ಇಂಗ್ಲೆಂಡಿನಲ್ಲೂ ಜನಾಂಗಭೇದ, ಭಾರತದ ಜಾತಿಭೇದದಷ್ಟೇ ತೀವ್ರವಾಗಿತ್ತು ಎನ್ನುವುದರಲ್ಲಿ ಸಂಶಯವೇ ಇಲ್ಲ. ಆದರೆ ಶತಮಾನಗಳು ಕಳೆದಂತೆ, ವೈಜ್ಞಾನಿಕ ಮತ್ತು ತಾಂತ್ರಿಕ ಬೆಳವಣಿಗೆಗಳು ಆದಂತೆ, ನಗರೀಕರಣ ಹೆಚ್ಚಾದಂತೆ, ಅಧಿಕೃತವಾಗಿ ಜನಾಂಗಭೇದವನ್ನು ನಿಷೇಧಿಸಲಾಗಿದೆ, ಜನಾಂಗಭೇದವನ್ನು ಮಾಡಿದವರ ಮೇಲೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಕಾನೂನುಗಳು ಬಂದಿವೆ. ‘ಪಾಕಿʼಎನ್ನುವ ಶಬ್ದ, ಪಾಕಿಸ್ಥಾನೀ ಎನ್ನುವ ಅರ್ಥಕೊಡುತ್ತದೆ ಎಂದು ಕಂಡರೂ, ಅದೊಂದು ರೇಸಿಸ್ಟ್ ಶಬ್ದ, ಆ ಶಬ್ದವನ್ನು ಯಾರಾದರೂ ಭಾರತ-ಉಪಖಂಡದಿಂದ ಬಂದವರಿಗೆ ಹೇಳಿದರೆ, ಅವರ ಮೇಲೆ ಕ್ರಮ ತೆಗೆದುಕೊಳ್ಳಲು ಕಾನೂನುಗಳಿವೆ.
ಕೇಶವ ಕುಲಕರ್ಣಿ ಬರೆಯುವ ‘ಇಂಗ್ಲೆಂಡ್‌ ಪತ್ರ’

 

2005ನೇ ಇಸ್ವಿ. ನಾನು ಇಂಗ್ಲೆಂಡಿಗೆ ಬಂದು ಒಂದು ವರ್ಷವಾಗಿತ್ತು. ನಾನಾಗ ಬಾರ್ನೆಟ್ ಎನ್ನುವ ಲಂಡನ್ನಿನ ಉತ್ತರ ಭಾಗದ ಪ್ರದೇಶದ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದೆ. ನಾನು ದಿನವೂ ಟ್ಯೂಬ್‌ನಲ್ಲಿ (ಲಂಡನ್ನಿನ ಲೋಕಲ್ ಟ್ರೇನಿಗೆ ಟ್ಯೂಬ್ ಎಂದು ಕರೆಯುತ್ತಾರೆ) ಸಂಚರಿಸುತ್ತಿದ್ದೆ. ನಾನು ಬಾರ್ನೆಟ್ ಸ್ಟೇಷನ್ನಿನಲ್ಲಿ ಇಳಿದು ಆಸ್ಪತ್ರೆಗೆ ತಲುಪುತ್ತಿದ್ದಂತೇ ಸೆಂಟ್ರಲ್ ಲಂಡನ್ನಿನಲ್ಲಿ ಬಾಂಬ್ ಧಾಳಿಯಾದ ಸುದ್ದಿ ಹಬ್ಬಿತ್ತು. ಈಗಿನಂತೆ ಆಗ ಟ್ವಿಟರ್ ಆಗಲಿ ವಾಟ್ಸ್‌ಆ್ಯಪ್ ಆಗಲಿ ಇರಲಿಲ್ಲ. ಬಿ.ಬಿ.ಸಿ ನ್ಯೂಸ್ ಚಾನೆಲ್ಲಿನಲ್ಲಿ ಬಿಸಿಬಿಸಿ ಸುದ್ದಿ ಅದೇ ತಾನೆ ಹೊರಹೊಮ್ಮುತ್ತಿತ್ತು. ನಾನು ಅಂದು ಇನ್ನೊಂದು ಹತ್ತು ನಿಮಿಷ ತಡವಾಗಿ ಮನೆಯಿಂದ ಹೊರಟಿದ್ದರೆ, ನಾನೂ ಆ ಬಾಂಬ್ ದಾಳಿಯಾದ ಟ್ರೇನಿನಲ್ಲಿ ಇರುತ್ತಿದ್ದೆ, ಸತ್ತು ಹೋಗುತ್ತಿದ್ದೆನೋ, ಇಲ್ಲ ವಿಕಲಾಂಗನಾಗಿ ಬದುಕಿ ಉಳಿದಿರುತ್ತಿದ್ದೆನೋ ಗೊತ್ತಿಲ್ಲ.

