ನವ್ಯ ಸಾಹಿತ್ಯದ ಪ್ರಬಲ ಪ್ರತಿಪಾದಕರಾಗಿದ್ದ ಶಾಂತಿನಾಥ ದೇಸಾಯಿ ಮತ್ತು ರಾಮಚಂದ್ರ ಶರ್ಮ ಕೊನೆಯವರೆಗೂ ನವ್ಯ ಲೇಖಕರಾಗಿದ್ದರು ಎಂಬುದು ಕೆಲವು ವಿಮರ್ಶಕರ ಅಭಿಪ್ರಾಯ. ರಾಮಚಂದ್ರ ಶರ್ಮರ ವಿಷಯದಲ್ಲಿ ಇದನ್ನು ಒಪ್ಪಬಹುದಾದರೂ ಶಾಂತಿನಾಥ ದೇಸಾಯಿಯವರ ವಿಷಯದಲ್ಲಿ ಇದನ್ನು ಒಪ್ಪಲು ಸಾಧ್ಯವಿಲ್ಲ. ಶಾಂತಿನಾಥ ದೇಸಾಯಿಯವರು ಮೊದಮೊದಲು ಬರೆದ ಕಥೆ-ಕಾದಂಬರಿಗಳಲ್ಲಿ ಸಾಮಾಜಿಕ ಪ್ರಜ್ಞೆ ಕಂಡು ಬರುವುದಿಲ್ಲವೆಂಬುದು ನಿಜವಾದರೂ ನಂತರದ ವರ್ಷಗಳಲ್ಲಿ ಅವರು ನವ್ಯತೆಯನ್ನು ಮೀರಿ ಸ್ಪಷ್ಟ ಸಾಮಾಜಿಕ ಪ್ರಜ್ಞೆಯಿಂದ ಬರೆದರು ಎಂಬುದು ಗಮನಿಸಬೇಕಾದ ಸಂಗತಿ. ಶಾಂತಿನಾಥ ದೇಸಾಯಿ ಅವರ ಜನ್ಮದಿನದ ಸಂದರ್ಭದಲ್ಲಿ ವಿಕಾಸ ಹೊಸಮನಿ ಬರೆದ ಲೇಖನ ಇಲ್ಲಿದೆ. 

 

ಶಾಂತಿನಾಥ ದೇಸಾಯಿ ಕನ್ನಡದ ಮಹತ್ವದ ಲೇಖಕರಲ್ಲೊಬ್ಬರು. ಕನ್ನಡದಲ್ಲಿ ನವ್ಯ ಸಾಹಿತ್ಯಕ್ಕೊಂದು ನೆಲೆ-ಬೆಲೆ ತಂದುಕೊಟ್ಟ ದಿಗ್ಗಜ ಲೇಖಕ ಶಾಂತಿನಾಥ ದೇಸಾಯಿ. ಕಥೆ, ಕಾದಂಬರಿ, ವಿಮರ್ಶೆ, ಸಂಪಾದನೆ ಮತ್ತು ಅನುವಾದ ಪ್ರಕಾರಗಳಲ್ಲಿ ದೇಸಾಯಿಯವರು ಸಾಕಷ್ಟು ಒಳ್ಳೆಯ ಕೃತಿಗಳನ್ನು ರಚಿಸಿದ್ದಾರೆ. ಕಳೆದ ಶತಮಾನದ ಮಧ್ಯಭಾಗದಲ್ಲಿ ನವ್ಯ ಕಥೆಗಾರರಾಗಿ ಸಾಹಿತ್ಯ ಕೃಷಿ ಆರಂಭಿಸಿದ ಶಾಂತಿನಾಥ ದೇಸಾಯಿಯವರು ಹೆಚ್ಚು ಕಡಿಮೆ ನಾಲ್ಕೂವರೆ ದಶಕಗಳ ಕಾಲ – ಅವರ ಮರಣದವರೆಗೂ – ಲೇಖಕರಾಗಿ ಕ್ರಿಯಾಶೀಲರಾಗಿದ್ದರು.

ಧಾರವಾಡ ಮತ್ತು ಮುಂಬಯಿಯಲ್ಲಿ ಓದಿದ ದೇಸಾಯಿಯವರು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಶಾಂತಿನಾಥ ದೇಸಾಯಿಯವರು ಇಂಗ್ಲಿಷ್ ಪ್ರಾಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದರು. ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಮತ್ತು ಛತ್ರಪತಿ ಶಿವಾಜಿ ವಿಶ್ವವಿದ್ಯಾಲಯ ಕೊಲ್ಹಾಪುರದಲ್ಲಿ ಅವರ ವೃತ್ತಿ ಜೀವನದ ಬಹುತೇಕ ವರ್ಷಗಳು ಕಳೆದಿವೆ. ಶಿವಾಜಿ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿದ್ದ ದೇಸಾಯಿಯವರು ಆ ವಿಭಾಗದಲ್ಲಿ ಮಹತ್ತರ ಕೆಲಸಗಳನ್ನು ಮಾಡಿದ್ದಾರೆ. ದೇಶದ ಅತ್ಯುತ್ತಮ ಇಂಗ್ಲಿಷ್ ಪ್ರಾಧ್ಯಾಪಕರಲ್ಲಿ ಒಬ್ಬರೆಂದು ಖ್ಯಾತಿ ಪಡೆದಿದ್ದ ದೇಸಾಯಿಯವರು ಇಂಗ್ಲಿಷಿನಲ್ಲೂ ಸಹ ಸಾಕಷ್ಟು ಬರೆದಿದ್ದಾರೆ. ದೇಸಾಯಿಯವರು ಇಂಗ್ಲಿಷಿನಲ್ಲಿ ಬರೆಯುವಾಗ ಶಾಂತಿನಾಥ ಕೆ. ದೇಸಾಯಿ ಎಂಬ ಹೆಸರು ಬಳಸುತ್ತಿದ್ದರು.

