ಹನ್ನೆರಡನೆಯ ಶತಮಾನದಲ್ಲಿ ನಡೆದ ಚರ್ಚೆಗಳು ಇಂದಿಗೂ ಅನೇಕ ಸಂದರ್ಭಗಳಲ್ಲಿ ಉಲ್ಲೇಖವಾಗುತ್ತವೆ.  ‘ಸ್ವಾತಂತ್ರ್ಯ’ ಎಂಬ ಪರಿಕಲ್ಪನೆಗೆ ಹೆಚ್ಚು ಜೀವ ತುಂಬಿದ ಸಂದರ್ಭ ಅದಾಗಿತ್ತು. ಜಾತಿಗಳ ನಡುವಿನ ಅಂತರವನ್ನು, ವರ್ಗಗಳ ನಡುವಿನ ಅಂತರವನ್ನು ತೊಡೆದು ಹಾಕಬೇಕೆಂಬ ಆಶಯವು ಉಜ್ವಲವಾಗಿದ್ದ ಆ ಕಾಲದಲ್ಲಿ ಸ್ತ್ರೀಯರ ಕುರಿತೂ ಇರುವ ನಿಲುವುಗಳು ಬದಲಾಗಬೇಕು ಎಂಬ ಆಗ್ರಹಗಳು ಕೇಳಿಬಂದಿದ್ದವು. ಆ ಸಂದರ್ಭದಲ್ಲಿ  ಶರಣೆಯರ ವಚನಗಳಲ್ಲಿ ಸ್ವಾತಂತ್ರ್ಯದ ಪರಿಕಲ್ಪನೆಯು ಯಾವ ರೀತಿಯಲ್ಲಿ ಮೂಡಿಬಂದಿದೆ ಎಂಬುದನ್ನು ಇಲ್ಲಿ ಸುನೀತಾ ಮೂರಶಿಳ್ಳಿ ಅವರು ವಿವರಿಸಿದ್ದಾರೆ. 

 

ಸೃಷ್ಟಿಯ ಅಗಾಧತೆಯಲ್ಲಿ ಜಗತ್ತಿನ ಜೀವಚರಗಳೆಲ್ಲವೂ ಒಂದಲ್ಲ ಒಂದು ಅಗೋಚರವಾದ ಶಕ್ತಿಯನ್ನು ಹೊಂದಿವೆ. ಅವೆಲ್ಲವುಗಳಿಗೂ ತಮ್ಮದೇ ಆದ ನಡವಳಿಕೆ, ಕ್ರಿಯೆ ಪ್ರತಿಕ್ರಿಯೆ ಎಲ್ಲವೂ ಒಂದಕ್ಕಿಂತ ಒಂದು ವಿಭಿನ್ನವಾಗಿವೆ. ಆದರೆ ಎಲ್ಲವುಗಳಲ್ಲಿ ಸಾಮಾನ್ಯವಾಗಿ ಕಾಣುವ ವಿಷಯವೆಂದರೆ ಅದು ಸ್ವಾತಂತ್ರ್ಯ. ಅಂದರೆ ಸ್ವತಂತ್ರವಾಗಿ ಇರುವ ಬಯಕೆ. ಬೀಸುವ ಗಾಳಿ, ಹರಿಯುವ ನದಿ, ವಿಶಾಲವಾದ ಭೂಮಿ, ನಿರಭ್ರ ಆಗಸ ಎಲ್ಲ ಜೀವಕ್ಕೂ ಒಂದೇ ಇರುವಂತೆ ಸ್ವಾತಂತ್ರ್ಯ ಕೂಡ ಎಲ್ಲ ಜೀವಿಗಳಲ್ಲೂ ಒಂದೇ ಆಗಿದೆ. ಆದರೂ ಈ ಜಗತ್ತು ಬೆಳೆದಂತೆ ಮಾನವ ಸಂಕುಲವು ತನ್ನದೇ ಆದ ಸಂಸ್ಕೃತಿ, ಧರ್ಮ ಸಮಾಜವೆಂಬ ಚೌಕಟ್ಟುಗಳಲ್ಲಿ ಒಂದು ವ್ಯವಸ್ಥೆ, ಶಿಸ್ತು ಹಾಗೂ ನೈತಿಕತೆಯ ಅಡಿಪಾಯ ಹಾಕಲು ಮುಂದಾದಾಗ ಅನೇಕ ಕಟ್ಟುಪಾಡುಗಳು ಬೆಳೆದು ಬಂದವು. ಬೆಳೆಯ ಜೊತೆಗೆ ಕಳೆಯೂ ಬೆಳೆಯುವಂತೆ ಇವುಗಳೊಂದಿಗೆ ಶೋಷಣೆಯ ವಿವಿಧ ಮುಖಗಳು, ಸಮಾಜದ ಕ್ರೂರ, ಹೀನ ಆಚಾರ, ವಿಚಾರಗಳು ಇದರೊಂದಿಗೆ ಸೇರಿಕೊಂಡವು.  ‘ಸ್ವಾತಂತ್ರ್ಯ’ ಎನ್ನುವುದು ಕೂಡ ಒಂದು ಸೀಮಿತ ವ್ಯವಸ್ಥೆಗೆ ಒಳಪಟ್ಟಿತು. ದೈಹಿಕವಾಗಿ ಬಲಶಾಲಿಯಾದ ಪುರುಷನಿಂದ ಕಾನೂನು ಕಟ್ಟಳೆಗಳ ನಿರ್ಮಿತಿ ಆಯ್ತು. ಹೀಗಾದಾಗ ಅದು ಪುರುಷ ಪ್ರಧಾನ ವಿಚಾರದ ಮನಸ್ಸೇ ಆಗಿರಲು ಸಾಧ್ಯ. ಶತಶತಮಾನಗಳು ಕಳೆದರೂ ಆಧುನಿಕ ಜಗತ್ತಿನಲ್ಲೂ ಪುರುಷ ಪ್ರಧಾನವಾದ ಈ ಸಮಾಜದಲ್ಲಿ ಸ್ತ್ರೀ ಸಂಕುಲದ ಕೂಗೆಲ್ಲವೂ ನಾಲ್ಕು ಗೋಡೆಗಳಲ್ಲಿ ಈಗಲೂ ಬಂಧಿಯಾಗಿರುವುದು ದುರ್ದೈವದ ಸಂಗತಿ.

