ಅಲೆಯುವ ಮನಕ್ಕೆ ಲೋಕದ ಯಾವ ಸದ್ದುಗಳೂ ಕೇಳಿಸುವುದಿಲ್ಲವಂತೆ. ಅಲೆಮಾರಿಗಳು ಲೋಕದ ಗೊಡವೆಗಿಂತ ತಮ್ಮ ತಮ್ಮ ಸ್ವವ್ಯಸನಗಳಲ್ಲೇ ಹೆಚ್ಚು ಮುಳುಗಿರುತ್ತಾರಂತೆ. ಹಾಗಾಗಿ ಅವರು ಆಯಾಸಗೊಳ್ಳದೆ ಚಲಿಸುತ್ತಲೇ ಇರುತ್ತಾರಂತೆ. ಇದು ಹಿಂದೆ ಬದುಕಿದ್ದ ಮಿತ್ರರೂ ಆಗಿದ್ದ ಹಿರಿಯರೊಬ್ಬರು ಹೇಳಿದ್ದ ಮಾತು. ಅವರ ಪ್ರಕಾರ ಅಲೆಮಾರಿಗಳಷ್ಟು ಸ್ವರತಿ ಪ್ರಿಯರು ಬೇರೆ ಯಾರೂ ಇಲ್ಲ. ಹಾಗೆಯೇ ನನ್ನ ಕಥೆಯೂ ಎಂದು ಅನಿಸುತ್ತಿತ್ತು.
ಅಬ್ದುಲ್ ರಶೀದ್ ಬರೆಯುವ ಮಿನಿಕಾಯ್ ಫೋಟೋ ಕಥಾನಕದ ಏಳನೆಯ ಕಂತು

 

ಹಡಗಿನ ಸರಳಿಗೆ ಆಡಿನಂತೆ ಕಟ್ಟಿಹಾಕಿದ್ದ ಸೈಕಲನ್ನು ಅಲ್ಲಿಂದ ಬಿಚ್ಚಿ ಕೆಳಗಿಳಿಸಲು ಹೊರಟವನಿಗೆ ಸಖೇದಾಶ್ಚರ್ಯ ಚಕಿತನಾಗುವಂತೆ ನನ್ನ ದ್ವೀಪವಾಸದ ಹದಿನೆಂಟು ತಿಂಗಳುಗಳ ಸಂಗಾತಿ ಸೈಕಲ್ಲಿಗೆ ಗಂಟುಬಿದ್ದವಳಂತೆ ಇನ್ನೊಂದು ಲೇಡೀಸು ಸೈಕಲ್ಲು ಅಂಟಿಕೊಂಡಿತ್ತು, ಅದನ್ನೂ ಸುಂದರವಾದ ಹಗ್ಗದಿಂದ ಹಡಗಿನ ಸರಳಿಗೆ ಬಿಗಿದು ಕಟ್ಟಲಾಗಿತ್ತು. ನನಗೆ ಅರ್ಥವಾಗಲಿಲ್ಲ. ಹತ್ತುವಾಗ ಒಂಟಿಯಾಗಿದ್ದ ನನ್ನ ಈ ಪ್ರೀತಿಪಾತ್ರ ಸೈಕಲ್ಲಿಗೆ ಈ ಯಾತ್ರೆಯ ನಡುವಲ್ಲಿ ಈ ಲೇಡೀ ಬರ್ಡ್ ಸೈಕಲ್ಲಿನ ಸಂಗ ಒದಗಿದ್ದು ಹೇಗೆ? ಈ ಹದಿನೆಂಟು ತಿಂಗಳುಗಳ ದ್ವೀಪವಾಸದಲ್ಲಿ ನಾನು ಅರ್ಧ ಬೇಕೆಂದು ಇನ್ನರ್ಧ ಅನಿವಾರ್ಯವಾಗಿ ಒಂಟಿಯಾಗಿರುವಾಗ ನನ್ನ ಈ ಸೈಕಲ್ಲಿನ ಒಂಟಿತನ ನೀಗಿಸುವ ಈ ಲೇಡೀಸು ಸೈಕಲ್ಲು ಅದು ಯಾವ ಮಾಯದಲ್ಲಿ ಈ ಹಡಗನ್ನು ಹೊಕ್ಕಿತು. ಹೀಗೆ ಯೋಚಿಸುತ್ತಲೇ ಸೈಕಲ್ಲಿಗೆ ಬಿಗಿದಿದ್ದ ನೈಲಾನಿನ ಹಗ್ಗವನ್ನು ಬಿಚ್ಚುತ್ತಿದ್ದಂತೆಯೆ ಪುರುಷಾಕಾರವೊಂದು ಅಲ್ಲಿ ಬಂದು ನಿಂತಿತು. ಪಕ್ಕದಲ್ಲಿ ನಿಂತಿರುವ ಲೇಡಿ ಬರ್ಡ್ ಅವರದಾಗಿತ್ತು.