ಶಿವಮೊಗ್ಗದಲ್ಲಿ ಕುವೆಂಪು ವಿಶ್ವವಿದ್ಯಾಲಯ ಸ್ಥಾಪನೆಯಾದಾಗ ದೇಸಾಯಿಯವರು ಅದರ ಪ್ರಥಮ ಕುಲಪತಿಗಳಾಗಿ ನೇಮಕಗೊಂಡರು. ಹೊಸದಾಗಿ ಸ್ಥಾಪನೆಯಾದ ಕುವೆಂಪು ವಿಶ್ವವಿದ್ಯಾಲಯವನ್ನು ಕಟ್ಟಿ ಬೆಳೆಸುವ ಸವಾಲು ಅವರೆದುರಿತ್ತು. ಉತ್ತಮ ಪ್ರಾಧ್ಯಾಪಕ ಮತ್ತು ಶ್ರೇಷ್ಠ ಲೇಖಕರಾದ ದೇಸಾಯಿಯವರು ನುರಿತ ಆಡಳಿತಗಾರರೂ ಆಗಿದ್ದರು. ಕುವೆಂಪು ವಿಶ್ವವಿದ್ಯಾಲಯದ ಮೊದಲ ಕುಲಪತಿಗಳಾಗಿ ತುಂಬ ಒಳ್ಳೆಯ ಕೆಲಸ ಮಾಡುವ ಮೂಲಕ ಅದಕ್ಕೊಂದು ಭದ್ರ ಬುನಾದಿ ಹಾಕಿದರು. ಸಾಮಾನ್ಯವಾಗಿ ಹೊಸ ವಿಶ್ವವಿದ್ಯಾಲಯವೊಂದು ಸ್ಥಾಪನೆಯಾದಾಗ ಅದರ ಅಭಿವೃದ್ಧಿಯ ದೃಷ್ಟಿಯಿಂದ ಮೊದಲ ಕುಲಪತಿಗಳನ್ನು ಮತ್ತೊಂದು ಅವಧಿಗೆ ಮುಂದುವರಿಸಲಾಗುತ್ತದೆ. ಆದರೆ ಕರ್ನಾಟಕದ ಎರಡು ಪ್ರಬಲ ಸಮುದಾಯಗಳ ಜಾತಿ ರಾಜಕಾರಣದಿಂದ ದೇಸಾಯಿಯವರನ್ನು ಮತ್ತೊಂದು ಅವಧಿಗೆ ಮುಂದುವರಿಸಲಾಗಲಿಲ್ಲ. ಇದರಿಂದ ನಷ್ಟವಾದದ್ದು ಕುವೆಂಪು ವಿಶ್ವವಿದ್ಯಾಲಯಕ್ಕೆಯೇ ಹೊರತು ದೇಸಾಯಿಯವರಿಗಲ್ಲ.

ಸಜ್ಜನ ಮತ್ತು ಸ್ನೇಹಶೀಲರಾಗಿದ್ದ ದೇಸಾಯಿಯವರಿಗೆ ಯೋಗ್ಯತೆಯಿದ್ದರೂ ಯೋಗವಿರಲಿಲ್ಲ. ದೇಸಾಯಿಯವರು ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದ ರಾಜಕೀಯದಿಂದ ಯಾವತ್ತೂ ದೂರವಿದ್ದವರು. ಅಲ್ಪಸಂಖ್ಯಾತ ಸಮುದಾಯವಾದ ಜೈನ ಮತಕ್ಕೆ ಸೇರಿದ ದೇಸಾಯಿಯವರಿಗೆ ಪ್ರಬಲ ಜಾತಿಯ ಹಿನ್ನೆಲೆಯೂ ಇರಲಿಲ್ಲ. ಇಂತಹ ಅನೇಕ ಸಾಹಿತ್ಯೇತರ ಕಾರಣಗಳಿಂದ ದೇಸಾಯಿಯವರಿಗೆ ಸಿಗಬೇಕಾದ ಮಾನ್ಯತೆ ಸಿಗಲಿಲ್ಲ ಎಂಬುದನ್ನೆಲ್ಲ  ನೆನೆದರೆ ತುಂಬ ವಿಷಾದವಾಗುತ್ತದೆ.

ಎಪ್ಪತ್ತು – ಎಂಬತ್ತರ ದಶಕದಲ್ಲಿ ದೇಸಾಯಿಯವರು ಮುನ್ನುಡಿ, ಹಿನ್ನುಡಿ ಮತ್ತು ಬೆನ್ನುಡಿ ಬರೆಯದ ಲೇಖಕರೇ ಇರಲಿಲ್ಲವೆಂದರೆ ಅದು ಅತಿಶಯೋಕ್ತಿಯ ಮಾತಲ್ಲ. ನವ್ಯ, ದಲಿತ-ಬಂಡಾಯ ಮತ್ತು ನವ್ಯೋತ್ತರ ಎಂಬುದನ್ನು ನೋಡದೆ ಯಾರು ಕೇಳಿದರೂ ತುಂಬ ಪ್ರೀತಿಯಿಂದ ಮುನ್ನುಡಿ, ಹಿನ್ನುಡಿ ಮತ್ತು ಬೆನ್ನುಡಿ ಬರೆದು  ಪ್ರೋತ್ಸಾಹ ಕೊಡುತ್ತಿದ್ದರು. ಹೀಗೆ ಬರೆಯುವ ಮೂಲಕ ಅನೇಕ ಹೊಸ ಪೀಳಿಗೆಯ ಲೇಖಕರನ್ನು ಸಾಕಷ್ಟು ಪ್ರೋತ್ಸಾಹಿಸಿದರು.

ಕಳೆದ ಶತಮಾನದ ಐವತ್ತರ ದಶಕದಲ್ಲಿ ಬರವಣಿಗೆ ಆರಂಭಿಸಿದ ದೇಸಾಯಿಯವರು ಕಳೆದ ಶತಮಾನದ ತೊಂಬತ್ತರ ದಶಕದ ಮಧ್ಯಭಾಗದವರೆಗೂ ಸಾಹಿತ್ಯಿಕವಾಗಿ ಕ್ರಿಯಾಶೀಲರಾಗಿದ್ದರು. ಸಣ್ಣಕಥೆಯ ಮೂಲಕ ಶುರುವಾದ ಅವರ ಬರವಣಿಗೆ ಮುಂದೆ ಕಾದಂಬರಿ, ವಿಮರ್ಶೆ ಮತ್ತು ಅನುವಾದ ಪ್ರಕಾರಗಳಿಗೂ ವಿಸ್ತರಿಸಿತು. 1950ರ ದಶಕದಲ್ಲಿ ದೇಸಾಯಿಯವರ ʻಮಳೆʼ ಎಂಬ ಕಥೆ ಪ್ರಕಟವಾಯಿತು. ಇಲ್ಲಿಂದ ಶುರುವಾದ ದೇಸಾಯಿಯವರ ಕಥಾ ರಚನೆ 1990ರ ಮಧ್ಯಭಾಗದಲ್ಲಿ ಪ್ರಕಟವಾದ ʻವಿಯೋಗʼ ಎಂಬ ಕಥೆಯವರೆಗೂ ಮುಂದುವರೆಯಿತು. ʻಮಂಜುಗಡ್ಡೆʼ, ʻಕ್ಷಿತಿಜʼ, ʻದಂಡೆʼ, ʻರಾಕ್ಷಸʼ, ʻಪರಿವರ್ತನೆʼ, ʻಕೂರ್ಮಾವತಾರʼ, ʻಶಾಂತಿನಾಥ ದೇಸಾಯಿ ಅವರ ಆಯ್ದ ಕಥೆಗಳುʼ ಮತ್ತು ಅವರ ಮರಣಾನಂತರ ಪ್ರಕಟವಾದ ʻಸಮಗ್ರ ಕತೆಗಳುʼ  ದೇಸಾಯಿಯವರ ಕಥಾಸಂಕಲನಗಳು.

