ಸಮಾಜದ ಬಗ್ಗೆ ತೀವ್ರ ಕಾಳಜಿಯುಳ್ಳ ಚಿಂತಕನೊಬ್ಬ ಕನಲಿದಂತೆ ಹಿಂಸೆಯ ಬಗ್ಗೆ ಪದೇಪದೇ ಬರೆಯುವುದೇಕೆಂದರೆ, ಅಂಥ ಕಥನಗಳನ್ನು ಕಿವಿಯಿಂದ ಕಿವಿಗೆ, ಹೃದಯದಿಂದ ಹೃದಯಕ್ಕೆ ದಾಟಿಸುತ್ತ ಅವು ನಮ್ಮ ಸಾಕ್ಷಿಪ್ರಜ್ಞೆಯಿಂದ ಅಳಿಸಿಹೋಗದಂತೆ ಮಾಡುವ ಕಾರಣಕ್ಕಾಗಿ. ಇಷ್ಟು ಗಂಭೀರವಾದ ಸಂಗತಿಗಳನ್ನು ಚರ್ಚಿಸುವಾಗಲೂ ಜಿಆರ್ ಹೈಸ್ಕೂಲು ಫೇಲಾದ ಹುಡುಗನಿಗೂ ಅರ್ಥವಾಗಬೇಕೆಂಬ ಜವಾಬ್ದಾರಿಯಿಂದ ಬರೆಯುವುದು ಒಬ್ಬ ಕಮಿಟೆಡ್ ಚಳವಳಿಗಾರನ ಸಾಮಾಜಿಕ ಕಳಕಳಿಗೆ ಉದಾಹರಣೆಯಂತಿದೆ.
ಎಸ್‌. ಸಿರಾಜ್‌ ಅಹಮದ್‌ ಬರೆಯುವ ಅಂಕಣ

 

ಹಲವು ದಶಕಗಳಿಂದ ಬಿಡಿಯಾಗಿ ದೊರೆಯುತ್ತಿದ್ದ ಜಿ.ರಾಜಶೇಖರರ ಬರಹಗಳು ಒಟ್ಟಾಗಿ ಸಿಕ್ಕು ಅವರ ಚಿಂತನಾಕ್ರಮವನ್ನು ಅರ್ಥಮಾಡಿಕೊಳ್ಳಲು ಸಹಾಯಕವಾಗಿದೆ. ತಮ್ಮ ವಿಚಾರಗಳನ್ನು ಅಪಾರ ಮುಕ್ತತೆ-ದೃಢವಾದ ನಂಬಿಕೆಯಿಂದ ಮಂಡಿಸಿದರೂ, ಅವು ಅಳಿಸಲಾಗದ ಶಿಲಾಲೇಖಗಳಂತಾಗದೆ ನಿರಂತರ ವಾಗ್ವಾದಕ್ಕೆ ತೆರೆದುಕೊಂಡಿರಬೇಕೆಂಬ ನಂಬಿಕೆ ಅವರಲ್ಲಿ ಕಾಣಿಸುತ್ತದೆ. ನಿಜವಾದ ಚಿಂತಕನಿಗೆ ತನಗೆ ಸರಿಯೆನ್ನಿಸಿದ ವಿಚಾರಗಳನ್ನು ನಿರಂತರವಾಗಿ ಪ್ರತಿಪಾದಿಸುವ ಮುಕ್ತಸಾಮಾಜಿಕ ವಾತಾವರಣ ಮುಖ್ಯವೇ ಹೊರತು, ವಿಚಾರಗಳನ್ನು ಅಧಿಕೃತಗೊಳಿಸುವುದು ಮುಖ್ಯವಲ್ಲ.

