ಹಂದಿಯನ್ನು ಕಬಳಿಸಿದರೆ ನರಮನುಷ್ಯನಿಗೂ ಹಂದಿಯ ಗುಣಗಳು ಬರುತ್ತವೆ ಎಂಬುದಾಗಿ ಹಂದಿಯನ್ನು ಕಬಳಿಸದ ಪಂಗಡಕ್ಕೆ ಸೇರಿದ ಮತಪಂಡಿತರೊಬ್ಬರು ಇತ್ತೀಚೆಗೆ ಫರ್ಮಾನು ಹೊರಡಿಸಿದ್ದಾರೆ. ಇದು ಹೀಗೇ ಮುಂದುವರಿದರೆ ಕೋಳಿಯನ್ನು ಕಬಳಿಸದ ಪಂಗಡಕ್ಕೆ ಸೇರಿದ ಮತಪಂಡಿತರು, ಜಿರಳೆಯನ್ನು ಕಬಳಿಸದ ಪಂಗಡಕ್ಕೆ ಸೇರಿದ ಮತಪಂಡಿತರು, ಕೋಣವನ್ನು ಕಬಳಿಸದ ಪಂಗಡಕ್ಕೆ ಸೇರಿದ ಮತಪಂಡಿತರುಗಳು ಇವುಗಳನ್ನೆಲ್ಲಾ ಕಬಳಿಸುವ ನರಮನುಷ್ಯರ ಕುರಿತು ಇಂತಹದೇ ಫರ್ಮಾನುಗಳನ್ನು ಹೊರಡಿಸುತ್ತಾರೆ. ಹಾಗಾಗಿ ಇನ್ನುಮುಂದೆ ಈ ಭೂಲೋಕದ ತುಂಬ ಹಂದಿಯ ಗುಣವುಳ್ಳ, ಕೋಣನ ಗುಣವುಳ್ಳ, ಜಿರಳೆಯ ಗುಣವುಳ್ಳ, ಕೋಳಿಯ ಗುಣವುಳ್ಳ ಹೀಗೆ ಮನುಷ್ಯರು ಕಬಳಿಸುವ ಎಲ್ಲ ಜಂತುಗಳ ಗುಣವುಳ್ಳ ಮನುಷ್ಯರೇ ತುಂಬಿಕೊಳ್ಳಲಿದ್ದಾರೆ.

ಇದರಿಂದಾಗಿ ಇಲ್ಲಿಯ ತನಕ ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದ ಈ ನಾಡು ಇನ್ನುಮುಂದೆ ಕಬಳಿಸಲ್ಪಟ್ಟವರ ನೆಲವೀಡಾಗಿ, ಅಸಲಿ ಮನುಷ್ಯಗುಣಗಳಿಂದ ಮುಕ್ತವಾಗಿ ಜನಾಂಗದ್ವೇಷ, ಕೋಮುವಾದ, ಯುದ್ಧ ಮತ್ತು ಅಣುಬಾಂಬುಗಳಿಂದ ಮುಕ್ತವಾಗಿ ಶಾಂತಿಯೂ, ನೆಮ್ಮದಿಯೂ ಇಲ್ಲಿ ತುಂಬಿಕೊಂಡು ನಾನಾದರೋ ನೆಮ್ಮದಿಯಿಂದ ನಿದ್ದೆ ಮಾಡಬಹುದು ಎಂಬ ಕನಸು ಕಾಣುತ್ತಿದ್ದೆ. ಆದರೆ ದುರಾದೃಷ್ಟವೋ ಎಂಬಂತೆ ಈ ಕನಸಿನ ಫಲವಾಗಿಯೇ ನನ್ನಲ್ಲಿ ಕೊಂಚ ಅಶಾಂತಿಯೂ, ಹೆದರಿಕೆಯೂ ಉಂಟಾಯಿತು. ಏಕೆಂದರೆ ಕೆಲವು ಕಾಲದ ಹಿಂದೆ ಕೊಡಗಿನ ಕಾಡಿನೊಳಗಡೆ ಸಂಚರಿಸುತ್ತಿರುವಾಗ ನನ್ನ ಅಜ್ಞಾನ ಮತ್ತು ಮನುಷ್ಯ ಸಹಜ ಆಸೆಯಿಂದಾಗಿ ಬಹಳ ಸುಂದರಿಯಾಗಿ ಬೆಳೆದಿದ್ದ ನಾಡಹಂದಿಯೊಂದರ ಮಾಂಸವನ್ನು ಸೇವಿಸಿಬಿಟ್ಟಿದ್ದೆ. ಆ ನಾಡ ಹಂದಿಯನ್ನು ಬಹಳ ಜತನದಿಂದ ಸಾಕಿದ್ದ ಯಜಮಾನನೂ ಒಲ್ಲದ ಮನಸಿನಿಂದಲೇ ಅದನ್ನು ಸಂಹರಿಸಿದ್ದ. ಏಕೆಂದರೆ ಅವನು ಅದನ್ನು ಸಂಹರಿಸಲೇ ಬೇಕಾಗಿತ್ತು.

