ನಿಡಿತವಾದ ಕತೆಯ ಹಂದರವಿರುವ ಈ ಕೃತಿಯು ಒಂದು ತಾತ್ವಿಕ ಪ್ರಬಂಧದ ಹಾಗೆಯೆ ಇದೆ. ಅದು ಎತ್ತುವ ಬಹುಮುಖ್ಯ ಪ್ರಶ್ನೆಗಳು ಚರಿತ್ರೆ, ಬರಹ, ಆತ್ಮ ಜಿಜ್ಞಾಸೆ ಇವುಗಳಿಗೆ ಸಂಬಂಧಪಟ್ಟಿವೆ. ಸಂಘ, ಪಯಣ ಇವೆಲ್ಲವು ನಾವು ಕಟ್ಟಿಕೊಳ್ಳುವ ರಚನೆಗಳಲ್ಲವೆ? ಎಲ್ಲರಿಗೂ ಸ್ವಂತದ ಉದ್ದೇಶವಿರುವುದಾದರೆ ಪಯಣಕ್ಕೆ ಇರುವ ಉದ್ದೇಶವೇನು? ಸಂಘವೆಂದರೆ ಏನು? ಕಟ್ಟಳೆಗಳು ಹೇಗೆ ರಚನೆಯಾಗುತ್ತವೆ? ನಿರೂಪಕನು ಸಂಘದ ನಿಯಮಗಳನ್ನು ಮುರಿದರೂ ಅವನಿಗೆ ಶಿಕ್ಷೆ ಇಲ್ಲ. ಅವನು ಹೇಳಲು ಹೊರಟಿರುವ ಕತೆಗೆ ಎಷ್ಟೊಂದು ಎಳೆಗಳಿವೆಯಲ್ಲ?
ಕೆ. ಪ್ರಭಾಕರನ್‌ ಅನುವಾದಿಸಿದ ಜರ್ಮನಿಯ ಹರ್ಮನ್‌ ಹೇಸ್‌ ಬರೆದ ಕಾದಂಬರಿ ‘ಪೂರ್ವದೆಡೆಗಿನ ಪಯಣ’ ಕೃತಿಗೆ ರಾಜೇಂದ್ರ ಚೆನ್ನಿ ಬರೆದ ಮುನ್ನುಡಿ

