀತ ಹೇಳಲಿಕ್ಕೆ ಅಲ್ಲ ನಾನು ನಿನ್ನನ್ನು ಮದುವೆಯಾದದ್ದು’ ಎಂದಿದ್ದ. ಹಾಡುಹಕ್ಕಿಯ ರೆಕ್ಕೆ ಅಲ್ಲಿಗೆ ಮುರಿಯಿತು ಎಂದು ಬೇರೆ ಹೇಳಬೇಕಾಗಿಲ್ಲ ತಾನೆ?
ಸಹನಾ ಕಾಂತಬೈಲು ಅವರ ‘ಆನೆ ಸಾಕಲು ಹೊರಟವಳು’ ಪುಸ್ತಕದ ಇನ್ನೊಂದು ಪ್ರಬಂಧ ಇಲ್ಲಿದೆ.

ಹೆಣ್ಣಿನ ನಿಜಜೀವನ ಆರಂಭವಾಗುವುದು ಗಂಡನ ಮನೆ ಸೇರಿದ ಮೇಲೆ ಎಂದು ಹೇಳುತ್ತಾರೆ ಬಲ್ಲವರು. ಈ ಮಾತು ನಿಜವೂ ಹೌದು. ಹೆಣ್ಣು ಎಷ್ಟೇ ಪ್ರತಿಭಾವಂತಳಾಗಿದ್ದರೂ ಕೂಡ ಗಂಡನ ಪ್ರೋತ್ಸಾಹವಿದ್ದರೆ ಮಾತ್ರ ಆ ಪ್ರತಿಭೆ ಬೆಳಕಿಗೆ ಬರುತ್ತದೆ ಹಾಗೂ ಬೆಳಗುತ್ತದೆ. ಹೆಣ್ಣಿನ ಪ್ರತಿಭೆಗೆ ಸಮಾಜದ ಪ್ರೋತ್ಸಾಹ ಇದ್ದೂ ಗಂಡನ ಪ್ರೋತ್ಸಾಹ ಇಲ್ಲದಿದ್ದರೆ ಆ ಪ್ರತಿಭೆ ಕಮರಿ ಹೋಗುವುದರಲ್ಲಿ ಸಂಶಯವಿಲ್ಲ. ಕೃಷಿಕನ ಕೈ ಹಿಡಿದರಂತೂ ಅವಳ ಎಲ್ಲಾ ಕಲೆ ಮೂಲೆಗುಂಪಾಗಿ ಹಟ್ಟಿ ತೊಳೆಯುವುದು, ಸೆಗಣಿ ಎತ್ತುವುದು, ಹಾಲು ಕರೆಯುವುದು, ಅಡಿಕೆ ಹೆಕ್ಕುವುದು, ಕೂಲಿಯಾಳುಗಳಿಗೆ ಬೇಯಿಸಿ ಹಾಕುವುದು ಇದೇ ಬದುಕು ಆಗಿಬಿಡುತ್ತದೆ. ಇದಕ್ಕೆ ನನ್ನ ಗೆಳತಿಯರಿಬ್ಬರ ಉದಾಹರಣೆ ಕೊಡುತ್ತೇನೆ.

ಈ ನನ್ನ ಗೆಳತಿಗೆ ಚಿಕ್ಕಂದಿನಿಂದಲೂ ಬರೆಯುವ ಗೀಳು. ಅವಳ ವಿವಾಹ ಎಂಎ ಮಾಡಿದ ಕೃಷಿಕನೊಂದಿಗೆ ಆದಾಗ ವಿದ್ಯಾವಂತನಾಗಿರುವ ತನ್ನ ಪತಿ ತನ್ನ ಬರೆಯುವ ಪ್ರತಿಭೆಗೆ ಪ್ರೋತ್ಸಾಹ ಕೊಡಬಹುದೆಂದು ಎಣಿಸಿದ್ದಳು.

