ಪ್ರಯಾಸದಲ್ಲಿಯೇ ಏರು ದಾರಿಯನ್ನು ಏರಿ ಹೋಗುತ್ತಿರಬೇಕಾದರೆ ಅಜ್ಜಿ ಅರ್ಧಕ್ಕೆ ಸಿಕ್ಕೇ ಬಿಟ್ಟರು. “ಪೋಲಿಸರ ಕೈಗೆ ಕಳ್ಳ ಸಿಕ್ಕಂತಾಯಿತು ನನ್ನ ಪರಿಸ್ಥಿತಿ!”. “ನಾನು ಬರೋವರೆಗೂ ಕಾಯೋದಕ್ಕೇನಾಗಿತ್ತು?” ಎನ್ನುತ್ತಾ ಜೋರಾಗಿ ಕಿರುಚಲು ಪ್ರಾರಂಭ ಮಾಡಿದಳು. ನನಗೆ ಮಾತನಾಡಲು ಅವಕಾಶವೇ ಕೊಡಲಿಲ್ಲ. ಮೊದಲೆ ಅದು ರಸ್ತೆ! ಹೋಗೋರು ಬರೋರು ಎಲ್ಲ ನಮ್ಮನ್ನೆ ನೋಡೋರು ಅದಕ್ಕೆಲ್ಲಾ ಹೆದರುವ ಜಾಯಮಾನ ಆಕೆಯದ್ದಾಗಿರಲಿಲ್ಲ ಬಿಡಿ! ಅಲ್ಲೇ ರಸ್ತೇ ಬದಿಯಲ್ಲಿ ಚಿಕ್ಕ ಟವಲ್ ಹಾಕಿ ನನ್ನನ್ನು ಕೂರಿಸಿ ತಾನೂ ಛತ್ರಿ ಬಿಡಿಸಿ ಕುಳಿತುಕೊಂಡುಬಿಟ್ಟಳು.
ಸುಮಾವೀಣಾ ಬರೆದ ಪ್ರಬಂಧ ನಿಮ್ಮ ಓದಿಗೆ

 

“ನಾರಾಗಿದ್ರು ಜೋರಾಗಿದ್ದೀನಿ” ಅಂತ ಆವಾಜಲ್ಲೇ ತೋರಿಸುತ್ತಿದ್ದ ನಮ್ಮಜ್ಜಿ ಲಕ್ಷ್ಮಮ್ಮ ಬೆಳ್ಳಗೆ, ಕುಳ್ಳಗೆ, ಸಣ್ಣಗೆ ಇದ್ರು. ಯಾವಾಗಲೂ ಹದಿನಾರುಮೊಳದ ಸೀರೆಯನ್ನೇ ಸರಿಸುಮಾರು ಬಿಳಿರವಿಕೆ ಕಾಂಬಿನೇಷನ್ನಲ್ಲಿಯೇ ಉಡುತ್ತಿದ್ದರು. ಮುಖವನ್ನು ಮೀರಿದ ದಪ್ಪ ಗಾಜಿನ ಕಂದುಬಣ್ಣದ ಫ್ರೇಮಿನ ಕನ್ನಡಕ, ಹಳೆಯದಾದರೂ ಫಳಫಳ ಹೊಳೆಯುವ ಬಿಳಿಹರಳಿನ ಮೂಗುತಿ, ಸಂಪೂರ್ಣ ಕಿವಿಯನ್ನೇ ಜೋತುಬೀಳಿಸಿದ ಬಿಳಿಕಲ್ಲಿನ ಓಲೆ, ಸವೆದೂ… ಸವೆದೂ… ಡಿಸೈನ್ ಕಳೆದುಕೊಂಡ ಎರಡೆರಡು ಸಾದಾ ಬಳೆಗಳು, ಹಳೆಯ ಒಳ್ಳೆಯ ಕಂಡೀಷನ್ನಲ್ಲಿರುವ U ಆಕಾರದ ಹಿಡಿಯಿರುವ ಕಾಟನ್ ಛತ್ರಿ ಇವಿಷ್ಟು ಲಕ್ಷ್ಮಮ್ಮನವರ ಆಕ್ಸೆಸ್ಸರಿಸ್.
ಬಹಳ ಗಟ್ಟಿಗಿತ್ತಿ ಎಂಥ ಘಟಾನುಘಟಿಗಳನ್ನೂ ಮಾತಲ್ಲೇ ಮುರಿದುಬಿಡುತ್ತಿದ್ದರು. ಆದರೆ ಮನಸ್ಸು ತುಂಬಾ ಸಾಫ್ಟಾಗಿತ್ತು. ಮಗಳ ಮನೆ ಎಂದರೆ ಆಕೇಗೆ ಏನೋ ಮುಜುಗರವಿತ್ತು. ಬೆಳಗ್ಗೆ ಎದ್ದು ಒಂದಷ್ಟು ಕೆಲಸ ಹುಡುಕಿ ಹುಡುಕಿ ಮಾಡೋವರೆಗೂ ಆಕೆಗೆ ಸಮಾಧಾನವಿರುತ್ತಿರಲಿಲ್ಲ.