ಏಕೆಂದರೆ ದಟ್ಟಕಾಡಿನ ಗಡಿಯಲ್ಲಿ ಇದ್ದ ಆತನ ಮನೆಯ ಹಂದಿಗೂಡಿನಲ್ಲಿ ಸುಂದರಳಾಗಿ ಬೆಳೆಯುತ್ತಿದ್ದ ಆ ಹೆಣ್ಣು ಹಂದಿಯನ್ನು ಕೂಡಲೆಂದು ಕಾಡಿನೊಳಗಿಂದ ಗಂಡು ಕಾಡು ಗಂಡು ಹಂದಿಯೊಂದು ಬಂದು ರಂಪ ಮಾಡಿ ಹೋಗುತ್ತಿತ್ತು. ಹೋಗುವಾಗ ಆತನ ಬಾಳೆಯ ಗಿಡಗಳನ್ನೂ, ಗೆಣಸಿನ ಬುಡಗಳನ್ನೂ, ತರಕಾರಿಯ ಮಡಿಗಳನ್ನೂ ಧ್ವಂಸವೆಸಗಿ ಹೋಗುತ್ತಿತ್ತು. ಪ್ರತಿ ವರ್ಷ ನಿಯತ್ತಾಗಿ ಮರಿಗಳನ್ನು ಹೆತ್ತು ತನ್ನ ಆದಾಯವನ್ನು ಹೆಚ್ಚಿಸುತ್ತಿದ್ದ ಈ ಹೆಣ್ಣು ಹಂದಿಯನ್ನು ಉಳಿಸಿಕೊಂಡರೆ ಅದಕ್ಕೆ ಬದಲಾಗಿ ತನ್ನ ತೋಟವನ್ನೂ, ಗೆಣಸು, ತರಕಾರಿಗಳನ್ನೂ ಕಾಡುಹಂದಿಗಳಿಗೆ ಬಿಟ್ಟುಕೊಡಬೇಕಾಗುತ್ತದೆ ಎಂಬುದನ್ನು ಅರಿತ ಆತ ಕೊನೆಗೊಂದು ದಿನ ಅದನ್ನು ಒಲ್ಲದ ಮನಸಿನಿಂದಲೇ ಗುಂಡಿಟ್ಟು ಕೊಂದಿದ್ದ. ಅದನ್ನು ಕೊಂದ ಸಂಕಟವನ್ನು ಹಂಚಿಕೊಳ್ಳಲು ತನ್ನ ಗೆಳೆಯರನ್ನು ಊಟಕ್ಕೆ ಕರೆದಿದ್ದ. ಆ ದಾರಿಯಲ್ಲಿ ಏನಕ್ಕೋ ಹೋಗುತ್ತಿದ್ದ ನಾನು ಈ ಸಂಕಟ ಹಂಚಿಕೊಳ್ಳುವ ಔತಣಕೂಟದಲ್ಲಿ ಸಿಕ್ಕಿಹಾಕಿಕೊಂಡಿದ್ದೆ.