ಅದಿರಲಿ, ಲಂಡನ್ ಬಾಂಬ್ ದಾಳಿಯಾಗಿ ಎರಡು ವಾರ ಕಳೆದಿರಬಹುದು. ನಾನು ಬಾರ್ನೆಟ್ ಟ್ಯೂಬ್ ಸ್ಟೇಷನ್ ಹತ್ತಿರದ ಬಸ್ ಸ್ಟಾಪಿನಲ್ಲಿ ಬಾರ್ನೆಟ್ ಆಸ್ಪತ್ರೆಗೆ ಹೋಗಲು ಬಸ್ಸಿಗಾಗಿ ಕಾಯುತ್ತಿದ್ದೆ. ಬೆಳಗಿನ ಜಾವ ಎಂಟು ಗಂಟೆ ಇರಬಹುದು, ಆ ಚಿಕ್ಕ ನಿಲ್ದಾಣದಲ್ಲಿ ನಾನು ಒಬ್ಬನೇ ಇದ್ದೆ. ಎರಡು ಮೋಟರ್ ಬೈಕುಗಳು ಜೋರಾಗಿ ಬಂದು ನನ್ನ ಮುಂದೆಯೇ ಅನತಿದೂರದಲ್ಲಿ ಬಂದು ನಿಂತವು. ಇಬ್ಬರು ತಮ್ಮ ಹೆಲ್ಮೆಟ್ ತೆಗೆದು ನನ್ನ ಮುಖದ ಮೇಲೆ ಉಗಿದು, ‘ಪಾಕಿʼ ಎಂದು ಬಯ್ದರು. ನನಗೆ ಏನಾಗುತ್ತಿದೆ ಎಂದೇ ಗೊತ್ತಾಗಲಿಲ್ಲ, ಅಷ್ಟೊಂದು ಶಾಕ್ ನಲ್ಲಿದ್ದೆ. ಅವರು ನನಗೆ ಇನ್ನೇನು ಮಾಡಲಿದ್ದರೋ, ಸದ್ಯ, ಅದೇ ಸಮಯಕ್ಕೆ ಹಿಂದಿನಿಂದ ಬಸ್ಸು ಬಂತು. ಅವರು ಹೊರಟು ಹೋದರು. ನಾನು ನನ್ನ ಮುಖದ ಮೇಲಿನ ಎಂಜಲನ್ನು ಒರೆಸಿಕೊಂಡು ಬಸ್ಸೇರಿದೆ.