ಇದುವರೆಗೆ, ಅವರ ಲಂಕೇಶ್ ಪತ್ರಿಕೆಯ ಬರಹಗಳು-ಪುಟ್ಟ ಪ್ರತಿಕ್ರಿಯೆಗಳು, ನೀನಾಸಂ-ಕೋಮುಸೌಹಾರ್ದವೇದಿಕೆಯ ಭಾಷಣಗಳಲ್ಲಿ ಪುತ್ತೂರಿನಂಥ ಸಣ್ಣಊರಲ್ಲಿ ನಡೆದ ಕೊಲೆ-ದೊಂಬಿಯಂಥ ದೈನಂದಿನ ಘಟನೆಗಳಿಂದ ಶುರು ಮಾಡಿ ಅಮೆರಿಕದ ಸಾಮ್ರಾಜ್ಯಶಾಹಿ ದಬ್ಬಾಳಿಕೆಯವರೆಗೆ ತೀವ್ರ ತಲ್ಲಣದಿಂದ ತಕ್ಷಣ ಮಾಡುತ್ತಿದ್ದ ಪ್ರತಿಕ್ರಿಯೆಗಳಲ್ಲಿ ಸಮಾಜಕ್ಕೆ ಬೇಕಾದ ಚಿಕಿತ್ಸಕ ನೋಟದ ಜರೂರು ಎದ್ದು ಕಾಣುವುದೇ ಹೊರತು ವಿಚಾರಗಳ ಧೂಳೆಬ್ಬಿಸುವ ಸಿದ್ಧಾಂತಿಯ ಸೋಗಾಗಲೀ, ಸರಳವಾಗಿದ್ದನ್ನೂ ಸಮಸ್ಯಾತ್ಮಕಗೊಳಿಸುವ ಅಕೆಡೆಮಿಕ್‍ ಚಿಂತಕರ ಗಾಳಿ ಗುದ್ದಾಟವಾಗಲೀ ಕಾಣುವುದಿಲ್ಲ. ಹಾಗಾಗಿಯೇ ಇಲ್ಲಿನ ಬರಹಗಳಲ್ಲಿ, ವ್ಯವಸ್ಥೆಯ ಯಜಮಾನಿಕೆ ಹಾಗೂ ಸಿದ್ಧಾಂತಗಳ ನಿರಂಕುಶತೆಯನ್ನು ಎದುರಿಸುತ್ತ ನಮ್ಮ ಕ್ರಿಯೆ-ಆಲೋಚನೆ-ಸಂವೇದನೆಗಳಲ್ಲಿ ಸ್ವಾಯತ್ತತೆಯನ್ನು ಉಳಿಸಿಕೊಳ್ಳಬೇಕೆಂಬ ಕಾಳಜಿ ನಿರಂತರವಾಗಿದೆ.

(ಜಿ.ರಾಜಶೇಖರ)

ಇಲ್ಲಿ ಅಮೆರಿಕದ ರಾಕ್ಷಸ ನೀತಿಯಿಂದಾಗಿ ಜಾಗತಿಕಮಟ್ಟದಲ್ಲಿ ಅಧಿಕೃತವಾಗಿ/ವ್ಯವಸ್ಥಿತವಾಗಿ ಹಬ್ಬುತ್ತಿರುವ ರಾಜಕೀಯ ಹಿಂಸೆ, ದೇಶದೊಳಗೆ ಕೋಮುವಾದಿ ಶಕ್ತಿಗಳಿಂದ ಸಾಮಾನ್ಯವಾಗುತ್ತಿರುವ ಧಾರ್ಮಿಕ ಹಿಂಸೆ ಮತ್ತು ಅದರಿಂದ ಹುಟ್ಟಿದ ಅಸಹನೆ-ದ್ವೇಷಗಳನ್ನು ನಿರಂಬಳವಾಗಿ ಮುಂದುವರಿಸುತ್ತ ಅವುಗಳಿಗೆ ಪೂರ್ಣ ಸಹಕಾರವನ್ನು ನೀಡುತ್ತಿರುವ ನಾಗರಿಕ ಸಮಾಜದ ಹಿಂಸೆಗಳನ್ನು ವಿರೋಧಿಸುವ ಬರಹಗಳಿವೆ. ಮುಖ್ಯವಾಗಿ, ನಮ್ಮ ಸುತ್ತಮುತ್ತ ಸಾಮಾನ್ಯವಾಗಿ ಕಾಣುವ ಘಟನೆಗಳ, ಆದರೆ ಅವುಗಳ ಸೂಕ್ಷ್ಮ ವಿವರಗಳ ಮೂಲಕವೇ ವಾದವನ್ನು ಬೆಳೆಸುವ ಕ್ರಮವನ್ನು ಮೊದಲೆರಡು ಭಾಗದ ಬರಹಗಳಲ್ಲಿದೆ. ಅದರ ಮುಂದುವರಿಕೆಯಾಗಿಯೇ ರಾಷ್ಟ್ರ, ಧರ್ಮ, ಅಭಿವೃದ್ಧಿ, ವಿಜ್ಞಾನ, ವ್ಯವಸ್ಥೆ, ಪ್ರಭುತ್ವಗಳು ಮನುಷ್ಯ ಬದುಕಿನ ಇರಸ್ತಿಕೆಯನ್ನೇ ಹಿಂಸ್ರವಾಗಿಸಿರುವ, ಅಸಹನೀಯವಾಗಿಸಿರುವ ವಿವರಗಳನ್ನು ಕೊನೆಯ ಭಾಗದ ಹಲವು ಸಾಹಿತ್ಯಕೃತಿಗಳ ವಿಶ್ಲೇಷಣೆಯಲ್ಲಿ ಶೋಧಿಸಲಾಗಿದೆ.

ಹಾಗೆ ನೋಡಿದರೆ ಜಿಆರ್, ಸಮಾಜವನ್ನು ಕದಡುವ ವಿದ್ಯಮಾನಗಳನ್ನು ವಿಶ್ಲೇಷಿಸುವ ಕ್ರಮ ಮತ್ತು ಬಹುಪಾಲು ಅದೇ ಹಿನ್ನೆಲೆಯಾಗಿರುವ ಸಾಹಿತ್ಯ ಕೃತಿಗಳನ್ನು ವಿಶ್ಲೇಷಿಸುವ ಕ್ರಮ ಏಕರೂಪದ್ದೇ ಆಗಿ ಕಂಡರೂ, ಅವರ ರಾಜಕೀಯ-ಸಾಮಾಜಿಕ ನಿಲುವುಗಳು ಕೃತಿವಿಮರ್ಶೆಯ ದೃಷ್ಟಿಯನ್ನು ಊನಗೊಳಿಸಿದಂತಿಲ್ಲ.

ರಾಜಕೀಯ ಹಿಂಸೆ, ಧಾರ್ಮಿಕ ಹಿಂಸೆ ಮತ್ತು ಸಭ್ಯಸಮಾಜದ ಸಮ್ಮತಿಯಿಂದ ನಿರಾತಂಕವಾಗಿ ನೆರವೇರುತ್ತಿರುವ ನಾಗರಿಕ ಹಿಂಸೆಯನ್ನು ಪರಿಶೀಲಿಸುವ ಬರಹಗಳು ಇಲ್ಲಿವೆ. ಪ್ರಭುತ್ವಗಳು ಸೃಷ್ಟಿಸುತ್ತಿರುವ ರಾಜಕೀಯ ಹಿಂಸೆಯನ್ನು ಕುರಿತು ತಜ್ಞತೆಯಿಂದ ಬರೆದಿದ್ದರೂ, ಜಿಆರ್‍ ಅನ್ನು ಆಳವಾಗಿ ಕಾಡುವುದು ನಾಗರಿಕ ಜಗತ್ತಿನ ಸಮ್ಮತಿಯ ಹಿಂಸೆಯೇ. ಪ್ರಭುತ್ವದ ಹಿಂಸೆಯನ್ನು ತಪ್ಪಿಸಿಕೊಳ್ಳಲು ಸಾಮಾಜಿಕ ಕ್ರಿಯೆ-ಸಾಮುದಾಯಿಕ ವಿವೇಕದ ಒಳದಾರಿಗಳಿರುತ್ತವೆ. ಆದರೆ ನಾಗರಿಕ ಜಗತ್ತಿನಲ್ಲಿ ಹಾಸುಹೊಕ್ಕಾಗಿರುವ ಹಿಂಸೆಯ ಒಳಸುಳಿಗಳನ್ನು ನಿವಾರಿಸುವುದು ಅಸಾಧ್ಯವೆಂಬ ಇಂಗಿತ ಇಲ್ಲಿದೆ. ಪುತ್ತೂರಿನ ‘ಮುಗ್ಧ ಹುಡುಗಿ’ಯೊಬ್ಬಳನ್ನು ಬಲಾತ್ಕಾರ ಮಾಡಲೆತ್ನಿಸಿ ಕೊಲೆ ಮಾಡಿದ ‘ವಿಕೃತ ಕಾಮಿ’ಯೊಬ್ಬನ ಕೃತ್ಯವನ್ನು, ನಿರ್ದಿಷ್ಟ ಧರ್ಮಗಳಿಗೆ ಆರೋಪಿಸಿ, ಎರಡು ಧರ್ಮಗಳ ನಡುವಿನ ದ್ವೇಷದ ಘಟನೆಯೆಂಬಂತೆ ಬಿಂಬಿಸುವ ರಾಜಕೀಯ ಪಕ್ಷಗಳು, ಮಾಧ್ಯಮಗಳು ಮತ್ತು ಅದನ್ನೇ ಸರಾಗವಾಗಿ ನಂಬುವ ನಾಗರಿಕ ಸಮಾಜಗಳೆಲ್ಲವನ್ನೂ ಒಂದೇ ಬೀಸಿನಲ್ಲಿ ತೀಕ್ಷ್ಣ ವಿಮರ್ಶೆಗೆ ಒಳಪಡಿಸುತ್ತಾರೆ.