ಮದುವೆಯಾದ ಹೊಸದರಲ್ಲಿ ಅವಳು ತಾನು ಬರೆದ ಲೇಖನ, ಕವನ ಇತ್ಯಾದಿಗಳು ಪತ್ರಿಕೆಗಳಲ್ಲಿ ಪ್ರಕಟವಾದಾಗ ಅದನ್ನು ಗಂಡನಿಗೆ ತೋರಿಸಿ ತನ್ನ ಸಂತೋಷವನ್ನು ಹಂಚಿಕೊಳ್ಳುತ್ತಿದ್ದಳು. ಮೊದಮೊದಲು ಅವನು `ಚೆನ್ನಾಗಿ ಬರೆದಿದ್ದೀ. ಅಭಿನಂದನೆಗಳು’ ಎಂದು ಹೇಳುತ್ತಿದ್ದ. ಆದರೆ, ಕ್ರಮೇಣ ಅವಳಿಗೆ ಈ ಮಾತನ್ನು ಗಂಡ ಕೇವಲ ತೋರಿಕೆಗಾಗಿ ಹೇಳುವುದು ಎಂಬುದು ಗೊತ್ತಾಯಿತು. ಆದ್ದರಿಂದ ಅವಳು ತನ್ನ ಬರಹಗಳನ್ನು ಗಂಡನಿಗೆ ಓದಲು ಕೊಡುವುದನ್ನೇ ಬಿಟ್ಟುಬಿಟ್ಟಳು.

ಒಂದು ಮಧ್ಯಾಹ್ನ ಊಟವಾದ ಮೇಲೆ ಅವಳು ಏನನ್ನೋ ಬರೆಯುತ್ತಾ ಕುಳಿತಿದ್ದಳು. ಆಗ ನೆನೆಸದೆ ಮಳೆ ಬಂತು. ಅಂದು ಬೆಳಿಗ್ಗೆ ಅಂಗಳದಲ್ಲಿ ಒಣಗಲೆಂದು ಕೊಬ್ಬರಿಯನ್ನು ಅವಳ ಗಂಡ ಹರಡಿದ್ದ. ಬರೆಯುವುದರಲ್ಲೇ ಮಗ್ನಳಾಗಿದ್ದ ಅವಳಿಗೆ ಮಳೆ ಬಂದದ್ದು ಗೊತ್ತೇ ಆಗಲಿಲ್ಲ. ತೋಟಕ್ಕೆ ಹೋಗಿದ್ದ ಅವಳ ಗಂಡ ಮಳೆ ಬಂತೆಂದು ಓಡಿ ಮನೆಗೆ ಬರುವಾಗ ಅಂಗಳದಲ್ಲಿ ಕೊಬ್ಬರಿ ನೆನೆದು ಒದ್ದೆಯಾಗಿರುವುದನ್ನು ನೋಡಿದ. ಇದರಿಂದ ಸಿಟ್ಟುಗೊಂಡ ಅವನು ಕೂಡಲೇ ಮನೆಯ ಒಳಗೆ ಧಾವಿಸಿದ. ಅವಳು ಬರೆಯುತ್ತಲೇ ಇದ್ದಳು. ತಕ್ಷಣ ಅವನು ಅವಳ ಕೈಯಿಂದ ಪೆನ್ನು ತೆಗೆದು ಬಿಸಾಡಿದ. ಮಾತ್ರವಲ್ಲ, ಬರೆಯುತ್ತಿದ್ದ ಹಾಳೆಯನ್ನು ಪರಪರನೇ ಹರಿದ. ಅವಳ ಬರಹಗಳನ್ನೆಲ್ಲ ಒಯ್ದು ಉರಿಯುತ್ತಿರುವ ಬಚ್ಚಲ ಒಲೆಗೆ ಹಾಕಿ ಅವಳಿಗೆ ಹೀಗೆ ತಾಕೀತು ಮಾಡಿದ- `ಬರವಣಿಗೆ ಊಟ ಕೊಡುವುದಿಲ್ಲ. ಬರೆಯುವುದರಿಂದ ಏನೂ ಪ್ರಯೋಜನವಿಲ್ಲ. ಸುಮ್ಮನೇ ಸಮಯ ಹಾಳು. ತೋಟಕ್ಕೆ ಹೋಗಿ ಅಡಿಕೆ ಹೆಕ್ಕಿದರೆ ನಾಲ್ಕು ಅಡಿಕೆಯಾದರೂ ಮನೆ ಬಾಗಿಲಿಗೆ ಬಂದೀತು. ಕೃಷಿಕನ ಪತ್ನಿಯಾಗಿ ನಿನ್ನ ಲಕ್ಷ್ಯವೆಲ್ಲ ತೋಟ ಮತ್ತು ಮನೆಯ ಕಡೆಗೆ ಇರಬೇಕೇ ಹೊರತು ಬರವಣಿಗೆಯಲ್ಲಿ ಅಲ್ಲ. ಇನ್ನು ಮುಂದೆ ನೀನು ಏನನ್ನೂ ಬರೆಯಕೂಡದು. ಇದಕ್ಕೆ ಒಪ್ಪಿದರೆ ನೀನಿಲ್ಲಿ ಇರಬಹುದು. ಇಲ್ಲವಾದರೆ ಕಾಗದ ಮತ್ತು ಪೆನ್ನು ತೆಗೆದುಕೊಂಡು ಒಂದು ರೂಮನ್ನು ಬಾಡಿಗೆಗೆ ಪಡೆದು, ಹೊರಗಡೆ ಎಲ್ಲಿಯಾದರೂ ಬರೆಯುತ್ತಾ ಕುಳಿತಿರು ಅಥವಾ ನಿನ್ನ ತವರು ಮನೆಗೆ ನಡಿ’. ಅಂದೇ ಕೊನೆ. ಮತ್ತೆಂದೂ ಅವಳು ಬರೆಯುವ ಸಾಹಸಕ್ಕೆ ಇಳಿಯಲಿಲ್ಲ.

ಇನ್ನೊಬ್ಬ ಗೆಳತಿ ನನ್ನ ಜೊತೆಯಲ್ಲಿ ಒಂದರಿಂದ ಪಿಯುಸಿ ತನಕ ಕಲಿತವಳು ಸುಶ್ರಾವ್ಯವಾಗಿ ಹಾಡುತ್ತಿದ್ದಳು. ಶಾಲಾದಿನಗಳಲ್ಲಿ, ಕಾಲೇಜು ಡೇನಲ್ಲಿ ಭಕ್ತಿಗೀತೆ, ಭಾವಗೀತೆ, ಜಾನಪದಗೀತೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಪಡೆಯುತ್ತಿದ್ದಳು. ತಕ್ಕಮಟ್ಟಿಗೆ ಸಂಗೀತವನ್ನೂ ಕಲಿತು ಗಣೇಶ ಚತುರ್ಥಿ ದಿನ, ಊರ ಜಾತ್ರೆಯಂದು, ಮದುವೆ ಮುಂತಾದ ಶುಭ ಸಮಾರಂಭಗಳಲ್ಲಿ ಕಚೇರಿ ಕೂಡ ಕೊಡುತ್ತಿದ್ದಳು. ನನ್ನ ಮದುವೆಯಾಗಿ ಕೆಲವು ವರ್ಷಗಳ ನಂತರ ದೊಡ್ಡ ಜಮೀನ್ದಾರನೊಂದಿಗೆ ಅವಳ ಮದುವೆಯಾಯ್ತು. ಅವಳ ಗಂಡನಿಗೆ ಅವಳು ಹೊರಗೆ ಹೋಗಿ ಹಾಡುವುದು ಇಷ್ಟವಿರಲಿಲ್ಲ. `ನೀನು ನಮ್ಮ ಮಕ್ಕಳಿಗೆ ಹಾಡು ಕಲಿಸಿದರೆ ಬೇಕಾದಷ್ಟಾಯಿತು. ಸಾರ್ವಜನಿಕ ಪ್ರದರ್ಶನ ಬೇಡ. ಹೊರಗೆ ಹೋದರೆ ತೋಟದ ಉಸ್ತುವಾರಿ, ಮನೆ ವಾರ್ತೆ ನೋಡಿಕೊಳ್ಳುವವರು ಯಾರು? ಊರ ಜನರಿಗೆ ಸಂಗೀತ ಹೇಳಲಿಕ್ಕೆ ಅಲ್ಲ ನಾನು ನಿನ್ನನ್ನು ಮದುವೆಯಾದದ್ದು’ ಎಂದಿದ್ದ. ಹಾಡುಹಕ್ಕಿಯ ರೆಕ್ಕೆ ಅಲ್ಲಿಗೆ ಮುರಿಯಿತು ಎಂದು ಬೇರೆ ಹೇಳಬೇಕಾಗಿಲ್ಲ ತಾನೆ?