ಆದರೆ ಇವೆಲ್ಲವುಗಳಿಗೆ ವ್ಯತಿರಿಕ್ತವಾಗಿ ಹನ್ನೆರಡನೆಯ ಶತಮಾನವು ‘ಬಸವ’ ಎಂಬ ಬೆಳಕಿನಡಿಯಲ್ಲಿ ಹೆಣ್ಣು-ಗಂಡು ಮೇಲು-ಕೀಳು ಎಂಬೆಲ್ಲ ಅಸಮಾನತೆಗಳನ್ನು ತೊಡೆದು ಹಾಕಿ ಹೆಣ್ಣನ್ನು ಕೂಡ ಸ್ವತಂತ್ರವಾಗಿ ಧಾರ್ಮಿಕ, ಸಾಮಾಜಿಕ, ವೈಚಾರಿಕವಾಗಿ ತನ್ನ ಅಭಿಪ್ರಾಯವನ್ನು ಅಭಿವ್ಯಕ್ತಿಸುವಂತೆ, ಉಸಿರಾಡುವಂತೆ ಮಾಡಿದ್ದು ಐತಿಹಾಸಿಕ ದಾಖಲೆ. ಏಕಕಾಲದಲ್ಲಿ ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ವೈಚಾರಿಕ, ವೈಜ್ಞಾನಿಕ ಹಾಗೂ ಆಧ್ಯಾತ್ಮಿಕ ಬದುಕಿನ ವಿವಿಧ ಮುಖಗಳನ್ನು ಮುಕ್ತವಾಗಿ, ಸ್ವತಂತ್ರವಾಗಿ ಅಭಿವ್ಯಕ್ತಿಸಿದ ಶರಣ ಮತ್ತು ಶರಣೆಯರು ವಚನಗಳ ಮೂಲಕ ಬದುಕನ್ನು ಅಕ್ಷರ ರೂಪದಲ್ಲಿ ಜಗತ್ತಿಗೆ ಅರ್ಪಿಸಿದ ಕಾಲವೇ 12ನೇ ಶತಮಾನ. ಅಂದಿನ ಶರಣ, ಶರಣೆಯರ ನೇರ, ನಿಷ್ಠುರ ಹಾಗೂ ಸ್ಪಷ್ಟವಾದ ನುಡಿಗಳು ವಚನಗಳಲ್ಲಿ ಬಿಂಬಿತವಾಗಿವೆ.

ಪುರಾತನ ಕಾಲದಿಂದಲೂ ಬೇರೂರಿದ ಧರ್ಮಶಾಸ್ತ್ರಗಳ ನಂಬಿಕೆಗಳಾದ “ಹೆಣ್ಣು, ಹೊನ್ನು, ಮಣ್ಣು ಎಂಬವು ಮಾಯೆ, ಇವು ಸಾಧನೆಗೆ ಅಡ್ಡಿ ಮಾಡುವವು” ಎಂಬುದನ್ನು ಶರಣ, ಶರಣೆಯರು ಸಾರಾಸಗಟಾಗಿ ತಿರಸ್ಕರಿಸಿದರು. ಈ ಸಂಪ್ರದಾಯದ ಬೇರುಗಳಿಗೆ ಕೊಡಲಿಪೆಟ್ಟು ಹಾಕಿ ವೈಚಾರಿಕತೆಯ ಬೆಳಗನ್ನು ಬೆಳಗಿಸಿದರು.

“ಹೊನ್ನ ಬಿಟ್ಟು ಲಿಂಗವನೊಲಿಸಬೇಕೆಂಬರು,
ಹೊನ್ನಿಂಗೆಯೂ ಲಿಂಗಕ್ಕೆಯೂ ವಿರುದ್ಧವೇ,
ಹೆಣ್ಣ ಬಿಟ್ಟು ಲಿಂಗವನೊಲಿಸಬೇಕೆಂಬರು
ಹೆಣ್ಣಿಂಗೆಯೂ ಲಿಂಗಕ್ಕೆಯೂ ವಿರುದ್ಧವೇ,
ಮಣ್ಣ ಬಿಟ್ಟು ಲಿಂಗವನೊಲಿಸಬೇಕೆಂಬರು
ಮಣ್ಣಿಂಗೆಯು ಲಿಂಗಕ್ಕೆಯೂ ವಿರುದ್ಧವೇ
ಅಂಗವ ಬಿಟ್ಟು ಲಿಂಗವನೊಲಿಸಬೇಕೆಂಬರು
ಅಂಗಕ್ಕೆಯೂ ಲಿಂಗಕ್ಕೆಯೂ ವಿರುದ್ಧವೇ,
ಇಂದ್ರಿಯಗಳನ್ನು ಬಿಟ್ಟು ಲಿಂಗವನೊಲಿಸಬೇಕೆಂಬರು
ಇಂದ್ರಿಯಗಳಿಗೆಯು ಲಿಂಗಕ್ಕೆಯೂ ವಿರುದ್ಧವೇ,
ಜಗವ ಬಿಟ್ಟು ಲಿಂಗವನೊಲಿಸಬೇಕೆಂಬರು
ಜಗಕ್ಕೆಯು ಲಿಂಗಕ್ಕೆಯೂ ವಿರುದ್ಧವೇ
ಇದುಕಾರಣ ಪರಂಜ್ಯೋತಿ ಪರಮ ಕರುಣಿ
ಪರಮ ಶಾಂತನೆಂಬ ಲಿಂಗವು
ಕೋಪದ ಮುನಿಸನರಿದಡೆ ಕಾಣಬಹುದು
ಮರೆದಡೆ ಕಾಣಬಾರದು ಅರಿವಿನಿಂದ
ಕಂಡೊದಗಿದ ಸುಖವು ಮಸಣಯ್ಯಪ್ರಿಯ ಗಜೇಶ್ವರಾ”
(ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀ)