ತುಳಸಿಕಟ್ಟೆ ವಿನ್ಯಾಸ ಮಾಡೋದು ಅಂದರೆ ಆಕೆಗೆ ಬಹಳ ಇಷ್ಟ. ಅಲ್ಲೇ ಇರುತ್ತಿದ್ದ ಇಟ್ಟಿಗೆ ಬಳಸಿ ಮರಳು, ಸಿಮೆಂಟ್ ಸಿಗದಿದ್ರೆ ಮಣ್ಣನ್ನೇ ಕಲೆಸಿ ಅದರಲ್ಲೇ ಹೊಸ ಡಿಸೈನ್ ಮಾಡಿ ಮನೆಯಲ್ಲೇ ಯಾವಾಗಲೂ ಇರುತ್ತಿದ್ದ ಸುಣ್ಣ ಬಳಿದು ಬಿಡುತ್ತಿದ್ದಳು. ನಾವು ಸಿಮೆಂಟ್ನಲ್ಲಿ ದೊಡ್ಡ ತುಳಸಿಕಟ್ಟೆ ಕಟ್ಟಿಸಿಕೊಂಡ ಮೇಲೆ ಸಹಜವಾಗಿ ಅವಕಾಶ ತಪ್ಪಿದ್ದಕ್ಕೆ ಬೇಜಾರಾಗಿದ್ದಳು. ಅಂಥ ಕ್ರಿಯಾಶೀಲ, ಹಲ್ಮುರುಕು ಅಜ್ಜಿಗೆ ನನ್ನ ತಮ್ಮ ಹರಿ “ಸೀಬೆಹಣ್ಣು ಕಿತ್ತುಕೊಡು” ಅಂದರೆ ಹಣ್ಣಾಗಿರೋದು ತಾನು ತಿಂದು ಕಾಯಿಗಳನ್ನು ಕೊಡುತ್ತಿದ್ದಳು. ಅದೇ ಸಲುವಾಗಿ ಅವರಿಬ್ಬರೂ ಜಗಳವಾಡುತ್ತಿದ್ದರೆ ಮನೆಯವರಿಗೆಲ್ಲಾ ಒಂಥರಾ ಮೋಜಾಗುತ್ತಿತ್ತು.

ಅಜ್ಜಿ ಹೆಣ್ಣು ಮಕ್ಕಳೆಂದರೆ ಇಷ್ಟ ಪಡುತ್ತಿದ್ದರು. ನಾನು ನೋಡಿದ ಮಟ್ಟಿಗೆ ನಮ್ಮಮ್ಮ, ದೊಡ್ಡಮ್ಮ, ಚಿಕ್ಕಮ್ಮಂದಿರನ್ನು ಪ್ರೀತಿಸುವ ಹಾಗೆ ನನ್ನ ಸೋದರಮಾವಂದಿರನ್ನು ಪ್ರೀತಿಸುತ್ತಿರಲಿಲ್ಲ. ನಮ್ಮನ್ನು ಅಂದರೆ ಹೆಣ್ಣು ಮೊಮ್ಮೊಕ್ಕಳನ್ನು ಪ್ರೀತಿಸುವ ಹಾಗೆ ನನ್ನ ತಮ್ಮಂದಿರನ್ನು ಪ್ರೀತಿಸುತ್ತಿರಲಿಲ್ಲ. ಹಬ್ಬ-ಹರಿದಿನಗಳನ್ನು ಆಕೆಯ ಉಸ್ತುವಾರಿಯಲ್ಲಿ ಸಂಭ್ರಮದಿಂದ ಆಚರಿಸುತ್ತಿದ್ದ ದಿನಗಳು ಈಗಲೂ ಕಣ್ಮುಂದೆ ತೇಲಿ ಬರುತ್ತವೆ. “ಹೆಣ್ಣು ಮಕ್ಕಳಿರುವ ಮನೆಗಳಲ್ಲಿ ಯಾವ ಆಚರಣೆಯನ್ನೂ ತಪ್ಪಿಸಬಾರದು ನಾಳೆ ಹೋದ ಮನೆಯಲ್ಲಿ ಅವರಿಗೆ ತಬ್ಬಿಬ್ಬಾಗತ್ತೆ” ಅನ್ನೋದೇ ಅವಳ ವಾದವಾಗಿತ್ತು. ಎಲ್ಲ ವಿಷಯದಲ್ಲೂ ಹಂಡ್ರೆಡ್ ಪರ್ಸೆಂಟ್ ಬಯಸುವ ಆಕೆಯ ಮಾತುಗಳು ಅಷ್ಟೇ ಕಡಕ್ ಆಗಿರುತ್ತಿದ್ದವು.