ಪ್ರಸಿದ್ಧ ಚಿಂತಕ ಎಡ್ವರ್ಡ್ ಸೈಯೀದ್ ‘Orientalism’ (1978) ಎನ್ನುವ ಕೃತಿಯನ್ನು ಪ್ರಕಟಿಸಿದ ಮೇಲೆ ಪಶ್ಚಿಮ-ಪೂರ್ವ ಹಾಗೂ ವಸಾಹತುಶಾಹಿಯನ್ನು ಕುರಿತು ಹೊಸ ಬಗೆಯ ಚಿಂತನೆಯೇ ಆರಂಭವಾಯಿತು. ಇದು ಮುಂದೆ ಪೌರ್ವಾತ್ಯವಾದವೆಂದು ಹಾಗೂ ವಸಾಹತೋತ್ತರ ಚಿಂತನೆಯೆಂದು ಪ್ರಸಿದ್ಧವಾಯಿತು. ಈ ಸಿದ್ಧಾಂತವು ಪಶ್ಚಿಮವು ಪೂರ್ವದ ಬಗ್ಗೆ ಸೃಷ್ಟಿಸಿದ ಎಲ್ಲಾ ಬರಹವೂ, ಎಲ್ಲಾ ಸಂಕಥನಗಳು ಕೇವಲ ಜ್ಞಾನದ ಸೃಷ್ಟಿಯಾಗಿರಲಿಲ್ಲ; ಪೂರ್ವದ ಮೇಲೆ ಸಾಂಸ್ಕೃತಿಕ ಹಾಗೂ ರಾಜಕೀಯ ಹಿಡಿತ ಸಾಧಿಸುವುದರ ಸಾಧನವಾಗಿತ್ತು. ಮುಖ್ಯವಾಗಿ ಪೂರ್ವ (The East)ವನ್ನು ಪಶ್ಚಿಮದ “ಅನ್ಯ” ವೆಂದು ವ್ಯಾಖ್ಯಾನಿಸಲಾಯಿತು. ಪ್ರಗತಿ, ಅಭಿವೃದ್ಧಿ, rationality, ವಿಜ್ಞಾನ, ವಿವೇಕ ಇವೆಲ್ಲವು ಪಶ್ಚಿಮದ ಲಕ್ಷಣಗಳಾದರೆ ಅತಿಭಾವುಕತೆ, ಅತಾರ್ಕಿಕತೆ, ಅನುಭಾವ, ಅವೈಜ್ಞಾನಿಕ ಮನೋಭಾವ ಇವೆಲ್ಲವು ಪೂರ್ವದ ಲಕ್ಷಣಗಳಾದವು. ಈ ಸಿದ್ಧಾಂತದ ಆಚೆಗೂ ಒಂದು ಮಾತು ನಿಜ. ಪಶ್ಚಿಮವು ಪೂರ್ವದ ಬಗ್ಗೆ ನಾವು ಬಲ್ಲ ಚರಿತ್ರೆ ಹಾಗೂ ಬರಹಗಳ ಕಾಲದಿಂದ ವೈವಿಧ್ಯಪೂರ್ಣವಾದ ಕಲ್ಪನೆಗಳನ್ನು ಕಟ್ಟಿಕೊಂಡು ಬಂದಿದೆ. ಇದರ ಮುಂದುವರಿಕೆಯಾಗಿ ಬ್ರಿಟಿಷ್ ಮತ್ತು ಜರ್ಮನ್ ಓರಿಯಂಟಲಿಸ್ಟ್ ಚಿಂತಕರು, ಬರಹಗಾರರು ಭಾರತದ ಬಗ್ಗೆ/ ಪೂರ್ವದ ಬಗ್ಗೆ ಒಂದು ಪ್ರಭಾವಿ ಸಂಕಥನವನ್ನು ಕಟ್ಟಿದರು. ಭಾರತವು ಎಲ್ಲಾ ಧರ್ಮಗಳ ಉಗಮಸ್ಥಾನ, ಆಧ್ಯಾತ್ಮದ ತವರು, ಭೌತಿಕವಾದವನ್ನು ತಿರಸ್ಕರಿಸಿ ಆತ್ಮ-ಪರಮಾತ್ಮಗಳ ಅನುಸಂಧಾನ ಮಾಡಿದ ತತ್ವಪರಂಪರೆಗಳ ಮೂಲಸ್ಥಾನ- ಈ ವ್ಯಾಖ್ಯಾನವು ಅದೆಷ್ಟು ಪ್ರಭಾವಿಯಾಗಿತ್ತೆಂದರೆ ಭಾರತದ ಶಿಕ್ಷಿತವರ್ಗವು, ವಿವೇಕಾನಂದರು, ಕುವೆಂಪು- ಇವರೆಲ್ಲ ಸೇರಿದಂತೆ ಅದನ್ನು ಚಾರಿತ್ರಿಕ ಸತ್ಯವೆಂದು ಒಪ್ಪಿಕೊಂಡವು.

(ಹರ್ಮನ್ ಹೆಸ್)