ಅವರು ಕೇರಳದ ಎರ್ನಾಕುಲಂ ಬಳಿಯ ಪಟ್ಟಣವೊಂದರಲ್ಲಿ ಆಯುರ್ವೇದ ಪಂಡಿತರಾಗಿದ್ದರು. ಪ್ರಸೂತಿ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರೆಯಾಗಿದ್ದ ಅವರ ಮಗಳಿಗೆ ಅಗತ್ತಿ ದ್ವೀಪದಲ್ಲಿರುವ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಪ್ರಸೂತಿ ವೈದ್ಯೆಯಾಗಿ ನೇಮಕವಾಗಿತ್ತು. ಪ್ರೀತಿಯಿಂದ ಬೆಳಸಿದ ಒಬ್ಬಳೇ ಮಗಳು. ದ್ವೀಪದಲ್ಲಿ ಒಂಟಿಯಾಗಿರುವುದು ಬೇಡ ಎಂದು ತಾವೂ ಹೊರಟು ಬಂದಿದ್ದರು. ಆದರೆ ಮಗಳು ಹಗಲು ಇರುಳು ಆಸ್ಪತ್ರೆಯಲ್ಲಿರುವಾಗ ಇವರಿಗೆ ಒಬ್ಬರಿಗೇ ಅಲ್ಲಿನ ಏಕತಾನತೆಯ ಬದುಕು ರೋಸಿ ಹೋಗಿತ್ತು. ಅದಕ್ಕಾಗಿ ಒಂದು ಲೇಡೀಸ್ ಸೈಕಲನ್ನು ಕೊಂಡು ದ್ವೀಪದಲ್ಲಿ ಓಡಾಡಿಕೊಂಡಿರಬಹುದು ಎಂದು. ಲೇಡೀಸು ಸೈಕಲ್ಲು ಕೊಂಡದ್ದು ಅಲ್ಲಿಂದ ಬಿಟ್ಟು ಬರುವಾಗ ಮಗಳಿಗೆ ಉಪಯೋಗಕ್ಕೆ ಬರಬಹುದು ಎಂದು. ಆದರೆ ಬಿಟ್ಟು ಬರುವಾಗ ಮಗಳು ಇಲ್ಲಿ ಸೈಕಲ್ಲು ಬೇಡ ಮಳೆಗಾಳಿಯಲ್ಲಿ ತುಕ್ಕು ಹಿಡಿಯುತ್ತದೆ ಎಂದಿದ್ದಳು. ಇವರಿಗೂ ಯಾಕೋ ಮೂರು ತಿಂಗಳುಗಳ ಒಡನಾಡಿಯಾದ ಆ ಲೇಡೀ ಬರ್ಡಿನ ಮೇಲೆ ಮೋಹ ಉಂಟಾಗಿತ್ತು. ಅದಕ್ಕಾಗಿಯೇ ಅಗತ್ತಿಯಿಂದ ಹಡಗು ಹತ್ತುವಾಗ ಅದನ್ನೂ ಹತ್ತಿಸಿಕೊಂಡು ನನ್ನ ಸೈಕಲ್ಲಿನ ಬಳಿಯೇ ಕಟ್ಟಿ ಹಾಕಿದ್ದರು. ಯಾಕೋ ಪಿಚ್ಚೆನಿಸಿತು. ಒಂದು ಇರುಳಾದರೂ ನನ್ನ ಸೈಕಲಿನ ಜೊತೆಗಿದ್ದ ಲೇಡೀ ಬರ್ಡು. ಅತಿಯಾದ ವ್ಯಾಮೋಹ ಸರಿಯಲ್ಲ ಮಗನೇ ಎಂದು ನನ್ನ ಸೈಕಲನ್ನು ಹಗ್ಗದಿಂದ ಬಿಡಿಸಿಕೊಂಡು ಆಯುರ್ವೇದ ಪಂಡಿತರಿಗೆ ಪ್ರಣಾಮ ಸಲ್ಲಿಸಿ ಎರಡೂ ಕೈಗಳಿಂದ ಸೈಕಲ್ಲನ್ನು ಮಗುವಿನಂತೆ ಎತ್ತಿಕೊಂಡು ಹಡಗಿನ ಅಲ್ಲಾಡುವ ಏಣಿಯಿಳಿದು ಕೆಳಗೆ ಬಂದೆ. ಹನಿಯುತ್ತಿದ್ದ ಎರಚಲು ಮಳೆಯೂ ನಿಂತು ಆಕಾಶದಲ್ಲಿ ಹೊಸತಾದ ಮಳೆಯ ಮೋಡಗಳೂ ನಿಂತುಕೊಂಡಿದ್ದವು.