ಹನ್ನೆರಡನೆಯ ಶತಮಾನವು ‘ಬಸವ’ ಎಂಬ ಬೆಳಕಿನಡಿಯಲ್ಲಿ ಹೆಣ್ಣು-ಗಂಡು ಮೇಲು-ಕೀಳು ಎಂಬೆಲ್ಲ ಅಸಮಾನತೆಗಳನ್ನು ತೊಡೆದು ಹಾಕಿ ಹೆಣ್ಣನ್ನು ಕೂಡ ಸ್ವತಂತ್ರವಾಗಿ ಧಾರ್ಮಿಕ, ಸಾಮಾಜಿಕ, ವೈಚಾರಿಕವಾಗಿ ತನ್ನ ಅಭಿಪ್ರಾಯವನ್ನು ಅಭಿವ್ಯಕ್ತಿಸುವಂತೆ, ಉಸಿರಾಡುವಂತೆ ಮಾಡಿದ್ದು ಐತಿಹಾಸಿಕ ದಾಖಲೆ.

ಶರಣೆ ಮಸಣಮ್ಮನ ವಚನ ಸ್ಪಷ್ಟವಾಗಿ ನಿರೂಪಿಸುವುದು ಏನೆಂದರೆ ಶತಮಾನಗಳವರೆಗೆ ಯಾವುದು ಧರ್ಮ ಆಧ್ಯಾತ್ಮಗಳ ಬೇರುಗಳು ಎಂಬ ಭ್ರಾಂತಿಗಳಾಗಿದ್ದವೋ ಅವುಗಳನ್ನು ಖಡಾ ಖಂಡಿತವಾಗಿ ತಿರಸ್ಕರಿಸಲಾಗಿದೆ. ಹೊನ್ನು, ಹೆಣ್ಣು, ಮಣ್ಣುಗಳು ಸಾಧನೆಗೆ ಅಡ್ಡಿಯಲ್ಲ. ಹಾಗೆಯೆ ಅಂಗ, ಇಂದ್ರಿಯ, ಈ ಜಗತ್ತು ಯಾವವೂ ಅಡ್ಡಿ ಅಲ್ಲ. ಆದರೆ ಅರಿವಿನ ಕಂಗಳಿಂದ ಅವುಗಳನ್ನು ದೈವತ್ವದೆಡೆಗೆ ಕೊಂಡೊಯ್ಯುವ ನಿರಂತರ ಪ್ರಯತ್ನ ಸಾಧಕನಿಗೆ ಇರಬೇಕಷ್ಟೇ…. ಎನ್ನುವ ಸ್ಪಷ್ಟವಾದ ವಿಚಾರವಿದೆ.

“ಯಾವ ಬೀಜ ಬೀಳುವಲ್ಲಿ ಮೊಳೆ ಮುಖ ಹಿಂಚು ಮುಂಚುಂಟೆ, ನೀ ಮರೆದಲ್ಲಿ ನಾನರಿದಲ್ಲಿ ಬೇರೊಂದೊಡಲುಂಟೆ, ಮೂಲ ನಷ್ಟವಾದಲ್ಲಿ ಅಂಕುರ ನಿಂದಿತ್ತು, ಕೂಟಕ್ಕೆ ಸತಿ-ಪತಿ ಎಂಬ ನಾಮವಲ್ಲದೆ ಅರಿವಿಂಗೆ ಬೇರೊಂದೊಡಲುಂಟೆ, ಮಾರಯ್ಯಪ್ರಿಯಅಮರೇಶ್ವರ ಲಿಂಗವನರಿಯಬಲ್ಲಡೆ”
(ಆಯ್ದಕ್ಕಿ ಲಕ್ಕಮ್ಮ)

ಬೀಜ ಹೇಗೆ ಬಿತ್ತಿದ್ದರೂ ಮೊಳಕೆ ಮೇಲೆ ಒಡೆಯುವಂತೆ, ಹೆಣ್ಣು-ಗಂಡುಗಳೆಂಬ ಹೆಸರುಗಳು ಕೇವಲ ತೋರಿಕೆಗೆ ಮಾತ್ರ. ಅರಿವಿನ ಒಡಲಿಗೆ ಯಾವುದೇ ಭೇದವಿಲ್ಲ ಎಂದು ಇಷ್ಟೊಂದು ನೇರವಾಗಿ ಖಂಡಿಸಿ ಹೇಳಬೇಕಾದರೆ ಆಯ್ದಕ್ಕಿ ಲಕ್ಕಮ್ಮನ ವೈಚಾರಿಕ ಚಿಂತನೆ ಮತ್ತು ಅದರ ಹಿಂದಿರುವ ಸ್ವತಂತ್ರ ಅಭಿವ್ಯಕ್ತಿಯ ಪ್ರಬಲಶಕ್ತಿಯ ಅರಿವಾಗುವುದು.

