ಈ ವಿಧವಾಗಿ ಎರಡು ಚಿಕುರಗಳಿಗೋಸುಗ ನಾನು ನಿದ್ರಾಹಾರಾದಿಗಳನ್ನು ಬಿಟ್ಟು ಒದ್ದಾಡಿದೆನು. ನಾನು ಪಟ್ಟ ಕಷ್ಟಗಳೆಲ್ಲವನ್ನು ಕೇಳಿದರೆ (ಮದುವೆಯಾಗಿದ್ದರೆ) ನನ್ನ ಹೆಂಡತಿಯು ಜೀವದಿಂದುಳಿಯುತ್ತಿದ್ದಿಲ್ಲ. ಹಗಲೆನ್ನದೆ ಇರುಳೆನ್ನದೆ ಕೇರಿಯಿಂದ ಕೇರಿಗೆ ಓಡುತ್ತಾ, ನಿರ್ಜನ ಪ್ರದೇಶಗಳಲ್ಲಿ ಅಲೆಯುತ್ತಾ, ಅನೇಕ ಗವಿಗಳಲ್ಲಿ ಅಡಗುತ್ತಾ, ಕಷ್ಟಪಟ್ಟರೂ ಹಿಡಿದ ಕಾರ್ಯವನ್ನು ಬಿಡಲಿಲ್ಲ. ಕೂದಲುಗಳು ಸಿಕ್ಕಿದುವು; ಅವುಗಳನ್ನು ಚಿನ್ನದಿಂದ ಬಿಗಿದು ನಗವು ಸಿದ್ಧವಾಯಿತು. ಚಿಕ್ಕತಾಯಿಯ ಆನೆಜಮೆಸರಕ್ಕೂ ಈ ನಗಕ್ಕೂ ಯಾವ ವ್ಯತ್ಯಾಸವೂ ಇದ್ದಂತೆ ನನಗೆ ತೋರಲಿಲ್ಲ.
ಡಾ. ಬಿ. ಜನಾರ್ದನ ಭಟ್ ಸಾದರಪಡಿಸುತ್ತಿರುವ ‘ಓಬೀರಾಯನ ಕಾಲದ ಕತೆಗಳು’ ಸರಣಿಯಲ್ಲಿ ಪಂಜೆ ಮಂಗೇಶರಾವ್  ಬರೆದ ಕತೆ “ನನ್ನ ಚಿಕ್ಕ ತಾಯಿ” ಈ ಭಾನುವಾರದ ನಿಮ್ಮ ಓದಿಗೆ.

 

ನನ್ನ ತಂದೆಗೆ ನಾನೊಬ್ಬನೇ ಮಗನು. ನನ್ನ ತಂದೆ ತಾಯಿಗಳು ನನ್ನನ್ನು ಮದುವೆ ಮಾಡದೆ ತೀರಿ ಹೋದರು. ಆ ದಿನ ಮೊದಲ್ಗೊಂಡು ನಾನು ನನ್ನ ಚಿಕ್ಕಪ್ಪನ ಮನೆಯಲ್ಲಿದ್ದೆನು. ನನ್ನ ಚಿಕ್ಕತಾಯಿಯನ್ನು ನೋಡಿದರೆ, ನನಗೆ ಮೈಯೆಲ್ಲ ಉರಿಯುತ್ತಿತ್ತು. ಆದರೆ ಅದನ್ನು ತಪ್ಪಿಸಲಿಕ್ಕೆ ಉಪಾಯವಿಲ್ಲ; ನನಗೆ ಉಪ್ಪನ್ನ ಕೊಡುವವರು ಬೇರೆ ಯಾರೂ ಇಲ್ಲ. ಇಷ್ಟರೊಳಗೆ ನನಗೆ ಮದುವೆಯಾಗಿ ಮೊಮ್ಮಗನ ಮೋರೆ ನೋಡುತ್ತಿದ್ದೆನು. ಈ ಮುದಿ ಗೂಗೆ – ಆದರೆ ಈಗ ಸಿಟ್ಟಿನಿಂದು ಬೈದು ಏನು ತಾನೇ ಪ್ರಯೋಜನ? ಆದುದೆಲ್ಲ ಆಗಿ ಹೋಯಿತು; ಜನ್ಮದ ಫಲ ತಿಂದು ಆಯಿತು. ಈಗ ಯಾಕೆ ತಾನೆ ಬೈಯುವುದು? ಕೆಲವು ತಿಂಗಳ ಹಿಂದೆ ನನ್ನ ಜಾತಕವನ್ನು ಹೊಸಪೇಟೆ ರಾಜಣ್ಣನವರು ಕೊಂಡು ಹೋಗಿ, ಅವರ ಚೊಚ್ಚಲ ಮಗಳ ಜಾತಕಕ್ಕೆ ಅದು ಕೂಡಿ ಬರುತ್ತದೆ ಎಂದು ಸಂಬಂಧದ ಪ್ರಸ್ತಾಪವನ್ನು ನಮ್ಮವರೊಡನೆ ಮಾಡುತ್ತಿದ್ದರಂತೆ. ಆದರೆ ಈ ಹಾಳು ಮೂಳಿಯ ಕೆಲಸದಿಂದ – ಬೈಯಬಾರದು; ಎಷ್ಟಾದರೂ ಚಿಕ್ಕತಾಯಿ. ನನಗೆ ಅನ್ನಕೊಟ್ಟು ಸಾಕಿದಂಥವಳು; ಮುಂದೆ ತನ್ನ ಚಿನ್ನಬಿಟ್ಟು ಸಾಯುವಂಥವಳು.

ನನ್ನ ಚಿಕ್ಕತಾಯಿಯು 60 ವರ್ಷದ ಯುವತಿ. ಹಣೆಯಲ್ಲಿ ಕುಂಕುಮ, ಗಂಡನು ಮದುವೆಯಾದೊಡನೆಯೇ ಊರುಬಿಟ್ಟು ಹೋದುದರಿಂದ ಯಾವಾಗಲೂ ಮುತ್ತೈದೆ. ತಲೆಯಲ್ಲಿ ತುಂಬಾ ಕೂದಲು, ಒಂದೆರಡು ಕಪ್ಪೂ ಇದ್ದಾವೆ. ದೇಹ ಸ್ವಲ್ಪ – ಮೊನ್ನೆ ಮುಕ್ತಪುರದಿಂದ ಹಿಂತಿರುಗಿ ಬರುತ್ತಿದ್ದಾಗ ದೋಣಿಯಿಂದ ಇಳಿಯುವ ಸಂದರ್ಭದಲ್ಲಿ ಏನೋ ವಿಪರೀತವಾಯಿತು. ಪ್ರತಿನಿತ್ಯವೂ ಮೈಯ ಆಲಸ್ಯವನ್ನು ಕುರಿತು ಗೊಣಗುಟ್ಟುವಳು. ಆದರೆ ಹಗಲಿನ ಆಲಸ್ಯವು ರಾತ್ರಿಯ ಆಹಾರವನ್ನು ಕಡಿಮೆ ಮಾಡುತ್ತಿದ್ದಿಲ್ಲ. ರಾತ್ರಿ ಅನ್ನವನ್ನು ಊಟ ಮಾಡುತ್ತಿದ್ದಿಲ್ಲ. ಅವಳು ತಿನ್ನುವುದರಲ್ಲಿ ನನಗೂ ಆಗಾಗ್ಗೆ ಒಂದಿಷ್ಟು ಸಿಕ್ಕುತ್ತಿತ್ತು. “ಅಪ್ಪಾ! ಒಂದು ಸಲ ದೇವಸ್ಥಾನದವರೆಗೆ ನನ್ನ ಸಂಗಡ ಬಾರೆಯಾ?” ಎಂದು ಹೇಳಿ ಪ್ರತಿ ಶುಕ್ರವಾರ ರಾತಿಯಲ್ಲಿ ಒಂದು ಚಿಗಳಿಯನ್ನು ನನ್ನ ಕೈಗೆ ಹಾಕುತ್ತಿದ್ದಳು. ಹಾದಿಯಲ್ಲಿ ಹೋಗುತ್ತಿದ್ದಾಗ ತನ್ನ ಹಣವನ್ನೂ ಚಿನ್ನವನ್ನೂ ನನ್ನ ಹೆಸರಿಗೆ ಮಾಡುತ್ತೇನೆಂತಲೂ ತಾನು ಇನ್ನು ಹೆಚ್ಚುಕಾಲ ಬದುಕಲಾರೆನೆಂತಲೂ ನನ್ನೊಡನೆ ತತ್ವಜ್ಞಾನ ಎತ್ತುತ್ತಿದ್ದಳು.

ಅವಳು ಹೇಳುವಂತೆ ಅವಳ ಬಳಿಯಲ್ಲಿ ಒಂದೆರಡು ಚಿನ್ನದ ವಸ್ತುಗಳಿದ್ದುವು. ಒಂದು ದೊಡ್ಡದಾದ ಓಲೆಜೋಡು ಕಿವಿಯಲ್ಲಿ ಸಣ್ಣದಾಗಿ ತೋರುತ್ತಿತ್ತು; ಕೈಗೆ ಎರಡು ಹಿಂಬಳೆಗಳಿದ್ದುವು. ಉಳಿದವುಗಳೆಲ್ಲ ವಿಶೇಷ ಬೆಲೆಯುಳ್ಳದಾಗಿದ್ದಿಲ್ಲ. ಆದರೂ ಅವುಗಳಲ್ಲಿ ಒಂದು ಆನೆಜಮೆಸರವನ್ನು ಅಧಿಕವಾಗಿ ಎಣಿಸುತ್ತಿದ್ದಳು. ಚಿನ್ನದಿಂದ ಬಿಗಿದ ಆನೆಯ ಕೂದಲುಗಳು ಮಕ್ಕಳಿಲ್ಲದ ಹೆಂಗಸರು ಇಟ್ಟುಕೊಳ್ಳುವುದು ಅಪರೂಪ. ಆದರೆ ಈ ನಗವನ್ನು ನಮ್ಮ ಚಿಕ್ಕತಾಯಿಗೆ ಯಾರೋ ಪ್ರಸಿದ್ಧ ಪೌರಾಣಿಕರು ಕೊಟ್ಟಿದ್ದರೆಂದು ಅವಳು ಹೇಳುತ್ತಿದ್ದಳು. ಈ ನಗವನ್ನು ಕೈಯಲ್ಲಿ ಹಿಡಿದು ಜಪಮಾಡಿದರೆ ಊರು ಬಿಟ್ಟು ಹೋದ ಗಂಡನು ಮರಳಿ ಬರುವನು ಎಂದು ನಂಬಿಸಿ ಕೊಟ್ಟುದರಿಂದ ಅದರ ವಿಷಯದಲ್ಲಿ ಹೆಚ್ಚಿನ ಎಚ್ಚರಿಕೆ. ಆಭರಣಗಳನ್ನೆಲ್ಲ ಅರಿವೆಯಲ್ಲಿ ಗಂಟು ಕಟ್ಟಿ ಅವುಗಳನ್ನು ಮೈಯಲ್ಲಿ ಎಲ್ಲಿಯೋ ಅಡಗಿಸುತ್ತಿದ್ದಳು. ಹಗಲು ಅವುಗಳ ಮೇಲೆ ಮನಸ್ಸು; ಇರುಳು ಅವುಗಳನ್ನು ಕುರಿತು ಕನಸು.