ಶಾಂತಿನಾಥ ದೇಸಾಯಿಯವರು ಒಟ್ಟು ನಲವತ್ತೊಂಬತ್ತು ಕಥೆಗಳನ್ನು ಬರೆದಿದ್ದಾರೆ. ʻಚಂದೂʼ, ʻದಿಗ್ಭ್ರಮೆʼ, ʻಕ್ಷಿತಿಜʼ, ʻಗಂಡ ಸತ್ತ ಮೇಲೆʼ, ʻರಾಕ್ಷಸʼ, ʻನದಿಯ ನೀರುʼ, ʻನಾನಾನ ತೀರ್ಥಯಾತ್ರೆʼ, ʻತೃಪ್ತʼ, ʻಭರಮ್ಯಾ ಹೋಗಿ ನಿಖಿಲನಾದದ್ದುʼ, ʻಜವಾಬ್ದಾರಿʼ ಮತ್ತು ʻಹೀರೊʼ ದೇಸಾಯಿಯವರ ಪ್ರಮುಖ ಕಥೆಗಳು. ದೇಸಾಯಿಯವರ ಅನೇಕ ಕಥೆಗಳು ಇತರೆ ಭಾರತೀಯ ಭಾಷೆಗಳಿಗೆ ಅನುವಾದವಾಗಿವೆ.

ಕನ್ನಡದ ಶ್ರೇಷ್ಠ ಕಥೆಗಳಲ್ಲೊಂದೆಂದು ವಿಮರ್ಶಕರು ಮತ್ತು ಓದುಗರಿಂದ ಅಪಾರ ಮೆಚ್ಚುಗೆ ಪಡೆದ ಕಥೆ ʻಕ್ಷಿತಿಜʼ. ಈ ಕಥೆಯಲ್ಲಿ ಸಂಪ್ರದಾಯ ಮತ್ತು ಆಧುನಿಕತೆಗಳ ಸಂಘರ್ಷವನ್ನು ಕಾಣಬಹುದು. ನವ ಮಧ್ಯಮವರ್ಗದ ಸುಶಿಕ್ಷಿತ ಮಹಿಳೆಯಾದ ಮಂದಾಕಿನಿ ಮೂವತ್ತರ ಆಸುಪಾಸಿನಲ್ಲಿದ್ದರೂ ಸಹ ಅವಿವಾಹಿತೆ.

ತಾಯಿ-ತಮ್ಮಂದಿರ ಸಲುವಾಗಿ ತನ್ನ ಸುಖವನ್ನು ಕಡೆಗಣಿಸಿ ತನ್ನ ಕುಟುಂಬಕ್ಕಾಗಿ ಜೀವ ತೇಯುತ್ತಿದ್ದಾಳೆ. ಸ್ಕಾಲರ್‌ಶಿಪ್ ದೊರೆತ ಕಾರಣ ಇಂಗ್ಲೆಂಡಿಗೆ ತೆರಳುತ್ತಿರುವ ಮಂದಾಕಿನಿಗೆ ಹಡಗಿನ ಪ್ರಯಾಣದಲ್ಲಿ ಎದುರಾಗುವ ಅನುಭವಗಳು ಅವಳ ಇದುವರೆಗಿನ ಜೀವನದ ಕುರಿತು ಮರುಚಿಂತನೆ ಮಾಡುವಂತೆ ಪ್ರೇರೇಪಿಸುತ್ತವೆ.

ತುಂಬ ಸಾಂಪ್ರದಾಯಿಕ ಕುಟುಂಬದ ಹಿನ್ನಲೆಯಿಂದ ಬಂದ ಮಂದಾಕಿನಿಗೆ ಹಡಗಿನ ಪ್ರಯಾಣ ಒಂದು ಸಾಂಸ್ಕೃತಿಕ ಆಘಾತವುಂಟುಮಾಡುತ್ತದೆ. ಈ ಪ್ರಯಾಣದಲ್ಲಿ ಭೇಟಿಯಾದ ಮಿಸ್ ಜೋಸೆಫ್, ಮುಖರ್ಜಿ, ಮೆಕಾರ್ಥಿ ಮತ್ತು ಲೆಗ್ವಿಯ ಪರಿಚಯ ಅವಳ ಮೇಲೆ ತೀವ್ರ ಪ್ರಭಾವ ಬೀರುತ್ತವೆ. ಈ ಭಿನ್ನ ಸ್ತರದ ಜನರ ಭಿನ್ನ ಶೈಲಿಯ ಜೀವನ ಕಂಡ ಮಂದಾಕಿನಿಯ ವ್ಯಕ್ತಿತ್ವಲ್ಲಿ ಅನೇಕ ಸೂಕ್ಷ್ಮ ಬದಲಾವಣೆಗಳುಂಟಾಗುವುದನ್ನು ಕಾಣಬಹುದು. ಲೆಗ್ವಿಯತ್ತ ಮಂದಾಕಿನಿ ಆಕರ್ಷಿತಳಾದರೂ ರಕ್ತಗತವಾಗಿ ಬಂದ ಸಂಕೋಚ ಭಾವನೆಯಿಂದ ಹೊರಬರಲು ಅವಳಿಗೆ ಸಾಧ್ಯವಾಗುವುದಿಲ್ಲ. ಹಡಗು ಇಂಗ್ಲೆಂಡ್ ಸಮೀಪಿಸಿದರೂ ಮಂದಾಕಿನಿ ತನ್ನ ದ್ವಂದ್ವ ಭಾವನೆಗಳಿಂದ ಮುಕ್ತಳಾಗುವುದಿಲ್ಲ.

ನವ ಮಧ್ಯಮವರ್ಗದ ಸುಶಿಕ್ಷಿತ ಸ್ತ್ರೀಯಾದ ಮಂದಾಕಿನಿ ಆಧುನಿಕಳಾದರೂ ಸಹ ಸಂಪ್ರದಾಯದ ಪರಿಧಿಯನ್ನು ಮೀರುವಷ್ಟು ಸಮರ್ಥಳಲ್ಲ. ಇಲ್ಲಿ ದೇಸಾಯಿಯವರು ಏಕಕಾಲಕ್ಕೆ ಮಂದಾಕಿನಿಯ ಒಳಮನಸ್ಸಿನ ದ್ವಂದ್ವಗಳು ಮತ್ತು ಸಂಪ್ರದಾಯ ಹಾಗೂ ಆಧುನಿಕತೆಗಳು ಪರಸ್ಪರ ಎದುರಾದಾಗ ಉಂಟಾಗುವ ಘರ್ಷಣೆಗಳನ್ನು ತುಂಬ ಸಮರ್ಥವಾಗಿ ಹಿಡಿದಿಟ್ಟಿದ್ದಾರೆ. ಸಂಪ್ರದಾಯವನ್ನು ಬಿಡಲಾಗದೆ, ಆಧುನಿಕತೆಯನ್ನು ಒಪ್ಪಿಕೊಳ್ಳಲಾಗದೆ ಒದ್ದಾಡುವ ಮಂದಾಕಿನಿಯದು ಕನ್ನಡದ ಶ್ರೇಷ್ಠ ಸ್ತ್ರೀ ಕಥಾಪಾತ್ರಗಳಲ್ಲೊಂದು.