“ಗಂಡು ಮೋಹಿಸಿ ಹೆಣ್ಣು ಹಿಡಿದರೆ ಅದು ಒಬ್ಬರ ಒಡವೆ ಎಂದು ಅರಿಯಬೇಕು ಹೆಣ್ಣು ಮೋಹಿಸಿ ಗಂಡು ಹಿಡಿದಡೆ ಉತ್ತರವಾವುದೆಂದರಿಯಬೇಕು, ಈ ಎರಡರ ಉಭಯ ಕಳೆದು ಸುಖಿ ತಾನಾಗಬಲ್ಲಡೆ ನಾಸ್ತಿನಾಥನು ಪರಿಪೂರ್ಣನೆಂಬೆ”
(ಗೊಗ್ಗವ್ವೆ)

ಪುರುಷ ಪ್ರಧಾನ ಸಮಾಜದಲ್ಲಿ ಆಯ್ಕೆಯ ಸ್ವಾತಂತ್ರ್ಯ ಕೇವಲ ಗಂಡಿಗೆ ದೊರೆತಂತೆ ಹೆಣ್ಣಿಗೆ ಏಕೆ ಸಿಕ್ಕಿಲ್ಲ ಎಂಬ ಪ್ರಶ್ನೆ ಎದುರಾಗುತ್ತದೆ.  ಈ ಗಂಡು ಹೆಣ್ಣೆಂಬ ಭಾವವನ್ನು ಮೀರಿದಾಗ ವ್ಯಕ್ತಿ   ನಿಜವಾದ ‘ಸ್ವತಂತ್ರ ಸುಖಿ’ಯಾಗುತ್ತಾನೆ ಎಂಬ ಭಾವವನ್ನು ವ್ಯಕ್ತಪಡಿಸುವ ಗೊಗ್ಗವ್ವೆ ತಲತಲಾಂತರಗಳಿಂದ ಬಂದ ಪುರುಷ ದಬ್ಬಾಳಿಕೆಗೆ ಮಾಡುವ ಪ್ರಶ್ನೆ ಇಂದಿಗೂ ಪ್ರಸ್ತುತ. ಈ ವಚನ ವರ್ತಮಾನದ ಸಂದರ್ಭದಲ್ಲೂ ಜಗತ್ತಿನಲ್ಲಿ ಎಲ್ಲೆಡೆ ಇರುವ ಹೆಣ್ಣಿನ ಒಳ ದನಿಯಿದಾಗಿದೆ.

“ತಲೆಯ ಮೇಲೆ ತಲೆಯುಂಟೆ
ಹಣೆಯಲ್ಲಿ ಕಣ್ಣು ಉಂಟೆ
ಗಳದಲ್ಲಿ ವಿಷವುಂಟೆ,
ದೇವರಿಗೆಂದೊಡಲುಂಟೆ,
ತಂದೆಯಿಲ್ಲದವರುಂಟೆ,
ತಾಯಿಯಿಲ್ಲದವರುಂಟೆ,
ಎಲವೋ ನಿನ್ನ ಹಣೆಯಲ್ಲಿ ನೇಸರ ಮೂಡದೆ,
ಶಂಭುಜಕ್ಕೇಶ್ವರನಲ್ಲದೆ ಉಳಿದ ದೈವಗಳುಂಟೆ”
(ಸತ್ಯಕ್ಕ)

ಸತ್ಯಕ್ಕನ ಈ ವಚನದಲ್ಲಿ ಎಂಥ ಅದ್ಭುತ ವಿಚಾರ ಇರುವುದನ್ನು ಸೂಕ್ಷ್ಮವಾಗಿ ಗಮನಿಸಬಹುದು. ಸಾಮಾನ್ಯರಲ್ಲಿ ಅಸಾಮಾನ್ಯ ವೈಚಾರಿಕತೆಯ ಉದಾಹರಣೆಗೆ ಈ ವಚನ ಸಾಕ್ಷಿ. ಕಸಹೊಡೆವ ಕಾಯಕದ ಸತ್ಯಕ್ಕ ಬೇರುಬಿಟ್ಟಿದ್ದ ನಂಬಿಕೆಯಾದ ಕಾಲ್ಪನಿಕ ಪೌರಾಣಿಕ ಶಿವನ ಸ್ವರೂಪವನ್ನೆ ಪ್ರಶ್ನಿಸಿ, ವಿಮರ್ಶೆಗೆ ಒಳಪಡಿಸುತ್ತಾಳೆ. ತಲೆ ಮೇಲೆ ಗಂಗೆ, ತ್ರಿನೇತ್ರ, ಕಂಠದಲ್ಲಿ ವಿಷವುಂಟೆ, ದೇವರಿಗೆ ದೇಹವುಂಟೆ, ತಂದೆ ತಾಯಿಲ್ಲದೆ ಹುಟ್ಟಲುಂಟೆ ಎಂದು ಅಜ್ಞಾನವನ್ನು ಮೂಢತೆಯನ್ನು ಪ್ರಶ್ನಿಸುತ್ತಾ ಲಿಂಗವಲ್ಲದೆ ಅನ್ಯ ದೈವವುಂಟೆ ಎಂಬ ತ್ರಿಕಾಲಸತ್ಯದೆಡೆಗೆ ಗಮನ ಸೆಳೆವ ಸತ್ಯಕ್ಕಳ ಪ್ರಶ್ನೆ ಇಂದಿಗೂ ಕೂಡ ಪ್ರಸ್ತುತ. ಅವಳು ಈ ನೇರ ನಿಷ್ಟುರ ನುಡಿ ಸ್ವತಂತ್ರ ಅಭಿವ್ಯಕ್ತಿಗೆ ಉತ್ತಮ ನಿದರ್ಶನವಾಗಿದೆ.