ಮುಕ್ತಪುರದಲ್ಲಿ ಯಾರೋ ಪೌರಾಣಿಕರು ಎರಡು ತಿಂಗಳ ಹಿಂದೆ ಬಂದಿದ್ದರು. ಪೌರಾಣಿಕರ ಜಪತಪವನ್ನೂ ಸ್ನಾನಸಮಾಧಿಯನ್ನೂ ನೋಡಲಿಕ್ಕೆ ಊರೂರಿಂದ ಜನರು ಓಡುತ್ತಿದ್ದರು. ನನ್ನ ಚಿಕ್ಕತಾಯಿಗೆ ಓಡುವುದಕ್ಕೆ ದೇಹ ಬಿಡುವುದಿಲ್ಲ. ಬಂಡಿಯನ್ನು ಒದಗಿಸಬೇಕೆಂದು ನನ್ನೊಡನೆ ಎಂದಳು. ಅವಳನ್ನು ಕೊಂಡು ಹೋಗಲಿಕ್ಕೆ ಬಂಡಿಯಾಳಲ್ಲಿ ಯಾರೊಬ್ಬನೂ ಕ್ಲುಪ್ತವಾದ ಬಾಡಿಗೆಗೆ ಒಪ್ಪಲಿಲ್ಲ. ಕಡೆಗೆ ಅವಳನ್ನು ಹೇಗಾದರೂ ದೋಣಿಯಲ್ಲಿ ಕೂತುಕೊಳ್ಳಿಸಿ, ಬಳಿಕ ದೋಣಿಯ ಚಪ್ಪರವನ್ನು ಅಲ್ಲಲ್ಲಿ ಸಿಕ್ಕಿಸಿ, ಮುಕ್ತಪುರಕ್ಕೆ ನಾನು ಅವಳನ್ನು ಕಳುಹಿಸಿದೆನು. ಒಂದು ವಾರವು ಕಳೆದ ಮೇಲೆ ಅವಳು ಹಿಂತಿರುಗಿ ಬಂದಳು. ಪ್ರಯಾಣದ ಆಯಾಸವು ಅವಳಲ್ಲಿ ಕಂಡು ಬರಲಿಲ್ಲ. ಯಾಕೆಂದರೆ, ಮನೆಗೆ ಬಂದಕೂಡಲೇ ಅರಿವೆಗಳನ್ನು ಬಿಚ್ಚಲಿಕ್ಕೂ ವಸ್ತ್ರಗಳನ್ನು ನೋಡಲಿಕ್ಕೂ ಕುಳಿತಳು. ಗಂಟಿಗೆ ಸುತ್ತಿದ ಒಂದು ಅರಿವೆಯನ್ನು ಬಿಚ್ಚಿದಳು; ಆಮೇಲೆ ಮತ್ತೊಂದನ್ನು ತೆಗೆದಳು; ಬಳಿಕ ಇನ್ನೊಂದನ್ನು ತೆಗೆದಳು. ಪುನಃ ಮತ್ತೊಂದು, ಮತ್ತೊಂದು, ಮತ್ತೊಂದು – ದ್ರೌಪದಿಯ ವಸ್ತ್ರಹರಣವು ಸ್ಮರಣೆಗೆ ಬರುವಂತೆ ಮಾಡಿದಳು.

ಎಲ್ಲವನ್ನು ಈಚೆಗೆ ತೆಗೆದ ಸ್ವಲ್ಪ ಹೊತ್ತಿನ ಮೇಲೆ “ಹೋಯ್ತು! ಅಪ್ಪಾ! ನನ್ನ ಸರ್ವಸ್ವ ಹೋಯ್ತು” ಎಂಬ ಗೋಳು ಕೇಳಿಸಿತು. ಜಗುಲಿಯಲ್ಲಿದ್ದ ನಾನು ಒಳಗೆ ಓಡಿದೆನು. ಅವಳ ಮುಖವು ಸಿಡಿಲು ಬಡಿದ ತೆರದಲ್ಲಿತ್ತು. ಅರಿವೆ ಚಿಂದಿಗಳಿಂದ ಹಣೆ ಚಚ್ಚಿಕೊಳ್ಳುವುದನ್ನು ಕಂಡು ದುಃಖದ ಕಾರಣವನ್ನು ಊಹಿಸಿದೆನು. ಒಡವೆಗಳ ಗಂಟು ಅರಿವೆಯೊಳಗೆ ಇದ್ದಿಲ್ಲ. ಮುದುಕಿಗೆ ತಕ್ಕದಾದ ಶಾಸ್ತಿಯಾಯಿತೆಂದು ನಾನು ಒಂದು ನಿಮಿಷ ಹಿಗ್ಗಿದೆನು. ಆದರೆ ಮುದುಕಿಯ ರೋದನದಲ್ಲಿ ನನ್ನ ಮನಸ್ಸು ಕರಗುತ್ತಾ ಬಂತು. ಅವಳ ದುಃಖ ಧ್ವನಿಯಲ್ಲಿಯೂ ಅವಳ ದುಃಖಾಶ್ರುಗಳಲ್ಲಿಯೂ ಅವಳ ನಿಷ್ಕಾಪಟ್ಯವೂ, ಅವಳ ಸ್ಥೂಲಬುದ್ಧಿಯೂ, ಅವಳ ವಾತ್ಸಲ್ಯವೂ ಸ್ಫುಟವಾದುವು. “ಅಪ್ಪಾ!” ತಲೆಯನ್ನು ಚಚ್ಚಿಕೊಳ್ಳುತ್ತಾ “ಅಪ್ಪಾ! ನನ್ನ ಸರ್ವಸ್ವಕ್ಕೆ ಯಾರೋ ಕೈಹಾಕಿದರು. ಹೊಟ್ಟೆಕಟ್ಟಿ ಕೂಡಿಸಿದ ಮೂರುಕಾಸುಗಳನ್ನು ನಿನಗೆ ಕೊಡಬೇಕೆಂದಿದ್ದೆನು. ಒಂದು ಕಾಸು ಕೂಡಾ ಉಳಿಯಲಿಲ್ಲ. ನಗಗಳ ಚಿಂತೆಯನ್ನು ನಾನು ಕಟ್ಟಿಕೊಳ್ಳಲಿಲ್ಲ. ಆ ಆನೆಜಮೆಸರ ಹೋಯಿತಲ್ಲ! ಇನ್ನು ನಿನ್ನ ಚಿಕ್ಕತಂದೆಯವರನ್ನು ನೋಡುವೆನೆಂಬ ಆಸೆಯು ಇಂದಿಗೆ ಆಯಿತು. ಎಲ್ಲವಾದರೂ ಹೋಗಬಹುದಿತ್ತು. ಈ ನಗವು ಉಳಿಯಬಹುದಿತ್ತು. ಬೆಳಗ್ಗೆ ನಾನು ಯಾರ ಮೋರೆಯನ್ನು ಕಂಡೆನೋ?” ಎಂದು ತಡವೆ ತಡವೆಗೆ ಮಕ್ಕಳಂತೆ ಹಂಬಲಿಸಿ ಅಳುತ್ತಿದ್ದಳು.

ಅವಳು ಅಳುವುದನ್ನು ನೋಡಿ ನನ್ನ ಕಣ್ಣುಗಳಲ್ಲಿಯೂ ಒಂದೆರಡು ತಟುಕು ನೀರು ಒಸರಿತು. ಮುಂದೆ ನನಗೆ ಸಿಕ್ಕುವ ಗಂಟನ್ನು ಯಾರೋ ಎತ್ತಿದರೆಂದು, ಒಂದು ನಿಮಿಷದ ಮೇಲೆ, “ನನ್ನ ಒಡವೆಗಳನ್ನು ಯಾರು ತೆಗೆದಿರಬಹುದು? ದೋಣಿಯಾಳು ತೆಗೆದಿರಲಾರನು; ಅವನು ನನ್ನ ಹತ್ತಿರವೇ ಮಲಗಿದ್ದನು. ಅಯ್ಯೋ! ನನ್ನ ಜಪಸರವು ಹೋಯಿತಲ್ಲ! ಅವರ ಮುಖವನ್ನು ಈ ಜನ್ಮದಲ್ಲಿ ಇನ್ನೊಂದು ಸಲ ನೋಡುವೆನೆಂಬ ಆಸೆಯು ತೀರಿತಲ್ಲ!” ಎಂದ ಪುನಃ ಪ್ರಲಾಪಿಸಿದಳು. ಸ್ವಲ್ಪ ಹೊತ್ತಿನ ಮೇಲೆ ತಾನೇ ಸಮಾಧಾನವನ್ನು ಹೊಂದಿ “ಅಪ್ಪಾ! ನೀನಾದರೂ ಪ್ರಯತ್ನಮಾಡು; ನೀನು ಸೊಂಟ ಕಟ್ಟಿದರೆ ಅವುಗಳೆಲ್ಲವು ಸಿಕ್ಕದೆ ಇರಲಾರವು. ಸಿಕ್ಕಿದರೆ ನನ್ನ ಬೊಟ್ಟಿನ ಕುಂಕುಮ ಉಳಿಸಿದ ಪುಣ್ಯ ನಿನಗೆ”, ಎಂದು ಹೇಳಿದಳು. ಕಳವನ್ನು ಕುರಿತು ಪೋಲೀಸಿನವರಿಗೆ ವರ್ತಮಾನ ಮುಟ್ಟಿಸಿದ್ದಾಯಿತು.