ನಾನೋದಿದ್ದು ಕಾನ್ವೆಂಟ್ ಶಾಲೆಯಲ್ಲಿ. ಮಡಿಕೇರಿಯಲ್ಲಿದ್ದ ನಮ್ಮ ಮನೆಗೂ ಶಾಲೆಗೂ ಅಷ್ಟೇನೂ ದೂರವಿರಲಿಲ್ಲ. ಕೆಲವೊಮ್ಮೆ ಅಜ್ಜಿ ಶಾಲೆಗೆ ಊಟವನ್ನೂ ತೆಗೆದುಕೊಂಡು ಬರುತ್ತಿದ್ದಳು.  ಡಿಸೆಂಬರ್ ತಿಂಗಳಲ್ಲಿಯೇ ಬರುವ ‘ಸುಬ್ರಹ್ಮಣ್ಯಷಷ್ಠಿ’ಯ ನೆನಪುಗಳನ್ನೇ ಮೊದಲಿಗೆ ಹೇಳುತ್ತೇನೆ. ‘ಸುಬ್ರಹ್ಮಣ್ಯ ಷಷ್ಠಿʼ ಎಂದರೆ ‘ತರಕಾರಿ ಹಬ್ಬ’ ಅಲ್ವೇ! ಆ ದಿನ ಬೆಳಗ್ಗೆ ತಿಂಡಿ ಏನು ಮಾಡಿದ್ದರು ನೆನಪಿಗೆ ಬರುತ್ತಿಲ್ಲ. ಆದರೆ “ನಾನೆ ಶಾಲೆಗೆ ಊಟ ತರುವುದಾಗಿ ಹೇಳಿದ ಅಜ್ಜಿ ಮಾತು ನೆನಪಿದೆ. ನೆನಪಲ್ಲಿ ಉಳಿಯೋಹಾಗ್ ಅಜ್ಜಿ ಮಾಡಿದ್ದಾಳೆ. ಮಧ್ಯಾಹ್ನ 1 ಗಂಟೆಗೆ ಊಟಕ್ಕೆ ಬಿಡುತ್ತಿದ್ದರು. 1 ಗಂಟೆ ಕಳೆದು ಹತ್ತು ನಿಮಿಷವಾದರೂ ಅಜ್ಜಿ ಶಾಲೆಯ ಮೇನ್ ಗೇಟ್ ಬಳಿ ಕಾಣಿಸಲಿಲ್ಲ. ಮನೆ ಹತ್ತಿರವೇ ಇದ್ದ ಕಾರಣ ಅಜ್ಜಿ ಊಟ ತೆಗದುಕೊಂಡು ಬಂದಿಲ್ಲ ಎಂದವಳೆ ನಾನು ನೇರ ಮನೆಗೆ ಹೋದೆ. ಅಲ್ಲಿ ನಮ್ಮಮ್ಮ “ಅಜ್ಜಿ ಸಿಗಲಿಲ್ಲವ- ಎಂದರೆ ಇಲ್ಲ ಎಂದೆ” ಸರಿ! ಎನ್ನುತ್ತಲೇ ಬಿಸಿ ಬಿಸಿ ಷಷ್ಠಿ ಸಾಂಬಾರ್ ಜೊತೆಗೆ ಸ್ವಲ್ಪ ಅನ್ನಹಾಕಿಸಿಕೊಂಡು ಹೊಟ್ಟೆ ಭರ್ತಿ ಬಿಸಿಬಿಸಿ ಗಸಗಸೆ ಪಾಯಸ ಕುಡಿದು ಶಾಲೆಗೆ ಹೊರಟೆ.