ಇಲ್ಲಿನ ಬರಹಗಳಲ್ಲಿ, ವ್ಯವಸ್ಥೆಯ ಯಜಮಾನಿಕೆ ಹಾಗೂ ಸಿದ್ಧಾಂತಗಳ ನಿರಂಕುಶತೆಯನ್ನು ಎದುರಿಸುತ್ತ ನಮ್ಮ ಕ್ರಿಯೆ-ಆಲೋಚನೆ-ಸಂವೇದನೆಗಳಲ್ಲಿ ಸ್ವಾಯತ್ತತೆಯನ್ನು ಉಳಿಸಿಕೊಳ್ಳಬೇಕೆಂಬ ಕಾಳಜಿ ನಿರಂತರವಾಗಿದೆ.

ಅನ್ಯಧರ್ಮೀಯನನ್ನು ಮದುವೆಯಾಗಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ, ಅಣ್ಣ-ತಮ್ಮಂದಿರ ಕೃತ್ಯವನ್ನು ‘ಮತಾಂಧ ಕೃತ್ಯ’ವೆಂದು ತೀರ್ಮಾನಿಸಿ, ಅದಕ್ಕೆ ಇಡೀ ಸಮುದಾಯವನ್ನು ಭಾಗೀದಾರನನ್ನಾಗಿಸುವ ಸಮಾಜದ ಅವಿವೇಕವನ್ನು ಕಟುವಾಗಿ ವಿರೋಧಿಸುತ್ತಾರೆ. ದೇಶವಿಭಜನೆಯ ಹತ್ಯಾಕಾಂಡದಲ್ಲಾಗಲೀ, ಗುಜರಾತಿನ ನರಮೇಧದಲ್ಲಾಗಲೀ ಪಾಲ್ಗೊಂಡವರು ಕೊಲೆಗಡುಕರಲ್ಲ, ಕ್ರಿಮಿನಲ್‍ ಗಳಲ್ಲ. ಅವರು ಎಲ್ಲರಂತೆ ತಿಂದುಂಡು ಬದುಕುವ ಜನಸಾಮಾನ್ಯರು ಎಂಬ ಗ್ರಹಿಕೆಯೇ ಹಿಂಸೆಯ ಅಗಾಧತೆ ಅಸಹನೀಯತೆಯನ್ನು ಹೆಚ್ಚಾಗಿಸುತ್ತದೆ.

