ಕಥಾಗತವನ್ನು ಓದುತ್ತಾ ಹೋದಂತೆ ಇಂದಿನ ಕಾಲಮಾನದಿಂದ ಕೊಂಡೊಯ್ಯುವ ಕಲೆ ಡಾ. ನವೀನ್ ಅವರು ಸಿದ್ಧಿಸಿಕೊಂಡದ್ದು ವೇದ್ಯವಾ ಆಶ್ಚರ್ಯವಾಗುತ್ತದೆ. ಜೊತೆಗೆ ತಮಿಳಿನ ಕುರಿತಾದ ಭಾವನೆ ಸ್ಪುಟವಾಗುವುದು ಮಧ್ಯದಲ್ಲಿ, ಮಹಾಬಲಿಪುರವನ್ನು ಚಾಳುಕ್ಯರ ಶಿಲ್ಪಕ್ಕೆ ತಂದು ನಿಲ್ಲಿಸುವ ತುಲನೆಯ ಜೊತೆಗೆ ಒಂದು ವಿಷಾದ ಹೊರಹೊಮ್ಮುತ್ತದೆ. ಸುನಾಮಿಯ ಹೊಡೆತಕ್ಕೆ ಮುಲು ಇದು ಸಿಗಲಾರದೇನೋ ಎನ್ನುವ ಭಾವನೆ ಕೆದಕುತ್ತದೆ. ಮಗಧ ಮಹಾಜನಪದ ಇರಬಹುದು ನಾಲಂದಾ ಇರಬಹುದು, ಇವರ ಬರಹದಲ್ಲಿ ಕಾಡಿ ಕೆದಕುತ್ತದೆ. ನಾಲಂದಾದ ಅನ್ವೇಷಣೆಗೂ ಮೊದಲು ನಾಲಂದಾ ಹೀಗಿತ್ತು ಎನ್ನುವುದು ನವದ್ವೀಪದಂಥಹ ಅಪ್ಪಟ ವೈದಿಕ ನಗರಿಗಳು.
ನವೀನ ಗಂಗೋತ್ರಿ ಕಥಾಸಂಕಲನ “ಕಥಾಗತ”ಕ್ಕೆ ಸದ್ಯೋಜಾತ ಭಟ್ಟ ಬರೆದ ಮುನ್ನುಡಿ

‘ಸುರತ್ಕಲಾಲಾಪ-ವಿಲಾಸಕೋಮಲಾ ಕರೋತಿ ರಾಗಂ ಹೃದಿ ಕೌತುಕಾಧಿಕಮ್’ ಇದು ಬಾಣ ಭಟ್ಟನ ಕಾದಂಬರಿಯಲ್ಲಿ ಬರುವ ಒಂದು ಶ್ಲೋಕದ ತುಣುಕು. ಒಮ್ಮೆ ನಮ್ಮನ್ನು ಕಾದಂಬರಿಯ ಲೋಕಕ್ಕೆ ಕೊಂಡೊಯ್ಯುವುದು ಕಥಾಗತ. ಹೌದು ಬಾಣ ಮತ್ತು ಭಾರವಿಯ ಪರಿಚಯವಿದ್ದರೆ ಡಾ. ನವೀನ್ ಗಂಗೋತ್ರಿಯವರಿಗೆ ಆ ಬಾಣ, ಭಾರವಿ ಎನ್ನುವ ಪಿತೃದೇವತೆಗಳು ಆವಾಹಿಸಿರಬಹುದೇನೋ ಎನ್ನುವಷ್ಟರ ಮಟ್ಟಿಗೆ ಕಥಾಗತ ಆವರಿಸಿ ಬಿಡುತ್ತದೆ. ನಾನಿಲ್ಲಿ ಮುಖಸ್ತುತಿಯನ್ನು ಮಾಡುತ್ತಿಲ್ಲ. ಇಲ್ಲಿ ಕಥಾಗತದಲ್ಲಿ ಇವರು ಒಂದಷ್ಟು ಐತಿಹಾಸಿಕ ವಿಷಯಗಳನ್ನು ವಿವರಿಸುತ್ತಾ ಹೋಗುವಾಗ ಗಂಭೀರತೆಯನ್ನು ಅತ್ಯಂತ ಸರಳೀಕರಿಸಿ ಸುಲಲಿತವಾಗಿ ಹೇಳುತ್ತಾ ಸಾಗಿದ್ದಾರೆ. ಆರಂಭದಲ್ಲಿಯೇ ವಡ್ಡಿಸೇನನನ್ನು ಹಿಡಿದು ವಿಷಯವನ್ನು ಹೇಳುತ್ತಾ ಸಾಗಿದ್ದಾರೆ. ಹಾಗಂತ ವಡ್ಡಿಸೇನ ಸಹಜ ಶೈಲಿಯಲ್ಲಿ ಪರಿಸರದ ವರ್ಣನೆ ಮಾಡುವುದಿಲ್ಲ. ಸ್ವತಃ ಕೃತಿಕಾರರು ಮಾಡುವುದು ನಮಗೆ ಅವನೇ ವರ್ಣಿಸಿದಂತೆ ಭಾಸವಾಗುತ್ತದೆ.