ಹಾಗೆ ಪ್ರಯಾಸದಲ್ಲಿಯೇ ಏರು ದಾರಿಯನ್ನು ಏರಿ ಹೋಗುತ್ತಿರಬೇಕಾದರೆ ಅಜ್ಜಿ ಅರ್ಧಕ್ಕೆ ಸಿಕ್ಕೇ ಬಿಟ್ಟರು. “ಪೋಲಿಸರ ಕೈಗೆ ಕಳ್ಳ ಸಿಕ್ಕಂತಾಯಿತು ನನ್ನ ಪರಿಸ್ಥಿತಿ!”. “ನಾನು ಬರೋವರೆಗೂ ಕಾಯೋದಕ್ಕೇನಾಗಿತ್ತು?” ಎನ್ನುತ್ತಾ ಜೋರಾಗಿ ಕಿರುಚಲು ಪ್ರಾರಂಭ ಮಾಡಿದಳು. ನನಗೆ ಮಾತನಾಡಲು ಅವಕಾಶವೇ ಕೊಡಲಿಲ್ಲ. ಮೊದಲೆ ಅದು ರಸ್ತೆ! ಹೋಗೋರು ಬರೋರು ಎಲ್ಲ ನಮ್ಮನ್ನೆ ನೋಡೋರು ಅದಕ್ಕೆಲ್ಲಾ ಹೆದರುವ ಜಾಯಮಾನ ಆಕೆಯದ್ದಾಗಿರಲಿಲ್ಲ ಬಿಡಿ! ಅಲ್ಲೇ ರಸ್ತೇ ಬದಿಯಲ್ಲಿ ಚಿಕ್ಕ ಟವಲ್ ಹಾಕಿ ನನ್ನನ್ನು ಕೂರಿಸಿ ತಾನೂ ಛತ್ರಿ ಬಿಡಿಸಿ ಕುಳಿತುಕೊಂಡುಬಿಟ್ಟಳು. ನನಗೋ ಕೋಪವೆಂದರೆ ಕೋಪ. “ನಾನು ಪಾಯಸ ಕುಡಿದಿದ್ದೇನೆ ಅಂದರೆ ಕೇಳಲೇ ಇಲ್ಲ. ಗಲ್ಲ ಸವರಿ, ತಲೆ ಸವರಿ “ಊಟ ವೇಸ್ಟ್ ಮಾಡಬಾರದು…!” ಎನ್ನುತ್ತಾ ತಿನ್ನಿಸಲು ಬಂದರೆ ನಾನು ತಿನ್ನುತ್ತೇನೆಯೇ? ಸಾಧ್ಯನಾ? ತುತ್ತನ್ನಷ್ಟೇ ತಿಂದೆ ಕೋಪದಿಂದ. ತನ್ನಕೈಯ್ಯಲ್ಲೇ ನನ್ನ ಬಾಯೊರೆಸಿ “ಜಾಗೃತೆ ಈಗ್ ಹೋಗು ಸಂಜೆ ಬೇಗ ಸೈಡಲ್ಲಿ ಬಾ” ಎಂದು ಟಾಟಾ ಹೇಳಿಬಿಟ್ಟಳು. ಸತ್ಯ ಹೇಳಬೇಕೆಂದರೆ ಅಜ್ಜಿಯ ವಿಚಿತ್ರ ಹಠ ಕಂಡು ಆ ದಿನ ಸಹಿಸಲಾಗದ ಕೋಪ ಬಂದಿತ್ತು. ಮನೆಯಲ್ಲಿ “ದಾರಿಯಲ್ಲಿ ಕೂರಿಸಿ ಊಟಕೊಟ್ಟರು” ಎಂದು ಗಲಾಟೆ ಮಾಡಿದೆ. ಆದರೆ ಅದ್ಯಾವುದಕ್ಕೂ ಆಕೆ ಕೇರ್ ಮಾಡಲಿಲ್ಲ ಅದು ಬೇರೆ ವಿಚಾರ. ಈಗ ನೆನಪಿಸಿಕೊಂಡರೆ ಆಕೆಯ ಆಸ್ಥೆಯನ್ನು ವಿವರಿಸಲು ಮಾತುಗಳೆ ಹೊರಡುವುದಿಲ್ಲ.

ಹಬ್ಬ-ಹರಿದಿನಗಳನ್ನು ಆಕೆಯ ಉಸ್ತುವಾರಿಯಲ್ಲಿ ಸಂಭ್ರಮದಿಂದ ಆಚರಿಸುತ್ತಿದ್ದ ದಿನಗಳು ಈಗಲೂ ಕಣ್ಮುಂದೆ ತೇಲಿ ಬರುತ್ತವೆ. “ಹೆಣ್ಣು ಮಕ್ಕಳಿರುವ ಮನೆಗಳಲ್ಲಿ ಯಾವ ಆಚರಣೆಯನ್ನೂ ತಪ್ಪಿಸಬಾರದು ನಾಳೆ ಹೋದ ಮನೆಯಲ್ಲಿ ಅವರಿಗೆ ತಬ್ಬಿಬ್ಬಾಗತ್ತೆ” ಅನ್ನೋದೇ ಅವಳ ವಾದವಾಗಿತ್ತು.