ಜರ್ಮನ್ ಬರಹಗಾರ ಹರ್ಮನ್ ಹೆಸ್ ಕೂಡ ಈ ಸಂಕಥನದ ಪ್ರಭಾವವನ್ನು ಗಾಢವಾಗಿ ಅನುಭವಿಸಿದ. ಪಶ್ಚಿಮದ ಸಾಮ್ರಾಜ್ಯಶಾಹಿ ಮತ್ತು ಬಂಡವಾಳಶಾಹಿಗಳ ದೊಡ್ಡ ಬಿಕ್ಕಟ್ಟುಗಳು 20ನೇ ಶತಮಾನದ ಆದಿಭಾಗದಲ್ಲಿ ಮುನ್ನೆಲೆಗೆ ಬಂದವು. ಮೊದಲನೇಯ ಮಹಾಯುದ್ಧವು ಪಶ್ಚಿಮದ ಸ್ವಕಲ್ಪಿತ ಪ್ರತಿಮೆಗೆ ತೀವ್ರ ಭಂಗವನ್ನು ತಂದಿತು. ಆತ್ಮವಿಶ್ವಾಸವನ್ನು ಇನ್ನಿಲ್ಲದಂತೆ ಅಲ್ಲಾಡಿಸಿತು. ಇದರ ಪರಿಣಾಮವಾಗಿ ಪಶ್ಚಿಮದ ಧೀಮಂತ ವರ್ಗವು ಪಶ್ಚಿಮದ ನಾಗರೀಕತೆಯ ಬಗ್ಗೆ ನಿರಸನ ಹೊಂದಿ ಪೂರ್ವದ ನಾಗರೀಕತೆಗಳ ಕಡೆಗೆ ತಿರುಗಿತು. ಇದು ವಸಾಹತುಶಾಹಿ ಓರಿಯಂಟಲಿಸಂಗಿಂತ ಭಿನ್ನವಾದುದು. ಈ ಒಂದು ಕಾಲದಲ್ಲಿ ಪೂರ್ವದ ಹುಡುಕಾಟದ ಬಗ್ಗೆ ಬಂದ ಕೃತಿಗಳ ಸಂಖ್ಯೆ ಅಪಾರವಾಗಿದೆ. ವಿಶೇಷವೆಂದರೆ ಮತ್ತೆ 1960, 70ರ ದಶಕಗಳಲ್ಲಿ ಇಂಥದೇ ಹೊರಳುವಿಕೆ ಕಾಣುತ್ತದೆ.