“ಗಂಡ ಗಂಡರ ಎದೆಯ ಮೆಟ್ಟಿ ನಡೆದವರುಂಟೆ,

ಗಂಡ ಗಂಡ ಚಲ್ಲಣವ ಮಾಡಿ ಉಟ್ಟವರುಂಟೆ, ಗಂಡ ಗಂಡ ರೆ ಚರ್ಮವ ಹೊದ್ದವರುಂಟೆ, ಗಂಡ ಗಂಡರ ಹೊದ್ದವರುಂಟೆ ಗಂಡ ಗಂಡರ ತುರು ಬಿದವರುಂಟೆ,

ಗಂಡ ಗಂಡರ ಭಸ್ಮವ ಮಾಡಿ ಹೂಸಿದವರುಂಟೆ,
ಗಂಡ ಗಂಡರಿಗೆ ಗಂಡನ ಕಣ್ಣು ಕಾಲಲ್ಲದೆ ಗಂಡ ಗಂಡರಿಗೆ ಗಂಡನ ಶಿರ ಕರದಲ್ಲದೆ ಗಂಡುವೇಷವೆಂಬುದು ನಿಮ್ಮ ಶಕ್ತಿರೂಪು ಗಂಡರಿಗೆ ಗಂಡನು ನಡೆಯಿತ್ತೆ ಬಟ್ಟೆ ಎಂಬುದು ನಿಮಗೆ ಸಂದಿತ್ತು
ಶಂಭು ಜಕ್ಕೇಶ್ವರ ಶರಣ ಜಗದೊಳಗೊಬ್ಬನೇ ಗಂಡನು
(ಸತ್ಯಕ್ಕ)

ಸತ್ಯಕ್ಕನ ಇನ್ನೊಂದು ವಚನದಲ್ಲಿ ‘ಗಂಡರ ಗಂಡ’ ಎಂಬುದು ಬಲಿಷ್ಠತೆಯ ಸಂಕೇತವಾಗಿ ಕಂಡುಬರುತ್ತದೆ. ಇಂತಹ ಬಲಿಷ್ಠವಾದವರನ್ನು ಸೋಲಿಸಿ ತೊಟ್ಟವರುಂಟೆ, ಹೊದ್ದವರು ಉಂಟೆ, ತುರುಬಿದವರುಂಟೆ ಎಂದು ಕೇಳುತ್ತಾ, ಅವರು ಶಕ್ತಿವಂತರು ನಿಜ, ಆದರೆ ಅವರು ಹೆಣ್ಣಿಗಿಂತ ಹೇಗೆ ಭಿನ್ನವಾಗಿದ್ದಾರೆ? ಅವರಿಗೆ ಕಾಲಲ್ಲಿ ಕಣ್ಣಿದೆಯೆ? ಕರದಲ್ಲಿ ಶಿರವಿದೆಯೆ? ಗಂಡು ಎಂಬುದು ಶಕ್ತಿಯ ಸಂಕೇತ ಮಾತ್ರ ಎಂಬ ವೈಜ್ಞಾನಿಕ ಸತ್ಯವನ್ನು ಬಿಚ್ಚಿಡುತ್ತ ಸ್ವಾತಂತ್ರ್ಯದ ಅಭಿವ್ಯಕ್ತಿಯನ್ನು ವಿಶಿಷ್ಟ ರೀತಿಯಲ್ಲಿ ಪ್ರಕಟಿಸುತ್ತಾಳೆ, ಕಸ ಗುಡಿಸುವ ಕಾಯಕದ ಸತ್ಯಕ್ಕ. ಇದು ಅವರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹಿಡಿದ ಅತ್ಯುತ್ತಮ ನಿದರ್ಶನ ಎನ್ನಬಹುದು.

“ಪಾರ್ವತಿಯ ರೂಪವ ಕಂಡು ಪರಶಿವನ ಸಂಗನಿಸ್ಸಂಗವಾಗಿ ತಾಯಿ ಮಗನ ಅಂಗದಿಂದ ತನುವಳಿದು ನಿರಾಭಾರ ರೂಪವನೆಯ್ದಿ ಬಸವನ ಅನುಭವದಿಂದ ವಿವರವ ಕಂಡು ವಿಚಾರ ಪತ್ನಿಯಾದೆನಯ್ಯಾ ಸಂಗಯ್ಯಾ”
(ನೀಲಾಂಬಿಕೆ)