ಭಾರತದಲ್ಲಿ ಹುಟ್ಟಿ ಬೆಳೆದು ಉನ್ನತ ಶಿಕ್ಷಣಕ್ಕೆ-ಕೆಲಸಕ್ಕೆ ಇಂಗ್ಲೆಂಡಿಗೆ ಬರುವವರೆಗೆ ವರ್ಣಭೇದ/ಜನಾಂಗಭೇದ (ರೇಸಿಸಂ)ದ ಬಗ್ಗೆ ಅಲ್ಲಲ್ಲಿ ಓದಿ, ಕೆಲವು ಸಿನೆಮಾಗಳಲ್ಲಿ ನೋಡಿ ಗೊತ್ತಿತ್ತೇ ಹೊರತು, ಜನಾಂಗಭೇದದ ಆಳ ಅಗಲಗಳು ಮತ್ತು ಇತಿಹಾಸ ಒಂಚೂರೂ ಗೊತ್ತಿರಲಿಲ್ಲ. ರೇಸಿಸಂನ ಅನುಭವವೂ ಆಗಿರಲಿಲ್ಲ. ನಮಗೆ ಪಠ್ಯದಲ್ಲೂ ಜನಾಂಗಭೇದದ ಬಗ್ಗೆ ಹೆಚ್ಚಿನ ವಿವರಗಳು ಇರಲಿಲ್ಲ. ನಮ್ಮ ಶಿಕ್ಷಕರೂ ಅದರ ಬಗ್ಗೆ ಎಂದೂ ಮಾತಾಡಿದ್ದಿಲ್ಲ. ಕರ್ನಾಟಕದಲ್ಲಿ ನಾನು ಓದಿದ ಎಲ್ಲ ಊರುಗಳಲ್ಲೂ ಎಲ್ಲರೂ ಒಂದೇ ಜನಾಂಗಕ್ಕೆ ಸೇರಿದ್ದವರಾಗಿದ್ದರಿಂದ ಜನಾಂಗಭೇದ ಇರುವುದು ಸಾಧ್ಯವೇ ಇರಲಿಲ್ಲ, ಹಾಗಾಗಿ ಜನಾಂಗಭೇದದ ಬಗ್ಗೆ ಶಿಕ್ಷಣದಲ್ಲಿ ಪಠ್ಯವನ್ನು ಸೇರಿಸುವ ಅವಶ್ಯಕತೆಯೇ ಇರಲಿಲ್ಲ ಎಂದು ಸಮಾಧಾನ ಮಾಡಿಕೊಳ್ಳಬಹುದು.

ಆದರೆ ಲಿಂಗಭೇದ, ಜಾತಿಭೇದ, ಧರ್ಮಭೇದ ಮತ್ತು ಭಾಷಾಭೇದಗಳು ಬದುಕಿನ ಹೆಜ್ಜೆಹೆಜ್ಜೆಗೂ, ಮಾತುಮಾತಿಗೂ ಇರುತ್ತಿತ್ತಲ್ಲ. ಅವುಗಳ ಬಗೆಗೂ ಕೂಡ ನಮಗೆ ಪಠ್ಯವಿರಲಿಲ್ಲ, ಶಾಲೆಯಲ್ಲಿ ಯಾರೂ ಪಾಠ ಮಾಡಲಿಲ್ಲ, ಯಾವ ಪರೀಕ್ಷೆಗೂ ಅವುಗಳ ಬಗ್ಗೆ ಪ್ರಶ್ನೆ ಕೇಳುತ್ತಿರಲಿಲ್ಲ. ಅಸಮಾನತೆಯ ಬಗ್ಗೆ, ಸಮಾನತೆಯ ಬಗ್ಗೆ ಶಾಲೆಯಲ್ಲಿ ಒಂದೇ ಒಂದು ಅಧ್ಯಾಯವಿರಲಿಲ್ಲ. ಬ್ರಾಹ್ಮಣರು ಎಲ್ಲರಿಗಿಂತ ಉತ್ಕೃಷ್ಟ ಜಾತಿಯವರು ಎಂದು ತಾವೇ ನಿರ್ಧಾರಮಾಡಿಕೊಂಡು ಸಮಾಜವನ್ನು ನಂಬಿಸಿದ್ದರು. `ಹೆಂಗಸರ ಬುದ್ಧಿ ಮೊಣಕಾಲ ಕೆಳಗೆ,` ಎಂದು ಶಿಕ್ಷಕರೇ ಶಾಲೆಯಲ್ಲಿ ಜೋರಾಗಿ ಹೇಳಿ ನಗುತ್ತಿದ್ದರು. ಸಂಸ್ಕೃತ ಭಾಷೆಯು ಕನ್ನಡ ಮತ್ತು ಮರಾಠಿ ಭಾಷೆಗಿಂತ ಮಿಗಿಲು ಎನ್ನುವಂತೆ ಬೋಧಿಸಲಾಗುತ್ತಿತ್ತು.