ಗುಜರಾತಿನ ಬೆಸ್ಟ್‌ ಬೇಕರಿ ಪ್ರಕರಣವನ್ನು ವಿಶ್ಲೇಷಿಸುತ್ತ, ಬೆಸ್ಟ್‌ ಬೇಕರಿ ಹತ್ಯಾಕಾಂಡವನ್ನು ಆಗಗೊಳಿಸಿದ ಸಮಾಜದಲ್ಲಿ ಅದಕ್ಕೆ ಕಾರಣರಾದವರ ವಿರುದ್ಧ ನ್ಯಾಯಾಲಯ ತೀರ್ಪುನೀಡುತ್ತದೆಂದು ನಿರೀಕ್ಷಿಸುವುದೇ ಅಸಂಗತವೆನ್ನುತ್ತಾರೆ. ಇಂಥ ಹಿಂಸೆಯ ವಿಕಾರಸ್ವರೂಪ ಹಲವು ಬಗೆಗಳಲ್ಲಿ ಹೇಗೆ ಮೈದಳೆದಿದೆ ಎಂಬುದನ್ನು ನಿರ್ವಚಿಸಲು ಮಾಂಟೋ, ಅನಂತಮೂರ್ತಿ, ರಸೆಲ್, ಕಾಫ್ಕಾ, ನೆರೂದ, ಲಂಕೇಶರ ಬರಹಗಳನ್ನು ಚರ್ಚಿಸುತ್ತಾರೆ. ಕಮ್ಯುನಿಸ್ಟ್ ಸಿದ್ಧಾಂತಗಳ ಬಗೆಗಿನ ಮೋಹ ನೆರೂಡನನ್ನು ಸ್ಟಾಲಿನ್ ಹಿಂಸೆಗೆ ಹೇಗೆ ಕುರುಡಾಗಿಸಿತು? ಏಕರೂಪಿ ರಾಷ್ಟ್ರೀಯತೆಯ ಅವಾಂತರಗಳನ್ನು ಟ್ಯಾಗೋರರ ‘ಗೋರಾ’ಕೃತಿ ಹೇಗೆ ನಿರ್ವಹಿಸುತ್ತದೆ ಎಂದು ವಿಶ್ಲೇಷಿಸುವಂಥ ಬರಹಗಳನ್ನು ಗಮನಿಸಿದರೆ, ಮತ್ತೆಮತ್ತೆ ಜಿಆರ್ ಹಿಂಸೆಯ ಹಲವು ರೂಪಗಳು ಹಾಗೂ ಸಂಕಥನಗಳನ್ನು ಮರುಶೋಧಿಸುವಂತೆ ಕಾಣುತ್ತಾರೆ.

ಸಮಾಜದ ಬಗ್ಗೆ ತೀವ್ರ ಕಾಳಜಿಯುಳ್ಳ ಚಿಂತಕನೊಬ್ಬ ಕನಲಿದಂತೆ ಹಿಂಸೆಯ ಬಗ್ಗೆ ಪದೇಪದೇ ಬರೆಯುವುದೇಕೆಂದರೆ, ಅಂಥ ಕಥನಗಳನ್ನು ಕಿವಿಯಿಂದ ಕಿವಿಗೆ, ಹೃದಯದಿಂದ ಹೃದಯಕ್ಕೆ ದಾಟಿಸುತ್ತ ಅವು ನಮ್ಮ ಸಾಕ್ಷಿಪ್ರಜ್ಞೆಯಿಂದ ಅಳಿಸಿಹೋಗದಂತೆ ಮಾಡುವ ಕಾರಣಕ್ಕಾಗಿ. ಇಷ್ಟು ಗಂಭೀರವಾದ ಸಂಗತಿಗಳನ್ನು ಚರ್ಚಿಸುವಾಗಲೂ ಜಿಆರ್ ಹೈಸ್ಕೂಲು ಫೇಲಾದ ಹುಡುಗನಿಗೂ ಅರ್ಥವಾಗಬೇಕೆಂಬ ಜವಾಬ್ದಾರಿಯಿಂದ ಬರೆಯುವುದು ಒಬ್ಬ ಕಮಿಟೆಡ್ ಚಳವಳಿಗಾರನ ಸಾಮಾಜಿಕ ಕಳಕಳಿಗೆ ಉದಾಹರಣೆಯಂತಿದೆ.