(ನವೀನ ಗಂಗೋತ್ರಿ)

ಇಲ್ಲಿ ಇನ್ನೊಂದು ನನ್ನನ್ನು ಕಟ್ಟಿ ಹಿಡಿಯಿತು; ವಡ್ಡಿಸೇನ ಎನ್ನುವ ಹೆಸರನ್ನು ಬಳಸಿಕೊಂಡಿರುವುದು. ವಡ್ಡಿ, ವದ್ಧಿ ಮುಂತಾದ ಪದಪ್ರಯೋಗ ಮೊದಲು ಬಳಕೆಗೆ ತಂದದ್ದು ಕದಂಬರು. ಧಾರವಾಡ ಜಿಲ್ಲೆಯ ನಿರ್ಗುಂದದ ಹಳೆವಾಸನ ಶಾಸನದಲ್ಲಿ ಪ್ರಾಯಶಃ ಮೊದಲ ವಡ್ಡಿಯ ಉಲ್ಲೇಖ ಬರುತ್ತದೆ. ಅಂದರೆ ವಡ್ಡಿಯೇ ವರ್ಧಕಿಯಾಗಿ ಮುಂದೆ ಕನ್ನಡದ ಬಡಗಿಯಾಗುತ್ತಾನೆ. ಇಡೀ ಕಥಾಗತವನ್ನು ಇದೇ ವಡ್ಡಿಯಲ್ಲಿ ಹಿಡಿದಿಟ್ಟಿದ್ದಾರೆ. ಕದಂಬರ ಮಯೂರ ಶರ್ಮನ ಕಾಲಕ್ಕಾಗಲೇ ಬೌದ್ಧಧರ್ಮದ ಕೊಂಡಿ ಕಳಚಿಕೊಂಡು ಜೈನಧರ್ಮೀಯರಿಗೆ ರಾಜಧರ್ಮ ಬೋಧಿಸಿದ ಮಯೂರ ಶರ್ಮ ರಾಜಧರ್ಮದಲ್ಲಿ ಹಿಂಸೆಯ ವ್ಯಾಖ್ಯೆಗೆ ಅರ್ಥವಿಲ್ಲವೆಂದು ಜೈನರನ್ನು ದೂರೀಕರಿಸಿದ್ದ, ಹಾಗಂತ ನಂತರದ ರಾಜರು ಜೈನ ಮತ್ತು ಬೌದ್ಧ ಸರಯು ಮಾಡಿದ್ದಿದೆ. ಇಲ್ಲಿ ಡಾ. ನವೀನ್ ಅವರು ತಮ್ಮ ಬರವಣಿಗೆಯಲ್ಲಿ ಪ್ರಾಕೃತದ ಇದು, ಮೂಡಿಸಿ ಕದಂಬ ಮತ್ತು ಅವರಿಗೂ ಪೂರ್ವದ ಶಾತಕರ್ಣಿಗಳ ಕೊಂಡಿ ಭಾಸವಾಗುತ್ತದೆ.