ಶಾಲೆಗಳಲ್ಲಿ ವರ್ಷಕ್ಕೊಮ್ಮೆ ಟೂರ್ ಕರೆದುಕೊಂಡು ಹೋಗುವುದು ಎಲ್ಲರಿಗೂ ನೆನಪಿರುತ್ತದೆ. ಹಾಗೆ ನಮ್ಮ ಶಾಲೆಯಲ್ಲೂ ಟೂರ್ ಹೋಗಬೇಕೆಂದು ತೀರ್ಮಾನವಾಗಿತ್ತು. ಅದೂ ಎಲ್ಲಿಗೆ? ನಮ್ಮಜ್ಜಿ ಊರು ಬೇಲೂರಿಗೆ? ನಮ್ಮ ಮನೆಯಲ್ಲಿ “ಬೇಲೂರೂ… ನೋಡಿರುವ ಸ್ಥಳನೆ…! ಎಂದರೂ ಪೇರೆಂಟ್ಸ್ ಜೊತೆ ನೋಡುವುದಕ್ಕೂ ಫ್ರೆಂಡ್ಸ್ ಜೊತೆ ನೋಡುವುದಕ್ಕೂ ವ್ಯತ್ಯಾಸವಿರುತ್ತದೆ ಎಂದು ಹೋಗಿದ್ದೆ. ಹೊಗೋಮೊದಲೆ ನಮ್ಮಮ್ಮನಿಗೆ ಹೇಳಿದ್ದೆ “ಅಜ್ಜಿಗೆ ಹೇಳಬೇಡ” ಅಂತ. ಆದರೂ ನಮ್ಮಮ್ಮ ಕಾಗದ ಬರೆದು ತಿಳಿಸಿದ್ದರು. ಈ ಅಜ್ಜಿನೋ ಶೆಟ್ರ ಅಂಗಡಿ ಮಿಠಾಯಿ, ನಿಪ್ಪಟ್ಟು ಹಿಡಿದುಕೊಂಡು ಬೆಳಗ್ಗೆನೇ ದೇವಸ್ಥಾನದ ಹೊರಭಾಗದಲ್ಲಿ ಬಂದು ಕುಳಿತಿದ್ದರು. ಟೂರ್‌ಗೆ ಹೋದ ಮಕ್ಕಳನ್ನು ಇಟ್ಟುಕೊಂಡು ಸಮಯ ಪಾಲನೆ ಮಾಡುವುದು ಕಷ್ಟ ಅನ್ನೋದು ನಿಮಗೆಲ್ಲರಿಗೂ ತಿಳಿದ ವಿಚಾರವೇ. ನಾವುಗಳು ಸರಿಯಾದ ಟೈಮ್ಗೆ ಹೋಗಲಿಲ್ಲ. ಕಾದು ಸುಸ್ತಾಗಿದ್ದ ನಮ್ಮಜ್ಜಿ ನಾವು ಬಸ್ ಇಳಿಯುತ್ತಿದ್ದಂತೆ ಭರಭರನೆ ಬಂದು ನನ್ನನ್ನು ಹುಡುಕಿಯೇ ಬಿಟ್ಟರು. ಏರು ಧ್ವನಿಯಲ್ಲಿ ಕ್ಲಾಸ್ ತೆಗೆದುಕೊಂಡರು.

ಈಗ ಆನ್ಲೈನ್ ಕ್ಲಾಸ್, ಆಫ್ಲೈನ್‌ ಕ್ಲಾಸ್ ಅನ್ನುವಂತೆ ಅದೊಂಥರಾ ಔಟ್ ಡೋರ್ ಕ್ಲಾಸ್ ಆಗಿತ್ತು. ಆ ದಿನ ಚೆನ್ನಾಗಿರಲಿಲ್ಲ! ಇವತ್ತಿಗೆ ನೆನಪು ಮಾಡಿಕೊಂಡರೆ ಚೆನ್ನಾಗಿದೆ! ತಿಂಡಿ ಕೊಟ್ಟು ಅಜ್ಜಿ ಮನೆಗೆ ಹೋಗಿರುತ್ತಾಳೆ ಅಂದರೆ ಹೋಗೇ ಇರಲಿಲ್ಲ. ನಾವೆಲ್ಲಾ ದೇವಸ್ಥಾನ ನೋಡಿಕೊಂಡು ಬಂದರೂ ಅಲ್ಲೇ ಹೊರಗೆ ಇದ್ದು ನನ್ನ ಟೀಚರ್ ಬಳಿ “ನನ್ನ ಮೊಮ್ಮೊಗಳನ್ನು ಇಲ್ಲಿಯೇ ಬಿಟ್ಟು ಹೋಗಿ ನಾನೇ ಕರೆದುಕೊಂಡು ಬರುತ್ತೇನೆ” ಅಂದರೆ ನಮ್ಮ ಟೀಚರ್ ಬಿಡಲಿಲ್ಲ. ಶಾಲೆಯವರಿಗೆ ಉತ್ತರ ಕೊಡೋದು ಕಷ್ಟ ಎಂದು ಅಜ್ಜಿಯನ್ನು ಓಲೈಸಿದರು. ಕಡೆಗೆ 20 ರೂಗಳನ್ನು ನನ್ನ ಕೈಲಿಟ್ಟು ಕಣ್ಣಲ್ಲಿ ನೀರು ಹಾಕುತ್ತಲೇ ಕೈ ಬೀಸಿ ನಿಧಾನವಾಗಿ ಸರಿದು ಹೋಗೇ ಬಿಟ್ಟಳು.