ದಕ್ಷಿಣ ಭಾಗದ ಕನ್ನಡಿಗರಿಗೆ ಉತ್ತರ ಕರ್ನಾಟಕದ ಕನ್ನಡಿಗರನ್ನು ಕಂಡರೆ ಅಸಡ್ಡೆ ಎನ್ನುವಂಥ ಭಾವನೆಯಿತ್ತು. ಉತ್ತರ ಭಾರತದವರಿಗೆ ದಕ್ಷಿಣ ಭಾರತದವರನ್ನು ಕಂಡರೆ ‘ಮದ್ರಾಸಿʼ ಎಂದು ಅರೆ-ಜನಾಂಗೀಯ ನಿಂದನೆ ದಿನವೂ ಕಿವಿಗೆ ಬೀಳುತ್ತಿತ್ತು. ಪೂರ್ವ ರಾಜ್ಯಗಳ ಜನರನ್ನು ಕಂಡರೆ ಪೂರ್ಣಪ್ರಮಾಣದ ಜನಾಂಗೀಯ ನಿಂದನೆ ಸರ್ವೇಸಾಮಾನ್ಯವಾಗಿತ್ತು, ಅವರಿಗೆ `ಚಿಂ..ʼ ಎಂದೋ, ‘ನೇಪಾಲೀ, ಚೈನೀʼ ಎಂದೋ ಅವ್ಯಾಚ್ಯವಾಗಿ ಕರೆಯುವುದು ನಡೆಯುತ್ತಿತ್ತು.

ಎರಡು ಮೋಟರ್ ಬೈಕುಗಳು ಜೋರಾಗಿ ಬಂದು ನನ್ನ ಮುಂದೆಯೇ ಅನತಿದೂರದಲ್ಲಿ ಬಂದು ನಿಂತವು. ಇಬ್ಬರು ತಮ್ಮ ಹೆಲ್ಮೆಟ್ ತೆಗೆದು ನನ್ನ ಮುಖದ ಮೇಲೆ ಉಗಿದು, ‘ಪಾಕಿʼ ಎಂದು ಬಯ್ದರು. ನನಗೆ ಏನಾಗುತ್ತಿದೆ ಎಂದೇ ಗೊತ್ತಾಗಲಿಲ್ಲ, ಅಷ್ಟೊಂದು ಶಾಕ್ ನಲ್ಲಿದ್ದೆ.

ಇಂಗ್ಲೆಂಡಿನಲ್ಲೂ ಜನಾಂಗಭೇದ, ಭಾರತದ ಜಾತಿಭೇದದಷ್ಟೇ ತೀವ್ರವಾಗಿತ್ತು ಎನ್ನುವುದರಲ್ಲಿ ಸಂಶಯವೇ ಇಲ್ಲ. ಆದರೆ ಶತಮಾನಗಳು ಕಳೆದಂತೆ, ವೈಜ್ಞಾನಿಕ ಮತ್ತು ತಾಂತ್ರಿಕ ಬೆಳವಣಿಗೆಗಳು ಆದಂತೆ, ನಗರೀಕರಣ ಹೆಚ್ಚಾದಂತೆ, ಅಧೀಕೃತವಾಗಿ ಜನಾಂಗಭೇದವನ್ನು ನಿಷೇಧಿಸಲಾಗಿದೆ, ಜನಾಂಗಭೇದವನ್ನು ತೋರಿಸಿದವರ ಮೇಲೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಕಾನೂನುಗಳು ಬಂದಿವೆ. ‘ಪಾಕಿʼಎನ್ನುವ ಶಬ್ದ, ಪಾಕಿಸ್ಥಾನೀ ಎನ್ನುವ ಅರ್ಥಕೊಡುತ್ತದೆ ಎಂದು ಕಂಡರೂ, ಅದೊಂದು ರೇಸಿಸ್ಟ್ ಶಬ್ದ, ಆ ಶಬ್ದವನ್ನು ಯಾರಾದರೂ ಭಾರತ-ಉಪಖಂಡದಿಂದ ಬಂದವರಿಗೆ ಹೇಳಿದರೆ, ಅವರ ಮೇಲೆ ಕ್ರಮ ತೆಗೆದುಕೊಳ್ಳಲು ಕಾನೂನುಗಳಿವೆ. ಹಾಗೆಯೇ ಆಫ್ರಿಕಾ ಮೂಲದಿಂದ ಬಂದವರಿಗೆ, ‘ನಿ..ʼ ಶಬ್ದ ಪ್ರಯೋಗಿಸಿದರೆ, ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ.