ತಾನು ಸಾಧನೆ ಮಾಡದಿದ್ದರೂ ಪತ್ನಿಯ ಕಲೆಗೆ ಖುಷಿ ಪಟ್ಟು ಅದನ್ನು ಬೆಳೆಸುವ ಗಂಡಂದಿರೂ ಇಲ್ಲದಿಲ್ಲ. `ಪತಿ ಗೋವಿಂದ ಭಟ್ಟರ ಪ್ರೋತ್ಸಾಹದಿಂದಲೇ ಸಾಹಿತ್ಯದಲ್ಲಿ ನನ್ನ ಹೆಜ್ಜೆ ಗುರುತು ಮೂಡಿಸಲು ಸಾಧ್ಯವಾಯ್ತು’ ಎನ್ನುತ್ತಾರೆ ನಮ್ಮ ನಡುವಿನ ಖ್ಯಾತ ಕತೆಗಾರ್ತಿ ಎ.ಪಿ. ಮಾಲತಿ. ಅವರು ಸುಮಾರು 10 ಕಾದಂಬರಿ, 2 ಸಣ್ಣ ಕಥಾ ಸಂಕಲನ, 3 ಜೀವನ ಚರಿತ್ರೆ, 8 ಇತರ ಕೃತಿಗಳು ಹಾಗೂ ಇತ್ತೀಚೆಗೆ ಸ್ಮೃತಿಯಾನ ಎಂಬ ಆತ್ಮಕತೆಯನ್ನೂ ಬರೆದಿದ್ದಾರೆ. ಈಗಲೂ ಅವರು ಬರೆಯುತ್ತಿದ್ದಾರೆ. ವಿಶೇಷ ಎಂದರೆ, ಎ.ಪಿ. ಮಾಲತಿ ಅವರು ಕೃಷಿಕ ಮಹಿಳೆ. ಒಬ್ಬ ಮಹಿಳೆ ಕೃಷಿಕಳಾಗಿದ್ದುಕೊಂಡು ಸುಮಾರು 24 ಕೃತಿಗಳನ್ನು ಬರೆದಿದ್ದಾರೆಂದರೆ ಅದು ಸಾಮಾನ್ಯ ಸಂಗತಿಯಲ್ಲ. ಅವರು ಪಿಯುಸಿ ಮುಗಿಸಿದ ಕೂಡಲೇ ಮದುವೆಯಾಗಿ ತೋಟದ ಮನೆಗೆ ಕಾಲಿಟ್ಟವರು. ನಮ್ಮ ನಡುವೆ ಗೃಹಿಣಿಯರು, ವೈದ್ಯೆಯರು, ಉಪನ್ಯಾಸಕಿಯರು, ಅಧ್ಯಾಪಕಿಯರು, ಎಂಜಿನಿಯರುಗಳು, ಉದ್ಯಮಿ ಇತ್ಯಾದಿ ವೃತ್ತಿಗಳಲ್ಲಿರುವವರು ಬಹಳ ಸಂಖ್ಯೆಯಲ್ಲಿ ಲೇಖಕಿಯರಾಗಿ ಇದ್ದಾರೆ. ಆದರೆ, ಕೃಷಿಕ ಮಹಿಳೆಯರು ಬರಹಗಾರ್ತಿಯರಾಗಿ ಇರುವುದು ತುಂಬ ಕಡಿಮೆ. ಒಬ್ಬ ಗೃಹಿಣಿಗೂ, ಕೃಷಿಕ ಮಹಿಳೆಗೂ ವ್ಯತ್ಯಾಸ ಇದೆ. ಗೃಹಿಣಿಗೆ ಮನೆವಾರ್ತೆ ನೋಡಿಕೊಳ್ಳುವ ಕೆಲಸ ಮಾತ್ರವಾದರೆ ರೈತ ಮಹಿಳೆಗೆ ಮನೆಕೆಲಸದ ಜೊತೆಗೆ ಹಟ್ಟಿ-ತೋಟದ ಕೆಲಸವೂ ಇರುತ್ತದೆ. ಉಳಿದ ವೃತ್ತಿಗಳಲ್ಲಿರುವಂತೆ ಕೃಷಿ ಕೆಲಸಕ್ಕೆ ವಾರದ ರಜೆ ಎಂದು ಇರುವುದಿಲ್ಲ. ಇಡೀ ದಿನ ದುಡಿತವೊಂದೇ. ಅಂತಹದರಲ್ಲಿ ಎ.