ಹರ್ಮನ್ ಹೆಸ್‌ನ ಈ ಕಿರುಕಾದಂಬರಿ ಅಥವಾ ದೀರ್ಘ ಕಥೆಯು ವಿಭಿನ್ನವಾಗಿದೆ. ಜನಪ್ರಿಯವಾದ ‘ಸಿದ್ಧಾರ್ಥ’ ಕಾದಂಬರಿಯ ಲೇಖಕನಾದ ಹರ್ಮನ್ ಹೆಸ್ ಈ ಕೃತಿಯಲ್ಲಿ ಭಾರತದ ಬಗ್ಗೆ ಬರೆದಿಲ್ಲ. ಕೃತಿಯ ಹೆಸರು ‘A Journey to the East’ ಎಂದಾಗಿದೆ. ಮತ್ತು ಕಥೆಯ ಹಂದರವು ಅಪೂರ್ಣವಾಗಿ ಹಾಗೂ ಅಯಶಸ್ವಿಯಾಗಿ ಉಳಿಯುವ ಪೂರ್ವದ ಕಡೆಗಿನ ಪಯಣದ ಬಗ್ಗೆ ಇದೆ. ಆದರೆ ಕೃತಿಯ ಪೂರ್ವವನ್ನು ಸಾಂಕೇತಿಕವಾಗಿ ಬಳಸಿಕೊಳ್ಳುತ್ತದೆ. ನಿರೂಪಕನು ಖಚಿತವಾಗಿ ಹೇಳುವಂತೆ ಇದು ಭೌಗೋಳಿಕ ಪೂರ್ವವು ಅಲ್ಲ; ಚಾರಿತ್ರಿಕ ಪೂರ್ವವೂ ಅಲ್ಲ. ಅದು ನಾಗರೀಕತೆಯ ಯೌವನ, ಈ ಪಯಣದ ಕೊನೆ ನಮ್ಮ ಮನೆಯೇ ಎಂದು ಹೇಳುತ್ತಾನೆ. ಅಂದರೆ ಪೂರ್ವವೂ ಇಲ್ಲಿ ಒಂದು ರೂಪಕ; ಒಂದು ಕಲ್ಪಿತ ಸಂಕೇತವಾಗಿದೆ. ಆದ್ದರಿಂದಲೇ ಈ ಪಯಣವು ವಾಸ್ತವ ಪಯಣವಲ್ಲ. ಈ ಪಯಣದಲ್ಲಿ ಚರಿತ್ರೆಯ ಅನೇಕ ವ್ಯಕ್ತಿಗಳು ಮಾತ್ರವಲ್ಲ, ಹೆಸ್‍ನ ಇತರ ಕತೆ ಕಾದಂಬರಿಗಳ ಪಾತ್ರಗಳು ಕೂಡ ಬಂದು ಹೋಗುತ್ತಾರೆ. ಈ ಪಯಣದ ಸದಸ್ಯರು The League ಎನ್ನುವ ಸಂಘದ ಸದಸ್ಯರು. ಈ ಸಂಘದ ಅನೇಕ ಕಟ್ಟಳೆಗಳಲ್ಲಿ ಮುಖ್ಯವೆಂದರೆ ಯಾವ ಸದಸ್ಯನೂ ಸಂಘದ ಉದ್ದೇಶ ಇತ್ಯಾದಿಗಳ ಬಗ್ಗೆ ಬರೆಯಬಾರದು. ಆದರೆ ನಿರೂಪಕನಾದ ಹರ್ಮನ್ ಹೆಸ್‌ನಿಗೆ ಈ ಪಯಣದ ಬಗ್ಗೆ ಬರೆಯಲೇಬೇಕಿದೆ. ಅದು ಅವನಿಗೆ ಅನಿವಾರ್ಯ. ಪಯಣದಲ್ಲಿ ಭಾಗಿಯಾದ ಪ್ರತಿಯೊಬ್ಬ ಸದಸ್ಯನಿಗೂ ತನ್ನದೇ ಆದ ಉದ್ದೇಶವಿದೆ. HH ನಿಗೆ ರಾಜಕುಮಾರಿ ಫಾತಿಮಾಳನ್ನು ಭೇಟಿಯಾಗಿ ಅವಳ ಬಳಿ ಪ್ರೇಮನಿವೇದನೆ ಮಾಡಿಕೊಳ್ಳಬೇಕಿದೆ. ಹಲವು ವಿಚಿತ್ರ ಘಟನೆಗಳ ನಂತರ ಆ ಪಯಣದಲ್ಲಿ ಲಿಯೋ ಅನ್ನುವ ಸೇವಕನೊಬ್ಬನು ಸೇರಿಕೊಳ್ಳುತ್ತಾನೆ. ಅವನು ಬಹು ವಿಶಿಷ್ಟ, ಆಕರ್ಷಕ ಸಮರ್ಥ ವ್ಯಕ್ತಿ HH ಅವನನ್ನು ತುಂಬಾ ಇಷ್ಟಪಡುತ್ತಾನೆ. ಆದರೆ ಅನಿರೀಕ್ಷಿತವಾಗಿ ರಹಸ್ಯಮಯವಾಗಿ ಲಿಯೋ ಹೊರಟುಹೋದ ಮೇಲೆ ಸಂಘವು ಬಿರುಕುಗೊಳ್ಳುತ್ತದೆ. ಸಂಶಯ, ಹತಾಶೆಗಳಿಂದ ಸದಸ್ಯರು ತಮ್ಮ ಹುಮ್ಮಸ್ಸು ಕಳೆದುಕೊಳ್ಳುತ್ತಾರೆ. ಪಯಣವು ಅಲ್ಲಿಗೇ ಮುಗಿಯುತ್ತದೆ. ಹಲವು ವರ್ಷಗಳ ನಂತರ ಈ ಪಯಣದ ಬಗ್ಗೆ ಬರೆಯಲು ಹೊರಟ ನಿರೂಪಕನಿಗೆ ವಿಚಿತ್ರವಾದ ಘಟನೆಗಳಿಂದಾಗಿ ಹೊಸ ಅನುಭವವುಂಟಾಗುತ್ತದೆ. ಈ ಭಾಗವು ಕತೆಯ ತಾತ್ವಿಕತೆಯ ತಿರುಳು ಕೂಡ.