ನಮ್ಮನೆಗೆ ಅಜ್ಜಿ ಬಂದಾಗಲೆಲ್ಲಾ ನಮ್ಮ ಶಯನೋತ್ಸವ ಅಜ್ಜಿ ಜೊತೆಯಲ್ಲೇ ಆಗುತ್ತಿತ್ತು. ನಮ್ಮಜ್ಜ ಇದ್ದಾಗಲೇ ಒಮ್ಮೆ ಅಟ್ಟದಿಂದ ಬಿದ್ದು ಕಾಲು ಮುರಿದುಕೊಂಡಿದ್ದರಂತೆ, ಹಾಲು ಕರೆಯೋವಾಗ ಹಸು ಒದ್ದು ಸೊಂಟಕ್ಕೂ ಪೆಟ್ಟು ಮಾಡಿಕೊಂಡು ತೆವಳಿಕೊಂಡು ಇರೋ ಹಾಗಾದಾಗ ಅಜ್ಜ ಫಿಸಿಯೋಥೆರಪಿನೂ ಮಾಡಿಸಿದ್ರಂತೆ. ಪದೇ ಪದೇ ಹಾಗೆ ಫಿಸಿಯೋಥೇರಪಿ ಮಾಡಿಸಿಕೊಂಡು ಅದಕ್ಕೆ ಅಡಿಕ್ಟ್ ಆಗಿದ್ದ ಅಜ್ಜಿಗೆ ಮತ್ತೆ ಮತ್ತೆ ನೋವು ಬರುತ್ತಿತ್ತು. ಇನ್ನು ಮಡಿಕೇರಿಯ ಚಳಿಗೂ… ನೋವು ಹೆಚ್ಚಾಗೋದು. ಆಕೆಯ ಪಕ್ಕದಲ್ಲಿದ್ದ ನನ್ನನ್ನು ಏಳಿಸಿ “ಸೊಂಟಅಮುಕು, ಕಾಲುತುಳಿ”ಎಂದು ಆರ್ಡರ್ ಮಾಡೋರು. ಅವಳು ಹೇಳಿದಂತೆ ಮಾಡಿದರೂ ಆಕೆಗೆ ಸಮಾಧಾನವಂತೂ ಆಗುತ್ತಿರಲಿಲ್ಲ. ಬೆಳಗ್ಗೆ ನಾಲ್ಕು ಗಂಟೆಗೆ ದಯಾ-ದಾಕ್ಷಿಣ್ಯ ಇಲ್ಲದೆ ನಮ್ಮನ್ನು ಏಳಿಸೋದಕ್ಕೆ ಪ್ರಾರಂಭ ಮಾಡೋಳು. ಮುಟ್ಟಿ, ಮೆಲ್ಲಗೆ ತಟ್ಟಿ ಏಳಿಸಿದರೆ ಅಷ್ಟು ಕಿರಿಕಿರಿ ಅನ್ನಿಸುತ್ತಿರಲಿಲ್ಲ. ಆದರೆ ತಿವಿದು ಏಳಿಸುತ್ತಿದ್ದುದ್ದು ಬಹಳ ಕೋಪ ತರಿಸುತ್ತಿತ್ತು. ಎಚ್ಚರವಿದ್ದರೂ ಮೊಂಡುತನದಿಂದ ಬೇಗ ಏಳುತ್ತಿರಲಿಲ್ಲ! ಅಜ್ಜಿಯನ್ನು ಸತಾಯಿಸುತ್ತಿದ್ದೆವು. “ಸಿಟ್ಟಿನಿಂದ ತಣ್ಣೀರು ಸುರಿಯುತ್ತೇನೆ, ಕಬ್ಬಿಣ ಕಾಯಿಸಿ ಬರೆ ಹಾಕುತ್ತೇನೆ” ಎನ್ನುತ್ತಿದ್ದಳು. ಭಾನುವಾರ, ರಜಾ ದಿನಗಳಲ್ಲಿ ಈ ಡ್ರಾಮ ಹೆಚ್ಚೇ!