ಪಿ. ಮಾಲತಿ ಒಬ್ಬ ಉಪನ್ಯಾಸಕಿ ಮಾಡುವ ಸಾಧನೆಯನ್ನು ಕೃಷಿಕ ಮಹಿಳೆಯಾಗಿ ಮಾಡಿದ್ದಾರೆಂದರೆ ಅವರ ಗಂಡನ ಸಹಕಾರವನ್ನು ಅರ್ಥ ಮಾಡಿಕೊಳ್ಳಬಹುದು. ಅಂದಿನ ದಿನಗಳನ್ನು ನೆನೆಸುತ್ತಾ ಗದ್ಗದಿತರಾಗಿ ಎ.ಪಿ. ಮಾಲತಿ ಹೇಳುತ್ತಾರೆ- `ನಾನು ಇಷ್ಟು ಬರೆಯಲು ಸಾಧ್ಯವಾದದ್ದು ಗಂಡನ ಉತ್ತೇಜನದಿಂದ. ಅವರು ಈಗ ಇಲ್ಲ. ನಾನು ನನ್ನ ಸಾಹಿತ್ಯಸಂಗಾತಿಯನ್ನು ಕಳಕೊಂಡೆ. ನಾನು ಬರೆಯಲು ಕುಳಿತೆನೆಂದರೆ ಗಂಡ ತಾನೇ ಕೆಲಸದವರಿಗೆ ತಿಂಡಿ ತಯಾರಿಸಿ ಕೊಡುತ್ತಿದ್ದರು. ನನಗೆ ಟೀ ಮಾಡಲೂ ಹೇಳುತ್ತಿರಲಿಲ್ಲ. ಅವರೇ ಮಾಡಿ ಕುಡಿಯುತ್ತಿದ್ದರು. ನನಗೂ ಕೊಡುತ್ತಿದ್ದರು. ಯಾವುದೇ ಕಾರಣಕ್ಕೂ ನನ್ನನ್ನು ಎಬ್ಬಿಸುತ್ತಿರಲಿಲ್ಲ. `ನೀನು ಬರೆ’ ಎಂದೇ ಹೇಳುತ್ತಿದ್ದರು. ನನಗೆ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಭಾಷಣ ಮಾಡಲು ಇದ್ದರೆ ಅಥವಾ ಬಹುಮಾನ-ಸನ್ಮಾನ ಸ್ವೀಕರಿಸಲು ಇದ್ದರೆ ಕರೆದುಕೊಂಡು ಹೋಗುತ್ತಿದ್ದರು. ಮಾತ್ರವಲ್ಲ, ಮುಂದಿನ ಆಸನದಲ್ಲಿ ಕುಳಿತು ನನ್ನ ಕಾರ್ಯಕ್ರಮ ಕೇಳಿ ಚಪ್ಪಾಳೆ ತಟ್ಟುತ್ತಿದ್ದರು. ಈಗ ಬರೆಯುತ್ತಿರಬೇಕಾದರೆ ಅವರ ಸಹಕಾರ ನೆನಪಿಗೆ ಬಂದು ಸಂಕಟವೆನಿಸುತ್ತದೆ. ಬರವಣಿಗೆ ಸಾಗುವುದಿಲ್ಲ’.