ದೇಸಾಯಿಯವರ ಕಥನ ಸಾಹಿತ್ಯದಲ್ಲಿ ʻಭರಮ್ಯಾ ಹೋಗಿ ನಿಖಿಲನಾದದ್ದುʼ ಕಥೆಗೆ ಮಹತ್ವದ ಸ್ಥಾನವಿದೆ. ಮೊದಲ ಬಾರಿಗೆ ಸಾಮಾಜಿಕ ಸಂಘರ್ಷವೊಂದರ ಸ್ಪಷ್ಟ ಮತ್ತು ನೇರ ಚಿತ್ರಣವನ್ನು ಈ ಕಥೆಯಲ್ಲಿ ಕಾಣಬಹುದು. ಅನಿವಾರ್ಯ ಕಾರಣಗಳಿಂದ ದಾದಾಸಾಹೇಬ ಪಾಟೀಲರ ಮನೆಗೆ ಕೆಲಸಾದಾಳಾಗಿ ಬರುವ ಭರಮ್ಯಾ ಅಸಹಾಯಕನಾದರೂ ದುರ್ಬಲನಲ್ಲ. ವೇಷಭೂಷಣಗಳಲ್ಲಿ ಭರಮ್ಯಾ ನಿಖಿಲನಿಗೆ ಕಡಿಮೆಯಿಲ್ಲ. ಭರಮ್ಯಾನಿಗೆ ತಾನು ದುಡಿದು ಗಳಿಸಿದ ಅಲ್ಪಸ್ವಲ್ಪ ಹಣ ಮತ್ತು ಇಂಗ್ಲಿಷ್ ಭಾಷೆಯ ತಕ್ಕಮಟ್ಟಿಗಿನ ಪರಿಚಯ ಸಾಕಷ್ಟು ಆತ್ಮವಿಶ್ವಾಸ ನೀಡಿದೆ.

ಪಾಟೀಲ ಮನೆತನದ ಸರ್ವಾಧಿಕಾರಿ ಧೋರಣೆ ಮತ್ತು ನಿಖಿಲನ ಆಟಾಟೋಪವನ್ನು ಒಪ್ಪಲಾಗಲಿ, ಸಹಿಸಲಾಗಲಿ ಭರಮ್ಯಾನಿಗೆ ಸಾಧ್ಯವಿಲ್ಲ. ಸಮಾನವಯಸ್ಕರಾದ ನಿಖಿಲ ಮತ್ತು ಭರಮ್ಯಾರಲ್ಲಿ ಸಹಜವಾಗಿಯೇ ಹರೆಯಕ್ಕೆ ಸಹಜವಾದ ಅನೇಕ ಬಯಕೆಗಳಿವೆ. ಅದೇ ರೀತಿ ಮಾತ್ಸರ್ಯವೂ ಇದೆ. ತನ್ನನ್ನು ತಾನು ನಿಖಿಲನೊಂದಿಗೆ ಹೋಲಿಸಿಕೊಳ್ಳುವ ಭರಮ್ಯಾನಿಗೆ ತಾನು ನಿಖಿಲನಗಿಂತ ಯಾವುದರಲ್ಲೂ ಕಡಿಮೆಯಿಲ್ಲವೆಂಬ ಭಾವನೆ ಬಲಿಯತೊಡಗುತ್ತದೆ. ಭರಮ್ಯಾ ನಿಖಿಲನನ್ನು ಪ್ರತಿಯೊಂದು ವಿಷಯದಲ್ಲೂ ಅನುಕರಿಸಲು ತೊಡಗುತ್ತಾನೆ. ನಿಖಿಲನ ಸೈಕಲ್ಲನ್ನು ತನ್ನದೆಂಬಂತೆ ಬಳಸಿಕೊಳ್ಳುತ್ತಾನೆ.

ದೇಸಾಯಿಯವರು ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದ ರಾಜಕೀಯದಿಂದ ಯಾವತ್ತೂ ದೂರವಿದ್ದವರು. ಅಲ್ಪಸಂಖ್ಯಾತ ಸಮುದಾಯವಾದ ಜೈನ ಮತಕ್ಕೆ ಸೇರಿದ ದೇಸಾಯಿಯವರಿಗೆ ಪ್ರಬಲ ಜಾತಿಯ ಹಿನ್ನೆಲೆಯೂ ಇರಲಿಲ್ಲ. ಇಂತಹ ಅನೇಕ ಸಾಹಿತ್ಯೇತರ ಕಾರಣಗಳಿಂದ ದೇಸಾಯಿಯವರಿಗೆ ಸಿಗಬೇಕಾದ ಮಾನ್ಯತೆ ಸಿಗಲಿಲ್ಲ.

ನಿಖಿಲನ ಪ್ರೇಯಸಿ ತನ್ನ ಪ್ರೇಯಸಿ ಯಾಕಾಗಬಾರದು? ತಾನು ನಿಖಿಲನಿಗಿಂತ ಯಾವುದರಲ್ಲಿ ಕಡಿಮೆ? ಎಂಬ ಹುಂಬ ಧೈರ್ಯದಿಂದ ನಿಖಿಲನ ಗೆಳತಿ ಶಾಲಿನಿಯನ್ನು ಅಪಹರಿಸುತ್ತಾನೆ. ಶಾಲಿನಿಗೆ ತನ್ನ ಬಗೆಗಿರುವ ತಿರಸ್ಕಾರ ಕಂಡು ದುಃಖಿತನಾದ ಭರಮ್ಯಾ ಅವಳನ್ನು ಬಿಡುಗಡೆ ಮಾಡುತ್ತಾನೆ. ಮುಂದೆ ಈ ಘಟನೆ ತೀವ್ರ ಸ್ವರೂಪ ಪಡೆದು ಪಾಟೀಲ ಮನೆತನದವರಿಂದ ಭರಮ್ಯಾ ಮತ್ತು ಕಲ್ಲಪ್ಪನ ಕುಟುಂಬ ಸಾಕಷ್ಟು ನೋವುಣ್ಣಬೇಕಾಗುತ್ತದೆ. ಇದೆಲ್ಲರಿಂದ ಬಿಡುಗಡೆ ಪಡೆಯಲು ಬಯಸಿದ ಭರಮ್ಯಾ ಊರು ಬಿಡುತ್ತಾನೆ. ಭರಮ್ಯಾ ಕೊನೆಗೆ ಮಿಲಿಟರಿ ಸೇರಿ ಅಲ್ಲಿ ತನ್ನ ಹೆಸರನ್ನು ನಿಖಿಲ ಪಾಟೀಲ ಎಂದು ಬದಲಾಯಿಸಿಕೊಂಡು ಹೊಸ ಹುಟ್ಟು ಪಡೆಯಬಯಸುವುದು ಅರ್ಥಪೂರ್ಣವಾಗಿದೆ.