ಇದೆಲ್ಲ ಅಧೀಕೃತವಾಯಿತು. ಆದರೆ ಅನಧೀಕೃತವಾಗಿ ಜನಾಂಗಭೇದ ಇನ್ನೂ ಗುಪ್ತಗಾಮಿನಿಯಾಗಿ ಹರಿಯುತ್ತಿದೆ. ಕೆಲಸದಲ್ಲಿ, ದಾರಿಯಲ್ಲಿ, ಅಂಗಡಿಗಳಲ್ಲಿ, ರೆಸ್ಟೋರಂಟುಗಳಲ್ಲಿ ಏಶಿಯನ್ನರು ಮತ್ತು ಆಫ್ರಿಕನ್ನರು ಆಗಾಗ ಜನಾಂಗೀಯ ನಿಂದನೆಗೆ ನೇರವಾಗಿಯೋ ಅಪರೋಕ್ಷವಾಗಿಯೋ ಒಳಗಾಗುತ್ತಲೇ ಇರುತ್ತಾರೆ. ಬಿಳಿಯರೇ ಶ್ರೇಷ್ಟ ಜನಾಂಗ (white supremacist) ಎಂದು ನಂಬಿಕೊಂಡು ಉಗ್ರವಾದ, ಭಯೋತ್ಪಾದನೆ ಮಾಡುವವರೆಗೂ ಹೋಗುವ ಜನರು ಮತ್ತು ಸಂಘಗಳು ಇಲ್ಲಿ ಬೇಕಾದಷ್ಟಿವೆ.

ಕ್ಲಿನಿಕ್ಕಿಗೆ ಮತ್ತು ಆಸ್ಪತ್ರೆಗೆ ಬರುವ ಕೆಲವರು ತಮಗೆ ಬಿಳಿ-ವೈದ್ಯರೇ ಬೇಕೆಂದು ಕೇಳಿಕೊಳ್ಳುತ್ತಾರೆ. ಕಂದು ಮತ್ತು ಕಪ್ಪು ಜನಾಂಗದ ವೈದ್ಯರ ಮೇಲೆ ದೂರುಗಳೂ ಹೆಚ್ಚು ಕೇಸುಗಳೂ ಹೆಚ್ಚು, ಶಿಕ್ಷೆಗಳೂ ಹೆಚ್ಚು, ಅವರನ್ನು ವೈದ್ಯರ ಪಟ್ಟಿಯಿಂದ ತೆಗೆದುಹಾಕುವ ಸಾಧ್ಯತೆಗಳೂ ಹೆಚ್ಚು.