ನೀಲಾಂಬಿಕೆಯ ಈ ವಚನದಲ್ಲಿ ಅಭಿವ್ಯಕ್ತವಾದ ವಿಚಾರ ‘ಪತ್ನಿಯಾದೆನಯ್ಯಾ’ ಎಂಬ ಮಾತಂತೂ ಸಮಸ್ತ ಸ್ತ್ರೀ ಸಂಕುಲದ ಮನದಾಳದ ಅವ್ಯಕ್ತ ಆಶಯವೆನಿಸದೆ ಇರದು. ಮತ್ತು ಇದು ಎಂದಿಗೂ ಈಡೇರದ ಅಭಿಲಾಷೆಯಾಗಿದೆ. ಬಸವ ಎಂಬ ಮಹಾಸೂರ್ಯನ ಮಡದಿಯಾಗಿ ತನ್ನ ದೀಪದ ಬೆಳಗನ್ನೂ ಗುರುತಿಸಿಕೊಂಡ ಶರಣೆ ನೀಲಾಂಬಿಕೆ ಒಬ್ಬ ವಿಚಾರವಂತನ ಪತ್ನಿಯಾಗಿ ಬೆಳಗಿದ್ದು ಐತಿಹಾಸಿಕವಾಗಿ ಜಾಗತಿಕ ಸ್ವಾತಂತ್ರ್ಯದ ಅಭಿವ್ಯಕ್ತಿಯಾಗಿದೆ. ಇಂದಿಗೂ ಕೂಡ ಹೆಣ್ಣನ್ನು ಒಂದು ಸೀಮಿತ ಚೌಕಟ್ಟುಗಳಲ್ಲಿ ಕಾಣಬಯಸುವ ಪುರುಷ ಪ್ರಧಾನ ವ್ಯವಸ್ಥೆಗೆ ಇದು ನುಂಗಲಾರದ ತುತ್ತು. ವೈಜ್ಞಾನಿಕವೆಂದು ಗುರುತಿಸಿಕೊಳ್ಳುವ ಈ ಯುಗದಲ್ಲಿಯೂ  ಹೆಣ್ಣಿನ ಆಶಯಗಳನ್ನು ಗೌರವ ದೊರೆಯುವುದು ತುಂಬಾ ಅಪರೂಪ.

ನೀಲಾಂಬಿಕೆಯ ಮತ್ತೊಂದು ವಚನದಲ್ಲಿ “ಬಸವಂಗೆ ನಾನು ಶಿಶುವಾದೆನು ಬಸವನೆನ್ನ ಶಿಶುವಾದನು” ಎಂಬ ಭಾವ ಎಲ್ಲ ಭೇದಗಳನ್ನು ಅಳಿಸಿಹಾಕುವ ನಿರ್ಮಲವಾದ ಶಿಶುಭಾವ. ಶಿಶುಸಂಬಂಧ ಅಧ್ಯಾತ್ಮದ ಶಿಖರಪ್ರಾಯವಾದ ಭಾವವಲ್ಲದೆ ಸರ್ವತಂತ್ರ ಸ್ವಾತಂತ್ರ್ಯದ ಅನುಭೂತಿಯು ಕೂಡ ಆಗಿದೆ.

“ಎನ್ನ ಕರಣಂಗಳ ಲಿಂಗದಲಿ ಕಟ್ಟುವೆ
ಗುರು-ಲಿಂಗ-ಜಂಗಮದ ಕಾಲ ಕಟ್ಟುವೆ
ವ್ರತ ಭ್ರಷ್ಟರ ನಿಟ್ಟೊರಸುವೆ
ಸುಟ್ಟು ತುರತುರನೆ ತೂರುವೆ
ನಿರ್ಭೀತ ನಿಜಲಿಂಗದಲ್ಲಿ” ಎನ್ನುವ ವಚನದಲ್ಲಿ ಕಾಲಕಣ್ಣಿಯ ಕಾಮಮ್ಮ,

ಗುರುಲಿಂಗ ಜಂಗಮರನ್ನು ತನ್ನ ಅಂತರ್ಯದಲ್ಲಿ ಕಂಡು ಅವುಗಳನ್ನು ಮೀರಿ ನಿಲ್ಲುವ ವ್ರತ ಭ್ರಷ್ಟರಿಗೆ ಸುಟ್ಟು ತುರತುರನೆ ತೂರುವೆ ನಿರ್ಭೀತ ನಿಜಲಿಂಗದಲ್ಲಿ ಎಂದು ಹೇಳುವ ನುಡಿ ಅವಳ ನಿಷ್ಠುರವಾದ ಸ್ವತಂತ್ರ ಅಭಿವ್ಯಕ್ತಿಗೆ ನಿದರ್ಶನವಾಗಿದೆ.

ಅಕ್ಕನ ವಚನಗಳಲ್ಲಿನ ಸ್ವಾತಂತ್ರ್ಯದ ಅಭಿವ್ಯಕ್ತಿ ಅದರ ಹಿಂದಿನ ಆಶಯ ತುಂಬಾ ವಿಭಿನ್ನವಾಗಿದೆ. ಸ್ವಾತಂತ್ರ್ಯದ ಪರಿಭಾಷೆ ಎಲ್ಲರಲ್ಲೂ ಒಂದೇ ಆಗಿರುವಾಗ ಅಕ್ಕಳಲ್ಲಿ ಅದು ಹೇಗೆ ಭಿನ್ನವಾಗಿದೆ ಎಂಬ ಅನಿಸಿಕೆ ತಲೆದೋರಬಹುದು. ಆದರೆ ವಚನಗಳ ಸಂಪೂರ್ಣ ಅಧ್ಯಯನ ಗೈದು ಅದರ ಆಳದಲ್ಲಿ ಜಾಲಾಡಿದಾಗ ಅದರ ಮೂಲ ವಿಭಿನ್ನವಾಗಿರುವುದು ತೋರುತ್ತದೆ.