ನನಗೆ ಯಾರ ಮೇಲೆಯೂ ಸಂಶಯವಿದ್ದಿಲ್ಲ; ಸಂಶಯವಿದ್ದರೂ ನನ್ನ ಸಂಶಯವು ಫಲಿಸದಿದ್ದರೆ ವಿನಾಕಾರಣವಾಗಿ ವಿರೋಧ; ವಿರೋಧವಾದರೂ ಅವಚಿಯು ನನ್ನನ್ನು ಇನ್ನೂ ಹೆಚ್ಚಾಗಿ ಪ್ರೀತಿಸಳು. ಆದರೆ ಕಳ್ಳನನ್ನು ಹುಡುಕುವುದು ಹೇಗೆ? ಅನೇಕರಾದರೊ, ಅರಿವೆ ವಾಸನೆಯಿಂದ, ಹೆಜ್ಜೆ ಕುರುಹುಗಳಿಂದ, ಕೆಮ್ಮಿನ ಸ್ವರದಿಂದ, ಎಂಜಲ ರುಚಿಯಿಂದ ಪಾತಾಳದಲ್ಲಿ ಅಡಗಿದ್ದ ಕಳ್ಳನನ್ನು ಎತ್ತಿ ತಂದಿರುವರಂತೆ. ಪಂಚೇಂದ್ರಿಯಗಳ ಇಂತಹ ಗುಣವಿಶೇಷವು ನನ್ನಲ್ಲಿಲ್ಲ. ಆದರೂ ಸಾಧಿಸಬೇಕೆಂದು ದೃಢಮಾಡಿದೆನು. ಮೊದಲು ಹೆಜ್ಜೆಗಳ ಗುರುತುಗಳನ್ನು ಹಿಡಿದು ಹುಡುಕಿದೆನು. ಜಗುಲಿಯ ಮೇಲೆ ಕೆಲವು ಕುರುಹುಗಳಿದ್ದವು; ಅಂಗಳಕ್ಕೆ ಇಳಿಯುತ್ತಲೇ ಆ ಗುರುತುಗಳು ಒಂದನ್ನೊಂದು ಅಳಿಸಿಕೊಂಡು ಹೋದುವು. ಮನೆಯ ಕೊಟ್ಟಡಿಯಿಂದ ಹಿತ್ತಿಲಿನವರೆಗೆ ಎಲ್ಲವನ್ನೂ ಹುಡುಕಿದೆನು. ಹಿಂತಿರುಗಿ ಬರುತ್ತಿದ್ದಾಗ ಒಂದು ನಸೆಡಬ್ಬಿಯ ಬಿರುಡೆ ಹಾದಿಯಲ್ಲಿ ತೋರಿತು. ಕಳ್ಳ ಸಿಕ್ಕಿದನೆಂದು ಭಾವಿಸಿದೆನು. ಮನಸ್ಸಿನಲ್ಲಿ ಔತ್ಸುಕ್ಯವು ಕುದಿದು ಉಕ್ಕಿಬಂತು. ಅವಚಿಗೆ ತಿಳಿಸಲಿಕ್ಕೆ ಬೇಗನೆ ಓಡಿದೆನು. ಓಡುತ್ತಿದ್ದಾಗ ನನ್ನ ಉಡಿಯಿಂದ ಏನೋ ಕೆಳಗೆ ಬಿತ್ತು. ಸ್ವಲ್ಪ ಅಲ್ಲಿಯೆ ತಡೆದೆನು. ಬಿದ್ದ ಪದಾರ್ಥವನ್ನು ಕೈಯಲ್ಲಿ ಹಿಡಿದು ನೋಡಿದೆನು. ಒಳಗೆಲ್ಲ ಬರಿದಾಗಿತ್ತು. ಬಿರುಡೆ ಜಾರಿದುದರಿಂದ ನಸೆಯೆಲ್ಲ ಸುರಿದುಹೋಗಿ ಬರಿದಾದ ನನ್ನ ನಸೆಡಬ್ಬಿ. ನನ್ನ ಕೈಯಲ್ಲಿದ್ದ ಬಿರುಡೆಯನ್ನು ಅದಕ್ಕೆ ಜೋಡಿಸಿದೆನು; ಸರಿಯಾಗಿತ್ತು. ಒಂದು ತಡವೆಗೆ ನನ್ನ ಉತ್ಸಾಹದ ಮೇಲೆ ತಣ್ಣೀರು, ಎರಚಿದಂತಾಯಿತು. ಒಂದು ತಡವೆಗೆ ಕಳ್ಳನು ಸಿಕ್ಕುವನೆಂಬ ನಂಬಿಕೆಯು ಮನಸ್ಸಿನಿಂದ ಕಿತ್ತುಹೋಯಿತು.

ಪ್ರಾತಃಕಾಲದಲ್ಲಿ ನಾನು ಮನೆಯಿಂದ ಹೊರಟೆನು. ಎಷ್ಟೋ ಸ್ಥಳಗಳಲ್ಲಿ ಮಾತನಾಡುತ್ತಾ ಕುಳಿತೆನು; ಒಂದೆರಡು ಮನೆಗಳಲ್ಲಿ ‘ಕಾಫಿ’ ಕುಡಿದಾಯಿತು. ಮಧ್ಯಾಹ್ನಕ್ಕೆ ಮನೆಗೆ ಹಿಂತಿರುಗಿದೆನು. ಹಾದಿಯಲ್ಲಿ ಒಬ್ಬ ಹೆಂಗಸನ್ನು ನೋಡಿದೆನು; ನೋಡುತ್ತಲೇ ಹೋದ ಒಡವೆ ಗಂಟು ಸ್ಮರಣೆಗೆ ಬಂತು. ಒಡವೆ ಗಂಟಿನಲ್ಲಿ ಚಿನ್ನದಿಂದ ಬಿಗಿದ ಆನೆಜಮೆ ಇತ್ತು; ಈ ಸ್ತ್ರೀಯ ಮಸ್ತಕದಲ್ಲಿ ಅಷ್ಟೇ ಬಿರುಸಾದ ಕೇಶಪಾಶಗಳು ಜಡೆ ಕಟ್ಟಿದ್ದುವು. ನನ್ನ ದೃಷ್ಟಿಯು ಅವಳ ಕೂದಲುಗಳಲ್ಲಿ ಸಿಕ್ಕಿಕೊಳ್ಳುತ್ತಲೇ ಅವಳು ತನ್ನ ಎಡಗೈಯಿಂದ ತುರುಬನ್ನು ಸವರಿದಳು. ನಾನು ನನ್ನಲ್ಲಿಯೇ ನಾಚಿಕೊಂಡು ಮುಂದರಿಸಿದೆನು. ಸ್ವಲ್ಪ ದೂರಕ್ಕೆ ಹೋದ ಮೇಲೆ ನಾನು ಮುಖ ತಿರುಗಿಸಿ ನೋಡಿದರೂ ಅವಳ ತುರುಬು ಚೆನ್ನಾಗಿ ನೋಡಲಿಕ್ಕೆ ಸಿಕ್ಕಲಿಲ್ಲ. ಅವಳು ನನ್ನಂತೆಯೇ ಮುಖ ತಿರುಗಿಸಿ ಯಾವುದನ್ನೋ ನೋಡುತ್ತಿದ್ದಳು. ನಾನು ಮನೆಯನ್ನು ಸೇರಿದೆನು. ಆದರೆ ಅವಚಿಯ ಇದಿರು ಹೋಗಲಿಕ್ಕೆ ನನಗೆ ಮೋರೆ ಇಲ್ಲ. ಅವಳಾದರೋ? ನಾನು ಕೈಯಲ್ಲಿ ಕಳ್ಳನನ್ನು ಹಿಡಿದು ತಾರದೆ ಬಿಡೆನೆಂದು ದೃಢವಾಗಿ ನಂಬಿದ್ದಳು. ಕಳ್ಳನ ಶಿಕ್ಷೆಯ ಮೇಲೆ ಅವಳ ಮನಸ್ಸು ನಿಲ್ಲಲಿಲ್ಲ; ಅವಳ ಜೀವವು ಹೋದೊಡವೆಗಳ ಮೇಲಿತ್ತು. ನಾನು ಬರುತ್ತಲೆ ಗಂಟನ್ನು ಕುರಿತು ನನ್ನನ್ನು ಕೇಳಿದಳು. ನಾನು ಇಲ್ಲದ ವೇಳೆಯಲ್ಲಿ ಪೋಲೀಸನವನು ಬಂದು ಒಂದು ರೂಪಾಯಿಯನ್ನು ಇಸುಕೊಂಡು ಹೋದನೆಂದು ಅವಳಿಂದ ತಿಳಿದೆನು. ನಾನು ಹಗಲು ಇರುಳು ಹುಡುಕುವುದರಲ್ಲಿಯೇ ಇದ್ದೆನೆಂದು ಹೇಳಿದೆನು. ಹೀಗೆ ಸುಳ್ಳು ಹೇಳುತ್ತಾ ಮೂರು ದಿವಸಗಳನ್ನು ಕಳೆದೆನು. ಆ ದಿನ ಮೊದಲ್ಗೊಂಡು ಸುಳ್ಳೆಂದರೇನು ಸತ್ಯವೆಂದರೇನು ಎಂಬ ಭೇದವು ನನ್ನ ಮನಸ್ಸಿಗೇ ಬರುತ್ತಿದ್ದಿಲ್ಲ.

ನಗಗಳ ಚಿಂತೆಯನ್ನು ನಾನು ಕಟ್ಟಿಕೊಳ್ಳಲಿಲ್ಲ. ಆ ಆನೆಜಮೆಸರ ಹೋಯಿತಲ್ಲ! ಇನ್ನು ನಿನ್ನ ಚಿಕ್ಕತಂದೆಯವರನ್ನು ನೋಡುವೆನೆಂಬ ಆಸೆಯು ಇಂದಿಗೆ ಆಯಿತು. ಎಲ್ಲವಾದರೂ ಹೋಗಬಹುದಿತ್ತು. ಈ ನಗವು ಉಳಿಯಬಹುದಿತ್ತು. ಬೆಳಗ್ಗೆ ನಾನು ಯಾರ ಮೋರೆಯನ್ನು ಕಂಡೆನೋ?” ಎಂದು ತಡವೆ ತಡವೆಗೆ ಮಕ್ಕಳಂತೆ ಹಂಬಲಿಸಿ ಅಳುತ್ತಿದ್ದಳು.