ಪ್ರಪಂಚದಲ್ಲಿ ಬೇರೆಲ್ಲೂ ಕಾಣಸಿಗದ ಪ್ರಕೃತಿ ಸೌಂದರ್ಯವೂ, ಪ್ರಪಂಚದ ಬೇರೆಲ್ಲೂ ಸಿಗದ ಗೇರುಹಣ್ಣಿನ ಸಾರಾಯಿಯೂ, ಅಂಬಟೆ ಹಣ್ಣಿನ ಉಪ್ಪಿನಕಾಯಿಯೂ, ಪ್ರೀತಿಯ ಹೆಣ್ಣುಹಂದಿಯನ್ನು ಕೊಲ್ಲಲೇಬೇಕಾಗಿಬಂದ ಆ ಯಜಮಾನನ ಸಂಕಟವೂ ಎಲ್ಲವೂ ಸೇರಿಕೊಂಡು ಅಲ್ಲೊಂದು ಮಹಾಕಾವ್ಯದಂತ ರೌದ್ರಶೋಕಶೃಂಗಾರಭರಿತ ವಾತಾವರಣ ಸೃಷ್ಟಿಯಾಗಿತ್ತು. ಒಲ್ಲದ ಮನಸಿನಿಂದಲೇ ಆ ಔತಣಕೂಟವನ್ನು ಸೇರಿಕೊಂಡಿದ್ದ ನಾನು ಆಮೇಲೆ ಆ ಮಹಾಕಾವ್ಯದ ಸುಳಿಗೆ ಸಿಲುಕಿಕೊಂಡು ನನ್ನದು ಯಾವಜಾತಿ, ಯಾವಕುಲ, ಯಾವಪಂಗಡ ಎಂಬುದನ್ನು ಮರೆತು ಅಲ್ಲಿ ಬಡಿಸಿದ್ದನೆಲ್ಲಾ ಕಬಳಿಸಿಬಿಟ್ಟಿದ್ದೆ.

‘ಸಾಹೇಬರೇ ನೀವು ಇದನ್ನು ತಿನ್ನಬಾರದಲ್ಲಾ, ಇದು ನಿಮಗೆ ನಿಷೇಧವಿದೆಯಲ್ಲಾ, ಇದನ್ನು ತಿಂದರೆ ನಿಮ್ಮನ್ನು ಹೊರಗೆ ಹಾಕುತ್ತಾರಲ್ಲಾ’ ಎಂದು ತನ್ನ ಪ್ರೀತಿಯ ಹೆಣ್ಣು ಹಂದಿಯನ್ನು ಅನಿವಾರ್ಯವಾಗಿ ಕೊಲ್ಲಬೇಕಾಗಿ ಬಂದ ಆ ಯಜಮಾನ ಅರಚುತ್ತಿದ್ದರೂ ಆತನ ಶೋಕಸಾಗರದ ಮುಂದೆ ನನ್ನ ಧರ್ಮ ದ್ರೋಹದ ಕೃತ್ಯ ಏನೇನೂ ಅಲ್ಲ ಎಂಬಂತೆ ನಾನು ಕಬಳಿಸುತ್ತಲೇ ಇದ್ದೆ. ಆ ಇರುಳು ನಾನು ಅಲ್ಲಿಯೇ ಇದ್ದೆ.