ಒಮ್ಮೆ ಹೀಗೆ ಏಳದೆ ಹಟ ಮಾಡುವಾಗ ನಮ್ಮಜ್ಜಿಗೆ ಡೌಟಾಗಿ ಉಸಿರಾಡುತ್ತೇನೋ? ಇಲ್ಲವೋ? ಎಂದು ಮೂಗಿಗೆ ಕೈ ಹಿಡಿದ ದಿನ ನೆನಪಿಸಿಕೊಂಡರೆ ಈಗಲೂ ನಗು ಬರುತ್ತದೆ. ಎದ್ದು ಚಿಕ್ಕದೋ ದೊಡ್ಡದೋ ರಂಗೋಲಿ ಹಾಕಿದ ಮೇಲೆ ಅಜ್ಜಿ ಫುಲ್ ಖುಷ್ ಆಗಿ ಬಿಡುತ್ತಿದ್ದಳು. ರಂಗೋಲಿ ಎಳೆ ಎಳೆಯುವುದಕ್ಕೆ, ಸಿಂಗಲ್ ಎಳೆ, ಡಬಲ್ ಎಳೆಗಳನ್ನು ಎಳೆಯಲು, ದಂಡೆಯ ಹಾಗೆ ಹೂ ಕಟ್ಟಲು ನನಗೆ ಟ್ರೇನಿಂಗ್ ಕೊಟ್ಟಿದ್ದು ಅಜ್ಜೀನೇ! ಬಿಡುವಿದ್ದಾಗ ಸ್ಲೇಟಲ್ಲಿ ಎಳೆ ರಂಗೋಲಿ ಎಳೆದುಕೊಟ್ಟು ಕಲಿ ಕಲಿ ಎಂದು ಬಲವಂತ ಮಾಡಿ ರಂಗೋಲಿ ಕಲಿಸಿದ್ದಳು. ಒಮ್ಮೆ ನಾನು ಕಾಲೇಜಿನಲ್ಲಿ ರಂಗೋಲಿ ಸ್ಪರ್ಧೆಯಲ್ಲಿ ರಂಗೋಲಿ ಹಾಕಲು ತಯಾರಿ ಮಾಡಿಕೊಂಡಿದ್ದೆ. ಪೇಪರ್‌ನಲ್ಲಿ ರಂಗೋಲಿ ಬಿಡಿಸಿಕೊಂಡು ಸ್ಕೆಚ್ ಪೆನ್ನಿನಲ್ಲಿ ಕಲರ್ ಹಾಕಿ “ಕಾಲೇಜಲ್ಲೂ ಹೀಗೇ ಹಾಕುತ್ತೇನೆ ನೋಡು!” ಎಂದಿದ್ದೆ. ಕನ್ನಡಕ ಮತ್ತೆ ಮತ್ತೆ ಒರೆಸಿಕೊಂಡು ನೋಡಿ ಖುಷಿಪಟ್ಟರೂ ರಿಯಲ್ ಆಗಿ ನೋಡಬೇಕು ಅನ್ನುವ ಭಾವ ಅವಳಲ್ಲಿತ್ತು.

ಸರಿ! ನಾನು ಅಜ್ಜಿಗೆ ಸರ್ಪ್ರೈಸ್ ಕೊಡಬೇಕು ಎಂದು ಮರು ದಿನ ಬೆಳಗ್ಗೆ ರಂಗೋಲಿ ಹಾಕಿ ಕಲರ್ ತುಂಬಿಸುತ್ತಿದ್ದೆ. ಇನ್ನೇನು ಫಿನಿಷಿಂಗ್ ಕೊಡಬೇಕು ಅನ್ನುವಷ್ಟರಲ್ಲಿ ಲಕ್ಷ್ಮಮ್ಮನವರು ಬಾಗಿಲು ತೆಗೆದು ನಾನು ಹಾಕುತ್ತಿದ್ದ ರಂಗೋಲಿ ನೋಡಿ ಖುಷಿ ಪಟ್ಟರೂ “ಅಲ್ಲಿ ಹಾಗಾಗಬೇಕು ಇಲ್ಲಿ ಸರಿ ಮಾಡು” ಎನ್ನುತ್ತಿದ್ದಳು. ನಾನು ಹಾಗೇ ಮಾಡಿ ಕಡೆಗೆ ರಂಗೋಲಿ ಮಧ್ಯದಲ್ಲಿ ಒಂದು ದೊಡ್ಡ ಚುಕ್ಕಿ ಇಟ್ಟು ಭರ್ರನೆ ಕೈ ಎಳೆದೆ ಆ ರಭಸಕ್ಕೆ ಅರ್ಧ ರಂಗೋಲಿ ಹಾಳಾಗಿತ್ತು ಆಗಂತೂ ಅಜ್ಜಿ ನಾನು ತುಂಬಾ ಬೇಸರ ಮಾಡಿಕೊಂಡಿದ್ದೆವು.