ಅನಿವಾರ್ಯವೆಂದು ತೋರುವ ಅಪಾಯಗಳನ್ನು ಪರಿಹರಿಸುವ ಉಪಾಯಗಳು ಮೂಢರ ಮನಸ್ಸಿನಲ್ಲಿಯೂ ಹೊಳೆಯುವುದುಂಟು. ಈ ಮಾತು ನನ್ನ ವಿಷಯದಲ್ಲಿ ಸಿದ್ಧವಾಗಿ ದೃಷ್ಟಾಂತಕ್ಕೆ ಬಂತು. ಆನೆಜಮೆ ಸರವನ್ನು ಹೇಗೂ ಶೋಧಿಸದಿದ್ದರೆ ಚಿಕ್ಕತಾಯಿಯ ಮನಸ್ಸು ಎಂದೂ ಸ್ವಸ್ಥವಾಗಿರದು; ಅವಳು ತನ್ನ ಮನೆಮಾರನ್ನು ನನ್ನ ಹೆಸರಿಗೆ ಮಾಡುವಳು ಎಂಬುದೊಂದು ಆಸೆಯು ಇನ್ನೂ ಉಳಿಯದು. ನನ್ನ ಚಿಕ್ಕ ತಾಯಿಗೆ ದೇವರ ಮೇಲೆ ಭಕ್ತಿಯೂ, ಪೌರಾಣಿಕರ ಮೇಲೆ ಪ್ರೀತಿಯೂ ಅಧಿಕವಾದುದರಿಂದ, ಅವಳ ಸರ್ವಸ್ವವು ಅವಳ ಮರಣವನ್ನು ನಿರಂತರ ಎದುರ್ನೋಡುತ್ತಿರುವ ಪೌರಾಣಿಕರ ಹಸ್ತಗತವಾಗುವುದಲ್ಲದೆ ಅದರಲ್ಲಿ ಒಂದು ಕಾಸು ನನ್ನ ಪಾಲಿಗೆ ಬರುವುದರಲ್ಲಿ ಬಹಳ ಸಂದೇಹವಿತ್ತು. ಆದರೆ ನಗವನ್ನು ನಾನು ಹುಡುಕಿ ತಂದರೆ ಅವಳ ವಾತ್ಸಲ್ಯವನ್ನು ನನ್ನ ಕಡೆಗೆ ತಿರುಗಿಸಿ, ಅವಳಿಗೆ ನಾನೇ ಉತ್ತರಾಧಿಕಾರಿಯಾಗುವ ಹಾಗೆ ಮಾಡಿಸಿದರೆ ನನ್ನ ಅದೃಷ್ಟವು ಮುಂದೆ ಅಷ್ಟೊಂದು ಹಾಳಾಗದು. ಈ ಕಾರಣಗಳಿಂದ ಆಭರಣಗಳನ್ನು ಹೇಗಾದರೂ ಹುಡುಕಿ ತರುವುದಕ್ಕೆ ಮನಸ್ಸನ್ನು ನಿರ್ಧರಿಸಿದೆನು. ಆದರೆ ಆಭರಣಗಳೇನೋ ಅಕ್ಕಸಾಲಿಗನ ಅಗ್ಗಿಷ್ಟಿಕೆಯನ್ನು ಸೇರಿದುವು; ಅವುಗಳು ಇನ್ನು ಚಿಕ್ಕತಾಯಿಯ ಕಣ್ಣಿಗೆ ಬೀಳುವ ಹಾಗಿಲ್ಲ. ಅದು ಸಿಕ್ಕದಿದ್ದರೆ ಅದರಂತೆ ಇನ್ನೊಂದನ್ನು ಒದಗಿಸಿಕೊಳ್ಳುವುದು ಕಷ್ಟಸಾಧ್ಯವೇ? ಹೀಗೆ ಒದಗಿಸಿದ ನಗದಿಂದ ಮುದಿಕಣ್ಣುಗಳನ್ನು ಮೋಸಗೊಳಿಸುವುದು ದೊಡ್ಡದೇ? ಈ ದುರಾಲೋಚನೆಗಳು ನನ್ನ ಮನಸ್ಸಿನಲ್ಲಿ ಪುನಃ ಪುನಃ ತಿರುಗಿದುವು. ಮರುದಿನ ಪ್ರಾತಃಕಾಲ ಎದ್ದು, “ಅವಚೀ! ಅವಸರಪಟ್ಟರೆ ಕಾರ್ಯವು ಭಂಗವಾಗುವುದು. ಇನ್ನೊಂದು ವಾರದೊಳಗೆ ನಾನು ಕಳ್ಳನನ್ನು ಹಿಡಿಯದೆ ಬಿಡೆನು. ನನ್ನ ಮನಸ್ಸಿಗೆ ಕೆಲವು ಉಪಾಯಗಳು ನಿನ್ನೆ ರಾತ್ರಿ ಕಂಡು ಬಂದುವು. ಇಂದು ಕಳ್ಳನ ಹೆಜ್ಜೆಯಲ್ಲಿಯೇ ನಾನು ನಡೆಯುತ್ತಿದ್ದೇನೆ. ನಾನು ನಗವನ್ನು ತಾರದಿದ್ದರು ನನ್ನ ಹೆಸರು ರಾ…. ಅಲ್ಲ” ಎಂದು ಹೇಳಿ ನನ್ನ ಉಪಾಯಗಳನ್ನು ಕಾರ್ಯಗಳಲ್ಲಿ ಸಿದ್ಧಪಡಿಸಲಿಕ್ಕೆ ಹೊರಟೆನು.

ಆನೆಜಮೆಯನ್ನು ಒದಗಿಸುವುದು ಕಷ್ಟಸಾಧ್ಯವೆಂದು ನಾನು ಎಣಿಸಲಿಲ್ಲ. ಎರಡು ದಿನಗಳ ಹಿಂದೆ ಸಂಜೆಯಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ ಅಂತಹ ಕೂದಲುಗಳು ಸ್ತ್ರೀ ಮಸ್ತಕದಲ್ಲಿ ನೋಡಿದುದು ಸ್ಮರಣೆಯಲ್ಲಿತ್ತು. ಅವುಗಳಲ್ಲಿ ಒಂದೆರಡು ಕೂದಲುಗಳು ಬೆಲೆಗೆ ಸಿಕ್ಕಿದರೂ ನನ್ನ ಕಾರ್ಯವು ನೆರವೇರುವುದು. ಸ್ತ್ರೀಯರಲ್ಲಿ ಕೆಲವರು ತಮ್ಮ ಪುರುಷರ ಜುಟ್ಟನ್ನು ಹಿಡಿದು, ತಮಗೆ ವಿಧೇಯರಾಗಿ ಅವರನ್ನು ಇರಿಸುವರಂತೆ; ನಾನು ಅವರಂತೆಯೇ ಪ್ರೀತಿಯನ್ನು ನಟಿಸಿದರೆ ಒಬ್ಬ ಹೆಂಗಸಿನ ಕೂದಲನ್ನಾದರೂ ಹಿಡಿಯಲಾರೆನೆ? ಅದಲ್ಲದೆ ನನಗೆ ಬೇಕಾದ ಕೂದಲುಗಳಿರುವ ಹೆಂಗಸು ಸಾಮಾನ್ಯೆಯಾಗಿರುವಳು; ರಾಜಣ್ಣನವರ ನೆರೆಮನೆಯಲ್ಲಿ ಕೆಲಸ ಮಾಡಿ ಕಾಲಕ್ಷೇಪ ಮಾಡುವಂತಹಳು ಕಾಸುಕೊಟ್ಟರೆ ಕೂದಲು ಕೊಡಲಾರಳೇ? ಹೀಗೆ ಮನಸ್ಸಿನಲ್ಲಿ ಯೋಚಿಸುತ್ತಾ ಹಾದಿ ನಡೆದುದರಿಂದ ಗೋವಿಂದರಾಯರ ಮನೆ ದೂರದಲ್ಲಿದ್ದುದನ್ನು ತಿಳಿಯಲೇ ಇಲ್ಲ. ಕೆಲವು ಹೆಜ್ಜೆ ನಡೆಯುತ್ತಲೇ ಮನೆಯು ಸಮೀಪಿಸಿತು; ಅಂಗಳದಲ್ಲಿ ಅವಳು ಏನೋ ಕೆಲಸ ಮಾಡುವುದನ್ನು ಮಾರ್ಗದ ಮೇಲೆ ನಿಂತು ನೋಡಿದೆನು. ಮನೆಯ ಯಜಮಾನರನ್ನು ನೋಡಲಿಕ್ಕೆ ಬಂದೆನೆಂಬ ನೆಪಮಾಡಿ ಮನೆಯನ್ನು ಹೊಕ್ಕೆನು. ಅಂಗಳದಲ್ಲಿ ಅವಳನ್ನು ನೋಡುತ್ತಲೇ ನನ್ನ ಮನಸ್ಸು ಸ್ವಲ್ಪ ಹಿಂಜರಿಯಿತು. ಆ ರಮಣಿಯು 30ಕ್ಕೆ ಮೀರಿರಲಿಲ್ಲ. ದೇಹಕಾಂತಿಯು ಕೃಷ್ಣವರ್ಣದಿಂದ ಮಂಜುಳವಾಗಿತ್ತು; ಆ ಸಂಕುಚಿತ ಚಕ್ಷುಗಳನ್ನು ಆವರಿಸಿದ ಭ್ರೂಯುಗ್ಮವು ಲಲಾಟ ಪ್ರದೇಶದಲ್ಲಿ ಕಲಭಕೇಶದಂತಿದ್ದ ಅವಳ ಅಲಕಾವಳಿಯನ್ನು ತಡವೆ ತಡವೆಗೆ ಚುಂಬಿಸುತ್ತಿತ್ತು. ತಾಂಬೂಲದಿಂದಾರಕ್ತವಾದ ದಂತಗಳು ಅಧರನಿರೋಧವನ್ನು ಅತಿಕ್ರಮಿಸಿ ಮುಖದ ಮೇಲೆ ಅಲಂಕೃತವಾದ ಕೆಂಪು ಚಿಬ್ಬುಗಳನ್ನು ನೋಡುವಂತೆ ವಿರಾಜಿಸುತ್ತಿದ್ದವು. ಕಂಚುಕವು ಸ್ಕಂದಾಗ್ರದಲ್ಲಿಯೇ ಪೂರೈಸಿದುದರಿಂದ ಉಳಿದ ಹಸ್ತಭಾಗದಲ್ಲಿ ಗಾಜಿನ ಹಿಂಬಳೆಗಳಲ್ಲದೆ ಮತ್ತೊಂದಲಂಕಾರವಿರಲಿಲ್ಲ. ಜಗುಲಿಯ ಮೇಲೆ ಯಾರೂ ಇಲ್ಲದುದನ್ನು ನೋಡಿ, ಅವಳೊಡನೆ ಮಾತು ಹೇಗೆ ಎತ್ತುವುದು ಎಂದು ಒಂದು ನಿಮಿಷ ಯೋಚಿಸಿ ಅಲ್ಲಿಯೇ ತಡೆದೆನು. ಏನು ಮಾಡಿದರೂ ಹೃದಯವು ದಡದಡಿಸುವುದಲ್ಲದೆ ಮಾತು ಬಾರದು. ಕಡೆಗೆ ಪ್ರಯತ್ನಪೂರ್ವಕವಾಗಿ “ಮ್ ಮ್ ಮನೆ ಯಜಮಾನರಿರುವರೇ?” ಎಂದು ವಿಚಾರಿಸಿದೆನು. ಅಂದು ಮಾತನಾಡಿದುದು ಪೂರ್ಣ ಸ್ಮರಣೆಯಲ್ಲಿಲ್ಲ. ಆದರೆ ಅವಳು ನನ್ನ ಮಾತಿಗೆ ಪ್ರತ್ಯುತ್ತರ ಕೊಡಲಿಲ್ಲ. ಕಸಗುಡಿಸುವ ಸಪ್ಪುಳದಲ್ಲಿ ನನ್ನ ಮಾತು ಅವಳಿಗೆ ಕೇಳಿಸಲಿಲ್ಲವೆಂದು ನಾನು ಪುನಃ ವಿಚಾರಿಸಿದೆನು. ಅದಕ್ಕೆ ಅವಳು ಇಲ್ಲವೆಂದು ಉತ್ತರ ಕೊಟ್ಟಳು. ನಾನು ಧೈರ್ಯಗೊಂಡೆನು. ಆ ಮಾತು ನನಗೆ ಕೇಳಿಸಲಿಲ್ಲವೆಂದು ಹೇಳಿ ಅವಳ ಬಳಿಗೆ ಹೋದೆನು. ಹತ್ತಿರ ಬರುತ್ತಲೇ ನನ್ನ ಮೂಗಿನಲ್ಲಿ ವಿಜಾತೀಯವಾದ ಗಾಳಿಯು ಬೀಸಿದಂತಾಯಿತು. “ಯಜಮಾನರು ಮನೆಯಲ್ಲಿ ಇರುವರೇ?” ಎಂದೂ ಮತ್ತೆ ಕೇಳಿದೆನು. “ಇಲ್ಲ; ಅವರು ಬೆಳಗ್ಗೆ ಎದ್ದು ಹೋಗಿರುವರು” ಎಂದಳು. ಆ ಬಳಿಕ ಅವಳು ಸುಮ್ಮನಾದುದನ್ನು ನೋಡಿ, ನಾನು ಮನಸ್ಸಿನಲ್ಲಿಯೇ ಏನೋ ಹೇಳಿ ಹಿಂತಿರುಗಿದೆನು. ಆಗಲೇ ಒಬ್ಬ ಹೆಂಗಸು ಅಂಗಳದಿಂದ ಜಗುಲಿಯನ್ನು ಹತ್ತಿದಳು. ಅವಳು ಯಾರೆಂದು ತಿಳಿಕೊಳ್ಳುವ ಶ್ರಮವನ್ನು ತೆಗೆದುಕೊಳ್ಳದೆ, ನನ್ನ ಕೃತ್ಯಕ್ಕೆ ನಾನೇ ಹೆದರಿ ಬೀದಿಗೆ ಇಳಿದೆನು. ನನ್ನ ಸತ್ಕಾರ್ಯದ ಪ್ರಸ್ತಾವನೆಯು ಇಲ್ಲಿ ಮುಗಿದುದು.