ನಿಡಿತವಾದ ಕತೆಯ ಹಂದರವಿರುವ ಈ ಕೃತಿಯು ಒಂದು ತಾತ್ವಿಕ ಪ್ರಬಂಧದ ಹಾಗೆಯೆ ಇದೆ. ಅದು ಎತ್ತುವ ಬಹುಮುಖ್ಯ ಪ್ರಶ್ನೆಗಳು ಚರಿತ್ರೆ, ಬರಹ, ಆತ್ಮ ಜಿಜ್ಞಾಸೆ ಇವುಗಳಿಗೆ ಸಂಬಂಧಪಟ್ಟಿವೆ. ಸಂಘ, ಪಯಣ ಇವೆಲ್ಲವು ನಾವು ಕಟ್ಟಿಕೊಳ್ಳುವ ರಚನೆಗಳಲ್ಲವೆ? ಎಲ್ಲರಿಗೂ ಸ್ವಂತದ ಉದ್ದೇಶವಿರುವುದಾದರೆ ಪಯಣಕ್ಕೆ ಇರುವ ಉದ್ದೇಶವೇನು? ಸಂಘವೆಂದರೆ ಏನು? ಕಟ್ಟಳೆಗಳು ಹೇಗೆ ರಚನೆಯಾಗುತ್ತವೆ? ನಿರೂಪಕನು ಸಂಘದ ನಿಯಮಗಳನ್ನು ಮುರಿದರೂ ಅವನಿಗೆ ಶಿಕ್ಷೆ ಇಲ್ಲ. ಅವನು ಹೇಳಲು ಹೊರಟಿರುವ ಕತೆಗೆ ಎಷ್ಟೊಂದು ಎಳೆಗಳಿವೆಯಲ್ಲ? ಇವು ಹೇಗೆ ಸೇರಿ ಒಂದು ಕಥನವಾಗುತ್ತದೆ? ಹಾಗೆಯೆ ಚರಿತ್ರೆಯೂ ಅಲ್ಲವೆ? ಅದು ಕೂಡ ನಮ್ಮ ಕಲ್ಪಿತ ರಚನೆಯಲ್ಲವೆ? ಮನುಷ್ಯ ಚರಿತ್ರೆಗೆ ಉದ್ದೇಶವಿದೆಯೆ? ಅಂದರೆ ತಮ್ಮ ಕಲ್ಪಿತ ಉದ್ದೇಶದ ಆಚೆಗೆ ಅದರದ್ದೇ ಆದ ಉದ್ದೇಶವಿದೆಯೆ? ಅಷ್ಟಕ್ಕೂ ಬರಹದ ಮೇಲೆ ನಿರ್ಬಂಧವೇಕೆ?

ಕತೆಯ ಕೊನೆಯ ಭಾಗದಲ್ಲಿ ಅಪೂರ್ವವಾದ ಒಂದು ಸಂಕೇತವಿದೆ. ಬೆನ್ನು-ಹಿಂಭಾಗ ಒಂದೇ ಆಗಿರುವ ಎರಡು ಮುಖಗಳ, ವ್ಯಕ್ತಿತ್ವಗಳ ಪ್ರತಿಮೆ ಅದು. ಒಂದು ಮುಖ HH ನದು, ಇನ್ನೊಂದು ಲಿಯೋನದು. ಇಂಥದೇ ಇನ್ನೊಂದು ಮೇಣದಬತ್ತಿಯ ಹೋಲ್ಡರ್ ಇದೆ. ಒಂದು ಕಡೆಯ ಮೇಣವು ಕರಗಿ ಇನ್ನೊಂದು ಕಡೆಯ ಆಕೃತಿಗೆ ಶಕ್ತಿಕೊಡಬೇಕು. ಅಂದರೆ HH ಲಿಯೋನಲ್ಲಿ ಲೀನನಾಗಬೇಕು. ಏಕೆಂದರೆ ಲಿಯೋ ಸೇವಕನಲ್ಲ, ಅವನು ಸಂಘದ ಅಧ್ಯಕ್ಷ.