ಕಡಿಮೆ ಪದಾರ್ಥ ಬಳಸಿ ರುಚಿಯಾಗಿ ಅಡುಗೆ ಮಾಡುವುದರಲ್ಲಿ ಲಕ್ಷ್ಮಮ್ಮನವರದ್ದು ಎತ್ತಿದ ಕೈ. ಹುಳಿಯನ್ನ, ಗೊಜ್ಜವಲಕ್ಕಿ, ಬದನೆಕಾಯಿ ಪಲ್ಯ ತುಂಬಾ ರುಚಿಯಾಗಿ ಮಾಡುತ್ತಿದ್ದಳು. ಆಕೆ ಮಾಡಿದ ಅಡುಗೆಯನ್ನು ಬಾಕ್ಸ್‌ನಲ್ಲಿ ಹಾಕಿ ತೆಗೆದುಕೊಂಡು ಹೋದರೆ ನನ್ನ ಫ್ರೆಂಡ್ಸ್ “ಈ ಪರಿಮಳವನ್ನು ನಾವುಗಳು ಮದುವೆ, ಫಂಕ್ಷನ್‌ಗಳಲ್ಲಿ ಮಾತ್ರ ಹಾಕುವುದು” ಎಂದರೆ ಇನ್ನು ಕೆಲವರು “ನಿಮ್ಮಜ್ಜಿ ಮಾಡಿದ್ದಾ…?” ಎಂದು ರುಚಿ ನೋಡುತ್ತಿದ್ದರು. ಮಾಡಿದ ಅಡುಗೆಯನ್ನು ಆಕೆ ಮುತ್ತುಗದ ಹಾಳೆ, ಅಡಿಕೆಹಾಳೆ, ಬಾಳೆಎಲೆಯಲ್ಲಿ ಅಷ್ಟೇ ಚೆನ್ನಾಗಿ ಪ್ಯಾಕ್ ಮಾಡುತ್ತಿದ್ದಳು. ಅದನ್ನು ನೋಡುವುದಕ್ಕೇ ಖುಷಿಯಾಗುತ್ತಿತ್ತು. ಈಗೆಲ್ಲಾ ಪ್ಲಾಸ್ಟಿಕ್ ಡಬ್ಬಗಳು ಪ್ಲಾಸ್ಟಿಕ್ ಹಾಳೆಗಳು ಅಲ್ವ! ಅಡುಗೆ ಎಂದರೆ ತುಂಬಾ ಪದಾರ್ಥ ಹಾಕಿ ಬೇಯಿಸಿ ಅದನ್ನು ಬಡಿಸುವಾಗ ಅಲಂಕಾರ ಮಾಡುವುದಲ್ಲ. ಅಡುಗೆಗೆ ನಾವು ಹಾಕುವ ಪದಾರ್ಥ, ಟೈಮಿಂಗ್ಸ್ ಮುಖ್ಯ. ಯಾವುದಾದ ಮೇಲೆ ಯಾವುದು ಹಾಕಿದರೆ ಏನಾಗುತ್ತದೆ ಅನ್ನುವ ಸೂಕ್ಷ್ಮಗಳನ್ನು ಅರ್ಥಾತ್ ಕ್ರಮಬದ್ಧತೆ ಅನ್ನೋದನ್ನ ಅಜ್ಜಿಯಿಂದ ನಾನು ಕಲಿತ ಬಹು ಮುಖ್ಯ ಪಾಠ.

ನಮಗೆ ಮಧ್ಯಾಹ್ನ 3.30 ಕ್ಕೆ ಕಾಲೇಜ್ ಮುಗಿಯುತ್ತಿತ್ತು. 3:45ಕ್ಕೆಲ್ಲಾ ನಾನು ಮನೆಯಲ್ಲಿರಬೇಕಿತ್ತು. ಹೇಗೆ? ಯಾರ ಜೊತೆಗೆ ಬರುತ್ತೇನೆ? ಎಂದು ಕನ್ನಡಕದೊಳಗೆ ಸೂಕ್ಷ್ಮವಾಗಿ ನೋಡಿರುತ್ತಿದ್ದ ಅಜ್ಜಿ ಮನೆಗೆ ಬಂದ ನಂತರ, “ರಸ್ತೆ ಅಳೆದುಕೊಂಡು ಲಕ್ಕೀರ್ ಜೊತೆಗೆ ಕಿಲಕಿಲಾ ಅನ್ನಬೇಕಲ್ಲ ನೀನು? ತಲೆಕೆದರಿಕೊಂಡಿದ್ದೋಳ್ ಯಾರು? ಜುಟ್ಟು ಹಾಂಕೊಂಡಿದ್ದೋಳ್ಯಾರು?” ಎಂದು ಕೇಳುತ್ತಿದ್ದ ಪ್ರಶ್ನೆಗಳಿಗೆ ಉತ್ತರಿಸಿ ಸಾಕಾಗುತ್ತಿತ್ತು! ಈಗ ಎಲ್ಲರ ಪರಿಚಯ ಹೇಳುತ್ತೇನೆ ಬಾ! ಅಂದರೆ ಆಕೆ ಬರಲು ಸಾಧ್ಯನಾ..? ನನಗಿನ್ನೂ ಆಕೆಯಲ್ಲಿ ಹೇಳಬೇಕಾಗಿರುವ ಗುಟ್ಟುಗಳು ಸಾಕಷ್ಟಿವೆ. ಅಜ್ಜಿ ಬಲಿಪಾಡ್ಯಮಿ ದಿನವೇ ಹಬ್ಬದೂಟವನ್ನೂ ಮಾಡದೇ ಎದ್ದು ಹೋಗೇ ಬಿಟ್ಟಳು!!! ಇನ್ನೂ ಇರಬಾರದಿತ್ತೆ??