ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. ಕೆಂಡಸಂಪಿಗೆ ಪರದೆಯ ಎಡ ತುದಿಯಲ್ಲಿ ದಿನದ ಕವಿತೆ ವಿಭಾಗದಲ್ಲಿ ನೀವು ಈ ಕವಿತೆಗಳನ್ನು ಓದಬಹುದು. ಕವಿಗಳು, ಕವಿತೆಗಳನ್ನು ಇಷ್ಟಪಟ್ಟು ಅನುವಾದಿಸಿದವರು ತಮ್ಮ ಬರಹಗಳನ್ನು ಇ-ಮೇಲ್ ಮೂಲಕ ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. ಇಂದು ರಾಜು ಹೆಗಡೆ ಬರೆದ ಕವಿತೆ.

 

 

 

 

ಇಂಡಿಯಾ ಮತ್ತು  ಈರುಳ್ಳಿ

ನಾನು ಈರುಳ್ಳಿ ಸುಲಿಯುತ್ತಿದ್ದೆ
ಗೆಳೆಯ ಹೇಳುತ್ತಿದ್ದ
ಮುಸ್ಲಿಮರನ್ನು ಮುಗಿಸಬೇಕು
ಒಂದು ಸಿಪ್ಪೆಯ ಸುಲಿದೆ
ಕ್ರೈಸ್ತರನ್ನು ಕಳಿಸಬೇಕು
ಇನ್ನೊಂದು ತೆಗೆದೆ
ಹಿಂದುಳಿದವರನ್ನು ಹಿಮ್ಮೆಟ್ಟಿಸಬೇಕು
ಮತ್ತೊಂದು ತೆಗೆದೆ
ಹೀಗೆ ನಾನು ತೆರೆಯುತ್ತ ಹೋದೆ
ಗೆಳೆಯ ಸುಲಿಯುತ್ತ ಹೋದ

ಕೊನೆಗೆ ಉಳಿದಿದ್ದು
ನನ್ನ ಅವನ ಕಣ್ಣುಗಳಲ್ಲಿ ನೀರು ಮಾತ್ರ