ಗಂಡನ ಪ್ರೋತ್ಸಾಹದಿಂದ ಯಶಸ್ಸಿನ ಉತ್ತುಂಗಕ್ಕೆ ಏರಿದ ಇನ್ನೊಬ್ಬ ಗೆಳತಿ ಬಾಳಿಲ ಶಂಕರಿ ಮೂರ್ತಿ ಅವರು. ಅವರು ಇಂದು ಕರ್ನಾಟಕ ಶಾಸ್ತ್ರೀಯ ಸಂಗೀತದ ಮೇರು ಕಲಾವಿದೆಯಾಗುವಲ್ಲಿ ಅವರ ಗಂಡ ಸತ್ಯಮೂರ್ತಿ ಅವರ ಪರಿಶ್ರಮವೂ ಇದೆ. ಸತ್ಯಮೂರ್ತಿ ಹಾಡುಗಾರರಲ್ಲ. ಕೃಷಿಕರು. ಆದರೆ ಪತ್ನಿಯ ಹಾಡುಗಾರಿಕೆಗೆ ಎಷ್ಟು ಪ್ರೋತ್ಸಾಹ ಕೊಡುತ್ತಾರೆಂದರೆ, ಪತ್ನಿಯ ಸಂಗೀತ ಕಚೇರಿ ಎಲ್ಲಿಯೇ ಇರಲಿ, ತೋಟದ ಕೆಲಸವನ್ನು ಬದಿಗೊತ್ತಿ ಅವರೂ ಜೊತೆಯಲ್ಲಿ ಬಂದು ಇಡೀ ಕಾರ್ಯಕ್ರಮದ ನಿರೂಪಣೆಯನ್ನು ಮಾಡುತ್ತಾರೆ.

ನಾನು ಕೇವಲ ಬರೆಯುವ ಹಾಗೂ ಹಾಡುವ ಪ್ರತಿಭೆ ಗಂಡನ ಪ್ರೋತ್ಸಾಹ ಸಿಗದಿದ್ದರೆ ಹೇಗೆ ಕಮರಿಹೋಗುತ್ತದೆ ಮತ್ತು ಸಿಕ್ಕಿದರೆ ಹೇಗೆ ಚಿಗುರುತ್ತದೆ ಎಂಬುದನ್ನು ಮಾತ್ರ ಬರೆದೆ. ಇನ್ನೂ ಹಲವು ರೀತಿಯ ಪ್ರತಿಭೆಗಳು ಗಂಡನ ಪ್ರೋತ್ಸಾಹವಿಲ್ಲದೆ ಮುದುಡಿ ಹೋದುದನ್ನು ನೀವು ನೋಡಿರಬಹುದು ಅಥವಾ ನೀವೂ ಅಂತವರಲ್ಲಿ ಒಬ್ಬರಾಗಿರಬಹುದು. ಮುಂದಾದರೂ ಪತ್ನಿಯ ಪ್ರತಿಭಾ ವಿಕಸನಕ್ಕೆ ಪತಿ ಪ್ರೋತ್ಸಾಹ ಕೊಡುವ ಹಾಗೆ ಆಗಲಿ. ಗಂಡ-ಮಕ್ಕಳು ಎಂದು ಸಂಸಾರದ ಏಳಿಗೆಗೆ ತನ್ನನ್ನೇ ತೇಯುವ ಹೆಂಡತಿಗಾಗಿ ಗಂಡ ಅಷ್ಟೂ ಮಾಡದಿದ್ದರೆ ಹೇಗೆ?