ದ್ವೀಪದ ರಸ್ತೆಗಳಲ್ಲಿ ಸೈಕಲ್ಲು ಹೊಡೆಯುವುದು ಒಂದು ಆಹ್ಲಾದಕಾರಿ ಅನುಭವ. ತಲೆಯ ಮೇಲೆ ತೆಂಗಿನ ಮರಗಳ ಚಾದರ, ಸುತ್ತಲಿಂದ ಸುಳಿದು ಬರುವ ಕಡಲ ತಂಗಾಳಿ, ಏರು ತಗ್ಗುಗಳಿಲ್ಲದೆ ಕಡಲಿಗೆ ಸಮಾನಾಂತರವಾಗಿ ಸುತ್ತುಹೊಡೆಯುವ ಕಾಂಕ್ರೀಟು ರಸ್ತೆ. ಬಹುತೇಕ ಎಲ್ಲ ದ್ವೀಪಗಳಲ್ಲೂ ಒಂದು ಉದ್ದದ್ದ ಬೀಚು ರಸ್ತೆ ಇರುತ್ತದೆ. ಈ ರಸ್ತೆಯನ್ನು ಹಿಡಕೊಂಡು ಹೊರಟರೆ ದ್ವೀಪದ ಅರ್ಧ ಸುತ್ತಾದರೂ ಸುತ್ತಿದಂತೆ ಆಗುತ್ತದೆ, ಇನ್ನೊಂದು ಲಗೂನು ರಸ್ತೆ. ಈ ರಸ್ತೆ ಹಿಡಿದರೆ ಇನ್ನೊಂದರ್ಧ. ಈ ರಸ್ತೆಗಳ ನಡುವೆ ಜೇಡರ ಬಲೆಯಂತೆ ಹೆಣೆದಿರುವ ರಸ್ತೆಗಳನ್ನು ಹೊಕ್ಕು ದಾರಿ ತಪ್ಪುವುದೂ ಮಜಾ ಕೊಡುತ್ತದೆ. ಏನು ದಾರಿ ತಪ್ಪಿದರೂ ಕೊನೆಗೆ ಈ ತಪ್ಪಿದ ದಾರಿ ನಿಮ್ಮನ್ನು ಬೀಚು ರಸ್ತೆಗೋ ಲಗೂನು ರಸ್ತೆಗೋ ತಂದುಬಿಡುತ್ತದೆ. ದಾರಿ ತಪ್ಪಿ ಕಂಗಾಲಾಗಲು ಇದೇನೂ ಅಡವಿಯಲ್ಲವಲ್ಲ. ಸರಾಸರಿ ಆರು ಕಿಲೋಮೀಟರ್ ಉದ್ದ ಎರಡು ಕಿಲೋಮೀಟರ್ ಅಗಲ ಇರುವ ಬಹುತೇಕ ದ್ವೀಪಗಳು. ಎಷ್ಟು ದಾರಿ ತಪ್ಪಿದರೂ ಯಾವುದಾದರೂ ಒಂದು ದಾರಿ ಸಿಗುವುದು ಖಚಿತ ಮತ್ತು ಅನಿವಾರ್ಯ. ಹಾಗಾಗಿ ನಾನು ಜೆಟ್ಟಿಯಲ್ಲಿ ಸೈಕಲ್ಲು ಹತ್ತಿದವನೇ ಬೆನ್ನಿಗೆ ಭಾರದ ಹೆಗಲು ಚೀಲವನ್ನೂ, ಹೊಟ್ಟೆಗೆ ಅಷ್ಟೇ ತೂಕದ ಕ್ಯಾಮರಾ ಚೀಲವನ್ನೂ ತೂಗಿಸಿಕೊಂಡು ಯಾರಲ್ಲೂ ದಾರಿ ಕೇಳದೆ ಸಪಾಟಾದ ಬೀಚು ರಸ್ತೆಯಲ್ಲಿ ಸಾಗತೊಡಗಿದೆ. ಯಾಕೋ ಸಣ್ಣಗೆ ನಗು ಬರುತ್ತಿತ್ತು. ಸಹಸ್ರ ಸಾವಿರ ಚದರ ಮೈಲು ವಿಸ್ತೀರ್ಣವನ್ನೂ, ಕೋಟಿ ಕೋಟ್ಯಾಂತರ ಜೀವಿಗಳನ್ನು ಹೊತ್ತು ನಿಂತಿರುವ ಅಸೀಮ ಸಹನೆಯನ್ನೂ ಹೊಂದಿರುವ ಈ ಭೂಮಿಯ ಒಂದು ತುದಿಯ ಅಣುಗಾತ್ರದ ನೆಲದಲ್ಲಿ ಅಪರಿಚಿತನಂತೆ ಬೆಳಬೆಳಗೆಯೇ ಸೈಕಲಲ್ಲಿ ಸಾಗುತ್ತಿರುವ ನಾನು. ಮರೆತೇ ಹೋಗಿರುವ ಹಲವು ಜನ್ಮಗಳ ನೆನಪುಗಳು, ಸಿಟ್ಟುಗಳು, ಸೆಡವುಗಳು, ಅನುರಾಗಗಳು, ವೈರಾಗ್ಯಗಳು ಮತ್ತು ಸೀಮಾತೀತ ಕುತೂಹಲಗಳು. ಹಡಗಲ್ಲಿ ಈ ಸೈಕಲ್ಲಿನ ಹಿಂದೆ ನಿಲ್ಲಿಸಿದ್ದ ಲೇಡೀಸು ಸೈಕಲ್ಲೂ ಇದರ ಹಿಂದೆ ಮುಂದೆ ಚಲಿಸುತ್ತಿದ್ದರೆ ಈ ಸೈಕಲ್ಲಿನ ಒಂಟಿತನವೂ, ನನ್ನ ಏಕಾಂಗಿತನವೂ ಕೊಂಚ ವಿರಮಿಸಿಕೊಳ್ಳುತ್ತಿತ್ತೇನೋ ಅಂತಲೂ ಅನಿಸುತ್ತಿತ್ತು.

(ಫೋಟೋಗಳು: ಅಬ್ದುಲ್‌ ರಶೀದ್)

ಅಲೆಯುವ ಮನಕ್ಕೆ ಲೋಕದ ಯಾವ ಸದ್ದುಗಳೂ ಕೇಳಿಸುವುದಿಲ್ಲವಂತೆ. ಅಲೆಮಾರಿಗಳು ಲೋಕದ ಗೊಡವೆಗಿಂತ ತಮ್ಮ ತಮ್ಮ ಸ್ವವ್ಯಸನಗಳಲ್ಲೇ ಹೆಚ್ಚು ಮುಳುಗಿರುತ್ತಾರಂತೆ. ಹಾಗಾಗಿ ಅವರು ಆಯಾಸಗೊಳ್ಳದೆ ಚಲಿಸುತ್ತಲೇ ಇರುತ್ತಾರಂತೆ. ಇದು ಹಿಂದೆ ಬದುಕಿದ್ದ ಮಿತ್ರರೂ ಆಗಿದ್ದ ಹಿರಿಯರೊಬ್ಬರು ಹೇಳಿದ್ದ ಮಾತು. ಅವರ ಪ್ರಕಾರ ಅಲೆಮಾರಿಗಳಷ್ಟು ಸ್ವರತಿ ಪ್ರಿಯರು ಬೇರೆ ಯಾರೂ ಇಲ್ಲ. ಹಾಗೆಯೇ ನನ್ನ ಕಥೆಯೂ ಎಂದು