ಕಾನನದ ನಡುವಿನ ಮಲೆಯೊಂದರ ಮೇಲಿರುವ ಆ ಮನೆಯ ಅಂಗಳದ ಇರುಳಿನ ನೀರವ ಮೌನ. ಆಕಾಶದಿಂದ ಇಳಿದೇ ಬಿಡುತ್ತಿದೆಯೇನೋ ಎಂಬಂತೆ ತೂಗುತ್ತಿರುವ ತಾರೆಗಳ ತೋಟ. ಆ ಹೆಣ್ಣು ಹಂದಿಯ ಹತ್ಯೆಯ ಸಾಕ್ಷಿಯೇನೋ ಎಂಬಂತೆ ಸುಳಿದು ಬರುತ್ತಿರುವ ಹಸಿ ನೆತ್ತರಿನ ವಾಸನೆ, ಕುಡಿದು ಹರಟುತ್ತಿರುವವರ ಬಾಯಿಂದ ಬರುತ್ತಿರುವ ಗೇರು ಸಾರಾಯಿಯ ಪರಿಮಳ ಮತ್ತು ನನ್ನ ಧರ್ಮದ್ರೋಹದ ವ್ಯಥೆ. ಆದರೆ ಇದು ಯಾವುದಕ್ಕೂ ಕ್ಯಾರೇ ಅನ್ನದೆ ಆ ಮನೆಯ ಪಕ್ಕದಿಂದ ತನ್ನ ಪ್ರೇಮಿಯನ್ನು ಕಳಕೊಂಡ ಆ ಕಾಡು ಗಂಡು ಹಂದಿ ಕೂಗಿಕೊಳ್ಳುತ್ತಿತ್ತು. ತನ್ನ ಪ್ರಾಣಸಖಿಯನ್ನು ಕಳಕೊಂಡ ಗಂಡು ಹಂದಿಯೊಂದರ ನೋವಿನ ಕೂಗು. ಯಾವ ನರಮನುಷ್ಯನಿಗೂ ಅರಿವಾಗದ ಅದರ ಶೋಕ ಸಂಗೀತ. ಊರ ಹಂದಿಯನ್ನು ಕಾಡು ಹಂದಿ ಸೇರಬಾರದೆಂಬುದು ನರ ಮನುಷ್ಯರು ಮಾಡಿದ ನಿಯಮ. ಇದರ ಪರಿವೆಯಿಲ್ಲದೆ ತನ್ನ ಸಖಿಯನ್ನು ಇರುಳಲ್ಲಿ ಸೇರುತ್ತಿದ್ದ ಅದರ ಅಧಮ್ಯ ಪ್ರಣಯೋತ್ಸಾಹ ಮತ್ತು ನವಿರು ನವಿರು ತುಡಿತಗಳು.ಈಗ ತನ್ನ ಸಖಿಯ ಹಸಿನೆತ್ತರಿನ ಪರಿಮಳವನ್ನು ಕಾಡಿನೊಳಗಿಂದಲೇ ಘ್ರಾಣಿಸಿಕೊಂಡು ಶೋಕ ಸಾಗರದಲ್ಲಿ ಮುಳುಗಿರುವ ಅದರ ಆಕ್ರಂದನ ಮತ್ತು ಇದು ಯಾವುದರ ಪರಿವೆಯೇ ಇಲ್ಲದೆ ಕೆಟ್ಟ ಜೋಕುಗಳನ್ನು ಹಂಚಿಕೊಳ್ಳುತ್ತ ಹರಟುತ್ತಿರುವ ಕುಡುಕ ಗಂಡಸರು.

ಇನ್ನು ಮುಂದೆ ನಾನಂತೂ ಮನುಷ್ಯರ ನಡುವೆ ಬದುಕಲೇ ಬಾರದೆಂದು ತೀರ್ಮಾನಿಸಿ ಆ ಇರುಳು ನಾನು ಅಲ್ಲೇ ನಿದ್ದೆಹೋಗಿದ್ದೆ ಮತ್ತು ಬೆಳಗೆ ಎದ್ದವನು ಅದನ್ನು ಮರೆತು ಮತ್ತೆ ನರಮನುಷ್ಯನಂತೆ ಬದುಕಲು ಶುರುಮಾಡಿದ್ದೆ. ಹಂದಿಯನ್ನು ಕಬಳಿಸಿದ ಮನುಷ್ಯನಿಗೆ ಹಂದಿಯ ಗುಣಗಳು ಬರುತ್ತವೆ ಎಂಬುದಾಗಿ ಈ ದರ್ಮಗುರುಗಳು ಇತ್ತೀಚೆಗೆ ಫರ್ಮಾನು ಹೊರಡಿಸಿದ ಮೇಲೆ ಈಗ ಮತ್ತೆ ಯಾಕೋ ಹಂದಿಯ ಗುಣಗಳ ಕುರಿತ ನನ್ನ ಒಲವು ಹೆಚ್ಚಾಗುತ್ತಿದೆ ಮತ್ತು ಮನುಷ್ಯನ ಕಟ್ಟುಪಾಡುಗಳಿಂದಾಗಿ ತನ್ನ ಪ್ರಾಣವನ್ನೇ ಕಳಕೊಳ್ಳಬೇಕಾಗಿ ಬಂದ ಹೆಣ್ಣು ನಾಡುಹಂದಿ ಮತ್ತು ಗಂಡು ಕಾಡುಹಂದಿಗಳ ವೃತ್ತಾಂತ ಮತ್ತೆ ಮತ್ತೆ ನನ್ನನ್ನು ಕೊರೆಯುತ್ತಿದೆ.