ಕಾರ್ಯಸಾಧನೆಯಲ್ಲಿ ವಿಘ್ನಗಳು ಪ್ರತಿಭಟಿಸಿದರೂ ಬುದ್ಧಿವಂತರು ಸ್ಥಿರಪ್ರಯತ್ನರಾಗಿ ಅವುಗಳನ್ನು ಕೊನೆಗಾಣಿಸಬೇಕೆಂಬುದೊಂದು ಹಿರಿಯರ ಮಾತು ಇರುವುದು. ಇದಕ್ಕನುಸಾರವಾಗಿ ನಡೆಯಬೇಕೆಂದು ನಾನು ನಿಶ್ಚಯಿಸಿದೆನು. ಚಿಕ್ಕತಾಯಿಯನ್ನು ಮೋಸಗೊಳಿಸಲಿಕ್ಕೆ ಈ ಸ್ತ್ರೀಯ ಪರಿಚಯವು, ಅದೂ ಸಾಲದಿದ್ದರೆ ಅವಳೊಡನೆ ಅನೃತ ಪ್ರಣಯವು ಅವಶ್ಯವೆಂದು ನನ್ನ ಮನಸ್ಸಿಗೆ ಖಚಿತವಾಯಿತು. ಕಳವಾದ ಆನೆಜಮೆ ಸರದಂತೆ ಮತ್ತೊಂದನ್ನು ಇವಳ ಕೂದಲುಗಳಿಂದಲ್ಲದೆ ಇನ್ನು ಯಾವ ಸಾಮಗ್ರಿಯಿಂದಲೂ ಒದಗಿಸಲಿಕ್ಕೂ ಸಾಧ್ಯವಿಲ್ಲವೆಂದು ನನ್ನ ಮನಸ್ಸಿಗೆ ಬಲವಾಗಿ ಕಂಡುಬಂತು. ಆದರೆ ನವೀನ ಈ ಸ್ತ್ರೀಯು ತನ್ನ ತಲೆಯನ್ನು ನನ್ನ ಕೈಯಲ್ಲಿ ಕೊಡುವುದು ಬಹಳ ಸಂದೇಹಾಸ್ಪದವಾಗಿತ್ತು. ಏಕೆಂದರೆ, ಅವಳ ತಲೆ ಮಾತ್ರವಲ್ಲ, ಸಂಪೂರ್ಣ ದೇಹವು ಬೇರೆಯವರ ವಶವಾಗಿರುವ ಸಂಗತಿಯಲ್ಲಿ ಅಂತಹ ಕೇಶಸಾಧನೆಯಲ್ಲಿ ನನ್ನ ಕೂದಲು ಮಾತ್ರವಲ್ಲ, ತಲೆ ಹೋದೀತೆಂಬ ಹೆದರಿಕೆಯು ನನಗಿತ್ತು. ಅದಲ್ಲದೆ ಕೋಳಿಗೆ ತನ್ನ ಚೂಡದ ಮೇಲೆ ಎಷ್ಟು ಪ್ರೇಮವೋ ಅದಕ್ಕಿಂತಲೂ ದಶಾಂಶವಾಗಿ ಅವಳಿಗೆ ತನ್ನ ವೇಣಿಯ ಮೇಲೆ ಪ್ರೇಮವಿತ್ತು. ಆದರೆ ನ್ಯಾಯಾಧೀಶನ ಸತ್ಯಸಂಧತೆಯನ್ನೂ ನಾರಿಯರ ಸತೀತ್ವವನ್ನೂ ಸೂರೆಗೊಳ್ಳುವ ಹಣವು ಒಬ್ಬ ಕ್ಷುದ್ರ ಸ್ತ್ರೀಯ ಒಂದೆರಡು ಕೂದಲುಗಳನ್ನು ಕೊಂಡುಕೊಳ್ಳಲಾರದೇ? ಒಂದು ಹಿಡಿ ಅಕ್ಕಿಗೋಸುಗ ದಿನವೆಲ್ಲ ಕಷ್ಟ ಮಾಡುವವಳು ಒಂದೆರಡು ರೂಪಾಯಿಗೆ ಕೆಲವು ಕೂದಲುಗಳನ್ನು ಕೊಡಲಾರಳೇ? ಈ ವಿಧವಾದ ತರ್ಕವಿತರ್ಕಗಳನ್ನು ನನ್ನಲ್ಲಿಯೇ ಮಥಿಸುತ್ತಾ ನಾನು ಪುನಃ ಮನೆಯನ್ನು ಸೇರಿದೆನು.

ಮೂರು ದಿವಸಗಳು ನಿಲ್ಲದೆ ಕಳೆದುವು. ನಾಲ್ಕನೆಯ ದಿನ ರಾಯರ ಮನೆಗೆ ಹೋದೆನು. ಹೋದವನು ಕಾಲು ತೊಳೆಯುವುದಕ್ಕೆ ನೆಟ್ಟನೆ ಬಚ್ಚಲಿಗೆ ಹೋದೆನು. ಕೂದಲಿನವಳು ಒಲೆಗೆ ಕಟ್ಟಿಗೆಯನ್ನೊಟ್ಟಿ, ಬೆಂಕಿಯನ್ನುರಿಸುತ್ತಿದ್ದಳು. ನನ್ನನ್ನು ಮೆಲ್ಲಗೆ ನೋಡುತ್ತಲೇ – “ಹಾಳು ಕಟ್ಟಿಗೆ! ಊದಿ ಊದಿ ಕಣ್ಣು ಹೋಯಿತು. ಇನ್ನೂ ಉರಿಯುವುದಿಲ್ಲ.” ಎಂದು ತನ್ನಲ್ಲಿಯೇ ಗುಣಗುಟ್ಟುತ್ತಿದ್ದಳು. “ಕಾಲು ತೊಳೆಯುವುದಕ್ಕೆ ಒಂದು ತಪ್ಪಲೆ ನೀರು ಈಚೆಗೆ….” ಎಂದು ದೃಢಮನಸ್ಕನಾಗಿ ಕೇಳಿದೆನು. ಅವಳು ಎದ್ದು ನಿಂತಳು. ಆದರೆ ನಿಂತವಳು ಕೈಯಲ್ಲಿ ತಪ್ಪಲೆಯನ್ನು ಕೊಳ್ಳದೆ, ಬೆಳ್ಳಿ ಬಿಗಿದ ನಸೆಡಬ್ಬಿಯನ್ನು ಕುಪ್ಪಸದಿಂದೀಚೆಗೆ ತೆಗೆದಳು. ನಸೆ ಉಂಟೋ ಇಲ್ಲವೋ ಎಂದು ನೋಡುವಂತೆ ಡಬ್ಬಿಯನ್ನು ತನ್ನ ಕಣ್ಣಿದಿರಿಗೆ (ಆದುದರಿಂದ ನನ್ನ ಕಣ್ಣಿದಿರಿಗೂ) ಹಿಡಿದು ಅಲ್ಲಿಯೇ ತಡೆದಳು. ನಾನೇನೋ ಧೈರ್ಯಗೊಂಡು, ಕಾಲು ತೊಳೆಯುವುದನ್ನು ಮರೆತು – “ಚೆಲೋ ನಸೆಡಬ್ಬಿ! ನಸೆ ಇಲ್ಲವೆ?” ಎಂದು ಕೇಳಿದೆನು. ಅವಳು ಡಬ್ಬಿಯನ್ನು ನನ್ನ ನೀಡಿದ ಕೈಗೆ ಕೊಡುವುದಕ್ಕೆ ಲಜ್ಜಿತಳಾಗಿ ನನ್ನ ಕಣ್ಣ ಮುಂದಿಟ್ಟು, ತಪ್ಪಲೆಯನ್ನು ಹಿಡಿದು, ಗುಡಾಣದಲ್ಲಿ ಮುಳುಗಿಸುತ್ತಿದ್ದಳು. ಆಗ ಏನು ಕಾರಣವೋ ನನಗೆ ಮುಗುಳು ನಗೆ ಬಂತು; ನಾನು ನಗುವುದನ್ನು ಅವಳು ಓರೆ ನೋಟದಿಂದ ನೋಡದೆ ಹೋಗಲಿಲ್ಲ. ತಪ್ಪಲೆಯನ್ನು ನೀರು ತುಂಬಿ ನನ್ನ ಕೈಗೆ ಕೊಡುತ್ತಿದ್ದಾಗ ಅವಳೂ ನಗಾಡುತ್ತಿದ್ದಳು. ಆ ಸಮಯದಲ್ಲಿ ಯಾರೋ ಬರುವ ಸಪ್ಪುಳಾದುದರಿಂದ ನಾನು ಈಚೆಗೆ ಸರಿದೆನು. ಬಂದವಳು ನಮ್ಮಿಬ್ಬರನ್ನು ದೃಷ್ಟಿಸಿ, ಮನೆಯೊಳಗೆ ಸೇರಿದಳು. ನಾನು ದುರದೃಷ್ಟನೆಂದೆಣಿಸಿ ಅಲ್ಲಿಂದ ಕಾಲು ತೆಗೆದೆನು.