ಕೆಲವು ವರ್ಷಗಳ ಹಿಂದೆ ಡಾ. ಹಡೀಜಾ ಬಾವಾ-ಗಾರ್ಬಾ ಎನ್ನುವ ಕಪ್ಪುಜನಾಂಗದ ವೈದ್ಯೆಗೆ, ಅವರು ಕೆಲಸದ ಸಮಯದಲ್ಲಿ ಮಾಡಿದ ತಪ್ಪಿನಿಂದಾಗಿ, ಕೋರ್ಟು ಜೈಲು ಶಿಕ್ಷೆಯನ್ನು ಕೊಟ್ಟಿತು. ವೈದ್ಯಕೀಯ ನ್ಯಾಯಮಂಡಲಿಯು ಒಂದು ವರ್ಷ ವೈದ್ಯಕೀಯ ಕೆಲಸದಿಂದ ವಜಾ ಮಾಡಿತು. ಆದರೆ ‘ಜನರಲ್ ಮೆಡಿಕಲ್ ಕೌನ್ಸಿಲ್ʼ (ಈ ದೇಶದಲ್ಲಿ ವೈದ್ಯರನ್ನು ನಿಯಂತ್ರಿಸುವ ಸಂಸ್ಥೆ), ವೈದ್ಯಕೀಯ ನ್ಯಾಯಮಂಡಲಿಯ ನಿರ್ಣಯಕ್ಕೆ ಸವಾಲು ಹಾಕಿ, ಬಾವಾ-ಗರ್ಬಾ ಅವರನ್ನು ವೈದ್ಯರ ಪಟ್ಟಿಯಿಂದ ಶಾಶ್ವತವಾಗಿ ತೆಗೆದುಹಾಕುವ ನಿರ್ಧಾರ ಮಾಡಿ ಗೆದ್ದಿತು. (ಈಗ ಆ ತೀರ್ಪಿನ ವಿರುದ್ಧ ಬಾವಾ-ಗಾರ್ಬಾ ಗೆದ್ದಿದ್ದಾರೆ). ಬ್ಯಾಪಿಯೋ (British Association of Physicians of Indian Origin) ಸಂಸ್ಥೆಯು, ಬಾವಾ-ಗಾರ್ಬಾ ಬಿಳಿ ಜನಾಂಗದವಳಾಗಿದ್ದರೆ ‘ಜನರಲ್ ಮೆಡಿಕಲ್ ಕೌನ್ಸಿಲ್ʼ ಇದೇ ನಿರ್ಧಾರವನ್ನು ತೆಗೆದುಕೊಳ್ಳುತ್ತಿತ್ತೇ ಎಂದು ಪ್ರಶ್ನಿಸಿತು. ವೈದ್ಯಸಂಘಟನೆಗಳಲ್ಲಿ ಮತ್ತು ಆಸ್ಪತ್ರೆಗಳಲ್ಲಿ ಗುಪ್ತಗಾಮಿನಿಯಾಗಿ ಹರಿಯುತ್ತಿರುವ ಜನಾಂಗೀಯ ಭೇದದ ಬಗ್ಗೆ ಗಂಭೀರ ಸ್ವರೂಪದ ಚರ್ಚೆಗಳಾದವು. ‘ಜನರಲ್ ಮೆಡಿಕಲ್ ಕೌನ್ಸಿಲ್ʼಅನ್ನು ಖಂಡಿಸಿ ಪತ್ರಿಕೆಗಳಲ್ಲಿ, ಸಾಮಾಜಿಕ ತಾಣಗಳಲ್ಲಿ ಬರೆದರು.

ಇತ್ತೀಚೆಗೆ ಮುಗಿದ ಯುರೋಕಪ್ ಫುಟ್‍ಬಾಲ್ ಆಟದಲ್ಲಿ, ಇಂಗ್ಲೆಂಡ್ ತಂಡವು ಇಟಲಿ ತಂಡದ ವಿರುದ್ಧ ಪೆನಲ್ಟಿ ಶೂಟ್‌ನಲ್ಲಿ ಸೋತಿತು. ಪೆನೆಲ್ಟಿ ಶೂಟ್‌ನಲ್ಲಿ ತಪ್ಪಾಗಿ ಹೊಡೆದವರು ಕಪ್ಪುಜನಾಂಗಕ್ಕೆ ಸೇರಿದವರಾಗಿದ್ದರಿಂದ ಸಾಮಾಜಿಕ ತಾಣಗಳಲ್ಲಿ ಜನಾಂಗನಿಂದನೆಯ ಸುರಿಮಳೆಯಾಯಿತು.

ಇಂಥ ಘಟನೆಗಳು ದಿನವೂ ನಡೆಯುತ್ತಲೇ ಇರುತ್ತವೆ, ಆಗಾಗ ವರದಿಯಾಗುತ್ತವೆ, ಕೆಲವೊಮ್ಮೆ ರಾಷ್ಟ್ರೀಯ ಅಂತರರಾಷ್ಟ್ರೀಯ ಸುದ್ದಿಯಾಗುತ್ತವೆ, ಮೋರ್ಚಾಗಳು ನಡೆಯುತ್ತವೆ, ಮಾಧ್ಯಮಗಳಲ್ಲಿ ಚರ್ಚೆಗಳಾಗುತ್ತವೆ. ಜನಾಂಗೀಯ ನಿಂದನೆ ಮತ್ತು ತಾರತಮ್ಯವನ್ನು ಕಡಿಮೆ ಮಾಡುವ ದಿಕ್ಕಿನಲ್ಲಿ, ಸಮಾನತೆಯನ್ನು ತರುವ ನಿಟ್ಟಿನಲ್ಲಿ ಕಾನೂನುಗಳು, ಪತ್ರಿಕೆಗಳು, ದೃಶ್ಯಮಾಧ್ಯಮಗಳು ನಿಷ್ಠೆಯಿಂದ ಕೆಲಸ ಮಾಡುತ್ತಿವೆ.