“ರತ್ನದ ಸಂಕೋಲೆಯಾದಡೆ ತೊಡರಲ್ಲವೆ,
ಮುತ್ತಿನ ಬಲೆಯಾದಡೆ ಬಂಧನವಲ್ಲವೆ,
ಚಿನ್ನದ ಕತ್ತಿಯಲ್ಲಿ ತಲೆಹೊಯ್ದಡೆ ಸಾಯದಿರ್ಪರೆ,
ಲೋಕದ ಭಜನೆಯ ಭಕ್ತಿಯಲ್ಲಿ ಸಿಲುಕಿದಡೆ
ಜನನ-ಮರಣ ಬಿಡುವುದೇ ಚೆನ್ನಮಲ್ಲಿಕಾರ್ಜುನ”

ಎನ್ನುವ ಅಕ್ಕನ ವಚನದಲ್ಲಿ, ಶ್ರೀಮಂತಿಕೆ ಆಡಂಬರ ಪ್ರತಿಷ್ಠೆಗಳನ್ನು ಹೊದ್ದುಕೊಂಡು ತೋರಿಕೆಯ ಒಣ ಡಂಭಾಚಾರಗಳಲ್ಲಿ, ಮಹಲುಗಳಲ್ಲಿ ಬದುಕುವ ಈ ಭವದ ಬದುಕೇ ಅಕ್ಕಳಿಗೆ ಚಿನ್ನದ ಸಂಕೋಲೆಗಳಲ್ಲಿ ಬಂಧಿಯಾದಂತೆ ಎನಿಸುವುದು. ಚಿನ್ನದ ಕತ್ತಿಯಿಂದ ಇರಿದುಕೊಂಡರೆ ಸಾಯದೆ ಬದುಕುವರೇ? ಹಾಗೆಯೇ ಈ ಜಗತ್ತಿನ ಸಂಸಾರದ ವಿಷಯಾದಿಗಳಲ್ಲಿ ಬಳಲುತ್ತ ಕುಳಿತರೆ, ತೋರಿಕೆಯ ಭಕ್ತಿಯಲ್ಲಿ ಸಿಲುಕಿದರೆ ಜನನ-ಮರಣ ಬಿಡುವುದೇ? ಅವರಿಗೆ ಸಾವಿಲ್ಲವೇ, ಅವರು ಅಮರರಾಗಬಲ್ಲರೇ? ಎಂದು ಕೇಳುವ ವಚನದಲ್ಲಿ ಅಧ್ಯಾತ್ಮದ ಗೌಪ್ಯತೆಗಳು ಸೂಕ್ಷ್ಮವಾಗಿ ಇದ್ದರೂ ಕೂಡ ಅಕ್ಕನ ವಸ್ತುನಿಷ್ಠ ಸ್ವತಂತ್ರವಾದ ಅಭಿವ್ಯಕ್ತಿಯ ಪ್ರಶ್ನೆಯಾಗಿಯೇ ಗೋಚರಿಸುವುದು.

“ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದೊಡೆಂತಯ್ಯ. ಸಮುದ್ರದ ತಡಿಯಲ್ಲಿ ಮನೆಯ ಮಾಡಿ ನೊರೆತೆರೆಗಳಿಗಂಜಿದೊಡೆಂತಯ್ಯ, ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕೆ ನಾಚಿದಡೆಂತಯ್ಯಾ, ಚೆನ್ನಮಲ್ಲಿಕಾರ್ಜುನದೇವ ಕೇಳಯ್ಯ ಲೋಕದಲ್ಲಿ ಹುಟ್ಟಿದ ಬಳಿಕ ಸ್ತುತಿ-ನಿಂದೆಗಳು ಬಂದರೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು”
ಎನ್ನುವ ಅಕ್ಕನ ಈ ವಚನವು ಈ ಲೋಕದಲ್ಲಿ ಇರುವ ಅಂಕುಡೊಂಕುಗಳಿಗೆ ಹೆದರದೇ ಬಾಳಬೇಕು ಎನ್ನುವ ಕಿವಿ ಮಾತೂ ಇದೆಯಲ್ಲವೇ.

ಈ ಜಗವೆಂಬ ಸಂತೆಯಲ್ಲಿ ಬದುಕಬೇಕಾದ ಅನಿವಾರ್ಯತೆ ಇರುವಾಗ ಅದಕ್ಕೆ ತಕ್ಕಂತೆ ಬದುಕಬೇಕು. ಅದನ್ನು ಎದುರಿಸುವ ದೃಢತೆ ಧೈರ್ಯವಿರಬೇಕು ಯಾವುದಕ್ಕೂ ಕಿವಿಗೊಡದೆ ಸಮಾಧಾನದಿಂದ ಬದುಕಬೇಕು ಎನ್ನುವುದು ಮನೋಸ್ಥೈರ್ಯದ ವಿಚಾರವೆ ಆಗಿದೆ.

“ಹೆದರದಿರು ಮನವೆ ಬೆದರದಿರು ತನುವೇ
ನಿಜವನರಿತು ನಿಶ್ಚಿಂತನಾಗಿರು.
ಫಲವಾದ ಮರನ ಕಲ್ಲಲ್ಲಿ ಇಡುವುದೊಂದು
ಕೋಟಿ ಎಲವದ ಮರನ ಇಡುವರೊಬ್ಬರ ಕಾಣೆ
ಭಕ್ತಿಯುಳ್ಳವರ ಬೈವರೊಂದು
ಕೋಟಿ ಭಕ್ತಿಯಿಲ್ಲದವರ ಬೈವರೊಬ್ಬರ ಕಾಣೆ
ನಿಮ್ಮ ಶರಣರ ನುಡಿಯೆ ಎನಗೆ
ಗತಿ ಸೋಪಾನ ಚೆನ್ನಮಲ್ಲಿಕಾರ್ಜುನ”