(ಕೆ. ಪ್ರಭಾಕರನ್‌)

ಹೀಗೆ ಸಾಂಕೇತಿಕವಾಗಿ ವ್ಯಕ್ತಿತ್ವ, ego ಮತ್ತು ಅನುಭಾವದ ಬಗ್ಗೆ ಈ ಕತೆ ಇದೆ. ಆದ್ದರಿಂದ ಪೂರ್ವದ ಕಡೆಗೆ ಪಯಣವೆಂದರೆ ಪ್ರಾಯಶಃ ಪೂರ್ವದ ವ್ಯಕ್ತಿತ್ವ ವಿಲೀನೀಕರಣದ ಅನುಭಾವವೂ ಆಗಿರಬಹುದು.

ಈ ಕೃತಿಯನ್ನು ಘಟನೆಗಳ ಹಗುರವಾದ ಓದಿಗೆ ನಿರೂಪಣೆಯ ಸೊಗಸಿಗಾಗಿ ಓದಲಾಗದು. ಇದು ಗಂಭೀರವಾದವನ್ನು, ತಾತ್ವಿಕವಾದದ್ದನ್ನು ಪ್ರತಿಪಾದಿಸುವ ಕೃತಿ. ಒಂದು ಪಯಣದ ಕತೆಯಾಗಿದ್ದರಿಂದ ಕುತೂಹಲವನ್ನು ಕಾಪಾಡಿಕೊಂಡು ಹೋಗುತ್ತದೆ. ಆಧುನಿಕ ಓದುಗರಿಗೆ ತಟ್ಟುವಂಥ ದ್ವಂದ್ವಗಳು, ವಿರೋಧಗಳು ಇವೆಲ್ಲವು ಕೃತಿಯಲ್ಲಿವೆ. ಕೃತಿಯು ತಾತ್ವಿಕ ಚರ್ಚೆಗೆ ಒಂದು ವೇದಿಕೆಯೂ ಆಗಬಲ್ಲದು.


ನೋಬೆಲ್ ಪ್ರಶಸ್ತಿ ಪಡೆದ ಹರ್ಮನ್ ಹೆಸ್‍ನ ಈ ಕೃತಿಯನ್ನು ಪ್ರಭಾಕರನ್ ಸಮರ್ಥವಾಗಿ ಅನುವಾದಿಸಿದ್ದಾರೆ. ಮೇಲಿನ ಸ್ತರದ ಸರಳತೆಯು ಕೆಳಗೆ ಅಗಾಧ ಅರ್ಥವಂತಿಕೆ ಇರುವ ಹೆಸ್‍ನ ಶೈಲಿಯನ್ನು ಅನುವಾದಿಸುವುದು ಸುಲಭದ ಕೆಲಸವಲ್ಲ. ವೈಯಕ್ತಿಕವಾಗಿ ನನಗೆ ಯೂರೋಪಿನ ಸಾಹಿತ್ಯವು ಕನ್ನಡವನ್ನು ಇತ್ತೀಚಿನ ವರ್ಷಗಳಲ್ಲಿ ಪ್ರವೇಶ ಮಾಡುತ್ತಿರುವ ಬಗೆಯು ತುಂಬಾ ಉತ್ಸಾಹಕ್ಕೆ ಕಾರಣವಾಗಿದೆ.

(ಕೃತಿ: ಪೂರ್ವದೆಡೆಗಿನ ಪಯಣ (ಕಾದಂಬರಿ), ಜರ್ಮನ್‌ ಮೂಲ: ಹರ್ಮನ್‌ ಹೆಸ್‌, ಕನ್ನಡಕ್ಕೆ: ಕೆ. ಪ್ರಭಾಕರನ್‌, ಪ್ರಕಾಶಕರು: ವಂಶಿ ಪಬ್ಲಿಕೇಷನ್ಸ್, ಬೆಲೆ: 110/-)