ಕಥಾಗತವನ್ನು ಓದುತ್ತಾ ಹೋದಂತೆ ಇಂದಿನ ಕಾಲಮಾನದಿಂದ ಕೊಂಡೊಯ್ಯುವ ಕಲೆ ಡಾ. ನವೀನ್ ಅವರು ಸಿದ್ಧಿಸಿಕೊಂಡದ್ದು ವೇದ್ಯವಾ ಆಶ್ಚರ್ಯವಾಗುತ್ತದೆ. ಜೊತೆಗೆ ತಮಿಳಿನ ಕುರಿತಾದ ಭಾವನೆ ಸ್ಪುಟವಾಗುವುದು ಮಧ್ಯದಲ್ಲಿ, ಮಹಾಬಲಿಪುರವನ್ನು ಚಾಳುಕ್ಯರ ಶಿಲ್ಪಕ್ಕೆ ತಂದು ನಿಲ್ಲಿಸುವ ತುಲನೆಯ ಜೊತೆಗೆ ಒಂದು ವಿಷಾದ ಹೊರಹೊಮ್ಮುತ್ತದೆ. ಸುನಾಮಿಯ ಹೊಡೆತಕ್ಕೆ ಮುಲು ಇದು ಸಿಗಲಾರದೇನೋ ಎನ್ನುವ ಭಾವನೆ ಕೆದಕುತ್ತದೆ. ಮಗಧ ಮಹಾಜನಪದ ಇರಬಹುದು ನಾಲಂದಾ ಇರಬಹುದು, ಇವರ ಬರಹದಲ್ಲಿ ಕಾಡಿ ಕೆದಕುತ್ತದೆ. ನಾಲಂದಾದ ಅನ್ವೇಷಣೆಗೂ ಮೊದಲು ನಾಲಂದಾ ಹೀಗಿತ್ತು ಎನ್ನುವುದು ನವದ್ವೀಪದಂಥಹ ಅಪ್ಪಟ ವೈದಿಕ ನಗರಿಗಳು. ಅದನ್ನೂ ಮುಂದೆ ನವೀನರು ಬರೆಯಬಹುದೆನ್ನುವ ನಿರೀಕ್ಷೆ ಇದೆ.

ವೈಜಯಂತೀ ಪುರವೆಂದು ಕರೆಸಿಕೊಂಡ ಬನವಾಸಿ ಆಗಾಗ ತನ್ನ ಹೆಸರನ್ನು ಬದಲಾಯಿಸಿಕೊಳ್ಳುತ್ತ ಬಂದಿದೆ. ಆದರೆ ಬನವಾಸಿ ಹೆಸರೇ ಕನ್ನಡದ ಕಂಪನ್ನು ಸೂಸುವ ಹೆಸರು ಅನ್ನಿಸಿ ಬಿಡುತ್ತದೆ. ಬನವಾಸಿ ಅಂದಾಕ್ಷಣ ಕನ್ನಡದ ನೆನಪಾಗಿಯೇ ಆಗುತ್ತದೆ. ಅದಕ್ಕೆ ಕೇವಲ ಕದಂಬರು ಮಾತ್ರವೇ ಕಾರಣರು ಅಂತ ನಾನು ಭಾವಿಸುತ್ತಿಲ್ಲ. ಕದಂಬರು ಇದ್ದಲ್ಲೆಲ್ಲಾ ಬನವಾಸಿಯನ್ನು ನೆನಪಿಸಿಕೊಂಡದ್ದಂತೂ ಹೌದು, ದಕ್ಷಿಣದ ಭಾಷೆಗೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಕದಂಬರು ಕನ್ನಡದ ಜೊತೆಗೆ ಸಂಸ್ಕೃತವನ್ನು ಪೋಷಿಸಿಕೊಂಡು ಬಂದರು. ಬನವಾಸಿ ಕದಂಬರ ಕಾಲದ ನಂತರ ಹೊಗಳಿಸಿಕೊಂಡದ್ದು ಬಾದಾಮಿ ಚಾಳುಕ್ಯರ ಕಾಲದಲ್ಲಿ. ಬನವಾಸಿಯನ್ನು ಅದೆಷ್ಟು ಆಪ್ಯಾಯಮಾನವಾಗಿ ಕರೆದರು ಅಂದರೆ “ವರದಾ ತುಂಗ ತರಂಗ’ ಎಂದು ಚಾಳುಕ್ಯರ ಎರಡನೇ ಪೊಲೆಕೇಶಿಯ ಕುರಿತಾದ ಐಹೊಳೆಯ ಮೇಗುಟಿಯ ರವಿಕೀರ್ತಿಯ ಶಾಸನದಲ್ಲಿ ಕಾಣಿಸಿಕೊಳ್ಳುತ್ತದೆ. ಅಲ್ಲಿ ಬನವಾಸಿಯ ಕದಂಬರ ವರ್ಣನೆ ಬರುವಾಗ ರವಿಕೀರ್ತಿಯ ಪದ ಪ್ರಯೋಗವಂತೂ ಅಸದೃಶ. ವರದಾ-ತುಂಗ-ತರಂಗ- ವಿಲಸದ್ರಸ್ತಾವಲೀಮೇಖಲಾಮ್ | ವನವಾಸೀಮವದ್ಯತಃ ಸುರಪುರಪ್ರಸ್ಪರ್ಧಿನೀಂ ಸಂಪದಾ ಎಂದು ಕದಂಬರ ಪ್ರದೇಶದ ವರ್ಣನೆ ಮಾಡುತ್ತಾನೆ. ಇಂಥಹ ಒಂದೆರಡು ಶಾಸನಗಳು ಸಿಕ್ಕಿದರೆ ಕಥಾಗತದಂತಹ ಇನ್ನಷ್ಟು ರಸ ಭಕ್ಷಗಳು ಈ ಕೃತಿಕಾರರಿಂದ ಸಿಗುವುದಂತೂ ಸ್ಪಷ್ಟ, ಪ್ರಾಯಶಃ ಹರಿಷೇಣನ ಶಾಸನ ಮತ್ತು ವತ್ಸಭಟ್ಟಿಯ ಶಾಸನವಿಟ್ಟುಕೊಂಡು ಮುಂದೆ ಉದ್ದಂಥವೊಂದನ್ನು ಇದೇ ಕೃತಿಕಾರರು ಕನ್ನಡದಲ್ಲಿ ರಚಿಸಿದರೆ ನಾವು ಧನ್ಯರು.