ಅಕ್ಕ ಮತ್ತೊಂದು ಕಡೆ, ‘ತುಂಬಿದ ಮರಕ್ಕೆ ಜನ ಕಲ್ಲು ಒಗೆಯುವರು, ಬರಡು ಮರಕ್ಕೆ ಯಾರೂ ಒಗೆಯರು. ಇದು ಸಹಜವಾದ ಜಗತ್ತಿನ ನಡೆ. ಹಾಗೆಯೇ ಭಕ್ತಿ ಇದ್ದವರನ್ನು ಜ್ಞಾನಿಯಾದವರನ್ನು,ಉಳ್ಳವರನ್ನು ಎಲ್ಲರೂ ಪೀಡಿಸುವರು ಇಲ್ಲದವರನ್ನು ಯಾರೂ ಪೀಡಿಸರು’ ಎಂಬುದನ್ನು ಗುರುತಿಸುತ್ತಾಳೆ.  ಆದ್ದರಿಂದ ಭಕ್ತಿ ಮಾರ್ಗದಲ್ಲಿ ಎದುರಿಸಬೇಕಾದ ಕಷ್ಟ-ಕಾರ್ಪಣ್ಯಗಳಿಗೆ, ನೋವುಗಳಿಗೆ ಎದೆಗುಂದದೆ ತನ್ನ ಗಮ್ಯದತ್ತ ನಡೆದ ಅಕ್ಕ ಚೆನ್ನಮಲ್ಲಿಕಾರ್ಜುನನ ಸಾಂಗತ್ಯದಲ್ಲಿ ನಿಜವಾಗಿಯೂ ಸ್ವತಂತ್ರ ನಡೆಯೇ ಸರಿ.

“ಹೆಣ್ಣು ಹೆಣ್ಣಾದೊಡೆ ಗಂಡಿನ ಸೂತಕ,
ಗಂಡು ಗಂಡಾದೊಡೆ ಹೆಣ್ಣಿನ ಸೂತಕ,
ಮನದ ಸೂತಕ ಹಿಂಗಿದೊಡೆ ತನುವಿನ
ಸೂತಕಕ್ಕೆ ತೆರಹುಂಟೆ ಮೊದಲಿಲ್ಲದ
ಸೂತಕಕ್ಕೆ ಮರುಳಾಯಿತು ಜಗವೆಲ್ಲ
ಎನ್ನದೇವ ಚೆನ್ನಮಲ್ಲಿಕಾರ್ಜುನಯ್ಯ
ಎಂಬ ಗರುವಂಗೆ ಜಗವೆಲ್ಲ ಹೆಣ್ಣು ನೋಡಾ ಅಯ್ಯಾ”

ಈ ಜಗತ್ತಿಗೆಲ್ಲ ಚೆನ್ನಮಲ್ಲಿಕಾರ್ಜುನ ಒಬ್ಬನೇ ಗಂಡು, ಜಗವೆಲ್ಲಾ ಹೆಣ್ಣು ನೋಡ ಎನ್ನುವ ಶರಣಸತಿ ಲಿಂಗಪತಿ ಭಾವದ ವಿಶಾಲ ನೋಟ ನೆಲೆಗೊಂಡ ಮೇಲೆ,  ಹೆಣ್ಣು-ಗಂಡು ಎಂಬ ಆಂಗಿಕ ಭಾವಕ್ಕೆ ಅತೀತವಾದ ಆತ್ಮಭಾವ ಜಾಗೃತವಾಗಿರುವುದನ್ನು ಅಕ್ಕಮಹಾದೇವಿಯ ವಚನಾಂತರಂಗದಲ್ಲಿ ನೋಡಬಹುದು. ಜಗದ ಕಣ್ಣಿಗೆ ಅದು ಸ್ವತಂತ್ರತೆಯ ಮನೋಭಾವ ಆಗಿ ತೋರುವುದರಲ್ಲಿ ಆಶ್ಚರ್ಯವಿಲ್ಲ.

ಅನೇಕ ಶರಣರು ಬಳಸಿಕೊಂಡ ಅಂಕಿತನಾಮಗಳು ಅವರ ಸ್ವತಂತ್ರವಾದ ಅಭಿವ್ಯಕ್ತಿಗೆ ಸಾಕ್ಷಿಯಾಗಿವೆ. ಸೂಳೆಸಂಕವ್ವೆಯ ನಿರ್ಲಜ್ಜೇಶ್ವರ, ಕಾಲಕಣ್ಣಿಯ ಕಾಮಮ್ಮಳ ನಿರ್ಭೀತ ನಿಜಲಿಂಗ, ಬೋಂತಾದೇವಿಯ ಬಿಡಾಡಿ ಎಂಬ ವಚನಾಂಕಿತಗಳು ಅವರ ನಿರ್ಭೀತ, ಸ್ವತಂತ್ರಮನೋಭೂಮಿಕೆಗೆ ಕನ್ನಡಿಯಾಗಿವೆ ಮತ್ತು ತಮ್ಮ ನಿಲುವುಗಳ ಬಗ್ಗೆ ಅವರಿಗಿರುವ ಗ್ರಹಿಕೆಯನ್ನು ಅಭಿವ್ಯಕ್ತಿಸುವ ರೀತಿಯಲ್ಲಿವೆ.

ಜಗ ಹಿಂದೆಂದೂ ಕಾಣದ ಸ್ವತಂತ್ರವಾದ ನಿರ್ಮಲವಾದ ಗಾಳಿ ಬೆಳಕನ್ನು ಅನುಭವಿಸಿದ, ಅದರಲ್ಲೂ ಶೋಷಣೆಯಲ್ಲೇ ಜೀವತೇದ ಸ್ತ್ರೀ ಸ್ವಾತಂತ್ರ್ಯ ಕುರಿತು ವಿಭಿನ್ನವಾದ ಚರ್ಚೆಗಳು 12ನೇ ಶತಮಾನದಲ್ಲಿ ನಡೆದವು. ಅಂತಹ ಚರ್ಚೆಗಳು ಹೊತ್ತಿಸಿದ ಕಿಡಿಗಳು, ಮುಂದಿನ ಕಾಲಮಾನಕ್ಕೆ ಬೆಳಕಾಗಿದ್ದೂ ಹೌದು.