ಇತ್ತೀಚೆಗೆ ನಡೆದ ಯುರೋ ಕಪ್ ಫುಟ್‌ಬಾಲ್ ಪಂದ್ಯದಲ್ಲಿ ಇಂಗ್ಲೆಂಡಿನ ಆಟಗಾರರು ಸಮಾನತೆಯ ಬಗ್ಗೆ, ತಾರತಮ್ಯದ ಅಳಿವಿನ ಬಗ್ಗೆ ಮಂಡಿಯೂರಿ ಕುಳಿತು ಸಾಂಕೇತಿಕವಾಗಿ ಬಿಂಬಿಸಿ, ಜನರಲ್ಲಿ ಅರಿವನ್ನು ಹೆಚ್ಚಿಸುವ ಪ್ರಯತ್ನ ಮಾಡಿದರು. ಆದರೆ ಅವೆಲ್ಲಕ್ಕಿಂತ ಮುಖ್ಯವಾಗಿ, ಜನಾಂಗಭೇದದ ಬಗ್ಗೆ, ಲಿಂಗ ತಾರತಮ್ಯದ ಬಗ್ಗೆ, ಸಾಮಾಜಿಕ ಸಮಾನತೆಯ ಬಗ್ಗೆ ಪ್ರಾಥಮಿಕ ಶಾಲೆಯಿಂದಲೇ ಶಿಕ್ಷಣ ಶುರುವಾಗುತ್ತದೆ. ಸೆಕೆಂಡರಿ ಶಾಲೆಗಳಲ್ಲಿ ಕೂಡ ಮುಂದುವರೆಯುತ್ತದೆ. ಇಂಗ್ಲೆಂಡಿನ ಶಾಲೆಗಳಲ್ಲಿ PSHE (Personal Social Health Education) ಎನ್ನುವ ವಿಷಯವನ್ನು ಕಲಿಸಲಾಗುತ್ತದೆ (ಈ ವಿಷಯಕ್ಕೆ ಪರೀಕ್ಷೆ ಇರುವುದಿಲ್ಲ) ಮತ್ತು ಪ್ರತಿ ವಾರವೂ ಒಂದಾದರೂ ಪಿರಿಯಡ್ ಇರುತ್ತದೆ. ಈ ಪಿರಿಯಡ್ಡಿನಲ್ಲಿ ಜನಾಂಗಭೇದ ಮತ್ತು ಲಿಂಗ ಸಮಾನತೆಯ ಬಗ್ಗೆ ವಿವಿಧ ನಿಟ್ಟಿನಲ್ಲಿ ಪಾಠಮಾಡುತ್ತಾರೆ, ಮಕ್ಕಳ ನಡುವೆ ಚರ್ಚೆಯನ್ನು ಏರ್ಪಡಿಸುತ್ತಾರೆ, ಡಾಕ್ಯುಮೆಂಟರಿಗಳನ್ನು ತೋರಿಸಿ ವಿವರಿಸುತ್ತಾರೆ. ಚಿಕ್ಕ ವಯಸ್ಸಿನಿಂದಲೇ ಮಕ್ಕಳಲ್ಲಿ ಸಮಾನತೆಯಯ ಬಗ್ಗೆ, ಸಮಾಜದ ತಾರತಮ್ಯಗಳ ಬಗ್ಗೆ ಅರಿವನ್ನು ಮೂಡಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ.

