ತುಂಬು ಗರ್ಭಿಣಿ ನನ್ನವ್ವ
ತುಂಬು ಗರ್ಭಿಣಿ ನನ್ನವ್ವ
ನರಕ ಅವಳ  ಕಣ್ಣೆದುರಿತ್ತು
ಕಗ್ಗತ್ತಲ ನಡು ರಾತ್ರಿಯಾಗಿತ್ತು
ನಿದ್ದೆಗೆ ಬಿದ್ದ ಜನರಿದ್ದರು
ಮತ್ತು ಎಚ್ಚರವಿದ್ದವರು ಅರಿವ ಮರೆತಿದ್ದರು
ಅವ್ವ ಮತ್ತು ನಾನು
ಇಬ್ಬರೇ ಕೋಣೆಯಲ್ಲಿ
ತುಂಬು ಗರ್ಭಿಣಿ ನನ್ನವ್ವ
ಏನೋ ಹೇಳಲು ಹಂಬಲಿಸುತ್ತಿದ್ದಳು
ಮೂರು ವರ್ಷದ ಕೂಸು ನಾನು
ಬಿಡುಗಣ್ಣರಳಿಸಿ
ಗ್ರಹಿಸಲು ಅಶಕ್ತಳು,
ಆದರೂ ಆಲಿಸಿದ್ದೆ ಅವಳಮ್ಮನಂತೆ ಬಗೆದು
ಅಳುವ ನೋಡಿ
ನಾನು ಅಳಲಾರಂಭಿಸಿದೆ
ನನ್ನವ್ವ ಒಮ್ಮೆ ನರಕದ ಬಾಗಿಲು
ಬಡಿದು ಬಂದಿದ್ದಳು ಒಂಟಿಯಾಗಿ
ಅವಳ ಕಿರುಚಾಟ ಸಮುದ್ರ ಅಲೆಗಳಂತೆ
ಅಪ್ಪಳಿಸಿ ಬರುತ್ತಿತ್ತು
ಉಳಿದ ಸದ್ದೆಲ್ಲ ಮೌನವಾಗಿಯೇ ಇತ್ತು
ತುಂಬು ಗರ್ಭಿಣಿ ನನ್ನವ್ವ
ಕೂಗಿದರೂ ಆಲಿಸುವ ಕಿವಿಯಿಲ್ಲದೆ
ಯಾರನ್ನಾದರೂ ಕರೆತಾ ಎಂದಟ್ಟಿದಳು ನನ್ನ
ಒಂದಾದಮೇಲೊಂದು ಬಾಗಿಲು ಬಡಿದೆ ನಡೆದೆ ದಣಿದೆ
ಮನಸ್ಸೇ ಕರಗದೆ ಬಾಗಿಲು ತೆರೆಯುವುದೇ
ಅಮ್ಮ
ಒಬ್ಬೊಂಟಿಯಾಗಿಯೇ ಯುದ್ದ ಮಾಡಿದಳು
ಆ ಗಟ್ಟಿಗಿತ್ತಿ
ಜಯಿಸಿದಳು  ಜಯಿಸಿದಳು
ಯುದ್ದ ಭೂಮಿಯನ್ನೆ ನನ್ನವ್ವ
ಗರ್ಭದಿಂದ ಕೂಸಿನೊಡನೆ
ದುಃಖವನ್ನೂ ಹೊರತಂದಳು
ಅವ್ವನ ಮೊಗದಲ್ಲಿ ಹೂ ಅರಳಿದಂತ
ನಗು ಮೂಡಿತು
ನನ್ನವ್ವನ ಮಡಿಲಿಗೆ ಬಂದ
ಹೂ ಪುಟ್ಟ ರಾಜಕುವರಿ
ಸೌಮ್ಯ ಕೆ.ಆರ್. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನವರು 
ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಡಿಗ್ರಿ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.