ಅನಿಸುತ್ತಿತ್ತು, ಏಕೆಂದರೆ ಕಣ್ಣಿಗೆ ಪಟ್ಟಿ ಕಟ್ಟಿದ ಕುದುರೆಯಂತೆ ದ್ವೀಪದ ಕಡಲ ಪಕ್ಕದ ಸಿಮೆಂಟು ರಸ್ತೆಯಲ್ಲಿ ಸೈಕಲ್ಲು ಓಡಿಸುತ್ತಿದ್ದ ನನಗೆ ಮೊರೆಯುತ್ತಿದ್ದ ಕಡಲಿನ ಸದ್ದೂ, ಅದನ್ನೂ ಮೀರಿಸುವಂತೆ ಕಡಲ ಕಡೆಯಿಂದ ಕೇಳಿಸುತ್ತಿದ್ದ ಕಾಗೆಗಳ ಹಾಹಾಕಾರವೂ ಕೇಳಿಸಿಯೇ ಇರಲಿಲ್ಲ. ಕೇಳಿಸತೊಡಗಿದಾಗ ಸೈಕಲ್ಲು ನಿಲ್ಲಿಸಬೇಕೆನಿಸಿತು. ಸೈಕಲ್ಲು ನಿಲ್ಲಿಸಿ, ನೆಲಕ್ಕೆ ಬಗ್ಗಿಸಿ, ಬೆನ್ನಿನ ಚೀಲವನ್ನು ಅಲ್ಲೇ ನೆಲದಲ್ಲಿ ಇಳಿಸಿ ಕಡಲಿನತ್ತ ನಡೆದು ಹೋದರೆ ಕಡಲ ಬದಿಯಲ್ಲಿ ಕಾಗೆಗಳ ಹಿಂಡು. ಅವುಗಳ ನಡುವಲ್ಲಿ ಒಬ್ಬಳು ಸ್ತ್ರೀ. ಆಕೆ ಕೈಯಲ್ಲಿದ್ದ ಆಹಾರ ತ್ಯಾಜ್ಯಗಳ ಬಕೆಟ್ಟನ್ನು ಕಡಲಿಗೆ ಸುರಿಯುತ್ತಿದ್ದಳು. ಕಡಲಿಗೆ ಬೀಳುತ್ತಿದ್ದ ತ್ಯಾಜ್ಯದ ಸುತ್ತ ಕಾಗೆಗಳ ಸರಪಳಿ. ನೋಡುತ್ತಿದ್ದಂತೆ ಬೇರೆ ಯಾವ ದ್ವೀಪಗಳಲ್ಲೂ ನಾನು ನೋಡಿರದಿದ್ದ ದೊಡ್ಡ ಗಾತ್ರದ ಕೆಂಬಾರೆ ಹಕ್ಕಿಗಳು. ಒಂದಲ್ಲ ಎರಡಲ್ಲ ಹತ್ತಾರು. ಅವುಗಳೂ, ಕಾಗೆಗಳೂ, ಆ ಹೆಂಗಸೂ, ಕಡಲೂ, ಆಕಾಶವೂ ಒಂದು ರೀತಿಯ ಬೆಳಗಿನ ಆಲಸ್ಯದಲ್ಲಿ ಒಂದೇ ಚಿತ್ರದ ಹಲವು ಬಣ್ಣಗಳಂತೆ ಗೋಚರಿಸುತ್ತಿದ್ದವು. ಮನುಷ್ಯರು, ಕಾಗೆಗಳು ಮತ್ತು ಕಡಲ ಹಕ್ಕಿಗಳು ಮತ್ತು ಎಲ್ಲಿಂದಲೋ ಬಂದ ನಾನು. ಬಂದ ಕೆಲಸವನ್ನೂ ಮರೆತು, ಸೈಕಲ್ಲನ್ನೂ ಮರೆತು ಫೋಟೋ ಕ್ಲಿಕ್ಕಿಸತೊಡಗಿದೆ.