ಕೆಲವೇ ವರ್ಷಗಳ ಹಿಂದೆ ಬಂದ ಕನ್ನಡ ಸಿನೆಮಾ `ದೃಶ್ಯ` ಸಿನೆಮಾದಲ್ಲಿ ಪ್ರಶಾಂತ್ ಸಿದ್ದಿ (ನಾಯಕನ ಸಹಾಯಕನಾಗಿ ಕೆಲಸ ಮಾಡುವವನ ಪಾತ್ರ)ಯವರನ್ನು ಚಿತ್ರದ ನಾಯಕ (ರವಿಚಂದ್ರನ್) ಕರೆಯುವುದೇ `ನಿ..` ಎಂದು. ಒಂದು ಸಿನೆಮಾ ಮಾಡಲು ನೂರಾರು ಜನ ಕೆಲಸ ಮಾಡುತ್ತಾರೆ, ಅದರಲ್ಲಿ ಒಬ್ಬನೇ ಒಬ್ಬನಿಗೂ ಆ `ನಿ..` ಶಬ್ದ ರೇಸಿಸ್ಟ್ ಶಬ್ದ ಎಂದು ಗೊತ್ತಿರಲಿಲ್ಲವೇ? ಆಷ್ಟೇ ಅಲ್ಲ, ಸಿನೆಮಾಗೆ ಸೆನ್ಸಾರ್ ಸರ್ಟಿಫಿಕೇಟ್ ಕೊಡುವವರಿಗೂ ಗೊತ್ತಿರಲಿಲ್ಲವೇ? ಭಾರತೀಯ ಶಿಕ್ಷಣದಲ್ಲಿ ಜನಾಂಗಭೇದದ ವಿಷಯವು ಅಡಕವಾಗಿದ್ದರೆ ಇಂಥ ದೊಡ್ಡ ಪ್ರಮಾದವಾಗುತ್ತಿರಲಿಲ್ಲ.

‘ಫ್ರೆಂಚ್ ಬಿರಿಯಾನಿʼ ಎನ್ನುವ ಕನ್ನಡ ಸಿನೆಮಾ ಇದೆ, ಅದರಲ್ಲಿ ಇರುವ ಬಿಳಿಜನಾಂಗದ ಯುರೋಪಿಯನ್ ಮಾತನಾಡುತ್ತಾ ಪೋಲೀಸ(ರಂಗಾಯಣ ರಘು)ನಿಗೆ ಹೇಳುತ್ತಾನೆ, ‘ನೀನು ರೇಸಿಸ್ಟ್ʼ ಎಂದು. ಅದಕ್ಕೆ ಉತ್ತರವಾಗಿ ಪೋಲೀಸ್, ‘ಹೌದು, ನಾನು ರೇಸಿಸ್ಟ್, ನನ್ನ ಹೆಂಡತಿಯೂ ರೇಸಿಸ್ಟ್, ಮಗನೂ ರೇಸಿಸ್ಟ್, ಟೋಟಲೀ ರೇಸಿಸ್ಟ್ ಫ್ಯಾಮಿಲಿ,ʼ ಎಂದು ಖುಷಿಯಲ್ಲಿ ಹೇಳುತ್ತಾನೆ. ಯುರೋಪಿಯನ್ನನಿಗೆ ದಿಗಿಲಾಗುತ್ತದೆ. ಪೋಲೀಸನಿಗೆ ‘ರೇಸಿಸ್ಟ್ʼ ಎಂದರೆ ‘ರೇಸಿನಲ್ಲಿ ಓಡುವವʼ, ಅವನಿಗೆ ರೇಸಿಸ್ಟ್ ಶಬ್ದದ ಅರ್ಥವೇ ಗೊತ್ತಿಲ್ಲ. ರೇಸಿಸಂ ಎಂದರೇನು, ಜನಾಂಗೀಯ ನಿಂದನೆ ಎಂದರೇನು ಎನ್ನುವುದು ಬಹಳಷ್ಟು ಭಾರತೀಯರಿಗೆ ಇನ್ನೂ ಏನೂ ಗೊತ್ತಿಲ್ಲ ಎನ್ನುವುದನ್ನು ಹಾಸ್ಯದ ರೂಪದಲ್ಲಿ ಸೂಕ್ಷ್ಮವಾಗಿ ಆ ಒಂದು ದೃಶ್ಯದಲ್ಲಿ ಮಾರ್ಮಿಕವಾಗಿ ಹೇಳಲಾಗಿದೆ.