ಈ ವಿಧವಾಗಿ ಎರಡು ಚಿಕುರಗಳಿಗೋಸುಗ ನಾನು ನಿದ್ರಾಹಾರಾದಿಗಳನ್ನು ಬಿಟ್ಟು ಒದ್ದಾಡಿದೆನು. ನಾನು ಪಟ್ಟ ಕಷ್ಟಗಳೆಲ್ಲವನ್ನು ಕೇಳಿದರೆ (ಮದುವೆಯಾಗಿದ್ದರೆ) ನನ್ನ ಹೆಂಡತಿಯು ಜೀವದಿಂದುಳಿಯುತ್ತಿದ್ದಿಲ್ಲ. ಹಗಲೆನ್ನದೆ ಇರುಳೆನ್ನದೆ ಕೇರಿಯಿಂದ ಕೇರಿಗೆ ಓಡುತ್ತಾ, ನಿರ್ಜನ ಪ್ರದೇಶಗಳಲ್ಲಿ ಅಲೆಯುತ್ತಾ, ಅನೇಕ ಗವಿಗಳಲ್ಲಿ ಅಡಗುತ್ತಾ, ಕಷ್ಟಪಟ್ಟರೂ ಹಿಡಿದ ಕಾರ್ಯವನ್ನು ಬಿಡಲಿಲ್ಲ. ಕೂದಲುಗಳು ಸಿಕ್ಕಿದುವು; ಅವುಗಳನ್ನು ಚಿನ್ನದಿಂದ ಬಿಗಿದು ನಗವು ಸಿದ್ಧವಾಯಿತು. ಚಿಕ್ಕತಾಯಿಯ ಆನೆಜಮೆಸರಕ್ಕೂ ಈ ನಗಕ್ಕೂ ಯಾವ ವ್ಯತ್ಯಾಸವೂ ಇದ್ದಂತೆ ನನಗೆ ತೋರಲಿಲ್ಲ. ಇನ್ನು ಮುದಿ ಕಣ್ಣುಗಳಿಗೆ ಕಂಡುಹಿಡಿಯಲಿಕ್ಕೆ ಸಾಧ್ಯವೇ? ಚಿಕ್ಕತಾಯಿಯ ಸರ್ವಸ್ವವೂ ನನ್ನ ಕೈಗೆ ಸಿಕ್ಕಿತು, ಇನ್ನು ಮುಂದೆ ನನ್ನ ಸೌಭಾಗ್ಯಕ್ಕೆ ಪಾರಾವಾರವಿಲ್ಲ; ಇನ್ನು ರಾಜಣ್ಣನವರ ಅಳಿಯನಾಗುವುದರಲ್ಲಿ ನನಗೇನೂ ಸಂಶಯವಿರಲಿಲ್ಲ. ಅಳಿಯನಾದರೆ ಮುಂದೆ ಅವರ ಹಣವು ನನ್ನ ಪಾಲಿಗೇ ಬರುವುದು. (ಅವರಿಗೆ ಒಂದು ಹೆಣ್ಣು ಮಗುವಲ್ಲದೆ ಬೇರೆ ಮಕ್ಕಳಿರಲಿಲ್ಲ). ಈ ವಿಧವಾಗಿ ಅಂತರಿಕ್ಷ ಗೋಪುರಗಳನ್ನು ಮನಸ್ಸಿನಲ್ಲಿಯೇ ಕಟ್ಟುತ್ತ ನಾನು ಮನೆಗೆ ಒಂದು ದಿನ ಸಾಯಂಕಾಲ ಹಿಂತಿರುಗುತ್ತಿದ್ದೆನು. ಎಡಬಲದಲ್ಲಿ ಹೋಗುವವರನ್ನು ನಾನು ಲಕ್ಷಿಸಲಿಲ್ಲ. ನನ್ನ ಹಿಂದೆ ಯಾರೋ ಓಡಿಬರುವ ಸಪ್ಪುಳವನ್ನು ಕೇಳಿದೆನು. ಮನೆಯನ್ನು ಮುಟ್ಟಲಿಕ್ಕೆ ಒಂದೆರಡು ಹೆಜ್ಜೆ ದೂರವಿತ್ತು. ಸಪ್ಪುಳು ನನ್ನ ಬೆನ್ನು ಹಿಂದೆಯೇ ಕೇಳಿಸಿತು. ಒಡನೆ ನನ್ನ ಹೆಗಲಿನ ಮೇಲೆ ಯಾರೋ ಕೈಯಿಟ್ಟರು. ಕತ್ತಲು ಬಲವಾದುದರಿಂದ ಯಾರೆಂದು ಚೆನ್ನಾಗಿ ತಿಳಿಯಲಿಲ್ಲ.

ಕಾರ್ಯಸಾಧನೆಯಲ್ಲಿ ವಿಘ್ನಗಳು ಪ್ರತಿಭಟಿಸಿದರೂ ಬುದ್ಧಿವಂತರು ಸ್ಥಿರಪ್ರಯತ್ನರಾಗಿ ಅವುಗಳನ್ನು ಕೊನೆಗಾಣಿಸಬೇಕೆಂಬುದೊಂದು ಹಿರಿಯರ ಮಾತು ಇರುವುದು. ಇದಕ್ಕನುಸಾರವಾಗಿ ನಡೆಯಬೇಕೆಂದು ನಾನು ನಿಶ್ಚಯಿಸಿದೆನು. ಚಿಕ್ಕತಾಯಿಯನ್ನು ಮೋಸಗೊಳಿಸಲಿಕ್ಕೆ ಈ ಸ್ತ್ರೀಯ ಪರಿಚಯವು, ಅದೂ ಸಾಲದಿದ್ದರೆ ಅವಳೊಡನೆ ಅನೃತ ಪ್ರಣಯವು ಅವಶ್ಯವೆಂದು ನನ್ನ ಮನಸ್ಸಿಗೆ ಖಚಿತವಾಯಿತು.

ವ್ಯಕ್ತಿ : “ರಾಯರೇ! ನಿಮ್ಮನ್ನು ಕರೆತರಲಿಕ್ಕೆ ನನ್ನನ್ನು ಕಳುಹಿಸಿರುವವರು; ಒಂದು ಸಲ ಪೋಲೀಸ್ ಸ್ಟೇಶನ್ನಿಗೆ ದಯಮಾಡಬೇಕೆಂದು ಅಪ್ಪಣೆಯಾಗಿದೆ.”

“ಇದೇನು ಯಾರು ಅಪ್ಪಣೆ ಕೊಟ್ಟಿರುವರು?” ಎಂದು ನಾನು ತುಟಿಯಲ್ಲಾಡಿಸಿದೆನು.

ಒಡನೆ ಜನರೆಲ್ಲರು ಗುಂಪುಗುಂಪಾಗಿ ಬರಲಾರಂಭಿಸಿದರು; ಒಬ್ಬಿಬ್ಬರು “ಏತಕ್ಕೆ ಕೈದು ಮಾಡಿದರು? ಏತಕ್ಕೆ ಕೈದು ಮಾಡಿದರು?” ಎಂದು ಪರಸ್ಪರ ವಿಚಾರಿಸುತ್ತಿದ್ದರು. ಆ ಮಾತುಗಳನ್ನು ಕೇಳುತ್ತಲೇ ತಲೆಯ ಮೇಲೆ ಆಕಾಶವೇ ಕಳಚಿ ಬಿದ್ದಂತಾಯಿತು. ಕಣ್ಣುಗಳಲ್ಲಿ ನಕ್ಷತ್ರಗಳು ಮಿಣುಕಿದವು; ವಸ್ತುಗಳೆಲ್ಲವೂ ನನ್ನ ಸುತ್ತಲೂ ತಿರುಗುವಂತೆ ಕಂಡುಬಂದವು; ಜನರ ಮಾತುಗಳು ದೂರದಿಂದ ಕೇಳಿಸುವಂತಾದುವು.

ವ್ಯಕ್ತಿ : “ಇವರ ಚಿಕ್ಕತಾಯಿಯ ಕೆಲವು ನಗಗಳು ಕಳವಾಗಿದ್ದುವು. ಅದಕ್ಕೋಸುಗ ಇವರನ್ನು ಸ್ಟೇಶನ್ನಿಗೆ ತರಬೇಕೆಂದು ಖಾವಂದರು ಅಪ್ಪಣೆ ಕೊಟ್ಟಿದ್ದರು. ಮೂರು ದಿವಸಗಳಿಂದ ಇವರನ್ನು ಹುಡುಕಿದರೂ ಇವರು ಸಿಕ್ಕಲಿಲ್ಲ. ಅದರಲ್ಲಿ ಆಗುವುದೇನೂ ಇಲ್ಲ.”

“ಅದು ಹೇ -ಹೇಗೆ ನಾ- ನಾನು ಕಳುವು ಮಾಡಿದೆನೇ?”

ವ್ಯಕ್ತಿ : “ನಿಮ್ಮ ಚಿಕ್ಕತಾಯಿ ಎಲ್ಲವನ್ನೂ ಬಲ್ಲಳು. ಅದನ್ನೆಲ್ಲ ಮತ್ತೆ ನೋಡುವ! ಈಗ ಒಂದು ಸಲ ಸ್ಟೇಶನ್ನಿಗೆ ನಡೆಯುವ!”

ನಾನು ಚಿಕ್ಕತಾಯಿಯನ್ನು ನೋಡದೆ ಬರಲಾರೆನೆಂದೆನು. ಕಡೆಗೆ ಪೋಲೀಸನವನು ಒಪ್ಪಿ, ನನ್ನ ಕೈ ಹಿಡಿದು ನನ್ನೊಡನೆ ಮನೆಗೆ ಬಂದನು.
ಮಾರ್ಗದ ಮೇಲೆ ಬರುತ್ತಿರುವಾಗ ನನಗೆ ಎಲ್ಲ ಸಂಗತಿಗಳು ಮನಸ್ಸಿನಲ್ಲಿ ಎದ್ದು ನಿಂತು ಸ್ಪಷ್ಟವಾಗಿ ತೋರಿದುವು. ಪೋಲೀಸನವರು ಮೊದಲಿನಿಂದ ನನ್ನನ್ನೇ ಗುರಿ ನೋಡುತ್ತಿದ್ದರೆಂತಲೂ, ನಾನು ಮೈಮರೆವಂತೆ ಅವರು ನಂಬ್ರವನ್ನು ಸಡಿಲು ಬಿಟ್ಟರೆಂತಲೂ, ನನ್ನ ಕಳ್ಳ ಹೆಜ್ಜೆಗಳನ್ನು ಅವರು ಆಗಾಗ ಹೊಂಚಿ ನೋಡುತ್ತಿದ್ದರೆಂತಲೂ, ನನ್ನ ಮನಸ್ಸಿಗೆ ಖಚಿತವಾಯಿತು. ಅದಲ್ಲದೆ ನಾನು ಅನೇಕ ಅಕ್ಕಸಾಲಿಗರ ಅಂಗಡಿಗಳಲ್ಲಿ ಕುಳಿತಿರುವುದನ್ನೂ, ವಿಜನಸ್ಥಳಗಳಲ್ಲಿ ಒಂಟಿಗನಾಗಿ ಅಲೆಯುವುದನ್ನೂ, ಕ್ಷುದ್ರ ಸ್ತ್ರೀಯ ಗವಿಯಲ್ಲಿ ಆಗಾಗ ನುಸುಳುವುದನ್ನೂ ಇವರು ನೋಡಿದ್ದರೂ ಇರಬಹುದು. ಈ ವಿಷಯಗಳು ನನ್ನ ಮನಸ್ಸಿಗೆ ಪರಂಪರೆಯಾಗಿ ಸಾಲಿಡುತ್ತಲೇ ನನ್ನ ಕಳವಳವು ಭಯಂಕರವಾಯಿತು. ನನ್ನ ಚಿತೆಯನ್ನು ನಾನೇ ಸಿದ್ಧಪಡಿಸಿದಂತಾಯಿತು; ನಾನು ಅಗಿದ ಗುಣಿಯಲ್ಲಿ ನಾನೇ ಬೀಳುವುದಾಯಿತು. ಒಂದು ಕಡೆಯಲ್ಲಿ ಬಂಧನ ಶಿಕ್ಷೆ, ಇನ್ನೊಂದು ಕಡೆಯಲ್ಲಿ ದುಃಖಕರವಾದ ಕೃತಘ್ನತೆಯ ರೋಷ. ಇದನ್ನು ತಪ್ಪಿಸುವ ಹಾದಿ ಯಾವುದು? ಸತ್ಯವನ್ನು ಅಡಗಿಸಿದರೆ ಶಿಕ್ಷೆಯು ಎಷ್ಟು ವರ್ಷ ಎಂಬ ಪ್ರಶ್ನೆಯಲ್ಲದೆ ಮತ್ತೊಂದಿಲ್ಲ. ಸತ್ಯವನ್ನೊಪ್ಪಿದರೆ ಈ ಜನ್ಮದಲ್ಲಿ ಚಿಕ್ಕತಾಯಿಯನ್ನು ನೋಡುವುದು ಮುಗಿಯಿತು. ಆದುದರಿಂದ ಅಸತ್ಯದಿಂದ ಅಸತ್ಯವನ್ನು ದೃಢಪಡಿಸಬೇಕೆಂದು ಮನಸ್ಸಿನಲ್ಲಿ ನಿರ್ಧರಿಸಿದೆನು.