ದೇಸಾಯಿಯವರು ಭರಮ್ಯಾ ಮತ್ತು ನಿಖಿಲರ ಪಾತ್ರಗಳ ಮೂಲಕ ಸ್ಪಷ್ಟವಾಗಿ ವರ್ಗಕಲಹವೊಂದರ ಚಿತ್ರಣ ನೀಡಿದ್ದಾರೆ. ಕಥೆಯ ಕೊನೆಯಲ್ಲಿ ಭರಮ್ಯಾ ಕನಸಿನಲ್ಲಿ ಯುದ್ಧವಿಮಾನದಲ್ಲಿ ಬಂದು ಪಾಟೀಲರ ಮನೆಯ ಮೇಲೆ ಬಾಂಬೆಸೆದು ನಾಶ ಮಾಡುವುದರಲ್ಲಾಗಲಿ ಅಥವಾ ಮಿಲಿಟರಿಗೆ ಸೇರಿ ತನ್ನ ಹೆಸರು ನಿಖಿಲ ಎಂದು ಬದಲಾಯಿಸಿಕೊಳ್ಳುವುದರಲ್ಲಾಗಲಿ ಬದಲಾವಣೆಯ ಸ್ಪಷ್ಟ ಸಂಕೇತಗಳಿರುವುದು ಗಮನಾರ್ಹ.

ಶಾಂತಿನಾಥ ದೇಸಾಯಿಯವರು “ಮುಕ್ತಿ”, “ವಿಕ್ಷೇಪ”, “ಸೃಷ್ಟಿ”, “ಸಂಬಂಧ”, “ಬೀಜ”, “ಅಂತರಾಳ” ಮತ್ತು “ಓಂ ಣಮೋ” ಎಂಬ ಏಳು ಕಾದಂಬರಿಗಳನ್ನು ಬರೆದಿದ್ದಾರೆ. “ಮುಕ್ತಿ” ಕಾದಂಬರಿ ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸದೊಂದು ಆಯಾಮವನ್ನೇ ಸೃಷ್ಟಿಸಿದ ಮಹತ್ವದ ಕೃತಿ. ಕನ್ನಡದ ಪ್ರಪ್ರಥಮ ನವ್ಯ ಕಾದಂಬರಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ವಿಶಿಷ್ಟ ಕೃತಿ ಮುಕ್ತಿ. ಈ ಕಾದಂಬರಿಯ ವಿನೂತನ ಕಥಾವಸ್ತು, ವಿಭಿನ್ನ ನಿರೂಪಣಾ ಶೈಲಿ, ಧಾರವಾಡ ಭಾಷೆಯ ಗತ್ತು ಮತ್ತು ದಿನಚರಿಯ ಮೂಲಕ ಸಾಗುವ ಕಾದಂಬರಿಯ ನಿರೂಪಣೆ ಒಂದು ಕಾಲದ ಓದುಗರ ಮೇಲೆ ಅಪಾರ ಮೋಡಿ ಮಾಡಿತ್ತು. ಧಾರವಾಡದ ಕಾಲೇಜುಗಳು ಮತ್ತು ಧಾರವಾಡದಲ್ಲಿ ಕಲಿಯುತ್ತಿರುವ ಹುಡುಗಿಯರಿಗೆ ತಾರಾ ವರ್ಚಸ್ಸು ತಂದುಕೊಟ್ಟ ಖ್ಯಾತಿ “ಮುಕ್ತಿ” ಕಾದಂಬರಿಗೆ ಸಲ್ಲುತ್ತದೆ.

ʻಮುಕ್ತಿʼ ಕಾದಂಬರಿಯ ಗೌರೀಶ ಕನ್ನಡ ಕಾದಂಬರಿ ಲೋಕದ ಮೊದಲ ಭಗ್ನಪ್ರೇಮಿ ಮತ್ತು ವಿಷಾದ ನಾಯಕ. ಕಾಮಿನಿಯನ್ನು ಹುಚ್ಚನಂತೆ ಪ್ರೇಮಿಸಿದ ಗೌರೀಶ ಈ ಕಾದಂಬರಿಯ ನಾಯಕನಾದರೆ, ಹೆಣ್ಣೆಂದರೆ ಚಂಚಲೆ ಎಂಬ ಪದಕ್ಕೆ ಜೀವಂತ ಉದಾಹರಣೆಯಂತಿರುವ ಕಾಮಿನಿ ಈ ಕಾದಂಬರಿಯ ನಾಯಕಿಯೂ ಹೌದು, ಖಳನಾಯಕಿಯೂ ಹೌದು! ಕಾಮಿನಿಯನ್ನು ಇನ್ನಿಲ್ಲದಂತೆ ಪ್ರೀತಿಸಿ ಅವಳಿಂದ ತಿರಸ್ಕೃತನಾಗುವ ಗೌರೀಶ ಡಾಲಿಯ ಸಂಗದಲ್ಲಿ ನವಚೈತನ್ಯ ಪಡೆಯುತ್ತಾನೆ. ಡಾಲಿಯ ಪ್ರೀತಿ ಅವನಲ್ಲಿ ಹೊಸ ಜೀವನೋತ್ಸಾಹ ಮೂಡಿಸುತ್ತದೆ. ನವ್ಯ ಕಾದಂಬರಿಯಾದರೂ ʻಮುಕ್ತಿʼ ಸುಖಾಂತ್ಯ ಕಾಣುವುದು ವಿಶೇಷ. ಓದುಗರು ಮತ್ತು ವಿಮರ್ಶಕರಿಂದ ಅಪಾರ ಮೆಚ್ಚುಗೆ ಪಡೆದ ಕಾದಂಬರಿ “ಮುಕ್ತಿ”.