ಆಧುನಿಕ ಜಗತ್ತಿನಲ್ಲಿ ಪ್ರಭುತ್ವ, ನ್ಯಾಯವ್ಯವಸ್ಥೆ, ರಾಷ್ಟ್ರೀಯತೆ, ಬಂಡವಾಳಶಾಹಿ, ಜಾಗತೀಕರಣ, ಅಭಿವೃದ್ಧಿ, ವಿಜ್ಞಾನ, ಅಣುಶಕ್ತಿ-ಎಲ್ಲವುಗಳು ಸಹ ಹಿಂಸೆಯನ್ನು ಅಧಿಕೃತಗೊಳಿಸುವ, ನಿರ್ವಹಿಸುವ ವಿದ್ಯಮಾನಗಳಾಗಿ ಪರಿಣಮಿಸಿವೆ. ಅಲ್ಲದೆ, ಇವೆಲ್ಲವುಗಳು ಹಿಂಸೆಗೆ ನ್ಯಾಯಬದ್ಧವಾದ ಪಾತ್ರವೊಂದನ್ನು ಕಲ್ಪಿಸಿ, ಅದಕ್ಕೆ ಎಲ್ಲಕ್ಕೂ ಅತೀತವಾದ ನೈತಿಕತೆ-ಸಮರ್ಥನೆಯನ್ನು ಸೃಷ್ಟಿಸಿವೆ ಎಂಬುದು ಇಲ್ಲಿನ ಬರಹಗಳಿಂದ ಸ್ಪಷ್ಟವಾಗುತ್ತದೆ. ಅದಕ್ಕೆ ಪರ್ಯಾಯವಾಗಿ ಪ್ರಶ್ನೆ, ಪ್ರತಿಭಟನೆ, ವಾಗ್ವಾದಗಳಿಂದ ಜಾಗೃತವಾದ ಸಮಾಜವೊಂದು ಇರಬೇಕೆಂದು ಜಿಆರ್‍ ಅವರ ಹಂಬಲವಾಗಿದೆ. ಅಂಥ ಕ್ರಿಯಾಶೀಲ ಸ್ವಾಯತ್ತ ನಾಗರಿಕ ಸಮಾಜವನ್ನು ರಸೆಲ್‍ ನಲ್ಲಿ, ಬಹುವಚನೀಯ ಭಾರತದ ಮಾದರಿಯನ್ನು ಕೆ.ವಿ.ಸುಬ್ಬಣ್ಣ, ಅನಂತಮೂರ್ತಿಯವರ ವಾಗ್ವಾದಗಳಲ್ಲಿ ಕಾಣುತ್ತಾರೆ. ಆದರೆ ಹಿಂಸೆಯ ಸ್ವರೂಪಗಳು- ಅದರ ಪರಮಾಧಿಕಾರವನ್ನು ನಿರ್ವಚಿಸುವಾಗ ಕಾಣುವ ಸೂಕ್ಷ್ಮತೆ, ಅದಕ್ಕಿರುವ ಪರ್ಯಾಯಗಳನ್ನು ಶೋಧಿಸುವಾಗ ಕಾಣಿಸುವುದಿಲ್ಲ.

ಅದಕ್ಕಾಗಿಯೇ ಏನೋ ‘ಗೋರಾ’ ಕೃತಿಯ ಚರ್ಚೆಯಲ್ಲಿ ಆನಂದಮೊಯಿಯ ಪಾತ್ರದ ಮಹತ್ವವನ್ನು, ‘ಗುಣಮುಖ’ ನಾಟಕದಲ್ಲಿ ಅಲಾವಿಖಾನನ ಪಾತ್ರವನ್ನು ಅವರು ಹೆಚ್ಚು ಅಸ್ಥೆಯಿಂದ ಗಮನಿಸಿದಂತಿಲ್ಲ. ಹಾಗಾಗಿಯೇ ಆಧುನಿಕ ಜಗತ್ತಿನ ಎಲ್ಲ ಹಿಂಸೆಯ ವಿಕಾರಗಳನ್ನು ಆತ್ಯಂತಿಕವಾಗಿ ವಿರೋಧಿಸಿದ ಗಾಂಧಿಚಿಂತನೆಯ ಪ್ರಸ್ತಾಪಗಳು ಅಲ್ಲಲ್ಲಿ ಬಂದರೂ ಅದನ್ನು ದೊಡ್ಡ ಪರ್ಯಾಯವೆಂಬಂತೆ ಕಾಣುವ ಬರಹಗಳು ಇಲ್ಲಿ ಕಾಣುವುದಿಲ್ಲ. ರೋಗ ಲಕ್ಷಣವನ್ನು ವಿವರಿಸುವಾಗ ತೋರುವ ಕಾಳಜಿ ರೋಗ ನಿದಾನದ ಸಂದರ್ಭದಲ್ಲಿ ಇಲ್ಲ.

(ಅಭಿನವ ಪ್ರಕಾಶನ, ಬೆಂಗಳೂರು, 2015. ಪು.300, ಬೆಲೆ: ರೂ.250)