ಪೋಲೀಸನವರು ನನ್ನನ್ನು ಹಿಡಿದಿರುವರು ಎಂಬುದನ್ನು ಚಿಕ್ಕತಾಯಿಯು ಕೆಲವು ನಿಮಿಷಗಳ ಹಿಂದೆ ತಿಳಿದಿದ್ದಳು. ನಾವಿಬ್ಬರು ಒಳಗೆ ಬರುತ್ತಲೇ ಅವಳು ನನಗೋಸುಗ ಅಳುವುದನ್ನೂ, ಪೋಲೀಸನವರನ್ನು ಮಧುರ ಭಾಷೆಯಿಂದ ಶಪಿಸುವುದನ್ನೂ ನಾನು ಕೇಳಿದೆನು. ಒಡನೆ ಅವಳಿದ್ದಲ್ಲಿಗೆ ನಡೆದು, ಪೋಲೀಸಿನವನು ಬಂದ ಸಂಗತಿಯನ್ನು ತಿಳಿಸಿದೆನು; ವಿಳಂಬ ಮಾಡದೆ ನಗವನ್ನು ತಂದಿರುವೆನೆಂದು ಹೇಳಿ, ಆನೆಜಮೆ ಸರವನ್ನು ಅವಳ ಕೈಗೆ ಕೊಟ್ಟೆನು. ಅವಳು ಅದನ್ನು ಎಷ್ಟೋ ನೋಡಿದಳು! ನನ್ನನ್ನು ಎಷ್ಟೋ ಹೊಗಳಿದಳು! ಪೋಲೀಸನವರನ್ನು ಎಷ್ಟೋ ಬೈದಳು! ಪೋಲೀಸನವನು ನಗವನ್ನು ನೋಡಿ “ಅಮ್ಮಾ! ಆ ನಗವು ನಿಮ್ಮದೆಂದು ನೀವು ಹೇಳುವಿರೇ?” ಎಂದನು. “ನನ್ನ ನಗವನ್ನು ನಾನು ಕಂಡುಹಿಡಿಯಲಾರೆನೇ? ಇದು ಸಾವಿರ ನಗಗಳಲ್ಲಿದ್ದರೂ ನಾನು ಇದನ್ನೇ ಗುರುತು ಹಿಡಿದೇನು” ಎಂದಳು. “ಇದು ನಿಮ್ಮದೆಂದು ನೀವು ಒಪ್ಪುತ್ತೀರೇ?” ಎಂದು ಪುನಃ ಕೇಳಿದನು. ಈ ಮಾತುಗಳನ್ನು ಕೇಳಿ ನನ್ನ ಮನಸ್ಸಿಗೆ ಇನ್ನೂ ಸಂಶಯವೂ ಭಯವೂ ಉಂಟಾಯಿತು; ಏಕೆಂದರೆ ಈ ಮಾತುಗಳನ್ನೇ ನನ್ನ ಚಿಕ್ಕ ತಾಯಿ ಮತ್ತೂ ಒಪ್ಪಿದರೆ ನಾನೇ ಕಳ್ಳನೆಂದು ಸಾಧಿಸುವುದರಲ್ಲಿ ಪೋಲೀಸನವರಿಗೆ ಕಷ್ಟವೇನೂ ಇಲ್ಲ. ಆ ಮಾತುಗಳ ಬಲವನ್ನು ತಪ್ಪಿಸಲೋಸುಗ ನಾನು ಒಂದು ನುಡಿಯನ್ನಾಡಲಿಕ್ಕೆ ಬಾಯೆತ್ತಿದೆನು. ಆದರೆ ಅಷ್ಟರೊಳಗೆ ಯಾರೋ ಒಳಗೆ ಬಂದರು. ಬಂದವನು ಒಂದು ಕಾಗದವನ್ನು ಪೋಲೀಸನವನ ಕೈಗೆ ಕೊಟ್ಟನು. ಕಾಗದವು ಚಿಕ್ಕತಾಯಿಯ ವಿಳಾಸಕ್ಕೆ ಬರೆದಿತ್ತು. ಕೂಡಲೇ ಅವಚಿಯು ಅದನ್ನೋದುವುದಕ್ಕೆ ಹೇಳಿದಳು. ಅದರಲ್ಲಿ ಬರೆದುದನ್ನು ಪೋಲೀಸನವನು ಹೀಗೆ ಓದಿದನು.

“ನೀವು ಎರಡು ತಿಂಗಳ ಹಿಂದೆ ಇಲ್ಲಿ ಬಂದಾಗ, ಮಂದಿರದಲ್ಲಿ ನಡೆಯುವ ಪುರಾಣ ಶ್ರವಣಕಾಲದಲ್ಲಿ ನಿಮ್ಮ ನಗಗಳ ಗಂಟನ್ನು ಇಲ್ಲಿ ಮರೆತುಬಿಟ್ಟು ಹೋದಿರಿ. ನಿಮ್ಮ ಆನೆಜಮೆಸರವು ನಿಮ್ಮ ಜಪಕ್ಕೆ ನಿತ್ಯವೂ ಅವಶ್ಯವೆಂದು ಸ್ವತಃ ಗೊತ್ತಿದುದರಿಂದ, ಈ ಕಾಗದ ತರುವವನ ಕೈಯಲ್ಲಿ ಅದನ್ನು ಕಳಿಸಿರುತ್ತೇನೆ. ತಮ್ಮ ಮಿಕ್ಕ ನಗಗಳು ದೇವ ಪ್ರತಿಮೆಯ ಅಲಂಕಾರಕ್ಕಾಗಿ ಇಲ್ಲಿ ಇಟ್ಟಿರುತ್ತೇವೆ. ಕೃಷ್ಣಾಷ್ಟಮಿಯ ಉತ್ಸವವೂ ಭಜನೆಯೂ ಈ ವರ್ಷ ವಿಶೇಷ ತರದ್ದಾಗಿರುವುದರಿಂದ ತಾವು ಬರಬೇಕಾಗಿ ಪೌರಾಣಿಕರು ಅಪೇಕ್ಷಿಸುತ್ತಾರೆ.”

ಈ ಕಾಗದವನ್ನು ಓದುತ್ತಲೇ ನನ್ನ ಮೈಯೆಲ್ಲಾ ತಣ್ಣಗಾಯಿತು; ಕಣ್ಣುಗಳಲ್ಲಿ ದೊಣ್ಣೆಯಿಂದ ಯಾರೋ ಬಡಿದಂತಾಯಿತು. ನಾನು ಏನು ಹೇಳಿದೆನೋ ಏನು ಮಾಡಿದೆನೋ ಈಗ ಸ್ಮರಿಸಲಾರೆನು.

ಆಮೇಲೆ ನಡೆದ ವಿಷಯವನ್ನು ಇಲ್ಲಿ ಹೇಳುವುದು ಅವಶ್ಯವಿಲ್ಲ. ನನಗೆ ಮನೆಗಿಂತಲೂ ಸೆರೆಯೆ ಲೇಸೆಂದು ಕಂಡುಬಂತು. ಇನ್ನು ಮಾಡುವುದೇನು? ಆದರೆ ಸಂಪೂರ್ಣ ವಿಷಯವನ್ನು ಹೇಳುವುದು ಒಳ್ಳೆಯದು. ಮರುದಿನ ಹೊಸಪೇಟೆ ರಾಜಣ್ಣನವರ ಪತ್ನಿಯು ಬಂದು, ನನ್ನ ಚಿಕ್ಕತಾಯಿಯೊಡನೆ ಈ ರೀತಿಯಲ್ಲಿ ಮಾತಾಡುವುದನ್ನು ನಾನು ಮರೆಯಲ್ಲಿದ್ದು ಕೇಳಿದೆನು –

“ನಿಮ್ಮ ಹುಡುಗನ ಜಾತಕವು ನಮ್ಮ ಸಕಲಾವತಿಯ ಜಾತಕಕ್ಕೆ ಕೂಡಿಬರುತ್ತಿತ್ತು; ಸಂಬಂಧವು ಒಳ್ಳೆಯದಾಗಿತ್ತು. ಆದರೆ ನಿಮ್ಮ ಹುಡುಗನು ಕೆಲವು ದಿನಗಳಿಂದ ಈಚೆಗೆ ಕೇರಿಕೇರಿಗಳಲ್ಲಿ ತಿರುಗುವುದನ್ನೂ, ಒಂದೆರಡು ಸಲ – ಮನೆಗಳನ್ನು ಸೇರಿದುದನ್ನೂ ನಮ್ಮ ಮನೆಯವರು ನೋಡಿದರಂತೆ. ನಾನು ಹುಡುಗನೆಂದು ಸುಮ್ಮನಿದ್ದೆನು. ಆತನು ಹೆಚ್ಚು ಸಲ ನಮ್ಮ ನೆರಮನೆಯ ಸೋಮಿಯೊಡನೆ ಒಬ್ಬನೇ ಮಾತಾಡುವುದನ್ನೂ ರೂಪಾಯಿ ಕೈಯಲ್ಲಿ ಹಿಡಿದುದನ್ನೂ ನಾನು ಗೋವಿಂದರಾಯರ ಮನೆಗೆ ಬರುತ್ತ ಹೋಗುತ್ತಿದ್ದಾಗ ನೋಡಿದ್ದೇನೆ. ಈ ಕಾರಣದಿಂದ ನಮ್ಮ ಮನೆಯವರಿಗೆ ಸಂಬಂಧದ ಪ್ರಸ್ತಾಪವು ಈಗ ಕಿವಿಗೇ ಹೋಗುವುದಿಲ್ಲ.”