ʻವಿಕ್ಷೇಪʼ ರಾಹುಲ ಎಂಬ ಆಧುನಿಕ ಯುವಕನ ತಳಮಳವನ್ನು ಸೊಗಸಾಗಿ ನಿರೂಪಿಸಿರುವ ದೇಸಾಯಿಯವರ ಮತ್ತೊಂದು ನವ್ಯ ಕಾದಂಬರಿ. ರಾಹುಲ ʻಮುಕ್ತಿʼಯ ಗೌರೀಶನಂತೆ ಇಂಟ್ರೋವರ್ಟ್ ಸ್ವಭಾವದವನಲ್ಲ ಜೀವನವಿರುವುದೇ ಅನುಭವಿಸಲಿಕ್ಕೆ ಎಂದು ನಂಬಿರುವ ಮತ್ತು ಅದರಂತೆಯೇ ತುಂಬ ಖುಷಿಯಿಂದ ಬದುಕುತ್ತಿರುವ ಆಧುನಿಕ ಮನೋಭಾವದ ಯುವಕ. ಒಂದರ್ಥದಲ್ಲಿ ರಾಹುಲನದು ಪ್ಲೇಬಾಯ್ ವ್ಯಕ್ತಿತ್ವ ಹೊಂದಿರುವ ಪಾತ್ರ. ರಾಹುಲನ ಜೀವನದಲ್ಲಿ ಅನೇಕ ಹೆಣ್ಣುಗಳು ಬಂದು ಹೋಗುತ್ತಾರೆ. ಅಂತಹ ರಾಹುಲನ ಜೀವನದ ಕಥೆಯೇ ʻವಿಕ್ಷೇಪʼ ಕಾದಂಬರಿಯ ತಿರುಳು. ಈಗಲೂ ಸಹ ಈ ಕಾದಂಬರಿಯ ವಸ್ತು ಪ್ರಸ್ತುತವಾಗುವಂತಿರುವುದು ಇದರ ವಿಶೇಷ.

1983ರಲ್ಲಿ ಪ್ರಕಟವಾದ ʻಬೀಜʼ ದೇಸಾಯಿಯವರ ಉತ್ತಮ ಕಾದಂಬರಿಗಳಲ್ಲೊಂದು. ದೇಸಾಯಿಯವರು ಮೊಟ್ಟ ಮೊದಲ ಬಾರಿಗೆ ನವ್ಯದ ಪರಿಧಿಯಿಂದ ಆಚೆ ಬಂದು ಸಮಾಜಮುಖಿ ಧೋರಣೆಯನ್ನು ಅಳವಡಿಸಿಕೊಂಡು ಬರೆದ ಕಾದಂಬರಿ ಬೀಜ. ಕನ್ನಡದ ಮತ್ತೊಬ್ಬ ದಿಗ್ಗಜ ಲೇಖಕ ಯು.ಆರ್. ಅನಂತಮೂರ್ತಿಯವರ ʻಭಾರತೀಪುರʼಕಾದಂಬರಿಗೆ ಹೋಲಿಸಬಹುದಾದ ಕಾದಂಬರಿ ದೇಸಾಯಿಯವರ ʻಬೀಜʼ. ಈ ಕಾದಂಬರಿಯ ಕಥಾನಾಯಕ ಶ್ರೇಯಾಂಸ ತಂದೆಯ ವಿರುದ್ಧ ಬಂಡೆದ್ದು ಊರು ಬಿಟ್ಟು ಮುಂಬಯಿ ಸೇರಿದವನು. ಕ್ರಿಶ್ಚಿಯನ್ ಮಹಿಳೆಯನ್ನು ಮದುವೆಯಾಗಿ ಮುಂಬೈವಾಸಿಯಾಗಿರುವ ಶ್ರೇಯಾಂಸ ತಂದೆಯ ಸಾವಿನ ನಂತರ ಊರಿಗೆ ಮರಳುತ್ತಾನೆ. ಮನೆತನದ ಜವಾಬ್ದಾರಿ ಹೊರುವುದರೊಂದಿಗೆ ಊರಿನಲ್ಲಿ ಕೆಲವು ಸಾಮಾಜಿಕ ಬದಲಾವಣೆ ತರಲು ಶ್ರಮಿಸುತ್ತಾನೆ. ಶ್ರೇಯಾಂಸನ ಸಮಾಜ ಸುಧಾರಣಾ ಕಾರ್ಯಗಳಿಗೆ ಹಲವು ವಿಘ್ನಗಳು ಎದುರಾದರೂ ಸಹ ಅವನು ಅವನ್ನೆಲ್ಲ ಮೀರಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವುದು ಅರ್ಥಪೂರ್ಣವಾಗಿದೆ.

ಶಾಂತಿನಾಥ ದೇಸಾಯಿಯವರ ಕೊನೆಯ ಕಾದಂಬರಿ ʻಓಂ ಣಮೋʼ. ದೇಸಾಯಿಯವರ ಮರಣಾನಂತರ ಈ ಕಾದಂಬರಿ ಪ್ರಕಟವಾಯಿತು. ʻಓಂ ಣಮೋʼ ಕಾದಂಬರಿಯ ಮೂಲಕ ದೇಸಾಯಿಯವರು ಸ್ವಾತಂತ್ರ್ಯೋತ್ತರ ಕಾಲಘಟ್ಟದ ಧಾರವಾಡ ಭಾಗದ ಜೈನ್ ಮನೆತನವೊಂದರ ಏಳು-ಬೀಳುಗಳನ್ನು ತುಂಬ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಈ ಕಾದಂಬರಿಯಲ್ಲೂ ಸಂಪ್ರದಾಯ ಮತ್ತು ಆಧುನಿಕತೆಗಳ ಮುಖಾಮುಖಿಯ ಸಮರ್ಥ ಚಿತ್ರಣವಿದೆ. ಅದೇ ರೀತಿ ಜೈನ್ ಧರ್ಮದ ಕುರಿತು ಸಾಕಷ್ಟು ಜಿಜ್ಞಾಸೆಯೂ ಇದೆ. ಒಟ್ಟಿನಲ್ಲಿ “ಓಂ ಣಮೋ” ಕಾದಂಬರಿಯ ಸೊಗಸನ್ನು ಓದಿಯೇ ಸವಿಯಬೇಕು. “ಓಂ ಣಮೋ” ಕಾದಂಬರಿಗಾಗಿ ದೇಸಾಯಿಯವರಿಗೆ ಮರಣೋತ್ತರವಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆಯಿತು.