ಮಜಾ ಅನಿಸುತ್ತಿತ್ತು. ನಾನು ಈ ಕೆಂಬಾರೆ ಹಕ್ಕಿಗಳನ್ನು ನಾಚುಕೆಯ, ಸಂಕೋಚದ, ಏಕಾಂತ ಬಯಸುವ ಹಕ್ಕಿಗಳು ಅಂದುಕೊಂಡಿದ್ದೆ. ಎಷ್ಟು ಏಕಾಂತ ಪ್ರಿಯ ಹಕ್ಕಿಗಳೆಂದರೆ ಜೀವಮಾನ ಪೂರ್ತಿ ಜೊತೆಗಿರುವ ಸಂಗಾತಿಯ ಹಕ್ಕಿಯ ಜೊತೆಗೂ ಇವುಗಳು ಕಾಣಿಸಿಕೊಳ್ಳುವುದಿಲ್ಲ. ಸದಾ ಬೇರೆ ಬೇರೆಯಾಗಿ ಆಹಾರ ಹುಡುಕುತ್ತಿರುತ್ತವೆ. ಮಿಲನದ ಹೊತ್ತಲ್ಲಿ ಮತ್ತು ಆನಂತರ ಗೂಡುಕಟ್ಟಿ ಮೊಟ್ಟೆ ಇಟ್ಟು ಮರಿಗಳನ್ನು ಪಾಲಿಸುವ ಹೊತ್ತಲ್ಲಿ ಮಾತ್ರ ಗಂಡಹೆಂಡಿರಂತೆ ಜೊತೆಗಿರುವ ಹಕ್ಕಿಗಳು ಇವು. ಅಷ್ಟೊಂದು ಏಕಾಂತ ಪ್ರಿಯ ಹಕ್ಕಿಗಳು. ಆದರೆ ಅಚ್ಚರಿಯಾಗುವಂತೆ ಈ ದ್ವೀಪದ ಕಡಲ ತೀರದಲ್ಲಿ ಹೆಂಗಸೊಬ್ಬಳು ಎಸೆಯುತ್ತಿರುವ ಕಲಗಚ್ಚಿನ ಆಸೆಯಿಂದ ಕಾಗೆಗಳೊಡನೆ ಸ್ಪರ್ಧೆಗಿಳಿದಿವೆ. ನೋಡು ನೋಡುತ್ತಿದ್ದಂತೆ ಕಲಗಚ್ಚು ಎಸೆಯಲು ಕಡಲಿಗಿಳಿಯುತ್ತಿರುವ ಇನ್ನೊಬ್ಬಳು ಸ್ತ್ರೀ. ಕಾಕ ಸಮೂಹ ಈಕೆಯನ್ನು ಬಿಟ್ಟು ಆಕೆಯ ಕಡೆ ಹಾರಿ ಹೋದವು. ಜೊತೆಗೆ ಮಂದಗಮನೆಯರಂತೆ ಈ ಕೆಂಬಾರೆ ಹಕ್ಕಿಗಳೂ ಹಾರಿದವು. ಅಷ್ಟರಲ್ಲಿ ಈ ಹಿಂದೆ ದ್ವೀಪವೊಂದರಲ್ಲಿ ಪರಿಚಿತನಾಗಿದ್ದ ಪೋಲೀಸನೊಬ್ಬ ನನ್ನ ಹಿಂದೆಯಿಂದ ಬಂದು ಬೆನ್ನು ತಟ್ಟಿದ. ತಿರುಗಿ ನೋಡಿದರೆ ಪರಿಚಿತ ಪೋಲೀಸು. ಆತನಿಗೂ ಈ ದ್ವೀಪಕ್ಕೆ ಅದಾಗ ತಾನೇ ವರ್ಗಾವಣೆಯಾಗಿತ್ತು. ಈ ದ್ವೀಪದಲ್ಲಿ ಇಷ್ಟೊಂದು ಕೆಂಬಾರೆ ಹಕ್ಕಿಗಳನ್ನು ನೋಡಿ ಅಚ್ಚರಿಯಾಗಿತ್ತು. ಜೊತೆಗೆ ನನ್ನನ್ನು ನೋಡಿಯೂ. ಅದಾಗಲೇ ಈ ಹಕ್ಕಿಗಳ ಕುರಿತು ಒಂದಿಷ್ಟು ಮಾಹಿತಿ ಪಡೆದಿದ್ದ ಆತ ಅದನ್ನು ವಿವರಿಸತೊಡಗಿದ.

(ಮುಂದುವರಿಯುವುದು)

ಮಿನಿಕಾಯ್ ಕಥಾನಕ ಮೊದಲ ಕಂತಿನಿಂದ ಓದಲು ಇಲ್ಲಿ ಕ್ಲಿಕ್ ಮಾಡಿ