ಇದನ್ನು ಕೇಳುತ್ತಲೇ ನನ್ನ ಜೀವದಾಸೆ ಎಲ್ಲವೂ ಮುಗಿಯಿತು. ಏನು ಮಾಡುವುದು? ಈಗ ನಾನೇನು ಮಾಡಲಿ? ಸರ್ವಜನ ಪರಿಪೂರಿತವಾದ ಈ ಲೋಕಸಾಗರದಲ್ಲಿ ನಾನು ನನ್ನ ಜೀವನ ನೌಕವನ್ನು ಮುಂದೆ ಹೇಗೆ ನಡೆಯಿಸಲಿ? ನನ್ನ ಕಥೆಯನ್ನು ಓದುವ ಅಭಿಜ್ಞ ಪಾಠಕರಲ್ಲಿ ಯಾರೊಬ್ಬನಾದರೂ ಹೆಡ್ಡನಾದ ನಾನು ಮುಂದೆ ಏನು ಮಾಡಬೇಕೆಂದು ಹೇಳಲಾರ.

ಟಿಪ್ಪಣಿ : ಕನ್ನಡದ ಮೊದಲ ಸಣ್ಣ ಕತೆಗಳನ್ನು ಬರೆದವರು ಪಂಜೆ ಮಂಗೇಶರಾಯರು. ಅವರು 1900 ನೆಯ ಇಸವಿ ಜುಲೈ ತಿಂಗಳ ‘ಸುವಾಸಿನಿ’ ಮಾಸ ಪತ್ರಿಕೆಯಲ್ಲಿ ಪ್ರಕಟಿಸಿದ ‘ನನ್ನ ಚಿಕ್ಕತಾಯಿ’ ಎಂಬ ಕತೆಯೇ ಕನ್ನಡದ ಮೊದಲನೆಯ ಸಣ್ಣ ಕತೆ ಎಂದು ಮಾನ್ಯವಾಗಿದೆ. ಆ ಕತೆ ಇದು. ಇದರ ಜತೆಗೆ ಪಂಜೆಯವರು ಇದೇ ಮಾಲಿಕೆಯಲ್ಲೆಂಬಂತೆ ಮತ್ತೆ ಮೂರು ಕತೆಗಳನ್ನು ಬರೆದರು. ಅವುಗಳೆಂದರೆ ‘ನನ್ನ ಹೆಂಡತಿ’, ‘ನನ್ನ ಚಿಕ್ಕತಂದೆ’ ಮತ್ತು ‘ನನ್ನ ಚಿಕ್ಕತಂದೆಯವರ ಉಯಿಲ್’ – ಇವುಗಳು. ಇವುಗಳು ಒಂದರ ಮುಂದುವರಿಕೆಯಂತೆ ಇನ್ನೊಂದಿವೆ. ಇವುಗಳನ್ನು ಒಟ್ಟಾಗಿ ಒಂದೇ ಕಥಾನಕದ ಭಾಗಗಳಂತೆ ನೋಡುವುದೇ ಸೂಕ್ತ. ಆದರೆ ಪಂಜೆಯವರು ಇವುಗಳನ್ನು ಪ್ರತ್ಯೇಕ ಕತೆಗಳಂತೆ ಬರೆದಿರುವ ಕಾರಣ ಇಲ್ಲಿ ಪ್ರತ್ಯೇಕ ಕತೆಗಳಂತೆ ಮುದ್ರಿಸಲಾಗಿದೆ. ಆದರೆ ಇವುಗಳನ್ನು ‘ಉಯಿಲು’ ಎಂಬ ಶೀರ್ಷಿಕೆಯಡಿ ಒಂದೇ ನೀಳ್ಗತೆಯ ನಾಲ್ಕು ಭಾಗಗಳಂತೆ ಓದಬಹುದು. ಇವು ಮಂಗಳೂರಿನ ‘ಸುವಾಸಿನಿ’ ಮಾಸಪತ್ರಿಕೆಯಲ್ಲಿ 1900 ರಿಂದ 1903 ರ ನಡುವೆ ಪ್ರಕಟವಾಗಿದ್ದವು. ಉಳಿದ ಮೂರು ಕತೆಗಳನ್ನು ಮುಂದೆ ಅನುಕ್ರಮವಾಗಿ ಕೊಡಲಾಗಿದೆ.

ಈ ಕಥಾಗುಚ್ಛದಲ್ಲಿ ಪಂಜೆಯವರು ಇಪ್ಪತ್ತನೆಯ ಶತಮಾನದ ಹೊಸ್ತಿಲಲ್ಲಿ ವಸಾಹತು ಆಡಳಿತದ ಬಗ್ಗೆ ಸಮಕಾಲೀನರಲ್ಲಿ ಇದ್ದ ಅಭಿಪ್ರಾಯವನ್ನು ಸಾಂದರ್ಭಿಕವಾಗಿ ಬಯಲುಪಡಿಸಿದ್ದಾರೆ. ಅವರ ಕತೆಗಳಲ್ಲಿ ಅವರ ಚಿಕ್ಕತಾಯಿಯ ಒಡವೆಗಳು ಮತ್ತು ಚಿಕ್ಕತಂದೆಯವರ ಆಸ್ತಿಯನ್ನು ಪಡೆಯಲು ನಿರೂಪಕ ಪ್ರಯತ್ನ ಪಡುವುದನ್ನು ಲಘು ಹಾಸ್ಯದಿಂದ ವರ್ಣಿಸಲಾಗಿದೆ. ನಿರೂಪಕ ತನ್ನ ಪ್ರಯತ್ನದಲ್ಲಿ ಸಂಶಯಾಸ್ಪದನಾಗಿ ವರ್ತಿಸಿದಾಗಲೆಲ್ಲ ಪೋಲೀಸರು ಅವನನ್ನು ಹಿಡಿದುಹಾಕುತ್ತಾರೆ. ಪೋಲೀಸ್ ವ್ಯವಸ್ಥೆ ಜನರನ್ನು ಹೇಗೆ ಕಾಯುತ್ತಿತ್ತು ಎನ್ನುವುದನ್ನು ಪಂಜೆಯವರ ಕತೆಗಳು ಸ್ಪಷ್ಟಪಡಿಸುತ್ತವೆ. ಜತೆಗೆ ನ್ಯಾಯ ವ್ಯವಸ್ಥೆಯು ಆಸ್ತಿ ಹಕ್ಕಿನ ಉತ್ತರಾಧಿಕಾರ ಪ್ರಶ್ನೆಯನ್ನು ಪರಿಹರಿಸಲು ಬಳಕೆಯಾಗುತ್ತಿದ್ದುದನ್ನು ಅವರ ಕತೆಗಳಲ್ಲಿ ಕಾಣಬಹುದು. ಇಲ್ಲಿ ದುರ್ಬಲರಾದ ಸಾಮಾನ್ಯ ಹೆಂಗಸೊಬ್ಬಳ ಒಡವೆ ಮತ್ತು ಆಸ್ತಿಯೂ ಕೂಡಾ ಸರಕಾರದ ಹತೋಟಿಯಿಂದಾಗಿ ಸುಭದ್ರವಾಗಿತ್ತೆನ್ನುವುದನ್ನು ಈ ಕತೆಗಳು ಚಿತ್ರಿಸಿವೆ ಎಂದು ಮೇಲ್ನೋಟಕ್ಕೆ ಕಾಣುತ್ತದೆ.

ಇನ್ನೊಂದು ಬಹಳ ಸೂಕ್ಷ್ಮವಾದ ಅಂಶ ಇಲ್ಲಿದೆ. ದತ್ತುಪುತ್ರರಿಗೆ ಆಸ್ತಿ ಹಕ್ಕಿಲ್ಲ ಎನ್ನುವ ಬ್ರಿಟಿಷ್ ಸರಕಾರದ ಕಾನೂನನ್ನು ಇದು ವಿಡಂಬಿಸುತ್ತದೆನ್ನುವುದನ್ನು ಗಮನಿಸಬಹುದು. ಸಾಮಾನ್ಯವಾಗಿ ರಾಜ ಮನೆತನಗಳ ಉತ್ತರಾಧಿಕಾರದಲ್ಲಿ ಬ್ರಿಟಿಷರು ಅನ್ಯಾಯ ಮಾಡಿದುದು ನಮಗೆಲ್ಲ ಇತಿಹಾಸದ ಪಾಠಗಳ ಮೂಲಕ ಗೊತ್ತಿದೆ. ಆದರೆ ಸಾಮಾನ್ಯರ ಬದುಕಿನಲ್ಲಿ ಕೂಡ ಬ್ರಿಟಿಷ್ ಸರಕಾರ ಹಸ್ತಕ್ಷೇಪ ಮಾಡುತ್ತಿತ್ತು. ಉತ್ತರಾಧಿಕಾರ ದಾಖಲೆಗಳು ಸ್ಪಷ್ಟವಾಗಿಲ್ಲದೆ ಇದ್ದಾಗ ಆ ಆಸ್ತಿಯನ್ನು ಸರಕಾರ ವಶಪಡಿಸಿಕೊಳ್ಳುತ್ತಿದ್ದುದನ್ನೂ ಪಂಜೆಯವರು ದಾಖಲಿಸಿದ್ದಾರೆ. ಆದುದರಿಂದ ಅವರದು ಏಕಮುಖವಾದ ವಸಾಹತುಶಾಹಿಯ ಆರಾಧನೆಯ ಮನೋಭಾವವಲ್ಲ, ಸತ್ಯದ ದಾಖಲೀಕರಣವೇ ಅವರ ಬರವಣಿಗೆಯಲ್ಲಿ ನಡೆದಿದೆ ಎನ್ನಬಹುದು.

ಕಾಮತರ ಕತೆಯಂತೆ – ಅಥವಾ ಅದಕ್ಕಿಂತಲೂ ಸೂಕ್ಷ್ಮವಾಗಿ ಪಂಜೆಯವರು ನಿರೂಪಕನ ಧೂರ್ತತೆಯನ್ನು ಧ್ವನಿಸುತ್ತಾರೆ. ಪತ್ತೇದಾರನ ನಡೆಯಂತೆ ಪೋಲೀಸ್ ಇಲಾಖೆ ನಿರೂಪಕನ ಹಂಚಿಕೆಗಳನ್ನು ವಿಫಲಗೊಳಿಸುತ್ತದೆ. ಪಂಜೆ ಮಂಗೇಶರಾಯರ ಕತೆಗಳ ಧ್ವನಿ ಶಕ್ತಿ ಅನನ್ಯವಾದುದು.