ದೇಸಾಯಿಯವರು ಕಥೆ-ಕಾದಂಬರಿ ಮಾತ್ರವಲ್ಲ ವಿಮರ್ಶೆ ಮತ್ತು ಅನುವಾದದಲ್ಲೂ ಕೆಲವು ಒಳ್ಳೆಯ ಕೃತಿಗಳನ್ನು ಕೊಟ್ಟಿದ್ದಾರೆ. ʻಸಾಹಿತ್ಯ ಮತ್ತು ಭಾಷೆʼ, ʻಕನ್ನಡ ಕಾದಂಬರಿ ನಡೆದು ಬಂದ ದಾರಿʼ ಮತ್ತು ʻನವ್ಯ ಸಾಹಿತ್ಯ ದರ್ಶನʼ ಅವರ ವಿಮರ್ಶಾ ಕೃತಿಗಳು. ಮರಾಠಿಯಿಂದ ಕನ್ನಡಕ್ಕೆ ʻರಥಚಕ್ರʼ ಎಂಬ ಕಾದಂಬರಿಯನ್ನು ಅನುವಾದಿಸಿದ್ದಾರೆ. ಯು.ಆರ್. ಅನಂತಮೂರ್ತಿಯವರ ʻಅವಸ್ಥೆʼ ಕಾದಂಬರಿಯನ್ನು ಇಂಗ್ಲಿಷಿಗೆ ಅನುವಾದಿಸಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಗಾಗಿ ʻಭವಾನಿ ಭಟ್ಟಾಚಾರ್ಯʼ ಮತ್ತು ʻಶಾಂತಾ ರಾಮರಾವ್ʼ ಎಂಬ ಮೊನೋಗ್ರಾಫ್ ಗಳನ್ನು ಇಂಗ್ಲಿಷಿನಲ್ಲಿ ಬರೆದಿದ್ದಾರೆ. ಇನ್ನೂ ಹಲವು ಇಂಗ್ಲಿಷ್ ಕೃತಿಗಳನ್ನು ತುಂಬ ಅಚ್ಚುಕಟ್ಟಾಗಿ ಸಂಪಾದಿಸಿ ಕೊಟ್ಟಿದ್ದಾರೆ.

ನವ್ಯ ಸಾಹಿತ್ಯದ ಪ್ರಬಲ ಪ್ರತಿಪಾದಕರಾಗಿದ್ದ ಶಾಂತಿನಾಥ ದೇಸಾಯಿ ಮತ್ತು ರಾಮಚಂದ್ರ ಶರ್ಮ ಕೊನೆಯವರೆಗೂ ನವ್ಯ ಲೇಖಕರಾಗಿದ್ದರು ಎಂಬುದು ಕೆಲವು ವಿಮರ್ಶಕರ ಅಭಿಪ್ರಾಯ. ರಾಮಚಂದ್ರ ಶರ್ಮರ ವಿಷಯದಲ್ಲಿ ಇದನ್ನು ಒಪ್ಪಬಹುದಾದರೂ ಶಾಂತಿನಾಥ ದೇಸಾಯಿಯವರ ವಿಷಯದಲ್ಲಿ ಇದನ್ನು ಒಪ್ಪಲು ಸಾಧ್ಯವಿಲ್ಲ.

ಶಾಂತಿನಾಥ ದೇಸಾಯಿಯವರು ಮೊದಮೊದಲು ಬರೆದ ಕಥೆ-ಕಾದಂಬರಿಗಳಲ್ಲಿ ಸಾಮಾಜಿಕ ಪ್ರಜ್ಞೆ ಕಂಡು ಬರುವುದಿಲ್ಲವೆಂಬುದು ನಿಜವಾದರೂ ನಂತರದ ವರ್ಷಗಳಲ್ಲಿ ಅವರು ನವ್ಯತೆಯನ್ನು ಮೀರಿ ಸ್ಪಷ್ಟ ಸಾಮಾಜಿಕ ಪ್ರಜ್ಞೆಯಿಂದ ಬರೆದರು ಎಂಬುದು ಗಮನಿಸಬೇಕಾದ ಸಂಗತಿ. ʻಭರಮ್ಯಾ ಹೋಗಿ ನಿಖಿಲನಾದದ್ದುʼ ತರಹದ ಕಥೆಗಳು ಮತ್ತು ʻಬೀಜʼಕಾದಂಬರಿಯೇ ಇದಕ್ಕೆ ಸಾಕ್ಷಿ.

ಕನ್ನಡ ಕಥನ ಸಾಹಿತ್ಯದ ಇತಿಹಾಸವನ್ನು ಅವಲೋಕಿಸಿದರೆ ಶಾಂತಿನಾಥ ದೇಸಾಯಿಯವರ ಕಥೆ-ಕಾದಂಬರಿಗಳಲ್ಲಿ ಕಂಡುಬರುವಷ್ಟು ಆಧುನಿಕ ಮತ್ತು ದಿಟ್ಟ ಸ್ತ್ರೀ ಪಾತ್ರಗಳು ಉಳಿದ ಕಥೆ-ಕಾದಂಬರಿಕಾರರಲ್ಲಿ ಕಂಡು ಬರುವುದು ಕಡಿಮೆ. ಮುಂದೆ ತುಂಬ ಸ್ಪಷ್ಟವಾಗಿ ಮತ್ತು ದಿಟ್ಟವಾಗಿ ಸ್ತ್ರೀವಾದಿ ಕಥೆಗಳನ್ನು ಬರೆದು ಖ್ಯಾತರಾದ ವೀಣಾ ಶಾಂತೇಶ್ವರರ ಕಥೆ-ಕಾದಂಬರಿಗಳ ಮೇಲೆ ಶಾಂತಿನಾಥ ದೇಸಾಯಿಯವರ ದಟ್ಟ ಪ್ರಭಾವವಾಗಿರುವುದನ್ನು ಗುರುತಿಸಬಹುದು.

ಶಾಂತಿನಾಥ ದೇಸಾಯಿಯವರು ಕನ್ನಡ ಕಥನ ಸಾಹಿತ್ಯದಲ್ಲಿ ಹತ್ತು ಹಲವು ಹೊಸ ಪ್ರಯೋಗಗಳನ್ನು ನಡೆಸಿದ್ದಾರೆ. ಬಹುಶಃ ಕನ್ನಡದಲ್ಲಿ ನಗರಪ್ರಜ್ಞೆಯ ಹಿನ್ನಲೆಯಲ್ಲಿ ಮೊದಲ ಬಾರಿಗೆ ಕಥೆಗಳನ್ನು ರಚಿಸಿದವರು ದೇಸಾಯಿಯವರು. ಸಂಪ್ರದಾಯ ಮತ್ತು ಆಧುನಿಕತೆಗಳ ನಡುವಿನ ಸಂಘರ್ಷದ ಸಮರ್ಥ ಚಿತ್ರಣವನ್ನು ದೇಸಾಯಿಯವರ ಕಥೆ-ಕಾದಂಬರಿಗಳಲ್ಲಿ ಕಾಣಬಹುದು. ಕನ್ನಡ ಕಥನ ಸಾಹಿತ್ಯದಲ್ಲಿ ಮೊದಲ ಬಾರಿಗೆ ಆಧುನಿಕ ಮತ್ತು ಮಹತ್ವಾಕಾಂಕ್ಷಿ ಸ್ತ್ರೀ ಪಾತ್ರಗಳು ಪ್ರವೇಶಿಸಿದ್ದು ದೇಸಾಯಿಯವರ ಕಥೆ-ಕಾದಂಬರಿಗಳ ಮೂಲಕ ಎಂಬುದು ಗಮನಾರ್ಹ. ಭಾರತೀಯ ಸಾಮಾಜಿಕ ಸಂದರ್ಭದಲ್ಲಿ ಮಧ್ಯಮವರ್ಗದ ಜನಜೀವನದಲ್ಲುಂಟಾದ ಸಾಮಾಜಿಕ ಪಲ್ಲಟಗಳನ್ನು ಸಹ ದೇಸಾಯಿಯವರ ಕಥೆಗಳಲ್ಲಿ ಕಾಣಬಹುದು ಎಂಬುದು ಮಹತ್ವದ ಸಂಗತಿ.