ಅದೂ ಅಲ್ಲದೆ ತನ್ನ ಬಾಳೆತೋಟ, ಮರಗೆಣಸಿನ ಬುಡ ಮತ್ತು ತರಕಾರಿ ಮಡಿಯ ಮೇಲಿನ ಕಾಳಜಿಯಿಂದಾಗಿ ತಾನು ಮಗಳಂತೆಯೇ ಪ್ರೀತಿಸುತ್ತಿದ್ದ ಹೆಣ್ಣು ಹಂದಿಯನ್ನು ಗುಂಡಿಟ್ಟು ಕೊಲ್ಲಲೇಬೇಕಾಗಿ ಬಂದ ಅಸಹಾಯಕ ರೈತನ ಮಾನಸಿಕ ಒಳತೋಟಿಗಳುಗಳೂ ಇನ್ನಿಲ್ಲದಂತೆ ಕಾಡುತ್ತಿವೆ. ಮತ್ತು ಇವೆಲ್ಲಕ್ಕಿಂತ ಮಿಗಿಲಾಗಿ ಆ ದಾರಿಯಲ್ಲಿ ಹೋಗುತ್ತಾ ಅಚಾನಕ್ಕಾಗಿ ಆ ರೈತನ ಆ ಶೋಕದ ಔತಣಕೂಟದಲ್ಲಿ ಸಿಲುಕಿಕೊಂಡು ಈ ಧರ್ಮದ್ರೋಹದಂತಹ ಪಾಪಕ್ಕೆ ಈಡಾದ ಈ ಬಡ ಕನ್ನಡ ಅಂಕಣಕಾರನ ವ್ಯಥೆಯನ್ನು ಯಾವ ಛಂದಸ್ಸಿನಲ್ಲಿ ಬರೆಯಲಿ ಎಂಬ ಸಂಕಟಗಳೂ ಶುರುವಾಗಿದೆ.

ದೂರದಲ್ಲಿರುವ ಆ ಧರ್ಮ ಗುರುಗಳ ಶಿಷ್ಯಂದಿರು ಯಾರಾದರೂ ಈ ಪಾಪಿಯನ್ನು ಪರೀಕ್ಷಿಸಿ ನನ್ನಲ್ಲೇನಾದರೂ ಹತ್ತು ವರ್ಷಗಳ ಹಿಂದೆ ಕಬಳಿಸಿದ ಆ ಹೆಣ್ಣುಹಂದಿಯ ಗುಣಗಳೇನಾದರೂ ಕಂಡುಬಂದಲ್ಲಿ ಕಾಡಲ್ಲಿರುವ ಆ ಗಂಡು ಹಂದಿಯ ಬಳಿ ಬಿಡಿ ಎಂದು ಕೇಳಿಕೊಳ್ಳುತ್ತಿರುವೆ. ಮತ್ತು ಗಂಡಸರನ್ನೂ ಹೆಂಗಸರನ್ನೂ ಗಂಡು ಹಂದಿಯನ್ನೂ ಹೆಣ್ಣು ಹಂದಿಯನ್ನೂ , ಮತಪಂಡಿತರನ್ನೂ, ಪಾಪಿಗಳನ್ನೂ ಕೋಣವನ್ನೂ ಎತ್ತನ್ನೂ ಎಮ್ಮೆಯನ್ನೂ ಹಸುವನ್ನೂ ಕರುವನ್ನೂ ಎಲ್ಲವನ್ನೂ ಏಕಪ್ರಕಾರದ ತನ್ನ ಅದ್ಭುತ ಮಮತೆಯಿಂದ ಸೃಷ್ಟಿಸಿದ ಆ ಪಡೆದವನು ಈ ಪಾಪಿಯಾದ ಅಂಕಣಕಾರನನ್ನು ಮಾಫ್ ಮಾಡಲಿ ಎಂದೂ ಬೇಡಿಕೊಳ್ಳುತ್ತೇನೆ