(ಸದ್ಯೋಜಾತ ಭಟ್ಟ)

ಈ ಕಥಾಗತ ಭಾವನೆಗಳೊಂದಿಗೆ ಬಾಂಧವ್ಯ ಬೆಸೆಯುತ್ತದೆ. ಭಾವನೆಗಳನ್ನು ತಡಕಾಡುತ್ತದೆ. ವಿಜಯನಗರದ ಕಡೆ ಬಂದಾಗ ವಿಷಾದವೂ ಬಾಧಿಸುತ್ತದೆ. ಈ ಕೃತಿ ನನ್ನನೆಷ್ಟು ಬಾಧಿಸಿತೆಂದರೆ ಮೂರನೇ ಸಲ ಓದಿಸುವಷ್ಟು ಕಥಾಗತದಲ್ಲಿ ತಥಾಗತನೂ ಹಾಸುಹೊಕ್ಕಾಗಿ ಬಂದು ಬುದ್ಧಿಗೆ ಚುರುಕನ್ನು ಮುಟ್ಟಿಸುತ್ತಾನೆ. ಡಾ. ನವೀನ್ ಭಟ್‌(ಗಂಗೋತ್ರಿ)ಯವರಿಂದ ಇಂಥಹದ್ದೇ ಇನ್ನೂ ಹೆಚ್ಚಿನ ಕೃತಿಗಳು ಬರುತ್ತದೆ ಎನ್ನುವ ನಿರೀಕ್ಷೆಯಲ್ಲಿರುವೆ. ಸಮುದ್ರಗುಪ್ತನನ್ನು ತಡಕಾಡಿದರೆ ನಮ್ಮ ಭಾಗ್ಯವದು.

(ಕೃತಿ: ಕಥಾಗತ (ಕಥಾಸಂಕಲನ), ಲೇಖಕರು: ನವೀನ ಗಂಗೋತ್ರಿ, ಪ್ರಕಾಶಕರು: ಸ್ವಸ್ತಿ ಪ್ರಕಾಶನ, ಬೆಲೆ: 160/-)