ಕನ್ನಡ ಸಾಹಿತ್ಯಲೋಕಕ್ಕೆ ಇಷ್ಟೆಲ್ಲ ಕೊಡುಗೆ ನೀಡಿದ ದಿಗ್ಗಜರಾದ ಶಾಂತಿನಾಥ ದೇಸಾಯಿಯವರನ್ನು ನಮ್ಮ ತಥಾಕಥಿತ ವಿಮರ್ಶಕರು ಅಲಕ್ಷಿಸಿದ್ದಾರೆ. ಶಾಂತಿನಾಥ ದೇಸಾಯಿಯವರ ಸಾಹಿತ್ಯಕ್ಕೆ ಸಲ್ಲಬೇಕಾದ ಮನ್ನಣೆ ನಮ್ಮ ವಿಮರ್ಶಕರಿಂದ ಸಂದಿಲ್ಲವೆಂಬುದು ವಿಷಾದದ ಸಂಗತಿ. ಶಾಂತಿನಾಥ ದೇಸಾಯಿಯವರಿಗೆ ನ್ಯಾಯವಾಗಿ ಸಿಗಬೇಕಾಗಿದ್ದ ಪ್ರಶಸ್ತಿ-ಪುರಸ್ಕಾರಗಳು, ಗೌರವ-ಸಮ್ಮಾನಗಳು ಅವರು ಬದುಕಿದ್ದಾಗ ಸಿಗಲಿಲ್ಲ.

ʼಓಂ ಣಮೋʼ ಕಾದಂಬರಿಗೆ ಮರಣೋತ್ತರವಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಿಕ್ಕದ್ದು ಸ್ವಲ್ಪಮಟ್ಟಿಗೆ ಸಮಾಧಾನದ ಸಂಗತಿ. ಕನ್ನಡದ ಶ್ರೇಷ್ಠ ವಿಮರ್ಶಕರಾದ ಜಿ.ಎಸ್. ಆಮೂರರು ಮಾತ್ರ ದೇಸಾಯಿಯವರ ಕುರಿತು ಒಳ್ಳೆಯ ವಿಮರ್ಶೆ ಬರೆದಿದ್ದಾರೆ. ದೇಸಾಯಿಯವರ ಕಥನ ಸಾಹಿತ್ಯದ ಮಹತ್ವವನ್ನು ಆಮೂರರು ತುಂಬ ಚೆನ್ನಾಗಿ ಗುರುತಿಸಿ, ಗೌರವಿಸಿದ್ದಾರೆ.

ಜಿ.ಎಸ್.ಆಮೂರರ ʻಭಾರತೀಯ ಸಾಹಿತ್ಯ ನಿರ್ಮಾಪಕರು ಮಾಲಿಕೆ – ಶಾಂತಿನಾಥ ದೇಸಾಯಿʼ, ಟಿ.ಪಿ. ಅಶೋಕರ ʻದೇಸಾಯಿ ಕಥನʼ, ಪ್ರೀತಿ ಶುಭಚಂದ್ರರ ʻಶಾಂತಿನಾಥ ದೇಸಾಯಿʼ, ಗಿರಡ್ಡಿ ಗೋವಿಂದರಾಜರು ಸಂಪಾದಿಸಿದ ʻಶಾಂತಿನಾಥ ದೇಸಾಯಿಯವರ ಸಾಹಿತ್ಯʼ ಮತ್ತು ಸಂಚಯ ಪತ್ರಿಕೆಯ ವಿಶೇಷ ಸಂಚಿಕೆ ʻಮುಕ್ತಛಂದʼಹೊರತು ಪಡಿಸಿ ಕನ್ನಡದಲ್ಲಿ ದೇಸಾಯಿಯವರ ಕುರಿತು ಬೇರೆ ಪುಸ್ತಕಗಳು ಲಭ್ಯವಿಲ್ಲ.

ಶಾಂತಿನಾಥ ದೇಸಾಯಿಯವರ ʻಮುಕ್ತಿʼ, ʻಓಂ ಣಮೋʼ, ʻಸಮಗ್ರ ಕತೆಗಳುʼ ಮತ್ತು ʻಶಾಂತಿನಾಥ ದೇಸಾಯಿ ಅವರ ಕವಿತೆಗಳುʼ ಪುಸ್ತಕಗಳು ಮಾತ್ರ ಸದ್ಯ ಓದುಗರಿಗೆ ಲಭ್ಯ. ದೇಸಾಯಿಯವರ ʻವಿಕ್ಷೇಪʼ, ʻಸೃಷ್ಟಿʼ, ʻಸಂಬಂಧʼ, ʻಅಂತರಾಳʼ ಮತ್ತು ʻಸಮಗ್ರ ವಿಮರ್ಶೆʼ ಪುಸ್ತಕಗಳು ಮರುಮುದ್ರಣವಾಗಿ ಓದುಗರಿಗೆ ಸಿಗಬೇಕಾದ ಅಗತ್ಯವಿದೆ. ಶಾಂತಿನಾಥ ದೇಸಾಯಿಯವರಂತಹ ಶ್ರೇಷ್ಠ ಲೇಖಕರ ಕೃತಿಗಳು ಮಾರುಕಟ್ಟೆಯಲ್ಲಿದ್ದು ಸದಾ ಓದುಗರಿಗೆ ಸಿಗುವಂತಿರಬೇಕು. ಶಾಂತಿನಾಥ ದೇಸಾಯಿಯವರ ಕೃತಿಗಳು ಮತ್ತೆ ಮರುಮುದ್ರಣವಾಗಿ ಓದುಗರಿಗೆ ದೊರೆಯುವಂತಾಗಲಿ. ಶಾಂತಿನಾಥ ದೇಸಾಯಿಯವರ ಕೃತಿಗಳು ಮರು ಓದಿನ ಮೂಲಕ ಮತ್ತೆ ಚರ್ಚೆಗೊಳಗಾಗಲಿ. ಇದೇ ಶಾಂತಿನಾಥ ದೇಸಾಯಿಯವರಿಗೆ ನಿಜವಾಗಿಯೂ ನಾವು ಸಲ್ಲಿಸಬಹುದಾದ ಗೌರವ.